ಒಳಮೀಸಲಾತಿ: ದಲಿತ ಭಿನ್ನತೆ ಮತ್ತು ದಲಿತ ಐಕ್ಯತೆಯ ಪ್ರಶ್ನೆಗಳು

ರಾಜಕೀಯ ಪಕ್ಷಗಳ ಕುತಂತ್ರಿ ನಿಲುವುಗಳನ್ನು ಹೊರತುಪಡಿಸಿದರೂ, ಒಳಮೀಸಲಾತಿಯ ವಿರುದ್ಧ ಧ್ವನಿ ಎತ್ತಿರುವ ಹಲವು ನೈಜ ದಲಿತ ಕಾಳಜಿಯುಳ್ಳ ಅದರಲ್ಲೂ ಉತ್ತರ ಭಾರತದ ಹಲವು ದಲಿತ ಸಂಘಟನೆಗಳಿಗೆ ಒಳಮೀಸಲಾತಿಯ ಬಗ್ಗೆ ತಪ್ಪುಗ್ರಹಿಕೆ ಮತ್ತು ಪೂರ್ವಗ್ರಹಗಳಿರುವುದು ಮತ್ತು ಮಾಹಿತಿಯ ಕೊರತೆಗಳಿರುವುದು ಆಗಸ್ಟ್ 21ರ ಪ್ರತಿಭಟನೆಯ ವೇಳೆಯಲ್ಲಿ ಅವರು ವ್ಯಕ್ತಪಡಿಸಿರುವ ಹೇಳಿಕೆಗಳಲ್ಲಿ ವ್ಯಕ್ತವಾಗುತ್ತಿದೆ.

Update: 2024-08-28 02:19 GMT
Editor : Thouheed | Byline : ಶಿವಸುಂದರ್

ಪರಿಶಿಷ್ಟರೊಳಗೆ ಒಳಮೀಸಲಾತಿಯ ಅಗತ್ಯದ ಬಗ್ಗೆ ಸುಪ್ರೀಂ ತೀರ್ಪು ಬಂದ ನಂತರ ಇದ್ದ ಗೊಂದಲಗಳು ಬಗೆಹರಿಯುವ ಬದಲು ಹೆಚ್ಚಾದಂತೆ ಕಾಣುತ್ತಿದೆ. ಇವುಗಳಲ್ಲಿ ಬಹಳಷ್ಟು ಬಿಜೆಪಿ-ಕಾಂಗ್ರೆಸ್ ಪಕ್ಷಗಳು ತಮ್ಮ ನಿಷ್ಕ್ರಿಯತೆಯಿಂದ ಮತ್ತು ಉದ್ದೇಶಪೂರ್ವಕವಾಗಿ ಹುಟ್ಟಿಸಿರುವ ಗೊಂದಲಗಳು. ಉದಾಹರಣೆಗೆ ‘ಕೆನೆ ಪದರ’ದ ಬಗ್ಗೆ ಪೀಠದಲ್ಲಿದ್ದ ಕೆಲವು ನ್ಯಾಯಾಧೀಶರು ಅನಗತ್ಯವಾಗಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ರಾಜಕೀಯ ಪಕ್ಷಗಳು ಅಗತ್ಯಕ್ಕಿಂತ ಹೆಚ್ಚಾಗಿ ಚರ್ಚೆಗೆ ತಂದಿರುವುದು ಮತ್ತು ಆ ಮೂಲಕ ಅದು ಆದೇಶದ ಭಾಗವೇನೋ ಎಂಬ ಕಳವಳಕ್ಕೆ ಇನ್ನಷ್ಟು ಬೆಂಕಿ ಹಾಕಿ ಇಡೀ ಒಳಮೀಸಲಾತಿ ಪರ ಆದೇಶದ ಬಗ್ಗೆಯೇ ನಕಾರಾತ್ಮಕ ಅಭಿಪಾಯ ಸೃಷ್ಟಿಸಿರುವುದು. ಎರಡನೆಯದು ಬಿಜೆಪಿಯ ಸಂವಿಧಾನ ವಿರೋಧಿ- ಮೀಸಲಾತಿ ವಿರೋಧಿ ನಿಲುವುಗಳನ್ನು ಆತಂಕದಿಂದ ಗಮನಿಸುತ್ತಿರುವ ಶೋಷಿತ ಸಮುದಾಯಕ್ಕೆ ಒಳಮೀಸಲಾತಿ ಪರವಾದ ಬಿಜೆಪಿಯ ಅರೆಮನಸ್ಸಿನ ರಾಜ್ಯಮಟ್ಟದ ಹೇಳಿಕೆಗಳೂ, ಮೀಸಲಾತಿಯನ್ನು ಸರ್ವನಾಶ ಮಾಡಲು ಮಾಡುತ್ತಿರುವ ಹುನ್ನಾರವೇನೋ ಎಂಬ ಆಳವಾದ ಅನುಮಾನವನ್ನು ಹುಟ್ಟುಹಾಕಿರುವುದು.

ಇವೆಲ್ಲವೂ ಒಟ್ಟು ಸೇರಿ ಆಗಸ್ಟ್ 21ರಂದು ದಲಿತ ಮತ್ತು ಆದಿವಾಸಿ ಸಂಘಟನೆಗಳು ಸುಪ್ರೀಂ ಕೋರ್ಟಿನ ಒಳಮೀಸಲಾತಿ ಪರವಾದ ಆದೇಶದ ವಿರುದ್ಧ ಭಾರತ್ ಬಂದ್‌ಗೆ ಕರೆಕೊಟ್ಟಿದ್ದವು. ಅದು ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು ಪ್ರಭಾವ ಬೀರದಿದ್ದರೂ ಉತ್ತರದಲ್ಲಿ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿ ಮಿಶ್ರ ಪ್ರಭಾವವನ್ನು ಹೊಂದಿತ್ತು. ಉತ್ತರದ ಹಲವು ಕಡೆಗಳಲ್ಲಿ ದಲಿತ ಸಂಘಟನೆಗಳು ಮತ್ತು ದಲಿತ ಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಗಳೂ ನಡೆದವು. ಇದಕ್ಕೆ ಬಹಿರಂಗವಾಗಿ ಬಿಎಸ್‌ಪಿ ಹಾಗೂ ಎನ್‌ಡಿಎ ಒಕ್ಕೂಟದ ಎಲ್‌ಜೆಪಿ, ಜೆಡಿಯು ಮತ್ತು ‘ಇಂಡಿಯಾ’ ಒಕ್ಕೂಟದ ಕಾಂಗ್ರೆಸ್, ಆರ್‌ಜೆಡಿ ಬಹಿರಂಗ ಬೆಂಬಲ ಘೋಷಿಸಿದ್ದರೆ ಮತ್ತೊಂದು ಕಡೆ ಬಿಜೆಪಿ ಪರೋಕ್ಷ ಬೆಂಬಲ ವ್ಯಕ್ತಪಡಿಸಿದೆ. ದಲಿತರ ಆಶಾಕಿರಣವಾಗಿ ಉಗಮವಾಗಿರುವ ಸಂಸದ ಚಂದ್ರಶೇಖರ್ ರಾವಣ್ ಅವರು ಸೆಪ್ಟಂಬರ್ 11ರಿಂದ ಒಳಮೀಸಲಾತಿ ವಿರೋಧಿ ಚಳವಳಿಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದ್ದಾರೆ.

