ಕುಟಿಲ-ಕುತಂತ್ರಗಳ ನಿರ್ಮಲಕ್ಕನ ಕಾ‘ಗಣಿತ’

ಎರಡು ಬೇರೆ ಬೇರೆ ಕಾಲಾವಧಿಯ ಬಜೆಟ್‌ಗಳನ್ನು ಹೋಲಿಸುವಾಗ ಅದರಲ್ಲೂ ಯಾವ ಇಲಾಖೆಗೆ ಎಷ್ಟು ನೀಡಲಾಗಿದೆ ಅರ್ಥಾತ್ ಯಾವ ಕ್ಷೇತ್ರ ಅಥವಾ ಯಾವ ಕ್ಷೇತ್ರದ ಯಾವ ವರ್ಗಕ್ಕೆ ಆದ್ಯತೆ ನೀಡಲಾಗದೆ ಎಂಬುದನ್ನು ಹೋಲಿಸಿ ಅರ್ಥಮಾಡಿಕೊಳ್ಳಬೇಕಾದರೆ ಹೋಲಿಸಬೇಕಿರುವುದು Absolute Number ಅಂದರೆ ಒದಗಿಸಲಾದ ಮೊತ್ತವನ್ನು ಮಾತ್ರ ಅಲ್ಲ. ಬದಲಿಗೆ ಆ ಸರಕಾರದ ನೈಜ ಆದ್ಯತೆ ಅರ್ಥ ಮಾಡಿಕೊಳ್ಳಲು ಆಯಾ ಕಾಲಘಟ್ಟದಲ್ಲಿ ಒದಗಿಸಲಾದ ಮೊತ್ತ ಆಯಾ ಬಜೆಟ್‌ನ ಗಾತ್ರದ ಎಷ್ಟು ಪ್ರಮಾಣದ್ದು ಎಂಬುದು ಸರಿಯಾದ ಲೆಕ್ಕಾಚಾರ.

Update: 2024-07-31 07:08 GMT
Editor : Thouheed | Byline : ಶಿವಸುಂದರ್

ಬರ ಬಂದಾಗ, ನೆರೆ ಬಂದಾಗ ಕರ್ನಾಟಕಕ್ಕೆ ಬಾರದ ಕರ್ನಾಟಕದ ಬಿಜೆಪಿ ಸಂಸದೆ ಮತ್ತು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಬರುವುದು ಏಕೈಕ ಕಾರಣಕ್ಕೆ. ಸುಳ್ಳುಗಳ ಮೂಟೆಗಳನ್ನು ಹಂಚಿ ಬಿಜೆಪಿ ಸರಕಾರಗಳ ದ್ರೋಹಗಳನ್ನು ಕುತರ್ಕ, ವಿತರ್ಕಗಳಿಂದ ಸಮರ್ಥಿಸಿಕೊಳ್ಳುವುದಕ್ಕೆ ಮಾತ್ರ.

ಅದೇ ರೀತಿ ಬಜೆಟ್ ಮಂಡನೆಯಾದ ಮೇಲೆಯೂ ಕರ್ನಾಟಕಕ್ಕೆ ಬಂದ ನಿರ್ಮಲಕ್ಕ ಮೋದಿ ಸರಕಾರ ಈ ಬಜೆಟ್‌ನಲ್ಲೂ ರಾಜ್ಯಕ್ಕೆ ಅಗಾಧ ಅನ್ಯಾಯಗಳನ್ನು ಮಾಡಿದ್ದರೂ ಅಪಾರ ಕೊಡುಗೆ ನೀಡಿದೆ ಎಂದು ನಂಬಿಸಲು ಹಲವಾರು ಕುತರ್ಕಗಳನ್ನು, ತರ್ಕಕ್ಕೆ ಹೊಂದದ ಅಂಕಿಅಂಶಗಳನ್ನು ಮಂಡಿಸಿದ್ದಾರೆ.

ಬಜೆಟ್ ಎಂದರೆ ಜಟಿಲ ಗಣಿತ ಎಂಬಂತೆ ಇರುವಾಗ ಮಾಧ್ಯಮಗಳು ಅವನ್ನು ಚಾಚೂ ತಪ್ಪದೆ ಅಚ್ಚಿಸಿವೆ.

ಸಾಮಾನ್ಯವಾಗಿ ಸರಕಾರಗಳು ಬಜೆಟ್‌ನಲ್ಲಿ ಒಂದು ರಾಜ್ಯಕ್ಕೆ ಅಥವಾ ಒಂದು ಜನಸಮುದಾಯಕ್ಕೆ ಅಪಾರ ಕೊಡುಗೆ ಕೊಟ್ಟಿದೆ ಎಂದು ಹೇಳುವಾಗ ಎರಡು ತರ್ಕ ಮುಂದಿಡುತ್ತಾರೆ.

