ಈಶ್ವರಪ್ಪರಿಗೆ ಧಮ್ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿ: ಆಯನೂರು ಮಂಜುನಾಥ್ ಸವಾಲು

Update: 2024-03-14 08:15 GMT

ಶಿವಮೊಗ್ಗ, ಮಾ.14: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಧಮ್, ತಾಕತ್ತು ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪರ ಪುತ್ರ ಕೆ.ಈ ಕಾಂತೇಶ್ ಗೆ ಯಾರು ಟಿಕೆಟ್ ತಪ್ಪಿಸಲಿಲ್ಲ, 40% ಕಮಿಷನ್ ಹಗರಣಕ್ಕೆ ಅವರೇ ಬಲಿದಾನ ಮಾಡಿಕೊಂಡಿದ್ದಾರೆ. ಅವರು ಹೇಳ್ತಿರೋದು ಎಲ್ಲಾ ಸುಳ್ಳು. ಈಶ್ವರಪ್ಪ ಬ್ಲ್ಯಾಕ್ ಮೇಲ್ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದರು.

ಕಳೆದ ಬಾರಿ ವಿಧಾನಸಭೆಗೆ ಟಿಕೆಟ್ ಕೇಳಿದ್ರು, ಈಗ ಪುತ್ರನಿಗೆ ಲೋಕಸಭೆ ಕೇಳಿದ್ರು, ಎರಡೂ ತಪ್ಪಿ ಹೋಯ್ತು. ಈಗ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ ಕೇಳ್ತಿದ್ದಾರೆ. ಅದು ಸಿಗಲಿಲ್ಲ ಅಂದ್ರೆ ಜಿಲ್ಲಾ ಪಂಚಾಯತ್ ಇದೆಯಲ್ಲಾ ಅದಕ್ಕಾಗಿ ಈ ರೀತಿ ಬಂಡಾಯದ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

ಈಶ್ವರಪ್ಪನವರಿಗೆ ಖಂಡಿತವಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡೋಲ್ಲ. ಅವರಿಗೆ ಖಂಡಿತವಾಗಿ ಅಂತಹ ಧೈರ್ಯ ಇಲ್ಲ. ಮಾಧ್ಯಮಗಳು ಅವರಿಗೆ ಏಕೆ ಅಷ್ಟೊಂದು ಮನ್ನಣೆ ಕೊಡ್ತೀರಾ? ಕೈಲಾಗದ ವ್ಯಕ್ತಿ ಬಗ್ಗೆ ಏಕೆ ಪ್ರಶ್ನೆ ಕೇಳ್ತೀರಾ? ಶಿವಮೊಗ್ಗ ಜಿಲ್ಲೆಯ ಯಾವ ತಾಲೂಕಿನಲ್ಲಿ ಈಶ್ವರಪ್ಪನವರ ಪ್ರಭಾವ ಇದೆ ಎಂದು ಪ್ರಶ್ನಿಸಿದರು.

ಈಶ್ವರಪ್ಪ ಯಾವ ರಾಜ್ಯ ನಾಯಕನೂ ಅಲ್ಲ, ಕೇವಲ ಶಿವಮೊಗ್ಗ ನಗರದ ನಾಯಕ. ಈಶ್ವರಪ್ಪ ಧೈರ್ಯಶಾಲಿಯಾದರೆ, ಜನರಿಗೆ ಬೇಕಾದ ವ್ಯಕ್ತಿ ಆದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಲಿ. ಒಂದು ವೇಳೆ ಪಕ್ಷೇತರವಾಗಿ ಸ್ಪರ್ಧೆ ಮಾಡಿದರೆ ನಾನು ಓಟು ಈಶ್ವರಪ್ಪ ಅವರಿಗೆ ಹಾಕ್ತೇನೆ. ಅವರಿಗೆ ಧಮ್ ಗಿಮ್ ಏನು ಇಲ್ಲ .ಅವರಿಗೆ ರಾಜಕೀಯ ಗಂಡಸ್ತನ ಇಲ್ಲ. ನಾಳೆ ಮೋದಿ ಬಂದಾಗ ಮೋದಿ ಕಾಲಿಗೆ ಬೀಳ್ತಾರೆ ಎಂದು ಟೀಕಿಸಿದರು.

ಮಾ.15ರಂದು ನಡೆಯುವ ಸಭೆಯಲ್ಲಿ ಯಾವುದೇ ಭೂಕಂಪ ಆಗಲ್ಲ. ಹೊರಗಿನವರನ್ನು ಕರೆದುಕೊಂಡು ಬಂದು ಸಭಾಂಗಣ ತುಂಬಿಸಬೇಕು ಅಷ್ಟೇ.ಈಶ್ವರಪ್ಪ ಅವರ ಕೈಯಲ್ಲಿ ಏನೇನು ಆಗಲ್ಲ. ಕೇವಲ ಬೋರ್ಡ್ ಅಧ್ಯಕ್ಷರ ಸ್ಥಾನ ಪಡೆಯಲು ಈ ರೀತಿ ಮಾಡ್ತಿದ್ದಾರೆ. ಈಶ್ವರಪ್ಪ ಯಾವುದೇ ರಾಷ್ಟ್ರ ಭಕ್ತ ಅಲ್ಲ, ಕಪಟ ರಾಷ್ಟ್ರ ಭಕ್ತ ಎಂದು ವ್ಯಂಗ್ಯವಾಡಿದರು.

ಈ ಬಾರಿ ನಾವು ಶಿವಮೊಗ್ಗ ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ. ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News