ರಾಜಕೀಯ ಪಕ್ಷಗಳ ಕುತಂತ್ರಿ ನಿಲುವುಗಳನ್ನು ಹೊರತುಪಡಿಸಿದರೂ, ಒಳಮೀಸಲಾತಿಯ ವಿರುದ್ಧ ಧ್ವನಿ ಎತ್ತಿರುವ ಹಲವು ನೈಜ ದಲಿತ ಕಾಳಜಿಯುಳ್ಳ ಅದರಲ್ಲೂ ಉತ್ತರ ಭಾರತದ ಹಲವು ದಲಿತ ಸಂಘಟನೆಗಳಿಗೆ ಒಳಮೀಸಲಾತಿಯ ಬಗ್ಗೆ ತಪ್ಪುಗ್ರಹಿಕೆ ಮತ್ತು ಪೂರ್ವಗ್ರಹಗಳಿರುವುದು ಮತ್ತು ಮಾಹಿತಿಯ ಕೊರತೆಗಳಿರುವುದು ಆಗಸ್ಟ್ 21ರ ಪ್ರತಿಭಟನೆಯ ವೇಳೆಯಲ್ಲಿ ಅವರು ವ್ಯಕಪಡಿಸಿರುವ ಹೇಳಿಕೆಗಳಲ್ಲಿ ವ್ಯಕ್ತವಾಗುತ್ತಿದೆ.

ಇದಲ್ಲದೆ ಶೋಷಿತರ ಬಗ್ಗೆ ಕಾಳಜಿಯುಳ್ಳ ದೇಶದ ಕೆಲವು ಪ್ರಮುಖ ನೈಜ ಪ್ರಗತಿಪರ ವಿದ್ವಾಂಸರು ಕೂಡ ಕೆಲವು ಗಂಭೀರ ಕಾಳಜಿಯ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇಂದಿನ ನವ ಉದಾರವಾದಿ ಆರ್ಥಿಕ ಸಂದರ್ಭವು ಮೀಸಲಾತಿಯನ್ನೇ ಅಪ್ರಸ್ತುತಗೊಳಿಸುತ್ತಿದೆ ಮತ್ತು ಮೀಸಲಾತಿ ಎಂಬ ಸಾಧನಕ್ಕೆ ಒಂದು ಮಿತಿಯಿದೆ. ಅದು ಸಮುದಾಯದ ಒಟ್ಟಾರೆ ಪ್ರಗತಿಗಿಂತ ಸಮುದಾಯದೊಳಗೆ ಒಂದು ಸ್ಥರದ ಉನ್ನತಿಯನ್ನು ಮಾತ್ರ ಮಾಡುವ ಮಿತಿಯನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ಶೋಷಿತರು ತಮ್ಮ ಅಸ್ತಿತ್ವ ಹಾಗೂ ಅಸ್ಮಿತೆಗಳಿಗಾಗಿ ಇನ್ನಷ್ಟು ಬಲವಾದ ಐಕ್ಯತೆಯೊಂದಿಗೆ ಕೂಡುಹೋರಾಟ ಮಾಡುವ ಅಗತ್ಯವಿರುವಾಗ ಒಳಮೀಸಲಾತಿಯು ದಲಿತರ ನಡುವೆ ಒಡಕು ಮೂಡಿಸಿ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ಶಕ್ತಿಗಳಿಗೆ ಅನುಕೂಲ ಮಾಡಿಕೊಡುತ್ತದೆ ಎಂಬುದು ಅವರ ನೈಜ ಕಾಳಜಿ.

ಜನಪರ ವಿದ್ವಾಂಸರ ಮೇಲಿನ ಕಾಳಜಿಯನ್ನು ಒಳಮೀಸಲಾತಿ ಹೋರಾಟವು ಒಂದು ಒಳಗಿನ ಎಚ್ಚರವಾಗಿ ಉಳಿಸಿಕೊಳ್ಳುವ ಅಗತ್ಯವಿದೆ. ಆದರೂ ಈ ವಿದ್ವಾಂಸರ ಗ್ರಹಿಕೆಯಲ್ಲೂ ಮತ್ತು ಆಗಸ್ಟ್ 21ರ ಒಳಮೀಸಲಾತಿ ವಿರೋಧಿ ಪ್ರತಿರೋಧ ನಡೆಸಿದ ದಲಿತ ಸಂಘಟನೆಗಳು ಎತ್ತಿರುವ ಪ್ರಶ್ನೆಗಳಲ್ಲೂ ಕೆಲವು ತಪ್ಪು ಮಾಹಿತಿ, ಪೂರ್ವಗ್ರಹ ಹಾಗೂ ತಪ್ಪು ರಾಜಕೀಯ-ಸೈದ್ಧಾಂತಿಕ ನಿಲುವುಗಳು ಕಾಣುತ್ತವೆ.

ಈ ಪ್ರಶ್ನಿಸುತ್ತಿರುವ ಮಿತ್ರರ ಪ್ರಶ್ನೆ-ಪೂರ್ವಗ್ರಹಗಳನ್ನು ಹೀಗೆ ಪಟ್ಟಿ ಮಾಡಬಹುದು:

1. ಪರಿಶಿಷ್ಟ ವರ್ಗೀಕರಣವಾಗಿರುವುದೇ ಅಸ್ಪಶ್ಯತೆ ಮತ್ತು ಅತ್ಯಂತ ಹಿಂದುಳಿದಿರುವಿಕೆಯ ಆಧಾರದಲ್ಲಿ. ಹೀಗಾಗಿ ಪರಿಶಿಷ್ಟ ಜಾತಿಗಳನ್ನು ಏಕರೂಪಿ ಸಮುದಾಯ ಎಂದು ಪರಿಗಣಿಸಬೇಕೇ ವಿನಾ ಅವುಗಳಲ್ಲಿ ಇರುವ ಭಿನ್ನತೆಯನ್ನು ಮುಂದು ಮಾಡಿ ಒಡೆಯಬಾರದು.

2. ಒಳಮೀಸಲಾತಿಯು ಐಕ್ಯತೆಯನ್ನು ಮುರಿಯುವ ಐಡೆಂಟಿಟಿ ರಾಜಕಾರಣದ ಮುಂದುವರಿಕೆ.

3. ಒಳಮೀಸಲಾತಿಯು ಮೀಸಲಾತಿಯನ್ನೇ ರದ್ದು ಮಾಡುವ ಬಿಜೆಪಿ ರಾಜಕಾರಣದ ಮುಂದುವರಿಕೆ. ಏಕೆಂದರೆ ಒಳ ಮೀಸಲಾತಿಯನ್ನು ಯಾರೂ ಕೇಳಿರಲಿಲ್ಲ.

4. ಒಳಮೀಸಲಾತಿಯಿಂದ ದಲಿತರಲ್ಲಿ ಒಡಕಾಗುತ್ತದೆ. ಐಕ್ಯ ಹೋರಾಟಕ್ಕೆ ಅಡ್ಡಿಯಾಗುತ್ತದೆ.

