ಐಪಿಎಲ್ 2024: ಕೆಕೆಆರ್ ಗೆ ಶ್ರೇಯಸ್ ಅಯ್ಯರ್ ನಾಯಕ

Update: 2023-12-14 17:47 GMT

ಶ್ರೇಯಸ್ ಅಯ್ಯರ್ | Photo : PTI 

ಹೊಸದಿಲ್ಲಿ: ಗಾಯದ ಸಮಸ್ಯೆಯಿಂದಾಗಿ ಕಳೆದ ಋತುವಿನಲ್ಲಿ ಆಡದ ಮಧ್ಯಮ ಸರದಿಯ ಬ್ಯಾಟರ್ ಶ್ರೇಯಸ್ ಅಯ್ಯರ್ 2024ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಮರಳಲು ಸಜ್ಜಾಗಿದ್ದಾರೆ. ಗುರುವಾರ ಈ ವಿಚಾರವನ್ನು ಕೆಕೆಆರ್ ಪ್ರಕಟಿಸಿದೆ.

2023ರ ಆವೃತ್ತಿಯ ಐಪಿಎಲ್ ನಲ್ಲಿ ಶ್ರೇಯಸ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿದ್ದ ನಿತಿಶ್ ರಾಣಾ ಇದೀಗ ತಂಡದ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಈ ವರ್ಷದ ಎಪ್ರಿಲ್ ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೇಯಸ್ ಏಶ್ಯಕಪ್ ವೇಳೆಗೆ ರಾಷ್ಟ್ರೀಯ ತಂಡಕ್ಕೆ ವಾಪಸಾಗಿದ್ದರು. ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಅಗ್ರ ಫಾರ್ಮ್ ನಲ್ಲಿದ್ದರು. ವಿಶ್ವಕಪ್ ಫೈನಲ್ ನಲ್ಲಿ ಭಾರತವನ್ನು ಮಣಿಸಿದ್ದ ಆಸ್ಟ್ರೇಲಿಯವು ಆರನೇ ಬಾರಿ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿತ್ತು.

ದುರದೃಷ್ಟವಶಾತ್ ಗಾಯದ ಸಮಸ್ಯೆಯ ಕಾರಣದಿಂದ ಶ್ರೇಯಸ್ ಅಯ್ಯರ್ 2023ರ ಐಪಿಎಲ್ ಟೂರ್ನಿಯಿಂದ ವಂಚಿತರಾಗಿದ್ದರು. ಇದೀಗ ಅವರು ತಂಡಕ್ಕೆ ವಾಪಸಾಗಿ ನಾಯಕತ್ವ ವಹಿಸಿಕೊಳ್ಳುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗುತ್ತಿದೆ. ತನ್ನ ಗಾಯದಿಂದ ಚೇತರಿಸಿಕೊಳ್ಳಲು ಅವರು ಪಟ್ಟಿರುವ ಪರಿಶ್ರಮ ಶ್ಲಾಘನೀಯ ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News