ಕಲೆಕ್ಷನ್ ದಂಧೆಯಲ್ಲಿ ಕಾಂಗ್ರೆಸ್ ಸಚಿವರು ನಿತ್ಯವೂ ಮಿಂದೇಳುತ್ತಿದ್ದಾರೆ ಎಂದು ಶಿವಾನಂದ ಪಾಟೀಲ್‌ ಅವರ ವೀಡಿಯೊ ಹಂಚಿಕೊಂಡ ಬಿಜೆಪಿ

Update: 2023-10-18 12:43 GMT

ಬೆಂಗಳೂರು, ಅ. 18: ‘ಕಲೆಕ್ಷನ್ ದಂಧೆಯಲ್ಲಿ ಕಾಂಗ್ರೆಸ್ ಸಚಿವರು ನಿತ್ಯವೂ ಮಿಂದೇಳುತ್ತಿದ್ದಾರೆ. ನಾಡಿನ ಜನರಿಂದ ಲೂಟಿ ಮಾಡಿದ ಹಣದಲ್ಲಿ ಮಂತ್ರಿಗಳು ಹೇಗೆ ಮಜಾ ಉಡಾಯಿಸುತ್ತಿದ್ದಾರೆ ಎಂಬುದನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲರು ನೈಜ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ’ ಎಂದು ಬಿಜೆಪಿ, ಸಚಿವ ಶಿವಾನಂದ ಪಾಟೀಲ್ ಅವರದ್ದೆನ್ನಲಾದ ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.

ಬುಧವಾರ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಬಿಜೆಪಿ, ಕಾಂಗ್ರೆಸ್‍ನ ಪಾಲಿಗೆ ಕರ್ನಾಟಕ ಎಂದಿಗೂ ಮುಚ್ಚದ ಎಟಿಎಂ ಆಗುವ ಕಲೆಕ್ಷನ್‍ನಲ್ಲಿ ಸೋರಿಕೆಯಾಗಿ ದೆಹಲಿಗೆ ಕಳಿಸುವುದರಲ್ಲಿ ಯಾವುದೇ ಕೊರತೆಯಾಗಬಾರದು ಎಂಬ ದೃಷ್ಟಿಯಿಂದ ಸಿದ್ದರಾಮಯ್ಯ ಅವರ ಸರಕಾರ ಪ್ರತಿ ಸಚಿವಾಲಯಕ್ಕೂ ತಿಂಗಳ ಕಲೆಕ್ಷನ್ ಟಾರ್ಗೆಟ್ ನಿಗದಿ ಮಾಡಿದೆ’ ಎಂದು ದೂರಿದೆ.

‘ಕೈ ಪಾರ್ಟಿಯಲ್ಲಿ ಒಳಗೊಳಗೇ ನಡೆಯುತ್ತಿರುವ ಹೊಯ್‍ಕೈಗೆ ಕೊನೆಯೇ ಇಲ್ಲ. ಬೆಳಗಾವಿ ಜಿಲ್ಲೆಯ ಕಲೆಕ್ಷನ್‍ನ ಪಾಲು ಹಂಚಿಕೆ ವಿಚಾರದಲ್ಲಿ ಈಗ ಸತೀಶ್ ಜಾರಕಿಹೋಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಜಗಳ ತಾರಕಕ್ಕೇರಿದೆ. ಇಬ್ಬರ ಜಗಳದಿಂದಾಗಿ, ಹೈಕಮಾಂಡ್‍ಗೆ ತಾವು ಕಳಿಸುವ ಕಲೆಕ್ಷನ್‍ನಲ್ಲಿ ಇಳಿಕೆಯಾಗಬಹುದು ಎಂಬುದು ಡಿ.ಕೆ.ಶಿವಕುಮಾರ್ ಅವರಿಗೆ ಇರುವ ಭಯ. ಹಾಗಾಗಿ ಕಲೆಕ್ಷನ್‍ನಲ್ಲಿ ಇಬ್ಬರಿಗೂ ಒಂದೊಂದು ಪಾಲು ನೀಡಿ ದಿಲ್ಲಿಗೆ ಕಳಿಸುವ ಪಾಲಿನಲ್ಲಿ ಯಾವುದೇ ಇಳಿಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಡಿ.ಕೆ.ಸಾಹೇಬರ ಹೆಗಲಿನಲ್ಲಿದೆ’ ಎಂದು ಬಿಜೆಪಿ ಲೇವಡಿ ಮಾಡಿದೆ.