ಈ ಪ್ರಶ್ನೆಗಳು ಕೊಡುವ ಎಚ್ಚರವನ್ನು ಮತ್ತು ಕಾಳಜಿಯನ್ನು ಒಪ್ಪಿಕೊಳ್ಳುತ್ತಲೇ, ಈ ಪ್ರಶ್ನೆಗಳು ಗಮನಿಸದ ಕೆಲವು ಐತಿಹಾಸಿಕ ಮತ್ತು ರಾಜಕೀಯ ವಿಷಯಗಳನ್ನು ಗಮನಿಸೋಣ.

ಪರಿಶಿಷ್ಟರೆಲ್ಲ ಶೋಷಿತರೇ-ಆದರೆ ಸಮಾನ ಬಾಧಿತರೇ?

ಮೇಲಿನ ಎಲ್ಲಾ ಪ್ರಶ್ನೆಗಳ ಮೂಲ ಈ ದೇಶದ ಬ್ರಾಹ್ಮಣಶಾಹಿ ಜಾತಿ ವ್ಯವಸ್ಥೆಯ ವಿಸ್ತಾರ ಮತ್ತು ಆಳವನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿದೆ. ಜಾತಿ ಎಂಬುದು ಮೇಲು-ಕೀಳೆಂಬ ಶ್ರೇಣೀಕರಣವಿರದೆ ಅಸ್ತಿತ್ವದಲ್ಲಿ ಇರಲು ಸಾಧ್ಯವಿಲ್ಲ. ಅದಕ್ಕೆ ಅಂಬೇಡ್ಕರ್ ಅದನ್ನು ‘ಹಂತಹಂತಗಳ ಅಸಮಾನತೆ’ ಎಂದು ಬಣ್ಣಿಸುತ್ತಾರೆ ಮತ್ತು ಮೇಲಿರುವವರು ಎಂದೂ ಕೆಳಗಿಳಿಯದ, ಕೆಳಗಿರುವವರು ಎಂದೂ ಮೇಲಕ್ಕೆ ಹತ್ತಲಾಗದ ಏಣಿಯಿಲ್ಲದ ಮಹಡಿ ಎಂದು ವಿವರಿಸುತ್ತಾರೆ.

ಪರಿಶಿಷ್ಟ ಜಾತಿಗಳು ಎಂದು ಒಟ್ಟು ಸೇರಿಸಲ್ಪಟ್ಟ ಜಾತಿಗಳ ನಡುವೆಯೂ ಈ ಬಗೆಯ ಶ್ರೇಣೀಕರಣವು ಇಲ್ಲವೇ? ಸಾಮಾನ್ಯವಾಗಿ ಪರಿಶಿಷ್ಟ ಜಾತಿ ಎಂದು ವರ್ಗೀಕರಿಸಲ್ಪಡಲು ಅಸ್ಪಶ್ಯತೆ ಒಂದು ಪ್ರಧಾನ ಮಾನದಂಡವೆಂದು ಪರಿಗಣಿಸಲಾಗುತ್ತದೆ ಮತ್ತು ಅಸ್ಪಶ್ಯತೆಯ ಒಳಗೆ ಭಿನ್ನರೂಪತೆಯಿಲ್ಲದ ಅತ್ಯಂತಿಕ ತಾರತಮ್ಯ ಎಂದು ಪರಿಗಣಿಸಲಾಗುತ್ತದೆ. 2004ರಲ್ಲಿ ಇ.ವಿ. ಚಿನ್ನಯ್ಯ ಪ್ರಕರಣದಲ್ಲಿ ಒಳಮೀಸಲಾತಿಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವೂ ಇದೇ ವಾದವನ್ನು ಮುಂದಿಟ್ಟಿತ್ತು. ಆದರೆ ಈ ಗ್ರಹಿಕೆ ತಪ್ಪೆಂದು ವ್ಯಾಖ್ಯಾನಿಸಿರುವ ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರ ಪೀಠ, ಅದಕ್ಕೆ ಹಲವಾರು ಐತಿಹಾಸಿಕ ಹಾಗೂ ಸಮಕಾಲೀನ ಪುರಾವೆಗಳನ್ನು ಒದಗಿಸುತ್ತದೆ.

ಸಂವಿಧಾನದಲ್ಲಿ ಪರಿಶಿಷ್ಟ ಜಾತಿಗಳನ್ನು ಘೋಷಿಸುವ ಆರ್ಟಿಕಲ್ 341(1) ಆಗಲಿ, ಆರ್ಟಿಕಲ್ 366 (24) ಆಗಲಿ ಯಾರು ಪರಿಶಿಷ್ಟ ಜಾತಿಗಳು ಎಂಬ ಬಗ್ಗೆ ಖಚಿತವಾದ ಮಾನದಂಡಗಳನ್ನು ಒದಗಿಸುವುದಿಲ್ಲ. ಸಂವಿಧಾನವು ಜಾರಿಯಾದ ಮೇಲೆ ರಾಷ್ಟ್ರಪತಿಗಳು ಆರ್ಟಿಕಲ್ 341ರಂತೆ 1950ರಲ್ಲಿ ಘೋಷಿಸಿದ ಪರಿಶಿಷ್ಟರ ಪಟ್ಟಿ ಬ್ರಿಟಿಷರು 1935ರ ಗವರ್ನ್ ಮೆಂಟ್ ಆಫ್ ಇಂಡಿಯಾ ಆಕ್ಟ್-1935ರಲ್ಲಿ ಸೂಚಿತವಾದ ವಿಧಿಗಳಂತೆ 1936ರಲ್ಲಿ ಘೋಷಿಸಿದ ಗವರ್ನ್‌ಮೆಂಟ್ ಆಫ್ ಇಂಡಿಯಾ (ಶೆಡ್ಯೂಲ್ಡ್ ಕಾಸ್ಟ್ಸ್) ಆರ್ಡರ್- 1936 ಅನ್ನೇ ಆಧರಿಸಿತ್ತು.

1936ರಲ್ಲಿ ಬ್ರಿಟಿಷರು ರೂಪಿಸಿಕೊಂಡ ಪರಿಶಿಷ್ಟ ಮಾನದಂಡಗಳಿಗೆ ಒಂದು ಇತಿಹಾಸವಿದೆ. ಬ್ರಿಟಿಷ್ ಭಾರತದ ಪ್ರಾಂತಗಳಲ್ಲಿ ಮೀಸಲಾತಿಯ ಚರ್ಚೆ 1916ರಿಂದ ಪ್ರಾರಂಭವಾದರೂ ಕೊಲ್ಲಾಪುರದಲ್ಲಿ ಶಾಹು ಮಹಾರಾಜ್ ಮತ್ತು ಒಡೆಯರ್ ಅವರು ಮೈಸೂರು ಪ್ರಾಂತದ ಶೋಷಿತ ಜಾತಿಗಳನ್ನು ಗುರುತಿಸಿ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಒದಗಿಸುವ ಪ್ರಯತ್ನ ಪ್ರಾರಂಭಿಸಿದ್ದರು. ಅವರ ಒತ್ತು ಪ್ರಧಾನವಾಗಿ ಇತರ ಅಬ್ರಾಹ್ಮಣ ಸವರ್ಣೀಯ ಜಾತಿಗಳಿಗೆ ಮೀಸಲಾತಿ ಒದಗಿಸುವುದೇ ಆಗಿದ್ದರೂ ಆಗ ಹಿಂದೂ ಸವರ್ಣೀಯ ಚೌಕಟ್ಟಿನೊಳಗೆ ಬಾರದ ಪ್ರಧಾನವಾಗಿ ಅಸ್ಪಶ್ಯ ಜಾತಿಗಳಿಗೂ ಮೀಸಲಾತಿಯನ್ನು ಕೊಡುವ ಪ್ರಾಥಮಿಕ ಪ್ರಯತ್ನಗಳಿದ್ದವು. ಆಗ ಅಸ್ಪಶ್ಯ ಜಾತಿಗಳನ್ನು ‘ಡಿಪ್ರೆಸ್ಡ್ ಕ್ಲಾಸ್’ ಎಂದು (ವಂಚಿತ ವರ್ಗಗಳು) ಕರೆಯಲಾಗುತ್ತಿತ್ತು.

