ವಿಸ್ಟ್ರಾನ್ ಕಂಪೆನಿಯಿಂದ 1,500 ಕೋಟಿ. ರೂ. ಹೂಡಿಕೆ: ಸಚಿವ ಎಂ.ಬಿ.ಪಾಟೀಲ್

Update: 2024-01-31 15:06 GMT

ಬೆಂಗಳೂರು: ವಿಸ್ಟ್ರಾನ್ ಕಂಪೆನಿಯು ರಾಜ್ಯದಲ್ಲಿ 1,500 ಕೋಟಿ ರೂ. ಹೂಡಿಕೆಯೊಂದಿಗೆ ತನ್ನ ಲ್ಯಾಪ್-ಟಾಪ್ ಉತ್ಪಾದನಾ ಘಟಕವನ್ನು ಆರಂಭಿಸಲಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಬುಧವಾರ ನಗರದ ಖನಿಜ ಭವನದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ವಿಸ್ಟ್ರಾನ್ ಕಂಪೆನಿಯು ರಾಜ್ಯ ಸರಕಾರದೊಂದಿಗೆ ಅಧಿಕೃತವಾಗಿ ಒಡಂಬಡಿಕೆ ಮಾಡಿಕೊಂಡಿದೆ. ಸರಕಾರ ಪರವಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವಿಸ್ಟ್ರಾನ್ ಕಂಪೆನಿಯ ಅಧ್ಯಕ್ಷ ಅಲೆಕ್ ಲಾಯ್ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದರು.

ವಿಸ್ಟ್ರಾನ್ ಕಂಪೆನಿಯು ಈಗಾಗಲೇ ಕೋಲಾರದಲ್ಲಿ ತನ್ನ ಘಟಕವನ್ನು ಹೊಂದಿದೆ. ಆದರೆ, ಈ ಹೊಸ ಹೂಡಿಕೆಯ ಮೂಲಕ ರಾಜ್ಯದಲ್ಲಿ ಪ್ರಪ್ರಥಮ ಲ್ಯಾಪ್-ಟಾಪ್ ತಯಾರಿಕಾ ಘಟಕವೂ ಬರುತ್ತಿದ್ದು, 2026ರ ಜನವರಿ ವೇಳೆಗೆ ಇದರಲ್ಲಿ ಉತ್ಪಾದನಾ ಚಟುವಟಿಕೆ ಆರಂಭಿಸಲಿದೆ. ಈ ಯೋಜನೆಯಿಂದ 3,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು.

ವಿಸ್ಟ್ರಾನ್ ಕಂಪೆನಿಯ ಈ ಯೋಜನೆಗಾಗಿ 32 ಎಕರೆ ಜಮೀನನ್ನು ಬೆಂಗಳೂರಿನ ಸಮೀಪ ಕೇಳಿದ್ದು, ಒಂದು ವಾರದಲ್ಲಿ ಇದು ಅಂತಿಮವಾಗಲಿದೆ. ಇಲ್ಲಿ ತಯಾರಾಗುವ ಲ್ಯಾಪ್-ಟಾಪ್ ಗಳ ಪೈಕಿ ಶೇಕಡ 50ರಷ್ಟು ಹೊರದೇಶಗಳಿಗೆ ರಫ್ತಾಗಲಿದೆ. ಇದರಿಂದ ರಾಜ್ಯದ ರಫ್ತು ವಹಿವಾಟಿಗೂ ಮೌಲಿಕ ಕೊಡುಗೆ ಸಿಗಲಿದೆ. ಉದ್ದೇಶಿತ ಘಟಕವು ಸಂಪೂರ್ಣ ಆಟೋಮೇಶನ್ ಸೌಲಭ್ಯ ಹೊಂದಿರಲಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.

ವಿಸ್ಟ್ರಾನ್ ಲ್ಯಾಪ್ ಟಾಪ್ ತಯಾರಿಕಾ ಘಟಕವು ಸರ್ವರ್ ಗಳು, ಐಒಟಿ(ಇಂಟರ್ನೆಟ್ ಆಫ್ ಥಿಂಗ್ಸ್), ವಿದ್ಯುತ್ ಚಾಲಿತ ವಾಹನಗಳ ವಲಯಕ್ಕೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸಲಿದೆ. ಈ ವರ್ಷದ ಜುಲೈನಲ್ಲಿ ಘಟಕದ ಕಾಮಗಾರಿ ಆರಂಭವಾಗಲಿದ್ದು, ಈ ಘಟಕವು ರಾಜ್ಯ ಸರಕಾರದ 4.0 ಕೈಗಾರಿಕಾ ಕ್ರಾಂತಿಯ ಆಶಯಗಳಿಗೆ ಪೂರಕವಾಗಿರಲಿದೆ ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.

ಸರಕಾರವು ಕೈಗಾರಿಕೆ ಮತ್ತು ಹೂಡಿಕೆಗಳ ಪರವಾಗಿದ್ದು, ಉದ್ಯಮಸ್ನೇಹಿ ನೀತಿಗಳನ್ನು ಹೊಂದಿದೆ. ಜೊತೆಗೆ ಕಾಲಕಾಲಕ್ಕೆ ಹಲವು ಉಪಯುಕ್ತ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಜತೆಗೆ ರಾಜ್ಯದ ಉಳಿದ ಭಾಗಗಳಲ್ಲೂ ಆಧುನಿಕ ಉದ್ಯಮಗಳು ನೆಲೆಯೂರುವಂತೆ ಮಾಡಲು ಆದ್ಯತೆ ನೀಡಲಾಗಿದೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ವಿಸ್ಟ್ರಾನ್ ಕಂಪೆನಿಯ ಹಿರಿಯ ನಿರ್ದೇಶಕ ಡೆನಿಸ್ ಹಂಗ್, ಜನರಲ್ ಮ್ಯಾನೇಜರ್ ರಾಚೆಲ್ ಲೂ, ಉನ್ನತಾಧಿಕಾರಿಗಳಾದ ಸಿ.ಸುಧೀರ್, ಪ್ರಿಯವ್ರತ ಪಾಂಡಾ, ಉದ್ಯಮಿ ಸಿ.ಎ.ಸುರೇಶ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸೇರಿ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News