ಬಾರೆಹಳ್ಳ ಡ್ಯಾಂ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಮಧುಬಂಗಾರಪ್ಪ ಚಾಲನೆ

Update: 2025-03-23 15:38 IST
ಬಾರೆಹಳ್ಳ ಡ್ಯಾಂ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಮಧುಬಂಗಾರಪ್ಪ ಚಾಲನೆ
  • whatsapp icon

ಶಿವಮೊಗ್ಗ: ತಾಲೂಕಿನ ಪುರದಾಳು ಗ್ರಾಮದ ಬಾರೆಹಳ್ಳ ಹಾಗೂ ಹಾಯ್ ಹೊಳೆ ಡ್ಯಾಂ ಅಭಿವೃದ್ಧಿ ಕಾಮಗಾರಿ ಹಾಗೂ ಪುರದಾಳು ಗ್ರಾಮದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಕಡ್ಲೆಒಡ್ಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಸೌಲಭ್ಯ ನೀಡುವುದು ಸರ್ಕಾರದ ಕರ್ತವ್ಯ. ಪುರದಾಳು ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಿಗಾಗಿ ಕಟ್ಟಲಾಗಿದ್ದ ಡ್ಯಾಂ ಅತಿಯಾದ ಮಳೆಯಿಂದ ಹಾನಿಯಾಗಿತ್ತು.ಈ ಹಿನ್ನಲೆಯಲ್ಲಿ ಮೂರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದರು.

ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿರಿಸಿ ಈಗ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ ಎಂದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಸಚಿವನಾಗಿ ನನ್ನ ಮೇಲಿದೆ. ನಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆ ದೊಡ್ಡ ಇಲಾಖೆಯಾಗಿರುವುದರಿಂದ ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದರು.

ಮಕ್ಕಳಿಗೆ ಪದೇ ಪದೇ ರಜೆ ಮಾಡಿಸಿ ಶಿಕ್ಷಣಕ್ಕೆ ಕೊರತೆಯಾಗುವಂತೆ ಪೋಷಕರು ಮಾಡಬಾರದು. ಪದೇ ಪದೇ ರಜೆಗೆ ಕಡಿವಾಣ ಹಾಕಲು ಫೇಸ್ ಅಟೆಂಡೆನ್ಸ್ ಯೋಜನೆ ಜಾರಿಗೆ ತರಲು ಯೋಜಿಸಲಾಗುತ್ತಿದೆ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಯಾವುದೇ ಕಾರಣಕ್ಕೂ ಮೋಸವಾಗಲು ಬಿಡುವುದಿಲ್ಲ. ಸಂತ್ರಸ್ಥರ ಪರವಾಗಿ ರಾಜ್ಯ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯ ಕೂಡ ಸಂತ್ರಸ್ಥರ ಸಮಸ್ಯೆ ಬಗೆಹರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಪಕ್ಷಾತೀತವಾಗಿ ಸಹಕಾರ ನೀಡಲಾಗುತ್ತಿದೆ. ನಮ್ಮ ಅವಧಿಯಲ್ಲಿ ಈ ಕೆಲಸವಾಗುವುದು ನಮಗೆ ಸಂತಸವಾಗುತ್ತದೆ ಎಂದರು.

ಗ್ರಾಮಗಳಲ್ಲಿ ದೇವಸ್ಥಾನ ದೊಡ್ಡದಾಗಿ ಕಟ್ಟಿಸುವ ಬದಲು ಶಾಲೆಗಳು ದೊಡ್ಡದಾಗಿ ಕಟ್ಟಿ. ಶಾಲೆಗಳು ದೊಡ್ಡದಾಗಿ ಕಟ್ಟಿಸಿದರೆ ದೇವರು ಸಹ ಆಶೀರ್ವಾದ ಮಾಡುತ್ತಾರೆ ಎಂದರು.