1916ರಲ್ಲಿ ಬ್ರಿಟಿಷ್ ಭಾರತೀಯ ಪ್ರಾಂತಗಳಲ್ಲಿ ಮೊದಲ ಬಾರಿಗೆ ‘ಡಿಪ್ರೆಸ್ಡ್ ಕ್ಲಾಸ್’ ಎಂದು ಯಾರನ್ನು ಕರೆಯಬೇಕೆಂಬ ಚರ್ಚೆ ಶುರುವಾಗುತ್ತದೆ. ಆದಿವಾಸಿಗಳು, ಅಲೆಮಾರಿ-ಅಪರಾಧಿ ಬುಡಕಟ್ಟುಗಳು ಮತ್ತು ಅಸ್ಪಶ್ಯರನ್ನು ‘ಡಿಪ್ರೆಸ್ಡ್ ಕ್ಲಾಸ್’ ಎಂದು ಪರಿಗಣಿಸಬೇಕೆಂಬ ಅಭಿಮತ ರೂಪುಗೊಳ್ಳುತ್ತದೆ. ಈ ಚರ್ಚೆಯ ಮುಂದುವರಿಕೆಯಾಗಿ ಅಗಿನ ಬ್ರಿಟಿಷ್ ಶೈಕ್ಷಣಿಕ ಕಮಿಷನರ್ ಹೆನ್ರಿ ಶಾರ್ಪ್ ಡಿಪ್ರೆಸ್ಡ್ ಕ್ಲಾಸ್ ಎಂಬ ವರ್ಗೀಕರಣದಲ್ಲಿ ಸವರ್ಣೀಯ ಜಾತಿ ಚೌಕಟ್ಟಿನಿಂದ ಸಂಪೂರ್ಣ ಹೊರಗಿರದ ಆದರೆ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಆದಿವಾಸಿ, ಬುಡಕಟ್ಟು ಮತ್ತು ಕ್ರಿಮಿನಲ್ ಬುಡಕಟ್ಟುಗಳ ಯಾದಿಯನ್ನು ಸೇರಿಸುತ್ತಾರೆ. 1919ರಲ್ಲಿ ಸೌತ್‌ಬರೋ ಆಯೋಗ ಡಿಪ್ರೆಸ್ಡ್ ಕ್ಲಾಸ್ ಎನ್ನಲು ಅಸ್ಪಶ್ಯತೆಯನ್ನು ಮಾನದಂಡವಾಗಿ ಬಳಸುತ್ತದೆ.

1931ರಲ್ಲಿ ಸೆನ್ಸಸ್ ಕಮಿಷನರ್ ಹಟ್ಟನ್, ಯಾರ ಮುಟ್ಟುವಿಕೆಯಿಂದ ಸವರ್ಣೀಯ ಸಮಾಜದವರು ಮಲಿನಗೊಂಡೆವೆಂದು ಭಾವಿಸಿ ಪರಿಶುದ್ಧೀಕರಣಗೊಳ್ಳಬೇಕೆಂದು ಭಾವಿಸುತ್ತಾರೋ ಅವರೇ ಅಸ್ಪಶ್ಯರೆಂಬ ಮಾನದಂಡವನ್ನು ರೂಪಿಸುತ್ತದೆ. ಅದರ ನಿಗದಿಗಾಗಿ ಒಂಭತ್ತು ಸಾಮಾಜಿಕ ಅಭ್ಯಾಸಗಳನ್ನು ಅದು ಪರಿಗಣಿಸಬೇಕೆಂದು ಸೂಚಿಸುತ್ತದೆ- ಆ ಸಮುದಾಯವು ಕೊಡುವ ನೀರನ್ನು ಸವರ್ಣೀಯ ಸಮಾಜ ಬಳಸುತ್ತದೆಯೇ, ಬ್ರಾಹ್ಮಣರು ಆ ಸಮುದಾಯಕ್ಕೆ ಧಾರ್ಮಿಕ ಸೇವೆಗಳನ್ನು ಕೊಡುತ್ತಾರೆಯೇ? ಸಮಾಜದ ಕ್ಷೌರಿಕ, ಮಡಿವಾಳ ಮತ್ತಿತರ ಸಮುದಾಯಗಳು ಆ ಸಮುದಾಯಕ್ಕೆ ಸೇವೆಯನ್ನು ಮಾಡುತ್ತ್ತಾರೆಯೇ ಇಲ್ಲವೇ ಎಂಬ ಮಾನದಂಡಗಳ ಜೊತೆ ಅಸ್ಪಶ್ಯತೆಯ ಮೂಲದಿಂದಲ್ಲದಿದ್ದರೂ, ಅವರು ಮಾಡುವ ವೃತ್ತಿ ಇನ್ನಿತ್ಯಾದಿ ಕಾರಣಗಳಿಗಾಗಿ ಮಾತ್ರ ಮುಟ್ಟಿಸಿಕೊಳ್ಳದ ವರ್ಗಗಳನ್ನು ಕೂಡ ಅಸ್ಪಶ್ಯರೆಂದು ವರ್ಗೀಕರಿಸಬಹುದೆಂದು ಅದು ಘೋಷಿಸುತ್ತದೆ.

