ಸುಳ್ಳು ಸುದ್ದಿ ಪತ್ತೆಗೆ ಕ್ರಮ | ಮಾಧ್ಯಮಗಳ ಧ್ವನಿ ಅಡಗಿಸುವ ಉದ್ದೇಶವನ್ನು ಹೊಂದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

Update: 2023-09-14 15:42 GMT

ಬೆಂಗಳೂರು, ಸೆ. 14: ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ, ಉದ್ದೇಶ ಪೂರ್ವಕವಾಗಿ ಆತಂಕ ಸೃಷ್ಟಿಸುವಂತಹ ಹಾಗೂ ಸರಕಾರದ ವಿರುದ್ಧದ ‘ಸುಳ್ಳು ಸುದ್ದಿ’ಗಳನ್ನು ಪತ್ತೆ ಹಚ್ಚಲು ಕೈಗೊಳ್ಳಲಿರುವ ಕ್ರಮವು ಯಾವುದೆ ರಾಜಕೀಯ ದ್ವೇಷ ಅಥವಾ ಮಾಧ್ಯಮಗಳ ಧ್ವನಿಯನ್ನು ಅಡಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

ಗುರುವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ‘ಸುಳ್ಳು ಸುದ್ದಿ’ ಪತ್ತೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ವಿಧಾನದ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು, ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲು ನಾವು ಯಾವುದೆ ಹೊಸ ಕಾನೂನು ಜಾರಿಗೆ ತರುತ್ತಿಲ್ಲ. ಇರುವ ಕಾನೂನಿಗೆ ತಿದ್ದುಪಡಿಯನ್ನು ಮಾಡುತ್ತಿಲ್ಲ. ಸದ್ಯ ಲಭ್ಯವಿರುವ ಕಾನೂನಿನ ಚೌಕಟ್ಟಿನಲ್ಲೆ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪ್ರಜಾಪ್ರಭುತ್ವವನ್ನು ಉಳಿಸಲು ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲೇಬೇಕಿದೆ. ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ, ಭಾರತೀಯ ಚುನಾವಣಾ ಆಯೋಗದ ಆಯುಕ್ತರು ಹಾಗೂ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ. ಆದರೆ, ಬಿಜೆಪಿಯವರು ಈ ವಿಚಾರದಲ್ಲಿ ಸರಕಾರದ ವಿರುದ್ಧ ಅನಗತ್ಯ ಟೀಕೆ, ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರಸಕ್ತ ಸಾಲಿನ ಜನವರಿ ವೇಳೆಗೆ ಭಾರತದಲ್ಲಿ 60 ಕೋಟಿ ಜನ ಸಕ್ರಿಯ ಇಂಟರ್‍ನೆಟ್ ಬಳಕೆದಾರರಿದ್ದಾರೆ. ಅದರಲ್ಲಿ ಪ್ರಮುಖವಾಗಿ ವಾಟ್ಸಪ್ ಬಳಕೆದಾರರು 54 ಕೋಟಿ, ಇನ್‍ಸ್ಟಾಗ್ರಾಂ ಬಳಕೆದಾರರು 52 ಕೋಟಿ, ಫೇಸ್‍ಬುಕ್ ಮೆಸೆಂಜರ್‍ನ 35 ಕೋಟಿ ಬಳಕೆದಾರರಿದ್ದಾರೆ. ಪ್ರತಿದಿನ ಸಾಮಾಜಿಕ ಜಾಲತಾಣಗಳನ್ನು ಒಬ್ಬ ವ್ಯಕ್ತಿ ಸರಾಸರಿ 2 ಗಂಟೆ 36 ನಿಮಿಷ ವೀಕ್ಷಿಸುತ್ತಾನೆ. ಇದು ಮಾಹಿತಿ ಪಡೆಯಲು ಹಾಗೂ ಹರಡಲು ವೇದಿಕೆಯಾಗಿದೆ ಎಂದು ಅವರು ಹೇಳಿದರು.

ಇಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುವಂತಹ ಸುದ್ದಿಗಳು, ಮಾಹಿತಿಗಳ ಕುರಿತು ಸರಕಾರ ಹಾಗೂ ಸರಕಾರಿ ಸಂಸ್ಥೆಗಳು ಪರಿಶೀಲಿಸಬೇಕು. ನಾಗರಿಕರಿಗೆ ಯಾವುದು ಸುಳ್ಳು ಸುದ್ದಿ, ಯಾವುದು ಸತ್ಯವಾದದ್ದು, ಯಾವುದು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲು ಹರಡುತ್ತಿರುವ ಸುದ್ದಿ ಎಂಬುದರ ಕುರಿತು ಮಾಹಿತಿ ನೀಡುವ ಕೆಲಸವನ್ನು ಮಾಡಬೇಕಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಸರಕಾರ ಆಯ್ಕೆಯಾಗುವುದು ಚುನಾವಣೆ ಮೂಲಕ. ನಾಗರಿಕರು ನಮಗೆ ಆಶೀರ್ವಾದ ಮಾಡಲು ಸರಕಾರದ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಇರಬೇಕು. ಆದರೆ, ಇತ್ತೀಚಿಗೆ ಕೆಲವು ಪಕ್ಷ ಹಾಗೂ ಸಂಸ್ಥೆಗಳು ಸರಕಾರದ ಬಗ್ಗೆ ಸತ್ಯಕ್ಕೆ ದೂರವಾದ ವಿಚಾರಗಳನ್ನು ಮುಂದಿಟ್ಟು ಅಪಪ್ರಚಾರ ಮಾಡುತ್ತಿವೆ. ಇದಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅವರು ಹೇಳಿದರು.

ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರು ನೀಡುವಂತಹ ದೂರುಗಳನ್ನು ಪರಿಶೀಲನೆ ಮಾಡುತ್ತೇವೆ. ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವಂತಹ ಹಲವಾರು ಸಂಸ್ಥೆಗಳಿವೆ. ಅವರು ನಮ್ಮೊಂದಿಗೆ ಕೈ ಜೋಡಿಸುವಂತೆ ಕರೆ ನೀಡುತ್ತೇವೆ. ಸಮಾಜದಲ್ಲಿ ದ್ವೇಷದ ಮನೋಭಾವನೆ ಬೆಳೆಯಲು ಸುಳ್ಳು ಸುದ್ದಿಗಳು ಕಾರಣ ಎಂದು ಶೇ.78ರಷ್ಟು ಮಂದಿ ಹೇಳಿದ್ದಾರೆ. ಅದೇ ರೀತಿ, ಶೇ.88ರಷ್ಟು ಯುವಕರು ಇದನ್ನು ಒಪ್ಪಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.

ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲು ಕೆನಡಾ, ಡೆನ್ಮಾರ್ಕ್, ಸ್ವೀಡನ್ ಹಾಗೂ ದಕ್ಷಿಣ ಕೊರಿಯಾದಲ್ಲಿ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ಬೆಲ್ಜಿಯಂ ಹಾಗೂ ಇಟಲಿಯಲ್ಲಿ ವೇದಿಕೆ ರಚಿಸಲಾಗಿದೆ. ನೆದರ್‍ಲ್ಯಾಂಡ್ ಸೇರಿದಂತೆ ಇನ್ನಿತರ ದೇಶಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ನಮ್ಮ ರಾಜ್ಯದಲ್ಲಿ ಸುಳ್ಳು ಸುದ್ದಿಯನ್ನು ಪತ್ತೆ ಹಚ್ಚಿದಾಗ ಅದರ ಮೂಲವನ್ನು ಸಾರ್ವಜನಿಕವಾಗಿ ತಿಳಿಸುತ್ತೇವೆ. ಯಾವುದಾದರೂ ಸುದ್ದಿಗೆ ಮೂಲ ಇಲ್ಲದಿದ್ದರೆ ಅದನ್ನು ತಿಳಿಸುತ್ತೇವೆ.

ಸುಳ್ಳು ಸುದ್ದಿ ಪತ್ತೆ ಮಾಡಲು ಓವರ್‍ಸೈಟ್ ಕಮಿಟಿ ರಚನೆ ಮಾಡಲು ಉದ್ದೇಶಿಸಲಾಗಿದೆ. ಇದರಲ್ಲಿ ಐಟಿ, ಬಿಟಿ ಇಲಾಖೆಯ ಮುಖ್ಯಸ್ಥರು, ಹಿರಿಯ ಪೊಲೀಸ್ ಅಧಿಕಾರಿ, ವಾರ್ತಾ ಇಲಾಖೆಯ ಪ್ರತಿನಿಧಿಗಳು, ಕೆಐಟಿಎಸ್ ವ್ಯವಸ್ಥಾಸಪ ನಿರ್ದೇಶಕರು, ಐಐಎಸ್ಸಿ ಡೀನ್, ಹೆಚ್ಚುವರಿ ಅಡ್ವೊಕೇಟ್ ಜನರಲ್, ಸೈಬರ್ ಸುರಕ್ಷತಾ ಕೇಂದ್ರದ ಮುಖ್ಯಸ್ಥರು ಹಾಗೂ ನಾಗರಿಕ ಸಮಾಜದ ಪ್ರತಿನಿಧಿ ಇರುತ್ತಾರೆ ಎಂದು ಅವರು ಹೇಳಿದರು.

ಓವರ್‍ಸೈಟ್ ಕಮಿಟಿಯು ನೀಡುವ ವರದಿ, ಅಭಿಪ್ರಾಯದಂತೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಯಾರನ್ನೂ ಗುರಿಯಾಗಿಸುತ್ತಿಲ್ಲ. ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿಯವರು ತಮ್ಮ ಕಚೇರಿಯಲ್ಲಿರುವ ಒಂದು ವಿಭಾಗವನ್ನು ಮುಚ್ಚಿದರೆ ಸಾಕು, ಸುಳ್ಳು ಸುದ್ದಿ ಸೃಷ್ಟಿಯಾಗುವ ಪ್ರಮಾಣ ಕಡಿಮೆಯಾಗಿ ಬಿಡುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News