1. ತಮ್ಮ ಸರಕಾರ ಹಿಂದಿನ ಸರಕಾರಗಳಿಗಿಂತ ಎಷ್ಟು ಹೆಚ್ಚು ನೀಡಿದೆ ಮತ್ತು

2. ನಿರ್ದಿಷ್ಟ ಇಲಾಖೆ ಮತ್ತು ರಾಜ್ಯಗಳಿಗೆ ಹೋದ ವರ್ಷಕ್ಕಿಂತ ಎಷ್ಟು ಹೆಚ್ಚು ಒದಗಿಸಲಾಗಿದೆ ಎಂದು ಕಳೆದು ಕೂಡಿ ಜನರಿಗೆ ಮೋಡಿ ಮಾಡಲು ಪ್ರಯತ್ನಿಸುತ್ತಾರೆ.

ಆದರೆ ಎರಡು ಬೇರೆ ಬೇರೆ ಕಾಲಾವಧಿಯ ಬಜೆಟ್‌ಗಳನ್ನು ಹೋಲಿಸುವಾಗ ಅದರಲ್ಲೂ ಯಾವ ಇಲಾಖೆಗೆ ಎಷ್ಟು ನೀಡಲಾಗಿದೆ ಅರ್ಥಾತ್ ಯಾವ ಕ್ಷೇತ್ರ ಅಥವಾ ಯಾವ ಕ್ಷೇತ್ರದ ಯಾವ ವರ್ಗಕ್ಕೆ ಆದ್ಯತೆ ನೀಡಲಾಗದೆ ಎಂಬುದನ್ನು ಹೋಲಿಸಿ ಅರ್ಥಮಾಡಿಕೊಳ್ಳಬೇಕಾದರೆ ಹೋಲಿಸಬೇಕಿರುವುದು ಂbsoಟuಣe ಓumbeಡಿ ಅಂದರೆ ಒದಗಿಸಲಾದ ಮೊತ್ತವನ್ನು ಮಾತ್ರ ಅಲ್ಲ.

ಬದಲಿಗೆ ಆ ಸರಕಾರದ ನೈಜ ಆದ್ಯತೆ ಅರ್ಥ ಮಾಡಿಕೊಳ್ಳಲು ಆಯಾ ಕಾಲಘಟ್ಟದಲ್ಲಿ ಒದಗಿಸಲಾದ ಮೊತ್ತ ಆಯಾ ಬಜೆಟ್‌ನ ಗಾತ್ರದ ಎಷ್ಟು ಪ್ರಮಾಣದ್ದು ಎಂಬುದು ಸರಿಯಾದ ಲೆಕ್ಕಾಚಾರ.

ಅಂಕಿಸಂಖ್ಯೆಗಳು ಬಚ್ಚಿಡುವ ಬಜೆಟ್ ದ್ರೋಹಗಳು

ಉದಾಹರಣೆಗೆ ಮೊನ್ನೆ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಕ್ಕ 2004-14ರ ಅವಧಿಯ ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕಿರುವ ಅನುದಾನ, ಬೆಂಬಲ ಇತ್ಯಾದಿಗಳನ್ನು 2014-24ರ ಅವಧಿಯಲ್ಲಿ ಮೋದಿ ಕೊಟ್ಟಿರುವ ಅನುದಾನಗಳಿಗೆ ಹೋಲಿಸಿ ಪತ್ರಿಕಾ ಗೋಷ್ಠಿ ಮಾಡಿದ್ದಾರೆ.

ಉದಾಹರಣೆಗೆ, ಯುಪಿಎ ಅವಧಿಯ ಹತ್ತುವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟು 60 ಸಾವಿರ ಕೋಟಿ ರೂ. ನೆರವು ಸಿಕ್ಕಿದ್ದರೆ, ಮೋದಿಯ ಹತ್ತು ವರ್ಷಗಳಲ್ಲಿ 2.36 ಲಕ್ಷ ಕೋಟಿ ರೂ. ನೆರವು ಸಿಕ್ಕಿದೆ ಎಂದು ವಾದಿಸಿದ್ದಾರೆ.