1932ರಲ್ಲಿ ದುಂಡು ಮೇಜಿನ ಪರಿಷತ್ತಿನ ಭಾಗವಾಗಿ ಪರಿಶಿಷ್ಟರಿಗೆ ಪ್ರತ್ಯೇಕ ಮತಕ್ಷೇತ್ರ ಏರ್ಪಾಡು ಮಾಡಲು ರೂಪುಗೊಂಡ ಬ್ರಿಟಿಷರ ಇಂಡಿಯನ್ ಫ್ರಾಂಚೈಸಿ ಕಮಿಟಿ ಅಸ್ಪಶ್ಯರ ಪಟ್ಟಿಯಲ್ಲಿ ಆದಿವಾಸಿಗಳನ್ನು ಮತ್ತು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದರೂ ಅಸ್ಪಶ್ಯವಲ್ಲದ ಸವರ್ಣೀಯ ಜಾತಿಗಳನ್ನು ಸೇರಿಸಬಾರದೆಂದು ಶಿಫಾರಸು ಮಾಡಿದರೂ ಭಾರತದಾದ್ಯಂತ ಅಸ್ಪಶ್ಯತೆಯೂ ಏಕರೂಪಿಯಾಗಿಲ್ಲದಿರುವುದನ್ನು ಅದು ದಾಖಲಿಸುತ್ತದೆ. ಉದಾಹರಣೆಗೆ ಉತ್ತರ ಭಾರತದ ಕೆಲವು ಕಡೆಗಳಲ್ಲಿ ದೇವಸ್ಥಾನದ ಪ್ರಾಂಗಣಕ್ಕೆ ಕೆಲವರ ಪ್ರವೇಶವಿರುವುದಿಲ್ಲ. ಇನ್ನು ಕೆಲವರಿಗೆ ದೇವಸ್ಥಾನದ ಗರ್ಭಗುಡಿಗಳಿಗೆ ಪ್ರವೇಶವಿರುವುದಿಲ್ಲ. ಆಗಿನ ಅವಿಭಜಿತ ಅಸ್ಸಾಂ ಕಮಿಷನರ್ ಕೊಟ್ಟ ವರದಿಯಲ್ಲಿ ಅಸ್ಪಶ್ಯ ಎಂದು ಪರಿಗಣಿಸಲ್ಪಟ್ಟ ಜಲ್-ಚಲ್ ಜಾತಿಗಳು ಅನುಭವಿಸುವ ಅಸ್ಪಶ್ಯತೆಗೂ ಮಹಾರ್‌ರಿಗೂ ವ್ಯತ್ಯಾಸವಿರುವುದನ್ನು ದಾಖಲಿಸುತ್ತದೆ. ಅದೇ ರೀತಿ ಬಿಹಾರ, ಒಡಿಶಾಗಳು ಕೂಡ ತಮ್ಮ ಪ್ರಾಂತಗಳಲ್ಲಿನ ಅಸ್ಪಶ್ಯತೆಯೂ ಮದ್ರಾಸ್ ಪ್ರಾಂತದಲ್ಲಿರುವ ಅಥವಾ ಇಡೀ ದಕ್ಷಿಣ ಭಾರತದಲ್ಲಿರುವ ಅಸ್ಪಶ್ಯತೆಯಷ್ಟು ತೀವ್ರವಾಗಿಲ್ಲ ಎಂದು ದಾಖಲಿಸುತ್ತಾರೆ. ಫ್ರಾಂಚೈಸಿ ಸಮಿತಿಯ ಸದಸ್ಯರಾದ ರಾಂಬೆ, ಚಿಂತಾಮಣಿ ಮತ್ತು ಬಖಾಲೆಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಸ್ಪಶ್ಯತೆಯು ಮದ್ರಾಸ್, ಮುಂಬೈ ಮತ್ತು ಸೆಂಟ್ರಲ್ ಪ್ರಾಂತಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದೆಯೆಂದೂ, ಉಳಿದ ಕಡೆ ಇರುವ ಅಸ್ಪಶ್ಯತೆಯು ಹುಟ್ಟಿನ ಕಾರಣದಿಂದಲ್ಲದೇ, ವೃತ್ತಿಯ ಕಾರಣದಿಂದ ಮಾತ್ರ ಅಸ್ತಿತ್ವದಲ್ಲಿದೆಯೆಂದೂ ವಾದಿಸುತ್ತಾರೆ. ಆದ್ದರಿಂದ ಅವರನ್ನು ಅಸ್ಪಶ್ಯರೆಂದು ಪರಿಗಣಿಸಬಾರದೆಂದು ವಾದಿಸುತ್ತಾರೆ.

ಆಗ ಈ ವಾದದಲ್ಲಿ ಮಧ್ಯಪ್ರವೇಶ ಮಾಡುವ ಡಾ. ಅಂಬೇಡ್ಕರ್ ಅವರು ಅಸ್ಪಶ್ಯತೆಯ ಬಗ್ಗೆ ಸಮಾನ ಮಾನದಂಡಗಳನ್ನು ಹೇರುವುದು ತಪ್ಪೆಂದೂ, ಕಠಿಣ ಅಸ್ಪಶ್ಯತೆ ಅನುಭವಿಸುವವರು ಮಾತ್ರ ಅಸ್ಪಶ್ಯರೆಂದು ಪರಿಗಣಿಸುವುದು ತಪ್ಪು. ಏಕೆಂದರೆ ಅವರೆಲ್ಲರೂ ಮುಟ್ಟಿಸಿಕೊಳ್ಳುವುದು ಪಾಪ ಎಂಬ ಸಮಾನ ಬ್ರಾಹ್ಮಣವಾದಿ ಗ್ರಹಿಕೆಯ ಬಾಧಿತರೇ ಆಗಿರುತ್ತಾರೆಂದು ಸ್ಪಷ್ಟಪಡಿಸುತ್ತಾರೆ.

ಅಷ್ಟು ಮಾತ್ರವಲ್ಲ. 1950ರಲ್ಲಿ ಪರಿಶಿಷ್ಟ ಪಟ್ಟಿಯನ್ನು ಮೊತ್ತ ಮೊದಲಿಗೆ ರಾಷ್ಟ್ರಪತಿಗಳು ಘೋಷಿಸಿದಾಗ ಇಂದಿನ ಮಧ್ಯಪ್ರದೇಶದಲ್ಲಿ 25 ಜಾತಿಗಳನ್ನು ಪರಿಶಿಷ್ಟರೆಂದು ವರ್ಗೀಕರಿಸಿದ್ದರೂ ಅದರಲ್ಲಿ ಒಂಭತ್ತು ಜಾತಿಗಳು ಮಾತ್ರ ರಾಜ್ಯಾದ್ಯಂತ ಎಸ್‌ಸಿ ಎಂದು ವರ್ಗೀಕರಿಸಲ್ಪಡುತ್ತಿದ್ದವು.

ಹೀಗಾಗಿ ಅಸ್ಪಶ್ಯತೆಯೇ ಎಸ್‌ಸಿ ವರ್ಗೀಕರಣಕ್ಕೆ ಮಾನದಂಡವಾದರೂ, ಅಸ್ಪಶ್ಯತೆಯ ತೀವ್ರತೆಯಲ್ಲಿ ಮತ್ತು ಅದರ ಬಾಧೆಯಲ್ಲಿ ಭಿನ್ನತೆ ಇರುವುದನ್ನು ಇದು ಸ್ಪಷ್ಟಪಡಿಸುತ್ತದೆ. ಹೀಗಾಗಿ ಎಸ್‌ಸಿ ಒಳಗಿನ ಜಾತಿಗಳನ್ನು ಏಕರೂಪಿಯಾದ ಬಾಧಿತರೆಂದು ಪರಿಗಣಿಸಲಾಗದು ಎಂದು ಸುಪ್ರೀಂ ಆದೇಶ ಸ್ಪಷ್ಟಪಡಿಸುತ್ತದೆ.

