ಲಕ್ಷ್ಮೀ ಹೆಬ್ಬಾಳ್ಕರ್‌ ಕುಟುಂಬಕ್ಕೂ ಉರುಳಾಗುತ್ತಾ ‘ಹುಲಿ ಉಗುರು ಪ್ರಕರಣ’?: ಪುತ್ರ, ಅಳಿಯನ ಫೋಟೋ ವೈರಲ್

Update: 2023-10-26 11:46 GMT

Photo credit: Facebook/Laxmi Hebbalkar

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹುಲಿ ಉಗುರು ಪೆಂಡೆಂಟ್‌ ಪ್ರಕರಣದ ಉರುಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಕುಟುಂಬಕ್ಕೂ ಸುತ್ತಿಕೊಳ್ಳುವ ಆರಂಭಿಕ ಲಕ್ಷಣಗಳು ಕಾಣಿಸಲಾರಂಭಿಸಿವೆ.

ಮೂರು ವರ್ಷಗಳ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಹಂಚಿಕೊಂಡಿರುವ ತಮ್ಮ ಮಗಳ ಮದುವೆಯ ಫೋಟೋ ಆಲ್ಬಮ್‌ಗಳಲ್ಲಿ ಅವರ ಅಳಿಯ ರಜತ್ ಉಳ್ಳಾಗಡ್ಡಿಮಠ ಮತ್ತು ಪುತ್ರ ಮೃಣಾಲ್‌ ಕೊರಳಲ್ಲಿ ಹುಲಿ ಉಗುರು ಪೆಂಡೆಂಟ್‌ ಇರುವುದು ಕಂಡು ಬಂದಿದೆ.

ಆದರೆ, ಇದು ಅಸಲಿ ಹುಲಿ ಉಗುರೇ ಅಥವಾ ನಿಖಿಲ್‌ ಕುಮಾರಸ್ವಾಮಿ ಅವರ ಬಳಿ ಇದೆ ಎನ್ನಲಾದ ಸಿಂಥೆಟಿಕ್‌ ಹುಲಿ ಉಗುರೇ ಎನ್ನುವುದು ಸ್ಪಷ್ಟವಾಗಿಲ್ಲ.

ಅದಾಗ್ಯೂ, ನೆಟ್ಟಿಗರು ಸಚಿವೆಯ ಪುತ್ರ ಹಾಗೂ ಅಳಿಯನ ಫೋಟೋಗಳನ್ನು ಹಂಚಿಕೊಂಡು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅವರು ಹುಲಿ ಉಗುರು ಧರಿಸಿದ್ದಕ್ಕೆ ಬಿಗ್‌ ಬಾಸ್‌ ಮನೆಯಿಂದಲೇ ಬಂಧಿಸಿಕೊಂಡು ಹೋದ ಬಳಿಕ ಸಾಲು ಸಾಲು ಸೆಲೆಬ್ರಿಟಿಗಳು ಹಾಗೂ ಪ್ರಭಾವಿಗಳ ವಿರುದ್ಧ ಹುಲಿ ಉಗುರು ಪೆಂಡೆಂಟ್‌ ಇರುವ ಬಗ್ಗೆ ನೆಟ್ಟಿಗರು ಗಮನ ಸೆಳೆದಿದ್ದು, ನಟ-ರಾಜಕಾರಣಿ ಜಗ್ಗೇಶ್‌, ದರ್ಶನ್‌, ನಿಖಿಲ್‌ ಕುಮಾರಸ್ವಾಮಿ ಮೊದಲಾದವರಿಗೆ ಅರಣ್ಯ ಇಲಾಖೆ ನೋಟಿಸ್‌ ನೀಡಿದೆ.

ಅದೇ ವೇಳೆ, ವಿಜಯಪುರ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್‌ ಅವರ ಪುತ್ರ ಶಾಶ್ವತ್ ಪಾಟೀಲ ಅವರ ಕೊರಳಲ್ಲಿ ಹುಲಿ ಉಗುರು ಪ್ರಕರಣ ಇರುವ ಬಗ್ಗೆಯೂ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News