ನೆರೆದೇಶಗಳ ಜೊತೆಗೆ ನಾವು

ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆ ಪಡೆಯಲು ಭಾರತ ನೆರವಾಗಿತ್ತು. ಭಾರತ ಮತ್ತು ಶ್ರೀಲಂಕಾ ವಸಾಹತುಶಾಹಿ ಇತಿಹಾಸವನ್ನು ಹೊಂದಿರುವ ದೇಶಗಳು ಮತ್ತು ಹಾಗಾಗಿಯೇ ಒಂದೇ ರೀತಿಯ ಸಾಂವಿಧಾನಿಕ ಮತ್ತು ಶೈಕ್ಷಣಿಕ ಪಥಗಳನ್ನು ಹೊಂದಿವೆ. ಭಾರತ ಮತ್ತು ಈ ಮೂರೂ ದೇಶಗಳ ನಡುವಿನ ಸಂಬಂಧಗಳು ಸುಗಮವಾಗಿದ್ದರೆ, ಖಂಡಿತವಾಗಿಯೂ ಅದು ದೊಡ್ಡ ಮತ್ತು ಹೆಚ್ಚು ಶಕ್ತಿಶಾಲಿ ರಾಷ್ಟ್ರ ಒಂದು ಕ್ಷಣ ಯೋಚಿಸುವ ಹಾಗೆ ಮಾಡಬಲ್ಲುದು.

Update: 2024-08-24 06:38 GMT

ನರೇಂದ್ರ ಮೋದಿ ಅವಧಿಯಲ್ಲಿ ಭಾರತ ವಿಶ್ವಗುರುವಾಗಲು

ಸಜ್ಜಾಗಿದೆ ಎಂದು ಸರಕಾರದ ಗುಣಗಾನ ಪ್ರಿಯರು ಹೇಳಿಕೊಂಡಿದ್ದಾರೆ. ನಮ್ಮ ನಾಗರಿಕತೆಯ ಪ್ರಾಚೀನತೆ, ನಮ್ಮ ಶ್ರೀಮಂತ ತಾತ್ವಿಕ ಸಂಪ್ರದಾಯಗಳು ಮತ್ತು ನಮ್ಮ ವಿಶಿಷ್ಟವಾದ ಆಧ್ಯಾತ್ಮಿಕ ಆಚರಣೆಗಳು ಸಾಂಸ್ಕೃತಿಕವಾಗಿ ನಮ್ಮನ್ನು ಮುಂಚೂಣಿಯಲ್ಲಿ ಇರಿಸಿದೆ ಎಂದು ಹೇಳಲಾಗಿದೆ. ಈಗ, ಭಾರತದ ಆರ್ಥಿಕ ಮತ್ತು ತಾಂತ್ರಿಕ ಯಶಸ್ಸಿನೊಂದಿಗೆ, ನಮ್ಮ ಜಾಗತಿಕ ನಾಯಕತ್ವವನ್ನು ಜೋಡಿಸಲಾಗುತ್ತಿದೆ.