ಅದರ ಜೊತೆಗೆ ಸ್ವಾತಂತ್ರ್ಯಾನಂತರದಲ್ಲಿ ಪರಿಶಿಷ್ಟರ ವರ್ಗೀಕರಣದ ನಂತರ 75 ವರ್ಷಗಳಾದ ನಂತರವೂ ಪರಿಶಿಷ್ಟ ಜಾತಿಗಳೊಳಗೂ ಮುಂದುವರಿದಿರುವ ಉಪಜಾತಿಗಳ ಸಾಮಾಜಿಕ ತಾರತಮ್ಯ, ಸಾಪೇಕ್ಷವಾಗಿ ಕೆಲವು ಜಾತಿಗಳ ಹೆಚ್ಚಿನ ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ತಳಮಟ್ಟದ ಅಧ್ಯಯನದ ಮೂಲಕ ಸಾಬೀತು ಪಡಿಸಿರುವ ಉಷಾ ಮೆಹ್ರಾ ಆಯೋಗ ಇನ್ನಿತರ ವರದಿಗಳನ್ನು ಉಲ್ಲೇಖಿಸುತ್ತದೆ.

ಹೀಗಾಗಿ ಪರಿಶಿಷ್ಟ ವರ್ಗವೆಂದು ವರ್ಗೀಕರಿಸಲ್ಪಟ್ಟ ಜಾತಿಗಳು ಉಳಿದ ಸಮಾಜಕ್ಕೆ ಹೋಲಿಸಿದರೆ ಸಮಾನ ಶೋಷಿತರೇ ಆದರೂ, ಸಮಾನವಾಗಿ ಬಾಧಿತರಲ್ಲ. ಹೀಗಾಗಿ ಪರಿಶಿಷ್ಟ ಜಾತಿಯೆಂದರೆ ಏಕರೂಪಿಯಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಟ್ಟವನ್ನು ಹೊಂದಿರುವ ವರ್ಗವಾಗುವುದಿಲ್ಲ, ಏಕೆಂದರೆ ಅವುಗಳ ಒಳಗೆ ಕೆಲವು ಜಾತಿಗಳು ಸಾಪೇಕ್ಷವಾಗಿ ಹೆಚ್ಚು ಬಾಧಿತರು ಎಂಬ ತೀರ್ಮಾನಕ್ಕೆ ಬಂದು ಪರಿಶಿಷ್ಟ ಜಾತಿಗಳೊಳಗೆ ಮರು ವರ್ಗೀಕರಣ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಗಳಿಗೆ ಪೂರಕವೇ ಹೊರತು ವ್ಯತಿರಿಕ್ತವಲ್ಲ ಎಂದು ಆದೇಶಿಸಿದೆ.

ಆದ್ದರಿಂದ ಮೀಸಲಾತಿ ಏಕೆ ಬೇಕೋ ಅದೇ ಕಾರಣದ ಮುಂದುವರಿಕೆಯಾಗಿ ಒಳಮೀಸಲಾತಿಯೂ ಅತ್ಯಗತ್ಯವಾಗಿದೆ.

ಒಳಮೀಸಲಾತಿ-ಮೇಲಿಂದ ಕೊಟ್ಟಿದ್ದಲ್ಲ, ಶೋಷಿತರು ಆಗ್ರಹಿಸಿದ್ದು ಮೀಸಲಾತಿಯ ಮಿತಿಗಳೇನೇ ಇದ್ದರೂ ಪರಿಶಿಷ್ಟ ಜಾತಿಗಳೊಳಗಿನ ಕೆಲವು ಜಾತಿಗಳು ಹಲವು ಐತಿಹಾಸಿಕ ಕಾರಣಗಳಿಗಾಗಿಯೇ ಉಳಿದ ಪರಿಶಿಷ್ಟ ಸೋದರರಿಗಿಂತ ಹೆಚ್ಚಿನ ಅಸ್ಪಶ್ಯತೆ ಮತ್ತು ಹಿಂದುಳಿದಿರುವಿಕೆಯನ್ನು ಅನುಭವಿಸುತ್ತಾ ಬಂದಿರುವುದು ಸ್ಪಷ್ಟ ಮತ್ತು ವಾಸ್ತವ. ಹೀಗಾಗಿಯೇ 1990ರ ದಶಕದಿಂದಲೂ ದಕ್ಷಿಣ ಭಾರತದ ಅವಿಭಜಿತ ಆಂಧ್ರ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಮಾದಿಗ ಮತ್ತು ಮಾದಿಗ ಸಂಬಂಧಿತ ಸಮುದಾಯಗಳು, ಆರುಂಧತಿಯಾರ್ ಸಮುದಾಯಗಳು ಒಳಮೀಸಲಾತಿಗಾಗಿ ದಶಕಗಳಿಂದ ಬೀದಿಗಳಲ್ಲಿ ಹೋರಾಡುತ್ತಾ ಬಂದಿವೆ. ಹೀಗಾಗಿ ಒಳಮೀಸಲಾತಿ ಎಂಬುದು ಶೋಷಿತರಲ್ಲಿ ಶೋಷಿತರ ಸಂಘಟಿತ ಆಗ್ರಹವಾಗಿದೆ. ಉತ್ತರ ಭಾರತದ ದಲಿತ ಬಂಧುಗಳಲ್ಲಿ ಈ ಹೋರಾಟಗಳ ಬಗ್ಗೆ ಮಾಹಿತಿಯ ಕೊರತೆ ಅವರು ಕೊಡುತ್ತಿರುವ ಹೇಳಿಕೆಗಳಲ್ಲಿ ಸ್ಪಷ್ಟವಾಗುತ್ತಿದೆ. ಆದ್ದರಿಂದ ಒಳಮೀಸಲಾತಿ ಶೋಷಿತರ ಹೋರಾಟದ ಬೇಡಿಕೆ. ಅದನ್ನು ದಲಿತರನ್ನು ಒಡೆಯಲು ಆಳುವವರ್ಗ ತನ್ನಂತೆ ತಾನೇ ಕೊಡುತ್ತಿರುವ ಭಿಕ್ಷೆಯಲ್ಲ. ಆದರೂ ಇದರಲ್ಲಿ ದಲಿತರನ್ನು ಒಡೆದಾಳುವ ಕುತಂತ್ರ ಇಲ್ಲ ಎಂದೇನೂ ಅಲ್ಲ. ಅದನ್ನು ಬಿಜೆಪಿ ಒಂದು ರೀತಿಯಲ್ಲಿ ಕಾಂಗ್ರೆಸ್ ಮತ್ತೊಂದು ರೀತಿಯಲ್ಲಿ ಮಾಡಿಕೊಳ್ಳುತ್ತಲೇ ಬಂದಿದೆ. ಅದರ ನಡುವೆಯೂ ಶೋಷಿತರಿಗೆ ಈ ಜಯ ಸಿಕ್ಕಿದೆ.

