‘ಪರಿಶಿಷ್ಟರ ಹಣ’ ಗ್ಯಾರಂಟಿ ಯೋಜನೆಗೆ; ಎಷ್ಟುಸರಿ?

Update: 2024-07-08 04:21 GMT
Editor : Thouheed | Byline : ಶಿವಸುಂದರ್

ಮಾನ್ಯ ಮುಖ್ಯಮಂತ್ರಿಗಳೇ,

ಮೊನ್ನೆಯ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ತಮ್ಮ ಸರಕಾರ ಪರಿಶಿಷ್ಟರ SCSP ಮತ್ತು TSPಗೆ ನಿಗದಿಯಾದ ರೂ. 39,121 ಕೋಟಿ ರೂ.ಮೊತ್ತದಲ್ಲಿ 14,282 ಕೋಟಿ ರೂ.ಯನ್ನು ಗ್ಯಾರಂಟಿಯ ಮೂಲಕ ವ್ಯಯಮಾಡುವ ತೀರ್ಮಾನ ಮಾಡಿದ್ದೀರಿ.

ಇದು SCSP ಮತ್ತು TSPಗಳ ಮೂಲ ಆಶಯಗಳಿಗೆ ವಿರುದ್ಧವಾಗಿದೆ.

ಏಕೆಂದರೆ:

SCSP ಮತ್ತು TSP ಯೋಜನೆಗಳು ಒಟ್ಟಾರೆ ಸಮಾಜದ ಬಡತನ ನಿವಾರಣಾ ಯೋಜನೆಗಳ ಉದ್ದೇಶದಿಂದ ರೂಪಿತಗೊಂಡಿದ್ದಲ್ಲ.

ಉಳಿದ ಸಮಾಜಕ್ಕೂ ಹಾಗೂ ಪರಿಶಿಷ್ಟ ಸಮಾಜಕ್ಕೂ ಇರುವ ಅಭಿವೃದ್ಧಿ ಅಂತರವನ್ನು ಕಡಿಮೆಮಾಡುವ ಸಲುವಾಗಿ ರೂಪಿತಗೊಂಡಿದ್ದು.

ಏಕೆಂದರೆ ಸರಕಾರವು ರೂಪಿಸುವ ಇತರ ಬಡತನ ನಿರ್ಮೂಲನ ಯೋಜನೆಗಳು ಶ್ರೇಣೀಕೃತ ಸಮಾಜದಲ್ಲಿ ಸಾಮಾಜಿಕ ತಾರತಮ್ಯಗಳ ಕಾರಣಗಳಿಂದಾಗಿ ಹಿಂದುಳಿದ ಪರಿಶಿಷ್ಟರಿಗೆ ಆದ್ಯತೆಯನ್ನು ನೀಡುವುದಿಲ್ಲ. ಹೀಗಾಗಿ ಏನೇ ಅಭಿವೃದ್ಧಿಯಾದರೂ ಪರಿಶಿಷ್ಟರಿಗೂ ಮತ್ತು ಉಳಿದ ಸಮಾಜಕ್ಕೂ ಇರುವ ಅಂತರ ಮುಂದುವರಿಯುತ್ತಲೇ ಇರುತ್ತದೆ.

ಆ ಕಾರಣದಿಂದಾಗಿಯೇ SCSP ಮತ್ತು TSP ಯೋಜನೆಗಳು ಇತರ ಬಡತನ ನಿವಾರಣೆ ಯೋಜನೆಗಳ ಜೊತೆಗೆ, ಹೆಚ್ಚುವರಿಯಾಗಿ ವಿಶೇಷವಾಗಿ, ಪರಿಶಿಷ್ಟರ ಅಭಿವೃದ್ಧಿ ಅಂತರವನ್ನು ಕಡಿತಗೊಳಿಸಲು ರೂಪಿಸಲಾಗಿದೆ.