ಅಂದರೆ ಕರ್ನಾಟಕಕ್ಕೆ ಮೋದಿ ಅವಧಿಯಲ್ಲಿ ಯುಪಿಎ ಅವಧಿಗಿಂತ ನಾಲ್ಕು ಪಟ್ಟು ಜಾಸ್ತಿ ಕೊಟ್ಟಿದ್ದೇವೆ ಎಂಬುದು ನಿರ್ಮಲಕ್ಕನ ಗಣಿತ...

ಇದು ಮೋದಿಯವರ 2ಚಿb ಅಲ್ಜಿಬ್ರಾದಷ್ಟೇ ಅಸಂಬದ್ಧ...ಗಣಿತ.. ದ್ರೋಹಪೂರಿತ ರಾಜಕೀಯ ಕಾಗುಣಿತ...

ಅಸಲು ಬಜೆಟ್ಟುಗಳ ಐತಿಹಾಸಿಕ ಹೋಲಿಕೆ ಮಾಡಬೇಕಿರುವುದುAbsolute Numberಡಿಗಳಲ್ಲಿ ಅಲ್ಲ...

ಆಯಾ ಬಜೆಟ್‌ಗಳಲ್ಲಿ ಘೋಷಿತವಾಗುವ ನೆರವು ಅಂದಿನ ಬಜೆಟ್‌ನಲ್ಲಿ ಎಷ್ಟು ಪ್ರಮಾಣದ್ದು ಎಂಬುದು ಸರಿಯಾದ ಹೋಲಿಕೆ... ಸರಿಯಾದ ಲೆಕ್ಕಾಚಾರ..

ಉದಾಹರಣೆಗೆ, ಯುಪಿಎ ಅವಧಿಯ 2004-5ರಲ್ಲಿ ಕೇಂದ್ರ ಬಜೆಟ್‌ನ ಗಾತ್ರ 5 ಲಕ್ಷ ಕೋಟಿ ರೂ. 2014ರ ವೇಳೆಗೆ ಅದು 14 ಲಕ್ಷ ಕೋಟಿ ರೂ. ಆಗಿತ್ತು. ಅಂದರೆ ಸರಾಸರಿ ಯುಪಿಎ ಅವಧಿಯ ಹತ್ತು ವರ್ಷಗಳಲ್ಲಿ ಸರಾಸರಿ ಬಜೆಟ್‌ನ ಗಾತ್ರ 10 ಲಕ್ಷ ಕೋಟಿ ರೂ.

2019ರಲ್ಲಿ ದೇಶದ ಬಜೆಟ್ ಗಾತ್ರ ರೂ. 27 ಲಕ್ಷ ಕೋಟಿಯಾಗಿ, 2024-25ರಲ್ಲಿ ಬಜೆಟ್ ಗಾತ್ರ 48 ಲಕ್ಷ ಕೋಟಿಗಳನ್ನು ಮುಟ್ಟಿದೆ. ಅಂದರೆ ಮೋದಿ ಅವಧಿಯಲ್ಲಿ ಬಜೆಟ್‌ನ ಸರಾಸರಿ ಗಾತ್ರ 31 ಲಕ್ಷ ಕೋಟಿ ರೂ. ಯುಪಿಎ ಅವಧಿಯ ಸರಾಸರಿಗಿಂತ ಮೂರು ಪಟ್ಟು ಜಾಸ್ತಿ. ಅದರಲ್ಲೂ ಕಳೆದ ನಾಲ್ಕು ವರ್ಷಗಳಲ್ಲಿ, ಯುಪಿಎ ಮೊದಲ ವರ್ಷಗಳಿಗಿಂತ 6-7 ಪಟ್ಟು ಜಾಸ್ತಿ. 2004-05ಕ್ಕೆ ಹೋಲಿಸಿದರೆ ಕೇಂದ್ರ ಬಜೆಟ್‌ನ ಗಾತ್ರ ಹೆಚ್ಚು ಕಡಿಮೆ 10 ಪಟ್ಟು ಜಾಸ್ತಿ ಆಗಿದೆ...

ಅರ್ಥಾತ್ ರಾಜ್ಯಗಳಿಂದ ಕೇಂದ್ರ ಪಡೆದುಕೊಳ್ಳುತ್ತಿರುವ ಆದಾಯವೂ 2004ಕ್ಕೆ ಹೋಲಿಸಿದಲ್ಲಿ 10 ಪಟ್ಟು ಹೆಚ್ಚಿದೆ...