ಶಾಸಕಿ ಶಾರದಾ ಪೂರ್ಯನಾಯ್ಕ್ ಮಾತನಾಡಿ, ಶರಾವತಿ ಮುಳುಗಡೆ ಪ್ರದೇಶದ ಗ್ರಾಮಗಳ ಅಭಿವೃದ್ಧಿಗೆ ಮೊದಲು ಆದ್ಯತೆ ನೀಡಲಾಗುತ್ತಿದೆ. ಬಾರೇಹಳ್ಳ ಹಾಗೂ ಹಾಯ್ ಹೊಳೆ ಡ್ಯಾಂ‌ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು.

ಸರ್ಕಾರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು ಎಂದರು.

ಪುರದಾಳು ಗ್ರಾ.ಪಂ ಉಪಾಧ್ಯಕ್ಷ ಹೆಚ್.ಎಸ್ ಪ್ರದೀಪ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಮಾರಂಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ರಾಜ್ಯ ಭೋಮಿ ಅಭಿವೃದ್ದಿ‌ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಡಾ.ಶ್ರೀನಿವಾಸ್ ಕರಿಯಣ್ಣ, ವೈ.ಹೆಚ್ ನಾಗರಾಜ್, ಪುರದಾಳು ಹಾಗೂ ಅಗಸವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.

ಜೆಡಿಎಸ್ ಶಾಸಕಿಗೆ ಓಪನ್ ಆಫರ್ :

ಕಾರ್ಯಕ್ರಮದಲ್ಲಿ ಇಂಗ್ಲಿಷ್‌ ಗಾದೆ ಮೂಲಕ ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಮಧು ಬಂಗಾರಪ್ಪ ಆಹ್ವಾನಿಸಿದರು. ಶಾರದಾ ಪೂರ್ಯಾನಾಯ್ಕ ಅವರು ನನ್ನ ಮೇಲೆ ಬಹಳ ಪ್ರೀತಿ ತೋರುತ್ತಾರೆ, ಆದರೆ ಚುನಾವಣೆ ಬಂದಾಗ ಬಹಳ ಕಷ್ಟ ಆಗುತ್ತದೆ. ಹಾಗಾಗಿ ಈಗ ಅಧಿಕಾರ ನಮ್ಮ ಬಳಿ ಇದೆ, ಹಾಗಾಗಿ ನಮ್ಮ ಪಕ್ಷಕ್ಕೆ ಬನ್ನಿ ಅಂತಾ ಕೆರೆಯುತ್ತಿದ್ದೇನೆ, ನಮ್ಮ ತಂದೆಯವರು ಯಾವಾಗಲೂ ಹೇಳುತ್ತಿದ್ದರು ಬಿಸಿಲಿದ್ದಾಗ ಹುಲ್ಲು ಒಣಗಿಸಿಕೊಳ್ಳಬೇಕು ಅಂತ. ಈಗ ಬಿಸಿಲು ಇದೆ ಅಕ್ಕ ತೀರ್ಮಾನ ಮಾಡಿ ಎಂದು ಶಾರದಾ ಪೂರ್ಯಾನಾಯ್ಕ್ ಆಫರ್‌ ನೀಡಿದರು.

ಯಾವೆಲ್ಲಾ ಕಾಮಗಾರಿಗೆ ಚಾಲನೆ :

ಮೂರು ಕೋಟಿ ರೂ. ವೆಚ್ಚದಲ್ಲಿ ಬಾರೇಹಳ್ಳ ಡ್ಯಾಂ, ಎರಡು ಕೋಟಿ ರೂ. ವೆಚ್ಚದಲ್ಲಿ ಹಾಯ್ ಹೊಳೆ ಡ್ಯಾಂ ಹಾಗೂ ಮೂರು ಕೋಟಿ ರೂ. ವೆಚ್ಚದಲ್ಲಿ ಪುರದಾಳು -ಅನುಪಿನಕಟ್ಟೆ- ಗೋವಿಂದಾಪುರ -ಹಾಯ್ ಹೊಳೆ ಜಿಲ್ಲಾ ಮುಖ್ಯ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಗುದ್ದಲಿ ಪೂಜೆ ನೇರವೇರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News