ಇದು ತೀವ್ರವಾಗಿ ವೈಯಕ್ತೀಕರಿಸಲಾಗಿರುವ ವಾದ. ಆದ್ದರಿಂದ ಭಾರತ ಮಾತ್ರವಲ್ಲ, ನರೇಂದ್ರ ಮೋದಿಯವರೇ ಜಗತ್ತನ್ನು ಮುನ್ನಡೆಸುತ್ತಿದ್ದಾರೆ ಎಂದು ಬಿಂಬಿಸಲಾಗಿದೆ. ಹಾಗಾಗಿ ವಿದೇಶದಲ್ಲಿ ನಡೆದ ಜಿ 20 ಸಭೆಗಳ ಎಡಿಟ್ ಮಾಡಿದ ಛಾಯಾಚಿತ್ರಗಳು ಪ್ರಧಾನಿಯನ್ನು ಖ್ಯಾತಿಯ ಮುಂಚೂಣಿಯಲ್ಲಿ ತೋರಿಸುತ್ತಿದ್ದವು. ಅಮೆರಿಕದ ಅಧ್ಯಕ್ಷರು, ಫ್ರೆಂಚ್ ಅಧ್ಯಕ್ಷರು, ಬ್ರಿಟಿಷ್ ಪ್ರಧಾನಿ ಮೊದಲಾದವರೊಂದಿಗೆ ಭವ್ಯವಾದ ಕಟ್ಟಡದ ಮೆಟ್ಟಿಲುಗಳಿಂದ ಕೆಳಗಿಳಿಯುವುದನ್ನು ತೋರಿಸುವ ಚಿತ್ರಗಳು ಅವು. ಅಂತಹ ಪ್ರಚಾರ ನಿರ್ದಿಷ್ಟ ಪರಿಣಾಮವನ್ನು ಬೀರದೇ ಇರಲಿಲ್ಲ. 2023ರಲ್ಲಿ ಭಾರತ ಜಿ 20 ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ, ದಿಲ್ಲಿ ಮೆಟ್ರೋದಲ್ಲಿ ಯಾರೋ ಒಬ್ಬರು, ಮೋದಿ ಕೇವಲ ಭಾರತಕ್ಕೆ ಪ್ರಧಾನಿ ಅಲ್ಲ, ಆ 20 ದೇಶಗಳಿಗೂ ಪ್ರಧಾನಿ ಎಂದಿದ್ದರು.

ಭಾರತ ವಿಶ್ವಮಿತ್ರ ಎಂದು ಈಗ ಹೇಳಲಾಗುತ್ತಿದೆ. ಇದು ಮೋದಿ ಆಡಳಿತದ ಮಹತ್ವಾಕಾಂಕ್ಷೆಗಳ ವಿಶಿಷ್ಟವಾದ ಪತನ. ಭಾರತ ಇನ್ನೂ ಜಗತ್ತಿಗೆ ಕಲಿಸುವ ಸ್ಥಿತಿಯಲ್ಲಿಲ್ಲ, ಆದರೆ ವಿಶ್ವದ ಪ್ರತಿಯೊಂದು ದೇಶದೊಂದಿಗೆ ಸ್ನೇಹವನ್ನು ಹೊಂದಿದೆ.

ಭಾರತದ ಈ ಹೊಸ ಸ್ವವಿವರಣೆ ರಾಜಕೀಯ ಚರ್ಚೆಯನ್ನು ಏಕೆ ಪ್ರವೇಶಿಸಿತು ಎಂಬುದು ಊಹೆಯ ಮಟ್ಟದಲ್ಲಿಯೇ ಉಳಿಯಬೇಕು. ಏಕೆಂದರೆ, ದಿಲ್ಲಿ ಮೆಟ್ರೋದಲ್ಲಿ ಆರಾಧಿಸುವ ಭಕ್ತರಂತೆ, ಸರಕಾರದ ಗುಣಗಾನ ಮಾಡುವವರಿಗೆ, ಭಾರತದ ಜಿ 20 ಮುಂದಾಳತ್ವ ಅತ್ಯಂತ ತಾತ್ಕಾಲಿಕವಾಗಿದೆ ಮತ್ತು ಬಹಳ ಬೇಗ ಇಲ್ಲವಾಗುತ್ತದೆ ಎಂದು ತಿಳಿದಿರಲಿಲ್ಲವೆ? ಅಥವಾ ನಮ್ಮ ಆರ್ಥಿಕತೆ, ಅದರ ಬಗ್ಗೆ ಜನರು ಹೊಂದಿದ್ದ ಗಗನಕ್ಕೇರಿರುವ ನಿರೀಕ್ಷೆಗಳನ್ನು ಹಿಡಿದಿಟ್ಟುಕೊಳ್ಳಲಿಲ್ಲವೇ? ಅಥವಾ ನಮ್ಮ ಗಡಿಯಲ್ಲಿ ಚೀನಾದ ಅತಿಕ್ರಮಣಗಳು ಮತ್ತು ಅವುಗಳ ಬಗ್ಗೆ ಮಾತನಾಡಲು ಪ್ರಧಾನಿ ಹಿಂಜರಿಯುವುದು ಜಾಗತಿಕ ನಾಯಕತ್ವದ ಕುರಿತ ನಮ್ಮ ಕೊಚ್ಚಿ ಕೊಳ್ಳುವಿಕೆಯನ್ನು ಪೊಳ್ಳಾಗಿಸಿದೆಯೇ?