ಹೀಗಾಗಿ ಯುಪಿಎ ಅವಧಿಯಲ್ಲಿ ರಾಜ್ಯಗಳಿಗೆ ಕೊಡುತ್ತಿದ್ದ ನೆರವನ್ನು 2004ರ ಪ್ರಮಾಣಕ್ಕಿಂತ ಹತ್ತು ಪಟ್ಟುಗಿಂತ ಜಾಸ್ತಿ ಹೆಚ್ಚಿಸಿದ್ದರೆ ಮಾತ್ರ ಎನ್‌ಡಿಎ ಅವಧಿಯಲ್ಲಿ ರಾಜ್ಯಗಳಿಗೆ ಮೋದಿ ಹೆಚ್ಚು ಕೊಟ್ಟಿದ್ದಾರೆ ಎಂಬ ನಿರ್ಮಲಕ್ಕನ ಮಾತಿನಲ್ಲಿ ನೈರ್ಮಲ್ಯ ಇರುತ್ತಿತ್ತು...

ಆದರೆ ಕರ್ನಾಟಕಕ್ಕೆ ದಕ್ಕಿರುವುದನ್ನೇ ನೋಡಿ...

ನಿರ್ಮಲಾ ಸೀತಾರಾಮನ್ ಪ್ರಕಾರ ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು 60 ಸಾವಿರ ಕೋಟಿ ರೂ...

2014-24ರ ಅವಧಿಯಲ್ಲಿ ಮೋದಿ ಬಜೆಟ್ 2004ಕ್ಕೆ ಹೋಲಿಸಿದರೆ 10 ಪಟ್ಟು, 2014ಕ್ಕೆ ಹೋಲಿಸಿದರೆ 3 ಪಟ್ಟು ಹೆಚ್ಚಿದೆ. ಅಂದರೆ ಸರಾಸರಿ ಯುಪಿಎ ಬಜೆಟ್‌ನ ಗಾತ್ರಕ್ಕಿಂತ ಮೋದಿ ಬಜೆಟ್‌ನ ಗಾತ್ರ 6-7 ಪಟ್ಟು ಜಾಸ್ತಿ ಇತ್ತು...

ಹೀಗಾಗಿ ಮೋದಿ ಅವಧಿಯ ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ಕೊಟ್ಟ ನೆರವು ಯುಪಿಎ ಅವಧಿಯ ಹತ್ತು ವರ್ಷಗಳಲ್ಲಿ ಕೊಟ್ಟ 60 ಸಾವಿರ ಕೋಟಿಗಿಂತ 6-7 ಪಟ್ಟು ಹೆಚ್ಚು...ಇರಬೇಕಲ್ಲವೇ?

ಅಂದರೆ 3.6 ಲಕ್ಷ ರೂ. - 4.2 ಲಕ್ಷ (60್ಠ6/7) ಕೋಟಿ ರೂ. ಕೊಟ್ಟಿದ್ದರೆ ಮಾತ್ರ ಮೋದಿ ಸರಕಾರ ಕರ್ನಾಟಕಕ್ಕೆ ಹೆಚ್ಚು ಕೊಟ್ಟಿದ್ದಾರೆ ಅಂತಾಗುತ್ತಿತ್ತು..

ಆದರೇ ನಿರ್ಮಲಕ್ಕನವರೇ ಬಯಲು ಮಾಡಿದಂತೆ ಕರ್ನಾಟಕಕ್ಕೆ ಮೋದಿ ಸರಕಾರ ಕಳೆದ ಹತ್ತು ವರ್ಷದಲ್ಲಿ ಕೊಟ್ಟಿರುವುದು ಕೇವಲ 2.36 ಲಕ್ಷ ಕೋಟಿ ರೂ. ಮಾತ್ರ. (ಇದು ಕೂಡ ಪೂರ್ತಿ ಬಂದಿಲ್ಲ ಎನ್ನುವುದು ಮತ್ತೊಂದು ವಿಷಯ)

ಅಂದರೆ ಕರ್ನಾಟಕಕ್ಕೆ ಕೇಂದ್ರದ ಬಜೆಟ್ ಗಾತ್ರದ ಏರಿಕೆಗೆ ಹೋಲಿಸಿದರೆ ...ಕರ್ನಾಟಕದ ಪಾಲು 1-2 ಲಕ್ಷ ಕೋಟಿ ರೂ. ಕಡಿಮೆ ಆಗಿದೆ...

ಅಷ್ಟು ಮಾತ್ರವಲ್ಲ, 2013-14ರ ಸಾಲಿನಲ್ಲಿ ರಾಜ್ಯಕ್ಕೆ ಸಂದ ಎಲ್ಲಾ ಅನುದಾನ, ನೆರವು ಒಟ್ಟು ಅಂದಿನ ಯುಪಿಎ ಬಜೆಟ್‌ನ ಶೇ. 1.9 ರಷ್ಟು. ಆದರೆ 2024-25ರಲ್ಲಿ ಅದು ಒಟ್ಟಾರೆ ಬಜೆಟ್‌ನ ಶೇ. 1.2ಕ್ಕಿಳಿದಿದೆ.

