‘ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ’ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಮನವಿ : ಡಿಸಿಎಂ ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಹೊಸದಿಲ್ಲಿ: ಆಲಮಟ್ಟಿ ಅಣೆಕಟ್ಟು ಎತ್ತರದ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರು ಕೃಷ್ಣಾ ನದಿ ಜಲಾನಯನ ಪ್ರದೇಶದ ರಾಜ್ಯಗಳ ಪ್ರತಿನಿಧಿಗಳನ್ನು ಕರೆಸಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಮುಂದಿನ 15 ದಿನಗಳಲ್ಲಿ ಸಭೆ ನಡೆಸಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಶುಕ್ರವಾರ ಹೊಸದಿಲ್ಲಿಯ ಕರ್ನಾಟಕ ಭವನ-1 ‘ಕಾವೇರಿ’ಯಲ್ಲಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರನ್ನು ರಾಜ್ಯಖಾತೆ ಸಚಿವ ವಿ.ಸೋಮಣ್ಣ ಅವರ ಜೊತೆ ಭೇಟಿ ಮಾಡಲಾಗಿತ್ತು. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ನಮಗೆ ಎಷ್ಟು ನೀರು ಸಿಗಬೇಕು ಹಾಗೂ ಅಣೆಕಟ್ಟು ಎಷ್ಟು ಎತ್ತರ ಮಾಡಬೇಕು ಎಂದು ಹಿಂದೆಯೇ ತೀರ್ಮಾನವಾಗಿದೆ ಎಂದು ಶಿವಕುಮಾರ್ ತಿಳಿಸಿದರು.
524 ಅಡಿ ಎತ್ತರಕ್ಕೆ ಎಷ್ಟು ಭೂಮಿ ಬೇಕಾಗಬಹುದು ಎಂದು ಅಂದಾಜಿಸಿ ಭೂಸ್ವಾಧೀನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಕೆಲಸವನ್ನು ಬೇಗ ಮುಗಿಸುವ ಬದ್ಧತೆ ನಮ್ಮ ಸರಕಾರಕ್ಕಿದೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಬಗ್ಗೆಯೂ ಮನವಿ ಮಾಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಭದ್ರಾ ಮೇಲ್ದಂಡೆ ವಿಚಾರವಾಗಿ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ. ಕೇಂದ್ರದ ಕ್ಯಾಬಿನೆಟ್ ಮುಂದೆ ಈ ವಿಚಾರ ತೆಗೆದುಕೊಡು ಹೋಗಲಾಗಿದೆ ಎಂದು ಹೇಳಿದ್ದಾರೆ. ಮೇಕೆದಾಟು ವಿಚಾರದಲ್ಲಿ 15 ದಿನಗಳಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕದ ವಾದ ಆಲಿಸುವುದಾಗಿ ಹೇಳಿತ್ತು. ಆದರೆ ದಿನಾಂಕ ನಿಗದಿ ಮಾಡಿಲ್ಲ ಎಂದು ಅವರು ತಿಳಿಸಿದರು.
ತಮಿಳುನಾಡಿನವರು ರಾಜಕೀಯವಾಗಿ ಸಹಕಾರ ನೀಡುವುದಿಲ್ಲ ಎನ್ನುವುದು ನಮಗೆ ಅರಿವಿದೆ. ಅವರು ಸಣ್ಣಪುಟ್ಟ ಅಣೆಕಟ್ಟುಗಳನ್ನು ಅವರ ವಲಯದಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಾವು ತೊಂದರೆ ಕೊಡಲು ಹೋಗುವುದಿಲ್ಲ. ಈ ವಿಚಾರವನ್ನೂ ಸಚಿವರ ಗಮನಕ್ಕೆ ತರಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಕಳಸಾ ಬಂಡೂರಿ ಕಾಮಗಾರಿಗೆ ಪರಿಸರ ಇಲಾಖೆಯ ಅನುಮತಿ ಸಿಗದಿರುವ ಬಗ್ಗೆ ಗಮನಕ್ಕೆ ತರಲಾಗಿದೆ. ಈಗಾಗಲೇ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ಹಿಂದೆ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಅರಣ್ಯ ಸಚಿವರನ್ನೂ ಭೇಟಿ ಮಾಡಲಾಗಿತ್ತು. ಎತ್ತಿನಹೊಳೆ ಕಾಮಗಾರಿ ಕುಡಿಯುವ ನೀರಿನ ಯೋಜನೆಯಾದ ಕಾರಣ ಒಂದಷ್ಟು ಅನುದಾನ ನೀಡಬೇಕು ಎಂದು ಮನವಿ ಮಾಡಲಾಗಿದೆ. ಜೊತೆಗೆ ಅರಣ್ಯ ಭೂಮಿ ಬಳಕೆ, ಬದಲಿ ಭೂಮಿ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದರ ಡಿಪಿಆರ್ ಅನ್ನು ನೋಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಕಾವೇರಿ, ಕೃಷ್ಣಾ, ಗೋದಾವರಿ ನದಿ ಜೋಡಣೆ ಸಂಬಂಧ ನಮ್ಮ ರಾಜ್ಯದ ವಾದವನ್ನು ನಾನು ಹಾಗೂ ಮುಖ್ಯಮಂತ್ರಿ ಸಲ್ಲಿಸಿದ್ದೇವೆ. ಇದರ ಬಗ್ಗೆ ಧನಾತ್ಮಕವಾಗಿ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಕೃಷ್ಣಾ ನ್ಯಾಯಾಧೀಕರಣ ವಿಚಾರ ಸುಪ್ರೀಂ ಕೋರ್ಟಿನಲ್ಲಿ ತಡೆಯಾಜ್ಞೆ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶೆಡ್ಯೂಲ್ 524ಕ್ಕೆ ಸೇರಿದ ವಿಚಾರವಾದ ಕಾರಣ ಈ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರು ಆಂತರಿಕ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಇದರ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.
