ಪತ್ರಿಕಾಗೋಷ್ಠಿಗೆ ಕೇವಲ ಇಬ್ಬರು ಪತ್ರಕರ್ತರು ಹಾಜರು: ದಂಗಾದ ಸೂರ್ಯಕುಮಾರ್ ಯಾದವ್

Update: 2023-11-23 07:01 GMT

 ಸೂರ್ಯಕುಮಾರ್ ಯಾದವ್ (X/BCCI)

ವಿಶಾಖಪಟ್ಟಣ: ಗುರುವಾರದಿಂದ ಪ್ರಾರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಟಿ-20 ಪಂದ್ಯಕ್ಕೂ ಮುನ್ನಾ ನಿನ್ನೆ ಆಯೋಜನೆಗೊಂಡಿದ್ದ ಭಾರತ ತಂಡದ ಪತ್ರಿಕಾಗೋಷ್ಠಿಗೆ ಕೇವಲ ಇಬ್ಬರು ಪತ್ರಕರ್ತರು ಹಾಜರಾಗಿರುವುದನ್ನು ಕಂಡು ಸ್ವತಃ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ದಂಗಾದ ಘಟನೆ ನಡೆದಿದೆ.

ಬುಧವಾರ ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ವೇಡ್ ಕೂಡಾ ಪತ್ರಿಕಾಗೋಷ್ಠಿ ಆಯೋಜಿಸಿದ್ದರಾದರೂ, ಅದು ನಡೆಯಲಿಲ್ಲ. ಅದಕ್ಕೆ ಪತ್ರಕರ್ತರ ಕೊರತೆ ಕಾರಣವೆ ಎಂಬುದು ಇನ್ನೂ ದೃಢಪಟ್ಟಿಲ್ಲ.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಕೇವಲ ಇಬ್ಬರೇ?’ ಎಂದು ಪ್ರಶ್ನಿಸಿದ ನಾಯಕ ಸೂರ್ಯಕುಮಾರ್ ಯಾದವ್, ಕೇವಲ ನಾಲ್ಕು ನಿಮಿಷಗಳಲ್ಲಿ ಪತ್ರಿಕಾಗೋಷ್ಠಿಯನ್ನು ಅಂತ್ಯಗೊಳಿಸಿದ ಘಟನೆಯೂ ನಡೆಯಿತು. ಭಾರತೀಯ ಕ್ರಿಕೆಟ್ ತಂಡದ ಪತ್ರಿಕಾಗೋಷ್ಠಿಗಳು ದೀರ್ಘವಾಗಿರುತ್ತವೆ. ಆದರೆ, ಸೂರ್ಯಕುಮಾರ್ ಯಾದವ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಂತಹುದೇನೂ ನಡೆಯದೆ ಕೆಲವೇ ನಿಮಿಷಗಳಲ್ಲಿ ಅಂತ್ಯಗೊಂಡಿದ್ದೂ ಚರ್ಚೆಗೆ ಗ್ರಾಸವಾಗಿದೆ.

ಭಾರತ-ಆಸ್ಟ್ರೇಲಿಯಾ ನಡುವೆ ಆಯೋಜನೆಗೊಂಡಿರುವ ಐದು ಪಂದ್ಯಗಳ ಟಿ-20 ಕ್ರಿಕೆಟ್ ಸರಣಿಯ ಪೈಕಿ ವಿಶಾಖಪಟ್ಟಣದಲ್ಲಿಂದು ಪ್ರಥಮ ಪಂದ್ಯ ನಡೆಯಲಿದ್ದು, ಎರಡೂ ತಂಡಗಳಲ್ಲೂ ಬಹುತೇಕ ಹೊಸ ಆಟಗಾರರೇ ತುಂಬಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News