ಯಾವ ಕಾರಣಕ್ಕೂ ಜೆಡಿಎಸ್‌ ಎನ್‌ಡಿಎ ಜೊತೆ ಸೇರಲ್ಲ: ಸಿಎಂ ಇಬ್ರಾಹಿಂ

Update: 2023-10-16 18:08 GMT

ಸಿಎಂ ಇಬ್ರಾಹಿಂ 

ಬೆಂಗಳೂರು: ‘ಜೆಡಿಎಸ್ ಎನ್ನುವುದು ನನ್ನ ಮನೆಯಾಗಿದ್ದು, ನಾನೇ ಇದರ ಅಧ್ಯಕ್ಷ. ಹೀಗಾಗಿ, ನನ್ನನ್ನು ಯಾರೋ ಸಹ ಕೆಳಗಿಳಿಸಲು ಸಾಧ್ಯವೇ ಇಲ್ಲ. ಜತೆಗೆ, ಎನ್‍ಡಿಎ ಮೈತ್ರಿ ಕೂಟ ಮುಂದಿನ ಚುನಾವಣೆಯಲ್ಲಿ ಸೋಲಬೇಕಾಗಿದ್ದು, ಈ ಬಗೆಗಿನ ನಡೆ ಕಾದು ನೋಡಿ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹೀಂ ಸವಾಲು ಹಾಕಿದ್ದಾರೆ.

ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಕುರಿತು ಸೋಮವಾರ ನಗರದಲ್ಲಿ ನಡೆದ ಜೆಡಿಎಸ್ ಚಿಂತನ ಮಂಥನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಸಭೆಯ ಚರ್ಚೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ತಿಳಿಸುತ್ತೇನೆ. ಹೊಸ ಸಮಿತಿ ರಚನೆ ಮಾಡಿ, ಅದರ ಸಭೆ ಕರೆಯುತ್ತೇನೆ. ನಂತರ ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ ಎಂದರು.

ಅಲ್ಲದೆ, ನನ್ನನ್ನು ತೆಗೆದು ಹಾಕಲು ಸಾಧ್ಯವೇ ಇಲ್ಲ. ಈ ಪಕ್ಷ ಕುಟುಂಬದ ಆಸ್ತಿಯಲ್ಲ. ಜೆಡಿಎಸ್ ಪಕ್ಷದ್ದು ಜಾತ್ಯತೀತ ಸಿದ್ಧಾಂತ ಎಂದ ಅವರು, ಮೈತ್ರಿ ಸಾಧ್ಯವೇ ಇಲ್ಲ. ಬಿಜೆಪಿ ಸಿದ್ಧಾಂತವೇ ಬೇರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟ ಸೋಲಬೇಕಿದೆ. ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತೇವೆ ಎಂದು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಜೆಡಿಎಸ್ ಯಾವ ಕಾರಣಕ್ಕೂ ಎನ್ ಡಿ ಎ ಜೊತೆಗೆ ಹೋಗಲ್ಲ. 19 ಜನ ಶಾಸಕರ ಜೊತೆಗೆ ನಾನೇ ಮಾತನಾಡುತ್ತೇನೆ. ಒಕ್ಕಲಿಗರು ಕೂಡ ಕೈಬಿಟ್ಟಿದ್ದಾರೆ. ಮುಸ್ಲಿಮರನ್ನು ನಂಬಿ ರಾಜಕೀಯ ಮಾಡಿಲ್ಲ ಅಂತಾರೆ. ಆದರೆ ಯಾರನ್ನು ನಂಬಿ ರಾಜಕೀಯ ಮಾಡಿದ್ದರೋ ಅವರೇ ಕೈ ಬಿಟ್ಟರು” ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ಕುಮಾರಸ್ವಾಮಿ ಯಾರ ಅಭಿಪ್ರಾಯ ಕೇಳಿ ಮೈತ್ರಿ ಮಾಡಿಕೊಂಡಿದ್ದಾರೆ? ಏಕಾಏಕಿ ಹೊಸದಿಲ್ಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾ ಜೊತೆಗೆ ಫೋಟೋ ತೆಗೆಸಿ ಮೈತ್ರಿ ಘೋಷಣೆ ಮಾಡಿದ್ದಾರೆ ಎಂದ ಅವರು, ಜೆಡಿಎಸ್ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತದಲ್ಲಿ ನಂಬಿಕೆಯಿಟ್ಟಿದ್ದು, ಅವರೇ ಇಲ್ಲಿಗೆ ಬಂದಾಗ ನೋಡಬೇಕಿತ್ತು. ಅದು ಅಲ್ಲದೆ, ಬಿಜೆಪಿಯವರು ಎನ್‍ಆರ್‍ಸಿ, ಮುಸ್ಲಿಮ್ ಪರ್ಸನಲ್ ಲಾ ಕೈ ಹಾಕಲ್ಲ ಎಂದು ಭರವಸೆ ಕೊಡುತ್ತಾರಾ ಎಂದು ಪ್ರಶ್ನಿಸಿದರು.