ಯುಪಿಎ ಬಜೆಟ್‌ನಲ್ಲೂ ಕರ್ನಾಟಕಕ್ಕೆ ಸಿಕ್ಕಿದ್ದು ಕಡಿಮೆಯೇ. ಆದರೆ ಮೋದಿ ಬಜೆಟ್ ತೀರಾ ಅನ್ಯಾಯ ಮಾತ್ರವಲ್ಲ. ಕಡಿಮೆ ಕೊಟ್ಟರೂ ಜಾಸ್ತಿ ಕೊಟ್ಟೆವು ಎನ್ನುವ ಕುಟಿಲ ಕುತಂತ್ರದ ಪ್ರಚಾರ ಬೇರೇ..

ಶೋಷಿತ ಸಮುದಾಯಗಳ ವೆಚ್ಚದಲ್ಲೂ ಕುತಂತ್ರವೇ!

ಅದೇ ರೀತಿ ಬೇರೆಬೇರೆ ಕ್ಷೇತ್ರಗಳಿಗೂ ಮೋದಿ ಸರಕಾರ ಅತಿ ಹೆಚ್ಚು ಹಣಕೊಟ್ಟಿದೆ ಎನ್ನುತ್ತಾ ನಿರ್ಮಲಕ್ಕ ಕೇವಲ ಹಣದ ಮೊತ್ತವನ್ನು ಮಾತ್ರ ಪ್ರಚಾರ ಮಾಡುತ್ತಿದ್ದಾರೆಯೇ ವಿನಾ ಒಟ್ಟಾರೆ ಬಜೆಟ್‌ನಲ್ಲಿ ಅದರ ಪ್ರಮಾಣವೆಷ್ಟು ಎಂಬುದನ್ನಲ್ಲ.

ಉದಾಹರಣೆಗೆ ಈ ಬಜೆಟ್‌ನಲ್ಲಿ ಬಡವರು, ಅನ್ನದಾತರು, ಯುವಕರು ಮತ್ತು ಮಹಿಳೆಯರನ್ನು ಉದ್ಧಾರ ಮಾಡಲು ಸರಕಾರ ತೀರ್ಮಾನಿಸಿದೆ ಎಂದು ನಿರ್ಮಲಕ್ಕ ಘೋಷಿಸಿದ್ದಾರೆ. ಹಾಗಿದ್ದಲ್ಲಿ ಹೋದ ವರ್ಷಗಳಿಗಿಂತ ಬಜೆಟ್‌ನಲ್ಲಿ ಈ ವರ್ಗಗಳಿಗೆ ಆದ್ಯತೆ ನೀಡಿದ್ದರೆ ಒಟ್ಟಾರೆ ಬಜೆಟ್‌ನಲ್ಲಿ ಈ ವರ್ಗಗಳಿಗೆ ನೀಡಿರುವ ಮೊತ್ತದ ಪ್ರಮಾಣವೂ ಹೋದ ವರ್ಷಗಳ ಬಜೆಟ್‌ನ ಪ್ರಮಾಣಕ್ಕಿಂತ ಹೆಚ್ಚಿರಬೇಕಲ್ಲವೇ?

ಇದನ್ನು ಅರ್ಥ ಮಾಡಿಕೊಳ್ಳಲು ಉದಾಹರಣೆಗೆಂದು ಕೃಷಿಗೆ, ಶಿಕ್ಷಣಕ್ಕೆ, ಆರೋಗ್ಯಕ್ಕೆ 2024-25ರ ಬಜೆಟ್‌ನಲ್ಲಿ ನೀಡಲಾಗಿರುವ ಪ್ರಮಾಣಾತ್ಮಕ ಅನುಪಾತವು, ಇದೇ ಮೋದಿ ಸರಕಾರ 2019-20 ರಲ್ಲಿ ಒದಗಿಸಿದ ಬಜೆಟ್ ಪ್ರಮಾಣಕ್ಕಿಂತ ಹೆಚ್ಚಿದೆಯೇ ಎಂದು ಪರಿಶೀಲಿಸೋಣ.

2019ರಲ್ಲಿ ಒಟ್ಟಾರೆ ಬಜೆಟ್ ಗಾತ್ರ 27.86 ಲಕ್ಷ ಕೋಟಿ ರೂ. ಹಾಗೂ 2024-25ರಲ್ಲಿ ಬಜೆಟ್ ಗಾತ್ರ 48 ಲಕ್ಷ ಕೋಟಿ ರೂ. ಎಂದು ನೆನಪಿನಲ್ಲಿಡೊಣ.

