‘ಪ್ರತ್ಯೇಕ ರಾಷ್ಟ್ರ’ ಕೂಗು ಯಾಕೆ ಸರಿಯಲ್ಲ?

Update: 2024-02-03 05:27 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘‘ದಕ್ಷಿಣ ಭಾರತಕ್ಕೆ ಬಹಳಷ್ಟು ಅನ್ಯಾಯವಾಗುತ್ತಿರುವುದನ್ನು ಪ್ರತಿಯೊಂದು ಹಂತದಲ್ಲೂ ನಾವು ನೋಡುತ್ತಿದ್ದೇವೆ. ನಮ್ಮ ಪಾಲಿನ ಅಭಿವೃದ್ಧಿಯ ಹಣ ಉತ್ತರ ಭಾರತದ ಕಡೆಗೆ ಹಂಚುವುದನ್ನು ನೋಡುತ್ತಿದ್ದೇವೆ. ನಮಗೆ ಎಲ್ಲ ವಿಚಾರಗಳಲ್ಲೂ ಅನ್ಯಾಯ ಆಗುತ್ತಿದೆ. ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡುವಂತಹ ಅನಿವಾರ್ಯ ಸ್ಥಿತಿಯನ್ನು ಹಿಂದಿ ಪ್ರದೇಶದವರು ನಮ್ಮ ಮೇಲೆ ಹೇರುತ್ತಿದ್ದಾರೆ....’’ ಎಂದು ಸಂಸದ ಡಿ.ಕೆ. ಸುರೇಶ್ ಅವರು ನೀಡಿದ್ದಾರೆನ್ನಲಾಗಿರುವ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿಯ ನಾಯಕರು ಭಾರೀ ಗದ್ದಲವನ್ನು ಎಬ್ಬಿಸುತ್ತಿದ್ದಾರೆ. ಡಿ.ಕೆ. ಸುರೇಶ್ ಅವರ ಹೇಳಿಕೆಯಲ್ಲಿ ‘ಪ್ರತ್ಯೇಕ ರಾಷ್ಟ್ರ’ ಎನ್ನುವ ಎರಡು ಪದ ಮಾತ್ರ ಇರುವುದಲ್ಲ. ಅದರಲ್ಲಿ ‘ದಕ್ಷಿಣ ಭಾರತಕ್ಕೆ ಬಹಳಷ್ಟು ಅನ್ಯಾಯ’ ‘ನಮ್ಮ ಪಾಲಿನ ಅಭಿವೃದ್ಧಿಯ ಹಣ’ ‘ನಮಗೆ ಎಲ್ಲ ವಿಚಾರಗಳಲ್ಲೂ ಅನ್ಯಾಯ’ ‘ಹಿಂದಿ ಪ್ರದೇಶದ ಜನರು ಹೇರುತ್ತಿದ್ದಾರೆ’ ಮೊದಲಾದ ಪದಗಳೂ ಇವೆ. ಆದರೆ ಅವುಗಳನ್ನೆಲ್ಲ ಹೊರಗಿಟ್ಟು ಎರಡು ಪದಗಳನ್ನಷ್ಟೇ ಆರಿಸಿಕೊಂಡು ಅದನ್ನು ಡಿ.ಕೆ. ಸುರೇಶ್ ವಿರುದ್ಧ ಬಳಸಲು ಬಿಜೆಪಿಯ ನಾಯಕರು ಮುಂದಾಗಿದ್ದಾರೆ. ಡಿ.ಕೆ. ಸುರೇಶ್ ಹೇಳಿಕೆಯನ್ನು ಇಟ್ಟುಕೊಂಡು ಚರ್ಚೆಯಾಗಬೇಕಾಗಿರುವುದು ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಆಗುತ್ತಿರುವ ಅನ್ಯಾಯಗಳು. ಆದರೆ ಅದರ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚದೆ, ಪ್ರತ್ಯೇಕ ರಾಷ್ಟ್ರವೆನ್ನುವ ಎರಡು ಪದಗಳನ್ನು ಬಳಸಿಕೊಂಡು ವಿಷಯಾಂತರ ಮಾಡಲು ಹೊರಟಿದ್ದಾರೆ.