ಅದೇನೇ ಇದ್ದರೂ, ಮಾತಿನಲ್ಲಿ ಒಂದು ವಿಶಿಷ್ಟವಾದ ಬದಲಾವಣೆಯಾಗಿದೆ ಎಂಬುದು ಸತ್ಯ. ಬಹುಶಃ ಭಕ್ತರ ತಲೆಯೊಳಗೆ ಪ್ರಾಚೀನ ಹಿಂದೂಗಳು ವಿಮಾನ ಮತ್ತು ಪ್ಲಾಸ್ಟಿಕ್ ಸರ್ಜರಿ ಕಂಡುಹಿಡಿದಿದ್ದರು ಎಂಬ ನಂಬಿಕೆಯೇ ಇದ್ದು, ಭಾರತ ಈಗಾಗಲೇ ವಿಶ್ವಗುರುವಾಗಿದೆ ಅಥವಾ ಶೀಘ್ರದಲ್ಲೇ ಆಗಲಿದೆ ಎಂಬ ಕಲ್ಪನೆಯೇ ಉಳಿದುಬಿಟ್ಟಿದೆ. ಆದರೆ ಆಳುವ ಪಕ್ಷದ ಹೆಚ್ಚು ವಾಸ್ತವಿಕ ಮತ್ತು ಹೆಚ್ಚು ರಾಜಕೀಯವಾಗಿ ಪ್ರಮುಖವಾದ ವಲಯಗಳಲ್ಲಿ ವಿಶ್ವಮಿತ್ರ ಎಂಬ ಪದವನ್ನು ಹೆಚ್ಚಾಗಿ ಬಳಸಲಾಗುತ್ತಿದೆ.

ಬಾಂಗ್ಲಾದೇಶದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಮಂದ, ಅತಿಶಯದ್ದಲ್ಲದ ಅಹಂಕಾರವನ್ನು ಸಹ ಕೈಬಿಡುವ ಸಮಯ ಇದಾಗಿರಬಹುದು. ನಮ್ಮ ನೆರೆಹೊರೆಯ ದೇಶಗಳ ನಾಗರಿಕರು ಭಾರತವನ್ನು ವಿಶ್ವಾಸಾರ್ಹ ಅಥವಾ ವಿಶ್ವಾಸಾರ್ಹ ಸ್ನೇಹಿತ ಎಂದು ಪರಿಗಣಿಸುವುದಿಲ್ಲ ಎನ್ನಿಸುತ್ತದೆ, ಶೇಕ್ ಹಸೀನಾ ಅವರ ನಿರಂಕುಶಾಧಿಕಾರದ ಮಾರ್ಗಗಳನ್ನು ಮೋದಿ ಸರಕಾರವೂ ರೂಢಿಸಿಕೊಂಡಿರುವುದರಿಂದ ಅನೇಕ ಬಾಂಗ್ಲಾದೇಶಿಗಳು ಭಾರತೀಯ ಉದ್ದೇಶಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಕಳೆದ ಜನವರಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಚುನಾವಣೆಯಲ್ಲಿ, ಮರುಚುನಾವಣೆಯಲ್ಲಿ ಹಸೀನಾ ಗೆದ್ದಾಗ, ಭಾರತದ ಚುನಾವಣಾ ಆಯೋಗ ಬಾಂಗ್ಲಾದೇಶದ ಚುನಾವಣಾ ಆಯೋಗವನ್ನು ಚುನಾವಣಾ ಪ್ರಕ್ರಿಯೆಯ ನಿರ್ವಹಣೆ ಮತ್ತು ಅದಕ್ಕಾಗಿ ಅದು ಮಾಡಿಕೊಂಡಿದ್ದ ಯೋಜನೆಗಳಿಗಾಗಿ ಹೊಗಳಿತ್ತು.