ಮೊದಲನೆಯದಾಗಿ ಕೃಷಿ.

2019ರಲ್ಲಿ ಕೃಷಿಗೆ 1.35 ಲಕ್ಷ ಕೋಟಿ ರೂ. ಎತ್ತಿಡಲಾಗಿತ್ತು. 2024-25ರಲ್ಲ 1.51 ಲಕ್ಷ ಕೋಟಿ ರೂ. ಎತ್ತಿಡಲಾಗಿದೆ. ಅಂದರೆ 2019ಕ್ಕೆ ಹೋಲಿಸಿದರೆ 16 ಸಾವಿರ ಕೋಟಿ ರೂ. ಜಾಸ್ತಿ ಕೊಡಲಾಗಿದೆ ಎಂಬಂತೆ ನಿರ್ಮಲಕ್ಕ ಹೇಳುತ್ತಾರೆ. ಆದರೆ 2019ರಲ್ಲಿ ಕೃಷಿಗೆ ನೀಡಿದ ಮೊತ್ತ ಅಂದಿನ ಬಜೆಟ್‌ನ ಶೇ. 4.8ರಷ್ಟು. 2024-25ರ ಮೊತ್ತ ಬಜೆಟ್ಟನ ಕೇವಲ 3.1ರಷ್ಟು. ಇದು ಇತರ ಕೃಷಿ ಸಂಬಂಧಿತ ಬಾಬತ್ತುಗಳಿಗೆ ಹೋಲಿಸಿದಲ್ಲಿ ಕೇವಲ ಶೇ. 2.75ರಷ್ಟು ಮಾತ್ರ ಆಗುತ್ತದೆ. ಅಂದರೆ 2019ಕ್ಕೆ ಹೋಲಿಸಿದಲ್ಲಿ ಕೃಷಿಗೆ ನೀಡಿರುವ ಆದ್ಯತೆ ಶೇ. 2.5ರಷ್ಟು ಅಂದರೆ ಅರ್ಧಕ್ಕಿಂತ ಕಡಿಮೆ. ಆದರೆ ಮೋದಿ ಸರಕಾರ ಕೃಷಿ ಪರ ಬಜೆಟ್ ಎಂದು ಕೊಚ್ಚಿಕೊಳ್ಳುತ್ತದೆ.

2019ರಲ್ಲಿ ಶಿಕ್ಷಣಕ್ಕೆ ನೀಡಿದ ಮೊತ್ತ 94,854 ಕೋಟಿ ರೂ. ಅದು ಅಂದಿನ ಬಜೆಟ್ ಪ್ರಮಾಣದ ಶೇ. 3.37ರಷ್ಟು. 2024-25ರಲ್ಲಿ ಅದು 1.25 ಲಕ್ಷ ಕೋಟಿ ರೂ.ಗೇರಿದರೂ, ಅದು ಬಜೆಟ್‌ನ ಗಾತ್ರಕ್ಕೆ ಹೋಲಿಸಿದಲ್ಲಿ ಕೇವಲ 2.6 ಆಗುತ್ತದೆ. ಅಂದರೆ ನೈಜವಾಗಿ ಬಜೆಟ್‌ನ ವೆಚ್ಚದಲ್ಲಿ ಶಿಕ್ಷಣಕ್ಕೆ ಕೊಟ್ಟ ಆದ್ಯತೆ ಅರ್ಧಕ್ಕರ್ಧ ಕಡಿಮೆಯಾಗಿದೆ.

ಹಾಗೆಯೇ ಆರೋಗ್ಯಕ್ಕೆ 2019ರಲ್ಲಿ ನೀಡಿದ ಮೊತ್ತ 64,999 ಕೋಟಿ ರೂ. ಅದು ಅಂದಿನ ಬಜೆಟ್‌ನ ಶೇ. 2.2ರಷ್ಟು. 2024ರಲ್ಲಿ ಆರೋಗ್ಯದ ಮೇಲಿನ ವೆಚ್ಚ ರೂ. 89,287 ಕೋಟಿಯಷ್ಟು ಎಂದು ಹೇಳುತ್ತಿದ್ದರೂ ಅದು ಇಂದಿನ ಬಜೆಟ್‌ನ ಶೇ. 1.8ರಷ್ಟು ಮಾತ್ರ.