ಕಾಲುವೆಗಳಿಗೆ ನೀರು ಬಿಡುವಂತೆ ಕೋರ್ಟ್ ಆದೇಶ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಲುವೆಗಳಿಗೆ ಕೃಷ್ಣ ನದಿ ನೀರನ್ನು ಏಕಾಏಕಿ ಬಿಡಲು ಆಗುವುದಿಲ್ಲ. ಅಲ್ಲದೇ ಈ ವಿಚಾರದಲ್ಲಿ ನ್ಯಾಯಾಲಯ ಆದೇಶ ನೀಡಲು ಬರುವುದಿಲ್ಲ. ಏಕ ಸದಸ್ಯ ಪೀಠ ನೀರು ಬಿಡುವಂತೆ ಹೇಳಿತ್ತು. ದ್ವಿ ಸದಸ್ಯ ಪೀಠ ಆದೇಶಕ್ಕೆ ತಡೆ ನೀಡಿದೆ ಎಂದು ಹೇಳಿದರು.
ಕಾಲುವೆಗಳಿಗೆ ನೀರು ಬಿಡುವ ಬಗ್ಗೆ ನಾನೇ ತಾಂತ್ರಿಕ ವರದಿ ತರಿಸಿಕೊಳ್ಳುವವನಿದ್ದೆ. ಯಾದಗಿರಿ ಸೇರಿದಂತೆ ಆ ಭಾಗದ ಶಾಸಕರು ರೈತರ ಎರಡನೇ ಬೆಳೆಗೆ ನೀರು ಬಿಡುವಂತೆ ಮನವಿ ಮಾಡಿದ್ದರು. ಈ ಮಧ್ಯೆ ಯಾರೋ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಕಾಲುವೆಗೆ ನೀರುಬಿಟ್ಟ ಸಮಯದಲ್ಲಿ ಮಧ್ಯದಲ್ಲಿಯೇ ಪಂಪ್ ಗಳನ್ನು ಬಿಟ್ಟು ನೀರು ಎತ್ತಲಾಗುತ್ತದೆ. ಇದಕ್ಕೆಲ್ಲಾ ಅವಕಾಶ ನೀಡಬಾರದು ಎಂದು ಹೇಳಲಾಗಿದೆ. ರೈತರ ಪಾಲಿನ ನೀರು ನಾವು ನೀಡುತ್ತೇವೆ ಆದರೆ ಕಾಲುವೆಯ ಕೊನೆ ಭಾಗಕ್ಕೆ ನೀರು ತಲುಪಬೇಕಲ್ಲವೇ? ಇದು ಆಗದೇ ಮಧ್ಯದಲ್ಲಿಯೇ ನೀರು ಎಳೆಯಲಾಗುತ್ತಿದೆ ಎಂದು ಅವರು ಹೇಳಿದರು.
ಕಾಲುವೆಯಿಂದ ನೀರು ಎತ್ತುವುದನ್ನು ತಡೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿದ್ಯುತ್ ಸಂಪರ್ಕಗಳನ್ನು ತಪ್ಪಿಸಿ ಹಗಲು ಹಾಗೂ ರಾತ್ರಿ ವೇಳೆ ನೀರನ್ನು ರಕ್ಷಣೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ರೈತರು ಎರಡನೇ ಬೆಳೆ ಹಾಕಿಕೊಂಡಿದ್ದಾರೆ. ಆದರೆ ಕುಡಿಯುವ ನೀರು ನಮ್ಮ ಮೊದಲ ಆದ್ಯತೆ ಎಂದು ಶಿವಕುಮಾರ್ ತಿಳಿಸಿದರು.