ಚಿಕ್ಕಮಗಳೂರು: ಕಾಡಾನೆ ಸೆರೆ ಹಿಡಿದು ಸಕ್ರೆಬೈಲ್ ಶಿಬಿರಕ್ಕೆ ಸ್ಥಳಾಂತರಿಸಿದ ಅರಣ್ಯಾಧಿಕಾರಿಗಳ ತಂಡ

Update: 2023-11-16 12:18 GMT

ಚಿಕ್ಕಮಗಳೂರು, ನ.16: ಜಿಲ್ಲೆಯ ಸಾರಗೋಡು ಗ್ರಾಮ ಸಮೀಪದ ಕಾಡಿನಲ್ಲಿ ಬುಧವಾರ ರಾತ್ರಿ ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ ಸಾಕಾನೆಗಳ ನೆರವಿನಿಂದ ಕಾಡಾನೆವೊಂದನ್ನು ಸೆರೆ ಹಿಡಯುವಲ್ಲಿಅರಣ್ಯಾಧಿಕಾರಿಗಳ ತಂಡ ಯಶಸ್ವಿಯಾಗಿದೆ.

ಬುಧವಾರ ಮಧ್ಯಾಹ್ನ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಸನಿ ಎಂಬಲ್ಲಿ ಕಾಡಾನೆಯೊಂದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಅರಿವಳಿಕೆ ಚುಚ್ಚುಮದ್ದಿನಿಂದಾಗಿ ಈ ಕಾಡಾನೆ ಸುಮಾರು 8ಕಿಮೀ ದೂರ ಸಾಗಿ ಸಾರಗೋಡು ಸಮೀಪದಲ್ಲಿ ಪ್ರಜ್ಞೆತಪ್ಪಿ ಅರಣ್ಯದಲ್ಲಿ ಬಿದ್ದಿತ್ತು ಎನ್ನಲಾಗಿದೆ. ನಂತರ ಸಂಜೆ ಅಭಿಮನ್ಯು ನೇತೃತ್ವದ ಸಾಕಾನೆಗಳ ನೆರವಿನಿಂದ ಸೆರೆಯಾದ ಆನೆಯನ್ನು ತಡರಾತ್ರಿ ಲಾರಿಗೆ ತುಂಬಿಸಿ ಸಕ್ರೇಬೈಲ್ ಆನೆ ಶಿಬಿರದ ಕಡೆ ಕೊಂಡೊಯ್ಯಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪ ಕಾರ್ಮಿಕ ಮಹಿಳೆಯೋರ್ವರನ್ನು ಇತ್ತೀಚೆಗೆ ಕಾಡಾನೆಯೊಂದು ತುಳಿದು ಸಾಯಿಸಿತ್ತು. ನ.8 ರಂದು ಮಹಿಳೆಯನ್ನು ಕೊಂದ ದಿನವೇ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದು, ಅಂದು ಕಾಡಾನೆಗೆ ಬಲಿಯಾದ ಮಹಿಳೆಯ ಶವದೊಂದಿಗೆ ಗ್ರಾಮಸ್ಥರು ಆಲ್ದೂರು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಧರಣಿ ನಡೆಸಿದ್ದರು. ಸಿಎಂ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮೂಡಿಗೆರೆ ಪಟ್ಟಣದಲ್ಲಿ ಅಧಿಕಾರಿಗಳ ವಿಶೇಷ ಸಭೆ ನಡೆಸಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಸೂಚಿಸಿದ್ದರು.

ಸಿಎಂ ಸೂಚನೆಯ ಮೇರೆಗೆ ಆಲ್ದೂರು ಭಾಗದಲ್ಲಿ ಎರಡು ತಿಂಗಳ ಅವಧಿಯಲ್ಲಿ ಇಬ್ಬರು ಕಾರ್ಮಿಕರನ್ನು ಕೊಂದು ಹಾಕಿದ್ದ ಕಾಡಾನೆಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲು ಸರಕಾರ ಆದೇಶ ಮಾಡಿತ್ತು. ಮಲೆನಾಡು ಭಾಗದಲ್ಲಿ ಹಲವು ಜೀವಹಾನಿಗೆ ಕಾರಣವಾಗಿದ್ದ ಈ ಕಾಡಾನೆ ಸೆರೆ ಹಾಗೂ ಆಲ್ದೂರು ಸುತ್ತಮುತ್ತ ಸಂಚರಿಸುತ್ತಿರುವ ಭುವನೇಶ್ವರಿ ತಂಡದ ಏಳು ಆನೆಗಳನ್ನು ಕಾಡಿಗಟ್ಟಲು ಸಕ್ರೆಬೈಲು ಹಾಗೂ ನಾಗರಹೊಳೆಯಿಂದ ಒಟ್ಟು 6 ಸಾಕಾನೆಗಳನ್ನು ಕರೆತರಲಾಗಿತ್ತು. ಈ ಸಾಕಾನೆಗಳ ನೆರವಿನಿಂದ ಆಲ್ದೂರು ಭಾಗದಲ್ಲಿ ಸಂಚರಿಸುತ್ತಿರುವ ನರಹಂತಕ ಕಾಡಾನೆಯ ಸೆರೆಗೆ ಕಳೆದ 6 ದಿನಗಳಿಂದ ಅರಣ್ಯಾಧಿಕಾರಿಗಳು ಮತ್ತು ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರೂ ಒಂಟಿ ಸಲಗದ ಸುಳಿವು ಪತ್ತೆಯಾಗಿರಲಿಲ್ಲ.