ಭಾರತ ದುರಹಂಕಾರದಿಂದ ವರ್ತಿಸಿದೆ ಎಂಬ ಭಾವನೆ ಶ್ರೀಲಂಕಾ ಮತ್ತು ನೇಪಾಳಗಳಲ್ಲಿ ಕಾಣಿಸುತ್ತದೆ. ಈ ಮೂರೂ ದೇಶಗಳ ಕೆಲವು ನಾಗರಿಕರು ಜಂಟಿಯಾಗಿ ನೀಡಿದ ಇತ್ತೀಚಿನ ಹೇಳಿಕೆಯನ್ನು ಗಮನಿಸಬೇಕು. ಭಾರತ ಸರಕಾರ ನಮ್ಮ

ರಾಜಕೀಯದಲ್ಲಿ ಮಧ್ಯಪ್ರವೇಶಿಸುವುದನ್ನು ಬಿಟ್ಟುಬಿಡಬೇಕು ಎಂದು ಅದು ಹೇಳುತ್ತದೆ. ದಶಕಗಳಿಂದ ಕೊಲಂಬೊ, ಢಾಕಾ ಮತ್ತು ಕಠ್ಮಂಡುಗಳಲ್ಲಿ ಹೊಸದಿಲ್ಲಿಯ ರಾಜಕೀಯ, ಅಧಿಕಾರಶಾಹಿ ಮತ್ತು ಗುಪ್ತಚರ ಹಸ್ತಕ್ಷೇಪ ನಮ್ಮ ದೇಶಗಳಲ್ಲಿ ಕೊನೆಯಿಲ್ಲದ ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ ಮತ್ತು ನಿರಂಕುಶ ಪ್ರಭುತ್ವಗಳಿಗೆ ಬಲ ನೀಡಿದೆ ಎಂಬುದು ಆ ಹೇಳಿಕೆಯಲ್ಲಿದೆ.

ಈ ಆರೋಪಗಳಿಗೆ ನಿರ್ದಿಷ್ಟ ಸಂದರ್ಭವನ್ನೂ ತೋರಿಸಲಾಗಿದೆ. ಬಾಂಗ್ಲಾದೇಶದ ಈ ಬರಹಗಾರರು ಹೇಳುವುದು ಹೀಗೆ: ಕಳೆದ ದಶಕದಲ್ಲಿ ಶೇಕ್ ಹಸೀನಾ ಅವರ ನಿರಂಕುಶ ಆಡಳಿತವನ್ನು ಬೆಂಬಲಿಸಲು ಹೊಸದಿಲ್ಲಿ ಸಕ್ರಿಯವಾಗಿ ಕೆಲಸ ಮಾಡಿದೆ ಮತ್ತು ಪ್ರತಿಯಾಗಿ ರಾಜಕೀಯ ಮತ್ತು ಆರ್ಥಿಕ ರಿಯಾಯಿತಿಗಳನ್ನು ಪಡೆದಿದೆ. ಶ್ರೀಲಂಕಾ ತನ್ನ ರಾಜಕೀಯದಲ್ಲಿ ಹೊಸದಿಲ್ಲಿಯ ಅತಿಕ್ರಮಿಸುವಿಕೆ ವಿರುದ್ಧ ಪದೇ ಪದೇ ಸೆಣಸಾಡಬೇಕಾಯಿತು. ಅಲ್ಲದೆ, ಇತ್ತೀಚೆಗೆ ಹೊಸದಿಲ್ಲಿಯ ಅಧಿಕಾರಿಗಳು ಭಾರತೀಯ ವ್ಯಾಪಾರ ಸಮೂಹಗಳನ್ನು ದ್ವೀಪರಾಷ್ಟ್ರದಲ್ಲಿ ಬೆಂಬಲಿಸುತ್ತಿದ್ದಾರೆ.