ದೇಶ ಒಡೆಯುವ ಮಾತುಗಳನ್ನು ಯಾರು ಆಡಿದರೂ ಅದನ್ನು ಕಠಿಣ ಶಬ್ದಗಳಲ್ಲಿ ಖಂಡಿಸಬೇಕು. ಅದಕ್ಕೆ ನೇರ ಅಥವಾ ಪರೋಕ್ಷವಾಗಿ ಯಾರಾದರೂ ಕೊಡುಗೆಗಳನ್ನು ನೀಡುತ್ತಿದ್ದರೆ ಅವರನ್ನು ನಾವು ಸಂಘಟಿತವಾಗಿ ಎದುರಿಸಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ‘‘ಭಾರತದಿಂದ ದಕ್ಷಿಣದ ರಾಜ್ಯಗಳನ್ನು ಪ್ರತ್ಯೇಕಗೊಳಿಸುವ ಪ್ರಯತ್ನ ಕೇಂದ್ರ ಸರಕಾರದಿಂದ ನಡೆಯುತ್ತಿದೆ’’ ಎಂದು ಆರೋಪ ಮಾಡುತ್ತಾ ಬಂದಿದ್ದಾರೆ. ಆದುದರಿಂದ, ಯಾವ ನೀತಿಗಳಿಂದ ರಾಷ್ಟ್ರ ವಿಭಜನೆಯ ಅಪಾಯವಿದೆಯೋ ಆ ನೀತಿಗಳನ್ನು ನಾವು ವಿರೋಧಿಸುವ ಮೂಲಕ ದೇಶ ವಿಭಜನೆಯನ್ನು ತಡೆಯಬೇಕು. ಆ ನೀತಿಯ ಹಿಂದೆ ಎಂತಹ ಶಕ್ತಿಯಿದ್ದರೂ ಅವರನ್ನು ನಾವು ವಿರೋಧಿಸಬೇಕು. ಭಾರತದ ಒಕ್ಕೂಟ ವ್ಯವಸ್ಥೆ ಸಂರಚನೆಯನ್ನು ದುರ್ಬಲಗೊಳಿಸಿ, ರಾಜ್ಯಗಳ ಭಾಷೆ, ಸಂಸ್ಕೃತಿಯ ಮೇಲೆ ನಡೆಯುವ ದಾಳಿಗಳು ಇಂತಹ ವಿಭಜನೆಗಳನ್ನು ಹುಟ್ಟು ಹಾಕುವ ಸಾಧ್ಯತೆಗಳಿರುತ್ತವೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಗ್ರ ಸ್ಥಾನದಲ್ಲಿರುವ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಉತ್ತರ ಭಾರತವನ್ನು ಹೇರುವ ಪ್ರಯತ್ನದ ವಿರುದ್ಧ ಕೇಳಿ ಬರುತ್ತಿರುವ ಅಸಮಾಧಾನವನ್ನು ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು.

ಜಿಎಸ್‌ಟಿ ಹೇರಿಕೆಯ ಬಳಿಕ ರಾಜ್ಯಗಳ ತೆರಿಗೆ ಹಣದ ಬಹುಪಾಲನ್ನು ಕೇಂದ್ರ ಸರಕಾರ ಕಬಳಿಸುತ್ತಿದೆ. ರಾಜ್ಯಗಳಿಗೆ ನೀಡಬೇಕಾಗಿರುವ ಪರಿಹಾರ ಹಣವನ್ನು ಕೇಂದ್ರ ನೀಡುತ್ತಿಲ್ಲ ಎನ್ನುವ ಆಕ್ರೋಶ ದಕ್ಷಿಣ ಭಾರತದ ರಾಜ್ಯಗಳದ್ದಷ್ಟೇ ಅಲ್ಲ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಕೇಂದ್ರ ಸರಕಾರದ ಮೇಲೆ ಇದೇ ಆರೋಪವನ್ನು ಹೊರಿಸುತ್ತಾ ಬಂದಿದ್ದಾರೆ. ಕೇಂದ್ರ ಸರಕಾರ ಆರ್ಥಿಕವಾಗಿ ಕೇರಳದ ಕತ್ತು ಹಿಸುಕುತ್ತಿದೆ ಎಂದು ಕೇರಳ ವಿಧಾನಸಭೆ ಶುಕ್ರವಾರ ನಿರ್ಣಯವೊಂದನ್ನು ಅಂಗೀಕರಿಸಿದೆ. ದಕ್ಷಿಣ ಭಾರತದ ರಾಜ್ಯಗಳು ಶಿಕ್ಷಣ, ಆರೋಗ್ಯ ಎಂದು ಹಣವನ್ನು ವ್ಯಯಿಸುತ್ತಿದ್ದರೆ ಉತ್ತರ ಭಾರತದ ರಾಜ್ಯಗಳು ಕೋಟ್ಯಂತರ ರೂಪಾಯಿಗಳನ್ನು ಮಂದಿರ, ಪ್ರತಿಮೆಗಳಿಗೆ ಸುರಿಯುತ್ತಿವೆ. ಸಹಜವಾಗಿಯೇ ಉತ್ತರ ಭಾರತ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿಯುತ್ತಿದೆ. ಅವರ ಪ್ರಮಾದಗಳಿಗೆ ದಕ್ಷಿಣದ ರಾಜ್ಯಗಳು ದಂಡ ಪಾವತಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣದ ರಾಜ್ಯಗಳ ಪಾಲನ್ನು ಕಿತ್ತು ಉತ್ತರ ಭಾರತವನ್ನು ಸಲಹಲು ಮುಂದಾಗಿರುವುದು ಸಹಜವಾಗಿಯೇ ದಕ್ಷಿಣದ ರಾಜ್ಯಗಳನ್ನು ಆಕ್ರೋಶಕ್ಕೀಡು ಮಾಡಿದೆ. ಇದಿಷ್ಟೇ ಅಲ್ಲ, ಈಗಾಗಲೇ ದಕ್ಷಿಣದ ರಾಜ್ಯಗಳು ಪ್ರಾದೇಶಿಕ ಭಾಷೆಯ ಜೊತೆ ಜೊತೆಗೆ ಇಂಗ್ಲಿಷನ್ನು ತಮ್ಮದಾಗಿಸಿಕೊಂಡು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗಳನ್ನು ಮಾಡುತ್ತಿವೆ. ಈ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಕರ್ನಾಟಕದ ಬ್ಯಾಂಕುಗಳನ್ನು ಉತ್ತರ ಭಾರತದ ಬ್ಯಾಂಕುಗಳಲ್ಲಿ ವಿಲೀನಗೊಳಿಸಿ ಅಲ್ಲೆಲ್ಲ ಹಿಂದಿ ಭಾಷಿಗರನ್ನು ತುಂಬಿಸಲಾಗುತ್ತಿದೆ. ಇಲ್ಲಿನ ಸಹಕಾರಿ ಸಂಸ್ಥೆಗಳನ್ನು ಕೂಡ ವಿಲೀನದ ಹೆಸರಿನಲ್ಲಿ ಕೇಂದ್ರ ನಿಯಂತ್ರಿಸಲು ಹೊರಟಿದೆ. ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳನ್ನು ಉತ್ತರ ಭಾರತೀಯರು ನಿಯಂತ್ರಿಸಲು ಯತ್ನಿಸುವಾಗ ಅದರ ವಿರುದ್ಧ ಪ್ರತಿರೋಧ ವ್ಯಕ್ತವಾಗುವುದು ಸಹಜ. ಉತ್ತರ-ದಕ್ಷಿಣದ ನಡುವಿನ ವಿಭಜನೆ ವರ್ಷದಿಂದ ವರ್ಷಕ್ಕೆ ಹೆಚ್ಚುವುದಕ್ಕೆ ಇದು ಕಾರಣವಾಗುತ್ತಿದೆ. ಕೇಂದ್ರ ಸರಕಾರ ತನ್ನ ಹೇರಿಕೆಯನ್ನು, ಸರ್ವಾಧಿಕಾರವನ್ನು ದಕ್ಷಿಣದ ರಾಜ್ಯಗಳ ಮೇಲೆ ಹೀಗೆ ಮುಂದುವರಿಸಿದರೆ, ದಕ್ಷಿಣದ ಜನರು ‘ಪ್ರತ್ಯೇಕ ರಾಷ್ಟ್ರ’ವನ್ನು ಕೇಳುವ ಸ್ಥಿತಿ ನಿರ್ಮಾಣವಾಗಬಹುದು ಎನ್ನುವ ಆತಂಕವನ್ನು ಯಾರಾದರೂ ವ್ಯಕ್ತಪಡಿಸಿದರೆ, ಆ ಆತಂಕದ ಹಿಂದಿರುವ ದೇಶದ ಮೇಲಿನ ಕಾಳಜಿ ನಮಗೆ ಮುಖ್ಯವಾಗಬೇಕು ಮತ್ತು ಅಂತಹದೊಂದು ಆತಂಕಕ್ಕೆ ದೇಶವನ್ನು ತಳ್ಳಿರುವ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಬಿಜೆಪಿ ನಾಯಕರು ಪ್ರಶ್ನಿಸಬೇಕು.

ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿದವರ ಬಾಯಿ ಮುಚ್ಚಿಸಲು ‘ಪ್ರತ್ಯೇಕ ರಾಷ್ಟ್ರ’ ವನ್ನು ಮುಂದಿಡುತ್ತಿರುವ ಬಿಜೆಪಿಯ ನಾಯಕರು, ಈ ದೇಶವನ್ನು ‘ಹಿಂದೂರಾಷ್ಟ್ರ’ವಾಗಿಸಲು ಹವಣಿಸುತ್ತಿರುವ ದೇಶವಿರೋಧಿಗಳ ಜೊತೆಗೆ ಚಕ್ಕಂದವಾಡುತ್ತಿರುವುದು ಗುಟ್ಟಾಗಿಯೇನೂ ಇಲ್ಲ. ‘ಹಿಂದೂ ರಾಷ್ಟ್ರ’ ನಿರ್ಮಾಣ ಎನ್ನುವುದು ಅಂತಿಮವಾಗಿ ಪ್ರತ್ಯೇಕ ರಾಷ್ಟ್ರ ಬೇಡಿಕೆಯ ಇನ್ನೊಂದು ಮುಖವೇ ಆಗಿದೆ. ಪಂಜಾಬಿನ ಜನರು ಖಾಲಿಸ್ತಾನ ರಾಷ್ಟ್ರ, ಕಾಶ್ಮೀರಿಗಳು ಪ್ರತ್ಯೇಕ ಕಾಶ್ಮೀರ, ಈಶಾನ್ಯ ಉಗ್ರವಾದಿಗಳು ಪ್ರತ್ಯೇಕ ಅಸ್ಸಾಂ ರಾಷ್ಟ್ರ ಕೇಳುವುದು ರಾಷ್ಟ್ರದ್ರೋಹವೇ ಆಗಿದ್ದರೆ, ಉಗ್ರ ಹಿಂದುತ್ವವಾದಿಗಳು ‘ಹಿಂದೂ ರಾಷ್ಟ್ರ’ವನ್ನು ಪ್ರತಿಪಾದಿಸುವುದು ಕೂಡ ರಾಷ್ಟ್ರದ್ರೋಹವೇ ಆಗಿದೆ. ಹಿಂದೂ ಧರ್ಮದ ಹೆಸರಿನಲ್ಲಿ ರಾಷ್ಟ್ರವಿರೋಧಿ ಹೇಳಿಕೆ ನೀಡಿದಾಗ ಅದಕ್ಕೆ ಕುಮ್ಮಕ್ಕು ನೀಡುವ ಅಥವಾ ಮೌನವಾಗಿ ಅದನ್ನು ಬೆಂಬಲಿಸುವ ನಾಯಕರು ನಮ್ಮ ನಾಡು ನುಡಿಗೆ ಅನ್ಯಾಯವಾದಾಗ, ನಮ್ಮ ರಾಜ್ಯಕ್ಕೆ ಸೇರಬೇಕಾದ ತೆರಿಗೆ ಹಣ ಸೇರದೇ ಇದ್ದಾಗ ಅಸಮಾಧಾನ ವ್ಯಕ್ತಪಡಿಸಿದರೆ ಅದರಲ್ಲಿ ‘ರಾಷ್ಟ್ರದ್ರೋಹ’ವನ್ನು ಕಾಣುವುದು ವಿಪರ್ಯಾಸವೇ ಸರಿ. ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಟ್ಟು, ಹಿಂದಿ ಭಾಷಿಕರಿಗೆ ಮಂಡಿಯೂರುವ ರಾಜ್ಯದ ಬಿಜೆಪಿ ನಾಯಕರು ನಾಡದ್ರೋಹಿಗಳು ಮಾತ್ರವಲ್ಲ, ಈ ಮೂಲಕ ಪ್ರತ್ಯೇಕ ರಾಷ್ಟ್ರವಾದಕ್ಕೆ ಇನ್ನಷ್ಟು ಎಣ್ಣೆ ಸುರಿಯುತ್ತಿದ್ದಾರೆ. ದಕ್ಷಿಣ ಭಾರತಕ್ಕಾಗುತ್ತಿರುವ ಅನ್ಯಾಯಗಳನ್ನು ತಡೆದು, ಈ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದು ದೇಶದ ಹಿತಾಸಕ್ತಿಯ ದೃಷ್ಟಿಯಿಂದ ತುರ್ತು ಅಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News