ಮೈಸೂರು | ಬಾಲಕರಿಬ್ಬರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಇಬ್ಬರು ಬಾಲಕರ ನಡುವಿನ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಗರದ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸುನ್ನಿ ಚೌಕದ ಬಳಿ ನಡೆದಿದೆ.

Update: 2023-07-04 07:11 GMT

ಮೈಸೂರು, ಜು.4: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕರ ನಡುವೆ ಉಂಟಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಗರದ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸುನ್ನಿ ಚೌಕದ ಬಳಿ ಸೋಮವಾರ ಸಂಜೆ ನಡೆದಿದೆ.

17 ವರ್ಷದ ಫರ್ವೇಝ್ ಖಾನ್ ಕೊಲೆಯಾದ ಬಾಲಕ. ಈತನನ್ನು 15 ವರ್ಷದ ಬಾಲಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆನ್ನಲಾಗಿದೆ. ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಮಂಡಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ: ಬೀಬಿ ಕೇರಿಯ ನಿವಾಸಿಯಾದ 15 ವರ್ಷದ ಬಾಲಕ ಅಕ್ಕನ ಮಗನನ್ನು ಆಟವಾಡಿಸಲು ಸುನ್ನಿ ಚೌಕ್ ಬಳಿ ಇರುವ ಸೋದರಿ ಮನೆ ಬಳಿ ಬರುತ್ತಿದ್ದ. ಅಕ್ಕನ ಮನೆಯ ಹಿಂಬಾಗದಲ್ಲಿರುವ ಕಟ್ಟಡದ ಕೆಳ ಅಂತಸ್ತಿನಲ್ಲೇ ಹತ್ಯೆಯಾದ ಫರ್ವೇಝ್ ಮನೆಯೂ ಇದೆ.

ಮೂರು ದಿನಗಳ ಹಿಂದೆ ಆಟವಾಡುವ ವೇಳೆ ಇವರಿಬ್ಬರ ನಡುವೆ ಜಗಳ ನಡೆದಿತ್ತು. ಸೋಮವಾರ ಸಂಜೆ 4:45ರ ಸಮಯದಲ್ಲಿ ಬಾಲಕ ತನ್ನ ಅಕ್ಕನ ಮನೆಯಲ್ಲಿ ಮಗುವನ್ನು ಆಟವಾಡಿಸುತ್ತಿದ್ದ ವೇಳೆ ಫರ್ವೇಝ್ ಹೋಗಿದ್ದಾನೆ. ಈ ವೇಳೆ ಅವರೊಳಗೆ ಮತ್ತೆ ಜಗಳವಾಗಿದೆ. ಈ ವೇಳೆ 15 ವರ್ಷದ ಬಾಲಕ ಫರ್ವೇಝ್ ಹೊಟ್ಟೆಯ ಎಡಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಫರ್ವೇಝ್ ನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News