ನೇಪಾಳಕ್ಕೆ ಸಂಬಂಧಿಸಿದಂತೆ ಅವರು ಹೇಳುವುದು ಹೀಗೆ: ಒಂದು ಕಾಲದಲ್ಲಿ ಭಾರತ ರಾಜಕಾರಣಿಗಳು ಮತ್ತು ರಾಜತಾಂತ್ರಿಕರ ಮೂಲಕ ನೇಪಾಳದ ರಾಜಕೀಯದಲ್ಲಿ ಮಧ್ಯಪ್ರವೇಶಿಸಿದ್ದರೆ, ಈಗ ಗುಪ್ತಚರ ಸಂಸ್ಥೆಗಳು ಮತ್ತು ಆರೆಸ್ಸೆಸ್‌ನ ಹಿಂದುತ್ವ ಕಾರ್ಯಕರ್ತರ ಮೂಲಕವೂ ಹಸ್ತಕ್ಷೇಪ ಮಾಡುತ್ತಿದೆ. ಒಂದು ಗಮನಾರ್ಹವಾದ ದಬ್ಬಾಳಿಕೆಯ ನಿದರ್ಶನವೆಂದರೆ, ಹೊಸದಿಲ್ಲಿಗೆ ಇಷ್ಟವಾಗಿರದ ಸಂವಿಧಾನ ಘೋಷಣೆಯ ಬೆನ್ನಲ್ಲೇ ದೇಶ ಭೂಕಂಪದಿಂದ ತತ್ತರಿಸುತ್ತಿದ್ದಾಗಲೂ, 2015ರಲ್ಲಿ ನೇಪಾಳದ ಮೇಲೆ ಹೇರಿದ್ದ ದಿಗ್ಬಂಧನ.

ಈ ಲಕ್ಷಣಗಳು ಹೆಚ್ಚು ನಿಖರವಾಗಿವೆ. ನಾನು ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಸಮಯ ಕಳೆದಿದ್ದೇನೆ ಮತ್ತು ಮೂರೂ ದೇಶಗಳಲ್ಲಿ ನನಗೆ ಸ್ನೇಹಿತರು ಮತ್ತು ವೃತ್ತಿಪರ ಸಹೋದ್ಯೋಗಿಗಳಿದ್ದಾರೆ. ಭಾರತ ಅತಿಯಾದ ಅಧಿಕಾರಯುತ ಧೋರಣೆಯಿಂದ ವರ್ತಿಸುತ್ತದೆ ಎಂಬುದು ಈ ಎಲ್ಲ ದೇಶಗಳ ಬುದ್ಧಿಜೀವಿಗಳು ಮತ್ತು ಬರಹಗಾರರು ವ್ಯಾಪಕವಾಗಿ ಹೊಂದಿರುವ ಭಾವನೆಯಾಗಿದೆ ಮತ್ತು ಅದಕ್ಕೆ ಹೆಚ್ಚಿನ ಆಧಾರವಿದೆ. ನನಗೆ ಇಲ್ಲಿ 19ನೇ ಶತಮಾನದ ಮೆಕ್ಸಿಕನ್ ಅಧ್ಯಕ್ಷರು ಹೇಳಿದ್ದ ಮಾತು ನೆನಪಾಗುತ್ತಿದೆ: ಬಡ ಮೆಕ್ಸಿಕೊ ಈವರೆಗೂ ದೇವರ ದಯೆಯಿಂದ ಅಮೆರಿಕಕ್ಕೆ ತುಂಬಾ ಹತ್ತಿರದಲ್ಲಿದೆ ಎಂಬ ಮಾತು ಅದು. ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳಗಳು ಆರ್ಥಿಕ ಮತ್ತು ರಾಜಕೀಯ ಸವಾಲುಗಳ ಒಂದು ಶ್ರೇಣಿಯಿಂದ ಸುತ್ತುವರಿದಿವೆ. ಅವು ಭಾರತ ಪರಿಹರಿಸಲು ಆಗದ ಸವಾಲುಗಳಾಗಿವೆ.