ಇತರ ಬಡತನ ನಿವಾರಣಾ ಯೋಜನೆಗಳ ಜೊತೆಗೆ ಹೆಚ್ಚುವರಿಯಾಗಿ SಅSP ಮತ್ತು ಖಿSP ಯೋಜನೆಗಳಿರಬೇಕೇ ವಿನಾ....

ಬಡತನ ನಿವಾರಣಾ ಯೋಜನೆಗಳಲ್ಲಿ ಪರಿಶಿಷ್ಟರ ಪಾಲು ಎಂದು ಎತ್ತಿಡುವುದರಿಂದ ಈ ಅಂತರ ನಿವಾರಣೆ ಎಂಬ ವಿಶೇಷ ಉದ್ದೇಶವೇ ವಿಫಲವಾಗುತ್ತದೆ.

ಗ್ಯಾರಂಟಿ ಯೋಜನೆಗಳು ನಾಡಿನ ಒಟ್ಟಾರೆ ಬಡತನ ನಿವಾರಣಾ ತಾತ್ಕಾಲಿಕ ಯೋಜನಗಳಾಗಿವೆ. ನಾಡಿನ ಎಲ್ಲಾ ಬಡವರಂತೆ ಬಡ ಪರಿಶಿಷ್ಟರೂ ಅದರ ಫಲಾನುಭವಿಗಳಾಗಬೇಕು.

ಅದು ಸರಕಾರದ ಒಟ್ಟಾರೆ ವೆಚ್ಚದ ಭಾಗವಾಗಬೇಕೇ ವಿನಾ ಪರಿಶಿಷ್ಟರ ಅಂತರ ಕಡಿಮೆ ಮಾಡುವ SCSP ಮತ್ತು TSPಯಂಥ ವಿಶೇಷ ವೆಚ್ಚಗಳ ಭಾಗವಾಗಬಾರದು.

ಹಾಗೆ ಮಾಡುವ ಮೂಲಕ ಪರಿಶಿಷ್ಟರಿಗೆ ಮಾಡಬೇಕಾದ ವಿಶೇಷ ವೆಚ್ಚಗಳನ್ನು ಮತ್ತು ವಿಶೇಷ ಆದ್ಯತೆಗಳನ್ನು ಸರಕಾರ ನಿರಾಕರಿಸಿದಂತಾಗುತ್ತದೆ.

ಇದು ಸಾಮಾಜಿಕ ನ್ಯಾಯದ ಕ್ರಮವಾಗುವುದಿಲ್ಲ. ಬದಲಿಗೆ ಸಾಮಾಜಿಕ ಅನ್ಯಾಯದ ಕ್ರಮವಾಗುತ್ತದೆ.

-ಈ ಸಾಲಿನಲ್ಲಿ ಗ್ಯಾರಂಟಿಗಳಿಗಾಗಿ ಸರಕಾರ 52 ಸಾವಿರ ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದೆ.

ಈಗ ಪರಿಶಿಷ್ಟರಿಗೆ ಮಾತ್ರ ವ್ಯಯ ಮಾಡಬೇಕಿದ್ದ SCSP ಮತ್ತು TSP ಯೋಜನೆಗಳಿಗೆ ನಿಗದಿಯಾಗಿರುವ

39,121 ಕೋಟಿ ರೂ. ಮೊತ್ತದಲ್ಲಿ 14,282 ಕೋಟಿ ರೂ.ಯನ್ನು ಗ್ಯಾರಂಟಿಯ ಮೂಲಕ ವ್ಯಯಮಾಡುವ ತೀರ್ಮಾನ ಮಾಡಲಾಗಿದೆ.

ಅಂದರೆ ಒಟ್ಟಾರೆ ರಾಜ್ಯದಲ್ಲಿ ಗ್ಯಾರಂಟಿಗಳಿಗಾಗಿ ವ್ಯಯವಾಗಲಿರುವ 52 ಸಾವಿರ ಕೋಟಿ ರೂ.ಯಲ್ಲಿ 14,282 ಕೋಟಿ ರೂ.ಯನ್ನು ಅಂದರೆ ಒಟ್ಟಾರೆ ಗ್ಯಾರಂಟಿ ವೆಚ್ಚದ ಶೇ. 27ರಷ್ಟು ಹಣವನ್ನು ಪರಿಶಿಷ್ಟರಿಗೆಂದೇ ಮೀಸಲಿಡಬೇಕಿರುವ SCSP ಮತ್ತು TSP ನಿಧಿಯಿಂದ ವೆಚ್ಚವಾಗುತ್ತಿದೆ ಎಂದಾಯಿತು.

ಅಂದರೆ ಶೇ. 27ರಷ್ಟು.

ಹಾಗಿದ್ದಲ್ಲಿ ರಾಜ್ಯದಲ್ಲಿ ಪರಿಶಿಷ್ಟರ ಜನಸಂಖ್ಯೆ ಶೇ. 27 ಆಗಿದ್ದು ಯಾವಾಗ? ಮತ್ತು ಈ ಗ್ಯಾರಂಟಿ ಯೋಜನೆಗಳಲ್ಲಿ ಶೇ. 27ರಷ್ಟು ಫಲಾನುಭವಿಗಳು ಪರಿಶಿಷ್ಟರು ಎಂಬ ಅಧ್ಯಯನವನ್ನೇನಾದರೂ ಸರಕಾರ ಮಾಡಿದೆಯೇ?

-ಉದಾಹರಣೆಗೆ 2024-25ರ ಬಜೆಟ್ಟಿನ ಪ್ರಕಾರ ಶಕ್ತಿ ಯೋಜನೆಗೆ 5,105 ಕೋಟಿ ರೂ. ತೆಗೆದಿಡಲಾಗಿದೆ. ಇಂದು ಸರಕಾರ ಶಕ್ತಿ ಯೋಜನೆಗೆ SCSP ಮತ್ತು TSPಗೆ ಮೀಸಲಾದ ಮೊತ್ತದಿಂದ 1,451 ಕೋಟಿ ರೂ. ವಿನಿ ಯೋಗಿಸಲಾಗುವುದು ಎಂದು ಹೇಳಿದೆ.

ಅಂದರೆ ಶಕ್ತಿ ಯೋಜನೆಯ ಶೇ. 34 ರಷ್ಟನ್ನು SCSP ಮತ್ತು TSPಯಿಂದ ಭರಿಸಲಾಗುತ್ತಿದೆ ಎಂದಾಗಲಿಲ್ಲವೇ?

ಇದು ಯಾವ ರೀತಿ ಸಮರ್ಥನೀಯ?

ಆದ್ದರಿಂದ ಮುಖ್ಯಮಂತ್ರಿಗಳೇ,

ಗ್ಯಾರಂಟಿ ವೆಚ್ಚವನ್ನು SCSP ಮತ್ತು TSPಗೆ ಮೀಸಲಾದ ಮೊತ್ತದಿಂದ ಭರಿಸುವ ಯೋಜನೆಯನ್ನು ಕೂಡಲೇ ಕೈಬಿಡಿ.

ಗ್ಯಾರಂಟಿಗೆ ಯೋಜನೆಗಳು ಮುಂದುವರಿಯಲೇ ಬೇಕು.

ಆದರೆ ಅದಕ್ಕೆ ನೀವು ಉಳ್ಳವರಿಂದ ಶುಲ್ಕ, ದಂಡ, ತೆರಿಗೆ, ಇತ್ಯಾದಿಗಳ ಮೂಲಕ ಸಂಗ್ರಹಿಸುವ ಸಾಮಾಜಿಕ ನ್ಯಾಯದ ಕ್ರಮಗಳನ್ನು ಅನುಸರಿಸಬೇಕೆಂದು ಆಗ್ರಹಿಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News