ಆಲ್ದೂರು ಭಾಗದಲ್ಲಿ ಇಬ್ಬರು ಕಾರ್ಮಿಕರ ಪ್ರಾಣಹಾನಿ ಉಂಟುಮಾಡಿದ್ದ ಒಂಟಿ ಸಲಗವನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ ಕುಂದೂರು ಭಾಗದ ಕಾಡಿನಲ್ಲಿ ಅನೇಕ ಆನೆಗಳು ಪತ್ತೆಯಾಗಿದ್ದವು. ಅವುಗಳಲ್ಲಿ ಒಂದು ಕಾಡಾನೆಯನ್ನು ಈಗ ಸೆರೆಹಿಡಿಯಲಾಗಿದೆ. ಸೆರೆಯಾಗಿರುವ ಸಲಗವು ಕುಂದೂರು ಸಾರಗೋಡು ಭಾಗದಲ್ಲಿ ರೈತರಿಗೆ ಭಾರೀ ಉಪಟಳ ನೀಡುತ್ತಿತ್ತು ಎನ್ನಲಾಗಿದೆ.

'ಇಬ್ಬರು ಕಾರ್ಮಿಕರನ್ನು ಕೊಂದ ಆನೆಯಲ್ಲ': ಸದ್ಯ ಸೆರೆಯಾಗಿರುವ ಆನೆ ಕಾರ್ಮಿಕರನ್ನು ಸಾಯಿಸಿದ ಆನೆಯಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಆಲ್ದೂರು ಸಮೀಪ ಮಹಿಳೆಯನ್ನು ಸಾಯಿಸಿದ್ದ ಆನೆಯ ಬೆನ್ನಿನ ಭಾಗದಲ್ಲಿ ದಪ್ಪ ಗಂಟಿದ್ದು, ಅದರ ದಂತಗಳು ಚಿಕ್ಕದಾಗಿದ್ದವು, ಈಗ ಸೆರೆಯಾಗಿರುವ ಆನೆಯ ದಂತಗಳು ತುಂಬಾ ಉದ್ದವಾಗಿವೆ. ಹಾಗಾಗಿ ಈಗ ಹಿಡಿದಿರುವುದು ಮನುಷ್ಯರನ್ನು ಕೊಂದಿರುವ ಕಾಡಾನೆಯಲ್ಲ ಎಂದು ಆಲ್ದೂರು ಭಾಗದ ಜನರು ಹೇಳುತ್ತಿದ್ದಾರೆ.

ಒಂಟಿ ಸಲಗವನ್ನು ಸೆರೆ ಹಿಡಿಯಲು ಒಟ್ಟು 6 ಸಾಕಾನೆಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಸತತ 5 ದಿನಗಳಿಂದ ಕಾಡಾನೆ ಸೆರೆಗೆ ಪ್ರಯತ್ನ ನಡೆಸಲಾಗುತ್ತಿತ್ತು. ಆದರೆ ಮನುಷ್ಯರನ್ನು ಸಾಯಿಸಿದ್ದ ಒಂಟಿಸಲಗದ ಸುಳಿವು ಸಿಕ್ಕಿಲ್ಲ. ಇದೇ ಸಂದರ್ಭದಲ್ಲಿ ರೈತರ ಕೃಷಿ ಜಮೀನಿಗೆ ದಾಳಿ ಇಡುತ್ತಿದ್ದ ಒಂಟಿಸಲಗವನ್ನು ಸೆರೆ ಹಿಡಿಯಲಾಗಿದೆ. ಒಂದು ದಿನದ ವಿಶ್ರಾಂತಿ ನಂತರ ಮತ್ತಾವರ ಭಾಗದಲ್ಲಿರುವ ಭುವನೇಶ್ವರಿ ತಂಡದ 7 ಆನೆಗಳನ್ನು ಕಾಡಿಗಟ್ಟುವ ಮತ್ತು ಮನುಷ್ಯರ ಸಾವಿಗೆ ಕಾರಣವಾಗಿರುವ ಒಂಟಿ ಸಲಗವನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಕಾಡಾನೆಯ ಸುಳಿವು ಸಿಕ್ಕರೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಕೋರಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News