ಬರಹಗಾರರ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಭಾರತದ ಉದ್ದೇಶಗಳ ಬಗೆಗಿನ ಅಪನಂಬಿಕೆ ಶ್ರೀಲಂಕಾದ ಈಗಿನ ಸರಕಾರಕ್ಕಿಂತ ಮುಂಚೆನಿಂದಲೂ ಇದೆ. ಭಾರತೀಯ ಶಾಂತಿ ಪಾಲನಾ ಪಡೆಯನ್ನು (ಐಪಿಕೆಎಫ್) ಶ್ರೀಲಂಕಾಕ್ಕೆ ಕಳುಹಿಸಿದವರು ರಾಜೀವ್ ಗಾಂಧಿ ಮತ್ತು ನರೇಂದ್ರ ಮೋದಿಗಿಂತ ಮೊದಲು ನೇಪಾಳದ ಮೇಲೆ ದಿಗ್ಬಂಧನ ಹೇರಿದ್ದವರೂ ಅವರೇ. ನಿಜಕ್ಕೂ ಈ ನಿಟ್ಟಿನಲ್ಲಿ ಧ್ವನಿಯೆತ್ತಿದ್ದವರು ನಮ್ಮ ಮೊದಲ ವಿದೇಶಾಂಗ ಸಚಿವರೂ ಆಗಿದ್ದ ನಮ್ಮ ಮೊದಲ ಪ್ರಧಾನಿ. ಜವಾಹರಲಾಲ್ ನೆಹರೂ ಅವರೊಂದಿಗೆ ಸೇವೆ ಸಲ್ಲಿಸಿದ ರಾಜತಾಂತ್ರಿಕ ಜಗತ್ ಮೆಹ್ತಾ ಅವರು ಒಮ್ಮೆ ಗಮನಿಸಿದಂತೆ, ನೆಹರೂ ಅವರು ಸಂಪೂರ್ಣವಾಗಿ ಗುರುತಿಸಲಿಲ್ಲ ಮತ್ತು ವಿದೇಶಾಂಗ ಸಚಿವಾಲಯ ಅವರಿಗೆ ಸಲಹೆ ನೀಡಲು ವಿಫಲವಾಯಿತು. ಇಪ್ಪತ್ತನೇ ಶತಮಾನದಲ್ಲಿ ಅಸಮಾನ ನೆರೆದೇಶಗಳ ನಡುವಿನ ರಾಜತಾಂತ್ರಿಕತೆಯಷ್ಟು ಕಷ್ಟಕರವಾದದ್ದು ಯಾವುದೂ ಇರಲಿಲ್ಲ.

ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧಗಳು ಸಮಸ್ಯಾತ್ಮಕವಾಗಿಯೇ ಉಳಿಯುವುದನ್ನು ಇತಿಹಾಸ ಮತ್ತು ಭೌಗೋಳಿಕತೆಯ ತರ್ಕ ಹೆಚ್ಚು ಕಡಿಮೆ ಖಚಿತಪಡಿಸುತ್ತದೆ. ಕಮ್ಯುನಿಸ್ಟ್ ಚೀನಾ ಮೆಕ್ ಮಹೊನ್ ರೇಖೆಯನ್ನು ಎಂದಿಗೂ ಒಪ್ಪಿಕೊಂಡಿಲ್ಲ. ತಮ್ಮ ದೇಶ ಬ್ರಿಟಿಷ್ ಸಾಮ್ರಾಜ್ಯಶಾಹಿ ನಿಯಂತ್ರಣಕ್ಕೆ ಒಳಪಟ್ಟಾಗ ಬಲವಂತವಾಗಿ ಸಹಿ ಮಾಡಿಸಲಾಗಿದೆ ಎಂಬುದು ಅದರ ಆಕ್ಷೇಪ. 1962ರ ಚೀನೀ ಆಕ್ರಮಣ, ಭಾರತೀಯ ರಾಷ್ಟ್ರೀಯ ಮನೋಭೂಮಿಕೆಯ ಮೇಲೆ ಆಳವಾದ ಗಾಯವನ್ನು ಮಾಡಿದೆ. ಪಾಕಿಸ್ತಾನ ಈಗ ದಶಕಗಳಿಂದ ಕಾಶ್ಮೀರದಲ್ಲಿ ಮಾತ್ರವಲ್ಲದೆ, ಭಾರತದ ಅನೇಕ ಭಾಗಗಳಲ್ಲಿ ಭಯೋತ್ಪಾದಕ ಕ್ರಮಗಳನ್ನು ನಡೆಸುತ್ತಿದೆ ಎಂಬುದು ಆ ದೇಶದೊಂದಿಗೆ ಪ್ರಾಮಾಣಿಕವಾದ ಹೊಂದಾಣಿಕೆಯನ್ನು ಅತ್ಯಂತ ಕಷ್ಟಕರವಾಗಿಸಿದೆ.