‘ರಾಜ್ಯದಲ್ಲಿ ಎಟಿಎಂ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಲೆಕ್ಷನ್, ಕಮಿಷನ್ ದಂಧೆ ಶಿಕ್ಷಣ ವ್ಯವಸ್ಥೆಗೂ ವಿಸ್ತರಿಸಿದೆ. ಲಂಚದ ಕಲೆಕ್ಷನ್‍ಗಾಗಿಯೇ ಸಿದ್ದರಾಮಯ್ಯ ಅವರ ಸರಕಾರ ಹೊಸ ಹುದ್ದೆಗಳನ್ನು ಸೃಷ್ಟಿಸಿರುವುದೇ ಇದಕ್ಕೆ ನಿದರ್ಶನ. ಸರಕಾರದ್ದೇ ಅಂಗಸಂಸ್ಥೆಯಾದ ಚಿತ್ರಕಲಾ ಪರಿಷತ್ತಿಗೆ ಬೆಂಗಳೂರು ವಿವಿ ಪರಿಶೀಲನಾ ಸಮಿತಿ ಅಧ್ಯಕ್ಷರು ಲಂಚಕ್ಕೆ ಬೇಡಿಕೆಯಿಟ್ಟಿರುವುದು ಈ ಸರಕಾರದ ಭ್ರಷ್ಟ ಬೇರುಗಳು ಎಲ್ಲೆಲ್ಲೂ ಹಬ್ಬಿರುವುದರ ಸೂಚನೆ. ಕಲೆಕ್ಷನ್ ಮಾಸ್ಟರ್‍ಗಳೇ ಕುರ್ಚಿ ಮೇಲೆ ಕೂತಿರುವಾಗ ಕಲೆಕ್ಷನ್ ಶಿಷ್ಯಂದಿರಿಗೆ ಕಡಿವಾಣ ಬೀಳುವುದು ಅಸಾಧ್ಯ’ ಎಂದು ಟೀಕಿಸಿದೆ.

‘ರಾಜ್ಯದ ಕಾಂಗ್ರೆಸ್ ಕ್ಕೆ ಹೈಕಮಾಂಡ್ ನೀಡಿರುವ ಸಾವಿರ ಕೋಟಿ ರೂ.ಮೊದಲ ಹಂತದ ಟಾರ್ಗೆಟ್ ತಲುಪಲು ಸಿದ್ದರಾಮಯ್ಯ ಅವರ ಸರಕಾರ ಆಯ್ಕೆ ಮಾಡಿಕೊಂಡಿರುವ ವಾಮಮಾರ್ಗಗಳು. ಕೃಷಿ ಅಧಿಕಾರಿಗಳಿಂದ ಕಲೆಕ್ಷನ್..!, ಅಬಕಾರಿ ಅಧಿಕಾರಿಗಳಿಂದ ಕಲೆಕ್ಷನ್..!, ಗುತ್ತಿಗೆದಾರರ ಮೂಲಕ ಕಲೆಕ್ಷನ್..!, ಅಧಿಕಾರಿಗಳಿಂದ ದಸರಾ ಕಮಿಷನ್..!, ಶ್ಯಾಡೋ ಸಿಎಂ ವರ್ಗಾವಣೆ ಕಲೆಕ್ಷನ್..!, ‘ಕಾಂಗ್ರೆಸ್ ಬಂದಿದೆ ಲೂಟಿ ಮಾಡುತ್ತಿದೆ’. ಕಲೆಕ್ಷನ್ ಉಚಿತ, ಕಮಿಷನ್ ಖಚಿತ, ಕರಪ್ಷನ್ ನಿಶ್ಚಿತ’ ಎಂದು ವಾಗ್ದಾಳಿ ನಡೆಸಿದೆ.

