ಶಿವಮೊಗ್ಗ | ಕೆಪಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿಯ ಮೃತದೇಹ ಪತ್ತೆ; 78 ದಿನಗಳ ಹಿಂದೆ ನಾಪತ್ತೆಯಾಗಿದ್ದ ಭರತ್!

Update: 2025-01-21 22:50 IST
ಶಿವಮೊಗ್ಗ | ಕೆಪಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿಯ ಮೃತದೇಹ ಪತ್ತೆ;  78 ದಿನಗಳ ಹಿಂದೆ ನಾಪತ್ತೆಯಾಗಿದ್ದ ಭರತ್!
  • whatsapp icon

ಶಿವಮೊಗ್ಗ : ನಾಪತ್ತೆಯಾಗಿ 78 ದಿನಗಳ ಬಳಿಕ ಕೆಪಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿಯ ಮೃತದೇಹ ಮಾಣಿ ಡ್ಯಾಮ್‌ನ ಹಿನ್ನೀರು ಪ್ರದೇಶದಲ್ಲಿ ಪತ್ತೆಯಾದ ಘಟನೆ ಮಂಗಳವಾರ ನಡೆದಿದೆ.

ಕೆಪಿಸಿಯಲ್ಲಿ ಗುತ್ತಿಗೆ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೊಸನಗರ ತಾಲೂಕಿನ ನಗರ ಹೋಬಳಿಯ ಯಡೂರು ಗ್ರಾಮದ ಗೌಟಾಣಿ ವಾಸಿ ಭರತ್ 2024ರ ನ.3ರಂದು ನಾಪತ್ತೆಯಾಗಿರುವ ಬಗ್ಗೆ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಭರತ್‌ಗಾಗಿ ಹುಡುಕಾಟ ನಡೆಸಲಾಗಿತ್ತು. ಸ್ಥಳೀಯರು, ಅಗ್ನಿಶಾಮಕ ದಳ, ಅರಣ್ಯ ಮತ್ತು ಪೊಲೀಸ್ ಇಲಾಖೆ ಕೂಡ ಕಾರ್ಯಾಚರಣೆ ನಡೆಸಿತ್ತು. ಅಲ್ಲದೆ ಮುಳುಗು ತಜ್ಞ ಈಶ್ವರ ಮಲ್ಪೆ ತಂಡದವರು ಹಿನ್ನೀರಿನ 70 ಅಡಿ ಆಳದಲ್ಲಿ ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.

ಮಂಗಳವಾರ ಹುಮ್ಮಡಗಲ್ಲು ಮಾಣಿ ಡ್ಯಾಮ್‌ನ ಹಿನ್ನೀರು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಕಂಡ ಸ್ಥಳೀಯರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇಲಾಖೆಯ ಅಧಿಕಾರಿಗಳು ಮೃತದೇಹ ಭರತ್ ಅವರದ್ದೇ ಇರಬಹುದು ಎಂಬ ಸಂದೇಹದ ಮೇಲೆ ಅವರ ಕುಟುಂಬಕ್ಕೆ ಮಾಹಿತಿಯನ್ನು ನೀಡಿದ್ದಾರೆ.

ಬಳಿಕ ಭರತ್ ಅವರ ಪತ್ನಿ ಮೃತದೇಹದ ಮೇಲಿದ್ದ ಬಟ್ಟೆಯ ಆಧಾರದಲ್ಲಿ ಭರತ್ ಎಂಬುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಈ ಸಾವಿನ ಕುರಿತು ಅನುಮಾನವಿದ್ದು ಸೂಕ್ತ ತನಿಖೆ ನಡೆಸುವಂತೆ ದೂರನ್ನು ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News