ದೇವೇಗೌಡರು ತಂದೆಯ ಸಮಾನ, ಅವರ ಮನಸ್ಸಿನಲ್ಲಿ ನೋವಿದೆ. ಆದರೆ ಸ್ವಯಂ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಈಗಲೂ ಅವಕಾಶ ಇದೆ, ಅವರ ಜೊತೆ ಹೋಗಲ್ಲ ಎಂದು ವಾಪಸ್ ಬಂದರೆ ನಾಯಕರಾಗುತ್ತಾರೆ. ಇನ್ನೂ, ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಆದರೆ ತತ್ವ ಸಿದ್ಧಾಂತ, ತತ್ವ ಬೇರೆ ಇದೆ, ಅದಕ್ಕೆ ನಾವು ವಿರೋಧ ಮಾಡುತ್ತೇವೆ ಎಂದು ಇಬ್ರಾಹಿಂ ನುಡಿದರು.

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಪುತ್ರ ಹಾಗೂ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ ಪಟೇಲ್ ಪ್ರಸ್ತಾಪಿಸಿ, ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಆದಾಗ ನಮಗೂ ಆಹ್ವಾನಿಸಿದ್ದರು. ಆದರೆ ನೀವು ಸ್ವಲ್ಪ ಸಮಯ ಅಲ್ಲೇ ಇರಿ ಎಂದಿದ್ದೆ. ಇವಾಗ ಮತ್ತೆ ಜೊತೆಗೆ ಸೇರುವಂತಹ ಸಮಯ ಬಂದಿದೆ ಎಂದು ಪರೋಕ್ಷವಾಗಿ ಎಂದು ಹೇಳಿದರು.

ಸಭೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಸೆಯ್ಯದ್ ಶಫಿವುಲ್ಲಾ ಸೇರಿದಂತೆ ಮುಸ್ಲಿಮ್ ಸಮುದಾಯದ ಮುಖಂಡರು, ಜೆಡಿಎಸ್ ಪಕ್ಷದ ವಿವಿಧ ವಿಭಾಗದ ನಾಯಕರು ಪಾಲ್ಗೊಂಡಿದ್ದರು.

ಮೈತ್ರಿ ಕೈಬಿಡಲು ಇಬ್ರಾಹಿಂ ಪಟ್ಟು

ಇವತ್ತಿನ ಸಭೆಯಲ್ಲಿ ಒಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿದ್ದು, ಕುಮಾರಸ್ವಾಮಿ ತಮ್ಮನ್ನು ಹೇಳದೆ ಕೇಳದೆ ಮೈತ್ರಿ ಬೆಳೆಸಿ ತಪ್ಪಿ ಮಾಡಿದ್ದಾರೆ. ಅವರ ನಿರ್ಧಾರವನ್ನು ಪಕ್ಷ ಒಪ್ಪಲ್ಲ, ಅವರು ತಪ್ಪನ್ನು ಮನವರಿಕೆ ಮಾಡಿಕೊಂಡು ಮೈತ್ರಿ ರದ್ದುಗೊಳಿಸಿದರೆ ಸರಿ, ಇಲ್ಲದಿದ್ದರೆ ಕೋರ್ ಕಮಿಟಿ ಸಭೆ ನಡೆಸಿ ನಿರ್ಣಯವನ್ನು ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ನಡೆಸಿ ಪ್ರಕಟಿಸುತ್ತೇವೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.

ಎಚ್‍ಡಿಕೆ ಫೋಟೋ ಕಣ್ಮರೆ: ‘ಬಿಜೆಪಿ ಪಕ್ಷದೊಂದಿಗೆ ಮೈತ್ರಿ’ ಕುರಿತು ನಗರದಲ್ಲಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಅಧ್ಯಕ್ಷತೆಯಲ್ಲಿ ನಡೆದ ಜೆಡಿಎಸ್ ಚಿಂತನ ಮಂಥನ ಸಭೆಗೆ ಹಾಕಿದ್ದ ಬ್ಯಾನರ್‍ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಫೋಟೊ ಇರಲಿಲ್ಲ. ಬ್ಯಾನರ್‍ನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಇಬ್ಬರ ಫೋಟೋಗಳನ್ನು ಮಾತ್ರವೇ ಹಾಕಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News