ಐಡೆಂಟಿಟಿ ರಾಜಕಾರಣದ ಅಪಾಯ ಮತ್ತು ಅವಕಾಶ

ಆದರೂ ಒಳಮೀಸಲಾತಿಯು ದಲಿತ ಎಂಬ ಕಷ್ಟಪಟ್ಟು ಕಟ್ಟಿಕೊಂಡ ಶೋಷಿತರ ಐಡೆಂಟಿಟಿಯನ್ನು ಉಪಜಾತಿಗಳಾಗಿ ಒಡೆಯುವುದಿಲ್ಲವೇ? ಆಳುವ ವರ್ಗಗಳು ಶೋಷಿತ ವರ್ಗಗಳ ರಾಜಕಾರಣವನ್ನು ಮುರಿಯಲೆಂದೇ ಐಡೆಂಟಿಟಿ ರಾಜಕಾರಣವನ್ನು ಹುಟ್ಟಿಹಾಕಿದ್ದಲ್ಲವೇ ಎಂಬ ಆತಂಕದ ಕಾಳಜಿಯನ್ನು ಕೆಲವು ದಲಿತ ಮಿತ್ರರು ಮುಂದಿಡುತ್ತಿದ್ದಾರೆ. ಆದರೆ ಅವರ ವಾದಗಳಲ್ಲಿ ಏಕಮುಖತೆ ಇದೆ. ಇದನ್ನು ಅಂಬೇಡ್ಕರ್ ಅವರು ಮುಂಬೈ ಗಿರಣಿ ಕಾರ್ಮಿಕ ಐಕ್ಯತೆಯ ವಿಷಯ ಬಂದಾಗ 1939ರ ಭಾಷಣದಲ್ಲಿ ತುಂಬಾ ಸ್ಪಷ್ಟವಾಗಿ ವಿವರಿಸುತ್ತಾರೆ. ಮುಂಬೈ ಗಿರಣಿ ಕಾರ್ಮಿಕರೆಲ್ಲರ ಬಾಧೆ ಒಂದೇ ಆಗಿದ್ದರೂ. ಕೆಲವು ನಿರ್ದಿಷ್ಟ ಕೆಲಸಗಳನ್ನು ಮಾಡಲು ದಲಿತ ಕಾರ್ಮಿಕರಿಗೆ ನಿರ್ಬಂಧವಿತ್ತು. ನೂಲಿಗೆ ಎಂಜಲು ಹಚ್ಚಿ ಯಂತ್ರಕ್ಕೆ ಸಿಕ್ಕಿಸುವಂತಹ ಕೆಲಸಕ್ಕೆ ದಲಿತರಿಗೆ ಅವಕಾಶ ಮಾಡಿಕೊಡಲು ಉಳಿದ ಸವರ್ಣೀಯ ಕಾರ್ಮಿಕರಿಗೂ ಇಷ್ಟವಿರಲಿಲ್ಲ. ಆಗ ಗಿರಣಿ ಕಾರ್ಮಿಕರನ್ನು ಸಂಘಟಿಸುತ್ತಿದ್ದ ಕಮ್ಯುನಿಸ್ಟ್ ಕಾರ್ಮಿಕ ನಾಯಕರು ಕಾರ್ಮಿಕರ ಐಕ್ಯತೆಯನ್ನು ಉಳಿಸಿಕೊಳ್ಳಲು ಈ ಪ್ರಶ್ನೆಯನ್ನು ತಳ್ಳಿಹಾಕಲು ಪ್ರಯತ್ನಿಸುತ್ತಾರೆ. ಎಲ್ಲಿಯತನಕ ಕಾರ್ಮಿಕರೊಳಗೂ ಇರುವ ಈ ಜಾತಿವಾದಿ ಬ್ರಾಹ್ಮಣ್ಯದಿಂದ ಆಗುತ್ತಿರುವ ಅನ್ಯಾಯದೊಳಗಿನ ಒಳ ಅನ್ಯಾಯದ ನಿವಾರಣೆಯಾಗುವುದಿಲ್ಲವೋ ಅಲ್ಲಿಯವರೆಗೆ ಕಾರ್ಮಿಕ ಐಕ್ಯತೆ ಸಾಧ್ಯವಾಗುವುದಿಲ್ಲ ಎಂದು ಅಂಬೇಡ್ಕರ್ ಎಚ್ಚರಿಸುತ್ತಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲೂ ಅಸ್ತಿತ್ವದಲ್ಲಿರುವ ವ್ಯವಸ್ಥೆಯೊಳಗಿರುವ ಜಾತಿಯಾಧಾರಿತ ತಾರತಮ್ಯವನ್ನು ನಿರ್ಲಕ್ಷಿಸಿ ಅಥವಾ ಕುರುಡಾಗಿ ರಾಷ್ಟ್ರ ಕಟ್ಟಲು, ವರ್ಗ ಆಧಾರಿತ ಐಕ್ಯ ಹೋರಾಟಗಳನ್ನು ಕಟ್ಟಲು ಪ್ರಯತ್ನಗಳು ಮುಂದುವರಿದವು. ಆದರೆ ಜಾತಿ ಎಂಬ ಐಡೆಂಟಿಟಿ ಆಧಾರಿತ ತಾರತಮ್ಯ ವಾಸ್ತವವಾಗಿದ್ದರಿಂದ ಜಾತಿ ಆಧಾರಿತ ಶೋಷಣೆಯ ವಿರುದ್ಧ ಶೋಷಿತ ಜಾತಿ ಉದ್ದೇಶಿತ ಹೋರಾಟಗಳು ಹುಟ್ಟಿಕೊಂಡವು.

ಇದು ಶೋಷಿತ ಪ್ರಜ್ಞೆಯ ಪ್ರಜಾತಂತ್ರೀಕರಣವೇ ವಿನಾ ಒಡೆದಾಳುವ ಶೋಷಕ ವರ್ಗಗಳ ಐಡೆಂಟಿಟಿ ರಾಜಕಾರಣದ ಹುನ್ನಾರವಲ್ಲ.

ಹಾಗೆಯೇ ಪರಿಶಿಷ್ಟ ವರ್ಗದೊಳಗಿನ ಒಳಮೀಸಲಾತಿಗಾಗಿ ಅತಿ ಶೋಷಿತ ಜಾತಿಗಳ ಕೂಗು ಹುಟ್ಟಿರುವುದು ಪರಿಶಿಷ್ಟ ಜಾತಿಗಳೊಳಗೆ ಸಾಪೇಕ್ಷ ತಾರತಮ್ಯ ಇರುವ ವಾಸ್ತವದಿಂದ. ಹಾಗೆ ನೋಡಿದರೆ ದಲಿತ ಸಮುದಾಯಗಳೊಳಗೆ ಇರುವ ದಲಿತ ಅಲೆಮಾರಿ ಜಾತಿಗಳು ಉಳಿದೆಲ್ಲಾ ದಲಿತ ಜಾತಿಗಳಿಗಿಂತ ಅತ್ಯಂತ ಅನಾಥರಾಗಿ, ಅತ್ಯಂತ ಹಿಂದುಳಿದವರಾಗಿದ್ದಾರೆ. ಈ ತಾರತಮ್ಯವನ್ನು ಸಾಪೇಕ್ಷವಾಗಿ ಮುಂದುವರಿದ ಜಾತಿಗಳು ಮುಂದಾಗಿಯೇ ಗ್ರಹಿಸಿ ಪಾಲನ್ನು ಹಂಚಿಕೊಂಡು ತಿನ್ನಲು ಮುಂದಾಗಿದ್ದರೆ ಆಯಾ ಜಾತಿಗಳು ದಲಿತ ಎನ್ನುವ ಐಡೆಂಟಿಟಿಯಿಂದ ಲಾಭವಿಲ್ಲವೆಂದು ಪ್ರತ್ಯೇಕವಾಗಿ ತಮ್ಮ ಜಾತಿ ಹೆಸರುಗಳಲ್ಲಿ ಸಂಘಟಿತರಾಗಿ ಪಾಲು ಕೇಳಲು ಮುಂದಾಗುತ್ತಿರಲಿಲ್ಲ. ಈ ಬೆಳವಣಿಗೆಯನ್ನು ಬಳಸಿಕೊಂಡು ಬಿಜೆಪಿಯಂಥ ಪಕ್ಷಗಳು ದಲಿತ ಐಡೆಂಟಿಟಿಯನ್ನೇ ಒಡೆಯಲು ಅವಕಾಶವೂ ಇರುತ್ತಿರಲಿಲ್ಲ.