ಹೀಗೆ ಬಜೆಟ್‌ನ ಪ್ರಮಾಣಕ್ಕೆ ಹೋಲಿಸಿ ಹೆಚ್ಚಳವನ್ನು ತುಲನೆ ಮಾಡಿದರೆ ಕಾರ್ಪೊರೇಟ್‌ಗಳಿಗೆ ಅನುಕೂಲವಾಗುವ ಕ್ಷೇತ್ರಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಕ್ಷೇತ್ರಗಳಿಗೂ ಕೊಟ್ಟಿರುವ ಮೊತ್ತ ಬಜೆಟ್ ಅನುಪಾತದಲ್ಲಿ ಅರ್ಧಕ್ಕಿಂತ ಕಡಿಮೆಯೇ ಎಂಬುದು ಸಾಬೀತಾಗುತ್ತದೆ.

ಹಣದುಬ್ಬರ ಲೆಕ್ಕ ಹಿಡಿದರೆ ನೈಜ ಏರಿಕೆಯೆಷ್ಟು?

ಬಜೆಟ್ ಲೆಕ್ಕಾಚಾರದಲ್ಲಿ ಸರಕಾರಗಳು ಜನರಿಗೆ ಮಾಡುವ ಮೋಸ ಅಷ್ಟಕ್ಕೆ ನಿಲ್ಲುವುದಿಲ್ಲ.

ಬಜೆಟ್‌ನಲ್ಲಿ ಯಾವುದಾದರೂ ಕ್ಷೇತ್ರಕ್ಕೆ ಹೋದವರ್ಷಕ್ಕಿಂತ ಹೆಚ್ಚು ಹಣ ನೀಡಿದ ಮಾತ್ರಕ್ಕೆ ಅದು ನೈಜ ಹೆಚ್ಚಳವಾಗುವುದಿಲ್ಲ. ಆ ಹೆಚ್ಚಳ ಆ ಸಾಲಿನ ಹಣದುಬ್ಬರದ ಪ್ರಮಾಣವನ್ನು ಕಳೆದು ಹೆಚ್ಚಾಗಿದ್ದರೆ ನೈಜವಾಗಿಯೂ ಹೋದವರ್ಷಕ್ಕಿಂತ ನೀಡಿರುವ ಮೊತ್ತ ಹೆಚ್ಚಾಗಿದೆ ಎಂದರ್ಥ.

ಉದಾಹರಣೆಗೆ 2023-24ರ ಸಾಲಿನಲ್ಲಿ ಶಿಶು ಕಲ್ಯಾಣಕ್ಕೆ 1,000 ಕೋಟಿ ರೂ. ಕೊಟ್ಟಿದ್ದಾರೆ ಎಂದಿಟ್ಟಕೊಳ್ಳಿ. ಈ ಸಾಲಿನಲ್ಲಿ 1,050 ಕೋಟಿ ಹಣ ಒದಗಿಸಿ ಶೇ. 5ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಸರಕಾರಗಳು ಹೇಳುತ್ತವೆ.

ಆದರೆ ಈ ಸಾಲಿನಲ್ಲಿ ಹಣದುಬ್ಬರ ಶೇ. 5ರಷ್ಟಿರುವಾಗ ಹೋದವರ್ಷದ 1,000 ಕೋಟಿ ರೂ. ಈ ವರ್ಷದ 1,050 ಕೋಟಿ ರೂ. ಗೆ ಸಮ ಎಂದರ್ಥ. ಅಂದರೆ ಈ ವರ್ಷ ಹೋದ ವರ್ಷಕ್ಕಿಂತ 50 ಕೋಟಿ ರೂ. ಹೆಚ್ಚು ಕೊಟ್ಟಿದ್ದರೂ ಹಣದುಬ್ಬರವೇ ಶೇ. 5 ರಷ್ಟಿರುವುದರಿಂದ ಅದು ನೈಜ ಹೆಚ್ಚಳವಾಗಿರುವುದಿಲ್ಲ. ಆದ್ದರಿಂದ ಅದು ನಿರ್ಮಲಕ್ಕನ ಕೇವಲ ಅಂಕಿ ಸಂಖ್ಯೆಯ ಗಾರುಡಿ ಮಾತ್ರ.

ಆದ್ದರಿಂದ ಒಂದು ರಾಜ್ಯಕ್ಕೆ ಅಥವಾ ಒಂದು ಇಲಾಖೆಗೆ ಹೋದ ವರ್ಷಕ್ಕಿಂತ ಜಾಸ್ತಿ ಅನುದಾನ ಎಂದು ಘೋಷಿಸಿದಾಗ ಅದು ಹೋದವರ್ಷಕ್ಕಿಂತ ಶೇ.10-15 ಇದ್ದರೆ ಮಾತ್ರ ನಿಜಕ್ಕೂ ಸರಕಾರ ಅದನ್ನು ಕನಿಷ್ಠ ಆದ್ಯತೆಯಲ್ಲಿ ಪರಿಗಣಿಸಿದೆ ಎಂದರ್ಥ.