‘600 ಕೋಟಿ ರೂ.ಬಿಡುಗಡೆ ಮಾಡಿದ್ದರಲ್ಲೇ 102 ಕೋಟಿ ರೂ.ಗಳಷ್ಟು ಕಮಿಷನ್ ಪಾಲು ಪತ್ತೆಯಾಗಿದೆ! ಬೆಂಗಳೂರು ಅಭಿವೃದ್ಧಿ ‘ಹೆಸರಿನಲ್ಲಿ’ ಈಗಾಗಲೇ ಸಾವಿರಾರು ಕೋಟಿಗಳನ್ನು ಬಜೆಟ್‍ನಲ್ಲಿ ಮೀಸಲಿಟ್ಟಿರುವ ಸಿದ್ದರಾಮಯ್ಯ ಪಂಚರಾಜ್ಯ ಮತ್ತು ಲೋಕಸಭೆ ಚುನಾವಣೆಗಾಗಿ ಹೈ ಕಮಾಂಡ್‍ಗೆ ಕಳಿಸಬೇಕಿರುವ ಮೊತ್ತ ಕೇಳಿದರೆ ನೀವು ಕೂತಲ್ಲೇ ಹೌಹಾರಬಹುದು. ಹಾಗಾಗಿ ಈ ವಿಡಿಯೋ ಪ್ಲೇ ಮಾಡುವ ಮೊದಲು ಮನಸ್ಸು ಗಟ್ಟಿ ಮಾಡಿಕೊಳ್ಳಿ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ನಾಯಕರಿಗೆ ಜ್ಞಾನವಿಲ್ಲ: ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯೆ 

ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ , ʻ ಮದುವೆ ಸಮಾರಂಭವೊಂದರಲ್ಲಿ ಹಣ ಚೆಲ್ಲುವ ವಿಚಾರ ಇಟ್ಟುಕೊಂಡು ಜ್ಞಾನ ಇಲ್ಲದೇ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆʻ ಎಂದು ಸ್ಪಷ್ಟಪಡಿಸಿದ್ದಾರೆ.

ʻʻತಾನು ಹೈದರಾಬಾದ್‍ಗೆ ಹೋಗಿದ್ದು ಮದುವೆಯೊಂದರಲ್ಲಿ ಪಾಲ್ಗೊಳ್ಳಲು, ಅಲ್ಲಿ ದುಡ್ಡು ಚೆಲ್ಲಿ ಕುಣಿಯುವುದು ಮದುವೆ ಮನೆಯ ಸಂಪ್ರದಾಯವಾಗಿದ್ದರೆ ಅದನ್ನು ತಡೆಯಲಾಗುತ್ತೆಯೇ?. ಆದರೆ, ಯಾವುದು ವಿಷಯ ಯಾವುದು ವಿಷಯ ಅಲ್ಲ ಅನ್ನೋದು ಸಹ ಬಿಜೆಪಿ ನಾಯಕರಿಗೆ ಗೊತ್ತಾಗುತ್ತಿಲ್ಲವಲ್ಲ. ಹಣ ಚೆಲ್ಲುವ ಕಾರ್ಯಕ್ರಮ ಒಂದೆಡೆ ನಡೆದರೆ ತಾನಿದ್ದಿದ್ದು ಮತ್ತೊಂದು ಜಾಗದಲ್ಲಿ, ಬಿಜೆಪಿ ನಾಯಕರು ಜ್ಞಾನವಿಲ್ಲದೆ ಮಾತನಾಡುವುದನ್ನು ಬಿಡಲಿʻʻ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News