ಪಾಠವಿಷ್ಟೆ. ಶೋಷಣೆಯು ವಾಸ್ತವವಾಗಿದ್ದಾಗ ಅದರ ನಿರಾಕರಣೆಯಿಂದ ಐಕ್ಯತೆ ಸಾಧ್ಯವಾಗುವುದಿಲ್ಲ. ಎಲ್ಲ ಬಗೆಯ ಶೋಷಣೆ ಮತ್ತು ಒಳಶೋಷಣೆಯ ನಿವಾರಣೆಯಿಂದ ಮಾತ್ರ ಐಕ್ಯತೆ ಸಾಧ್ಯವಾಗುತ್ತದೆ.

ಶೋಷಿತರ ಐಡೆಂಟಿಟಿ ಹೋರಾಟಗಳಲ್ಲಿ ನ್ಯಾಯಯುತ ಪಾಲು ಕೇಳುವ ಪ್ರಜಾತಾಂತ್ರಿಕ ಆಶಯವಿರುತ್ತದೆ ಮತ್ತು ಅದು ಅಸ್ತಿತ್ವದಲ್ಲಿರುವ ಐಡೆಂಟಿಟಿಗಳು ತಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸಿದಾಗ ಹುಟ್ಟಿಕೊಳ್ಳುತ್ತವೆ. ಪರಿವರ್ತನೆಯ ಹೋರಾಟಗಳು ಶೋಷಿತರ ಐಡೆಂಟಿಟಿಯನ್ನು ಸಮಾನವಾಗಿ ಒಳಗೊಂಡು ವಿಸ್ತಾರಗೊಂಡಾಗ ಮಾತ್ರ ಸಾಮಾಜಿಕ ನ್ಯಾಯ ಸಾಧನೆಯಾಗುತ್ತದೆ. ಒಡೆದಾಳುವ ಆಳುವವರ್ಗದ ಕುತಂತ್ರ ವಿಫಲವಾಗುತ್ತದೆ.

ಮೀಸಲಾತಿ ಮತ್ತು ಒಳಮೀಸಲಾತಿಗಳ ಇತಿಮಿತಿ

ಇದೆಲ್ಲದರಾಚೆಗೆ ಮೀಸಲಾತಿಗೂ ಮತ್ತು ಒಳಮೀಸಲಾತಿಗೂ ಒಂದು ಇತಿಮಿತಿಯಿದ್ದೇ ಇದೆ. ಮೀಸಲಾತಿ ಶೋಷಿತ ಸಮುದಾಯಗಳ ಒಂದು ಸ್ತರಕ್ಕೆ ಮಾತ್ರ ಆರ್ಥಿಕ ಮತ್ತು ಶೈಕ್ಷಣಿಕ ಮೇಲ್ಚಲನೆಯನ್ನು ತಂದುಕೊಡುತ್ತದೆ. ಅದೂ ಕೂಡ ಇಲ್ಲದ ಕಡೆ ಇಷ್ಟಾದರೂ ಆಗುವುದು ಬೇಕೇಬೇಕು. ಆದರೆ ಸಂವಿಧಾನದ ಆಶಯವಾಗಿರುವ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯಗಳು ಕೇವಲ ಒಂದು ಸ್ತರದ ವಿಮೋಚನೆಯನ್ನು ಉದ್ದೇಶಿಸಿಲ್ಲ. ಇಡೀ ಶೋಷಿತ ಸಮುದಾಯಗಳ ವಿಮೋಚನೆ ಮತ್ತು ಸರ್ವ ಸಮಾನತೆಯನ್ನು ಆಶಿಸುತ್ತದೆ.

ಹೀಗಾಗಿ ಮೀಸಲಾತಿಗಳು ಪ್ರಾತಿನಿಧ್ಯದ ಪ್ರಭುತ್ವದ ಪ್ರಜಾತಂತ್ರೀಕರಣಕ್ಕೆ ಸಾಧನವಾದರೂ ಅದು ಇಡೀ ಸಮುದಾಯಕ್ಕೆ ವಿಮೋಚನೆಯನ್ನು ತಂದುಕೊಂಡುವುದಿಲ್ಲ. ಅದರಲ್ಲೂ ಖಾಸಗೀಕರಣ-ಜಾಗತೀಕರಣದ ಈ ಹೊತ್ತಿನಲ್ಲಿ ಪ್ರಭುತ್ವವೇ ಕಿರಿದಾಗುತ್ತಿರುವಾಗ, ಶೇ. 50ರ ಅವೈಜ್ಞಾನಿಕ ಬ್ರಾಹ್ಮಣಶಾಹಿ ಮೇಲ್ಮಿತಿ, ಬ್ಯಾಕ್ ಲಾಗ್ ಏರಿಕೆಗಳನ್ನು ಪ್ರಶ್ನಿಸದೆ- ಬದಲಿಸದೆ ಒಳಮೀಸಲಾತಿ ಹೆಚ್ಚು ಪರಿಣಾಮಕಾರಿಯಾಗದು. ಇಂದಿನ ಆರ್ಥಿಕತೆಯಲ್ಲಿ ಶೇ. 1ರಷ್ಟು ಭಾರತೀಯ ಕುಬೇರರು ಶೇ. 32ರಷ್ಟು ಸಂಪತ್ತನ್ನು ಹಾಗೂ ಶೇ. 50ರಷ್ಟು ಶೋಷಿತ ಸಮುದಾಯ ಕೇವಲ ಶೇ. 3ರಷ್ಟು ಸಂಪತ್ತನ್ನು ಹೊಂದಿರುವಂತಹ ಅಸಮಾನತೆ ಮುಗಿಲು ಮುಟ್ಟುತ್ತಿರುವಾಗ ಈ ಅಸಮಾನ ವ್ಯವಸ್ಥೆ ಬದಲಾಗದೆ ಶೋಷಿತರ ವಿಮೋಚನೆ ಸಾಧ್ಯವಾಗದು. ವ್ಯವಸ್ಥೆ ಬದಲಾಗಬೇಕೆಂದರೆ ಶೋಷಿತರಲ್ಲಿ ಮೀಸಲಾತಿ-ಒಳಮೀಸಲಾತಿಯ ಅಗತ್ಯ ಹಾಗೂ ಮಿತಿಗಳ ಬಗ್ಗೆ ಅರಿವು ಹಾಗೂ ಬಂಡೆಯಂಥ ಐಕ್ಯತೆ ಹಾಗೂ ಹೋರಾಟ ಅತ್ಯಗತ್ಯ. ಆದ್ದರಿಂದ ಆ ರಾಜಕೀಯ ಎಚ್ಚರವನ್ನು ಸಮಾನತೆಯ ಸಂಘರ್ಷ ಕಾಪಿಟ್ಟುಕೊಳ್ಳುವುದೂ ಅತ್ಯಗತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News