ಆಂಧ್ರ, ಬಿಹಾರ ಹೊರತು ಪಡಿಸಿ ಇತರ ರಾಜ್ಯಗಳಿಗೆ ಮತ್ತು ಕಾರ್ಪೊರೇಟ್ ಕ್ಷೇತ್ರಗಳನ್ನು ಹೊರತುಪಡಿಸಿ ಇತರ ಕ್ಷೇತ್ರಗಳಿಗೆ ನಿರ್ಮಲಕ್ಕ ಘೋಷಿಸಿರುವ ನಿಧಿಗಳು ಶೇ.5-10ರ ಒಳಗಿವೆ. ಆರ್ಥಾತ್ ನೈಜ ಹೆಚ್ಚಳ ಮಾಡಿಯೇ ಇಲ್ಲ.

ಇದಲ್ಲದೆ ಒದಗಿಸಲಾಗಿರುವ ಅಷ್ಟೂ ಹಣವನ್ನು ವರ್ಷದ ಅಂತಿಮ ವೇಳೆಗೆ, ವಿಶೇಷವಾಗಿ ಕೃಷಿ ಮತ್ತಿತರ ಸಾಮಾಜಿಕ ಕ್ಷೇತ್ರಗಳಿಗೆ ಒದಗಿಸಿರುವುದೇ ಇಲ್ಲ ಅಥವಾ ಒದಗಿಸಿದಷ್ಟು ಹಣವನ್ನು ಇಲಾಖೆ ವೆಚ್ಚ ಮಾಡಿರಲು ಬಿಟ್ಟಿರುವುದೂ ಇಲ್ಲ. ಹೀಗಾಗಿ ಬಜೆಟ್ ದಸ್ತಾವೇಜುಗಳಲ್ಲಿ Budget Estimate ಎಂಬುದು ಈ ಸಾಲಿನಲ್ಲಿ ಎಷ್ಟು ವೆಚ್ಚ ಮಾಡುತ್ತೇವೆ ಎಂಬ ಅಂದಾಜಾಗಿರುತ್ತದೆ. ಅದರ ಜೊತೆಗೆ ಕೊಡುವ ಹೋದವರ್ಷದ ಅಸಲು ವೆಚ್ಚದ Revised Estimate ಮತ್ತು Actualsಗಳೆ ಸರಕಾರ ಎಷ್ಟು ವೆಚ್ಚ ಮಾಡಿದ್ದು ಎಂಬುದರ ಅಧಿಕೃತ ನಿಜವಾಗಿರುತ್ತದೆ. ಸಾಮಾನ್ಯವಾಗಿ Budget Estimate ಮತ್ತು Actualsಗಳ ನಡುವೆ ಏನಿಲ್ಲವೆಂದರೂ ಶೇ.10-30 ರಷ್ಟು ವ್ಯತ್ಯಾಸವಿರುತ್ತದೆ. ಅಂದರೆ ಸರಕಾರ ಘೋಷಣೆ ಮಾಡುವ ವೆಚ್ಚಕ್ಕಿಂತ ಕನಿಷ್ಠ ಎಂದರೆ ಶೇ. 20ರಷ್ಟು ಕಡಿಮೆ ಆದ್ಯತೆ ನೀಡಲಾಗಿರುತ್ತದೆ.

ಆದ್ದರಿಂದ ಬಜೆಟನ್ನು ಅರ್ಥ ಮಾಡಿಕೊಳ್ಳುವಾಗ ನಿರ್ಮಲಕ್ಕನ ಮಾತುಗಳಿಗಂತ ಹೋಲಿಕೆಯಲ್ಲಿ ಅಂಕಿಸಂಖ್ಯೆಗಳು ಹೇಳುವ ವಾಸ್ತವಗಳನ್ನು ಅರ್ಥಮಾಡಿಕೊಳ್ಳಬೇಕು. ಅದು ಮೋದಿ ಸರಕಾರ ಕುಟಿಲ ಕುತಂತ್ರಗಳ ಮೂಲಕ ಜನರಿಗೆ ಮೋಸ ಮಾಡುತ್ತಿದೆ ಎಂದು ಸ್ಪಷ್ಟವಾಗಿ ಸಾರಿ ಸಾರಿ ಹೇಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News