ಆದರೂ, ನಮ್ಮ ಸಣ್ಣ ನೆರೆಹೊರೆ ದೇಶಗಳ ವಿಷಯದಲ್ಲಿ ತೀರಾ ವಿವಾದಾತ್ಮಕ ಸಮಸ್ಯೆಗಳೇನೂ ಇಲ್ಲ. ಇದಕ್ಕೆ ವಿರುದ್ಧವಾಗಿ, ಸಾಮರಸ್ಯದ ಸಂಬಂಧಗಳ ಪರವಾಗಿ ಕೆಲಸ ಮಾಡುವ ಅಂಶಗಳಿವೆ. ಭಾರತ ಮತ್ತು ನೇಪಾಳ ತೆರೆದ ಗಡಿಯನ್ನು ಹೊಂದಿವೆ ಮತ್ತು ಅನೇಕ ಸಾಂಸ್ಕೃತಿಕ ಹೋಲಿಕೆಗಳೂ ಇವೆ. ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆ ಪಡೆಯಲು ಭಾರತ ನೆರವಾಗಿತ್ತು. ಭಾರತ ಮತ್ತು ಶ್ರೀಲಂಕಾ ವಸಾಹತುಶಾಹಿ ಇತಿಹಾಸವನ್ನು ಹೊಂದಿರುವ ದೇಶಗಳು ಮತ್ತು ಹಾಗಾಗಿಯೇ ಒಂದೇ ರೀತಿಯ ಸಾಂವಿಧಾನಿಕ ಮತ್ತು ಶೈಕ್ಷಣಿಕ ಪಥಗಳನ್ನು ಹೊಂದಿವೆ. ಭಾರತ ಮತ್ತು ಈ ಮೂರೂ ದೇಶಗಳ ನಡುವಿನ ಸಂಬಂಧಗಳು ಸುಗಮವಾಗಿದ್ದರೆ, ಖಂಡಿತವಾಗಿಯೂ ಅದು ದೊಡ್ಡ ಮತ್ತು ಹೆಚ್ಚು ಶಕ್ತಿಶಾಲಿ ರಾಷ್ಟ್ರ ಒಂದು ಕ್ಷಣ ಯೋಚಿಸುವ ಹಾಗೆ ಮಾಡಬಲ್ಲುದು.

2007-2008ರಲ್ಲಿ ನಮ್ಮ ಆರ್ಥಿಕತೆ ಅಸಾಧಾರಣವಾಗಿ ಉತ್ತಮವಾಗಿದ್ದಾಗ ಭಾರತ ಸೂಪರ್ ಪವರ್ ಆಗುವುದರ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ಅಂತಹ ವಾದಗಳು ಅತ್ಯಂತ ಅಕಾಲಿಕವೆಂದು ನಾನು ಭಾವಿಸಿದ್ದೆ ಮತ್ತು ಜಗತ್ತಿನ ಮುಂದೆ ಹೆಚ್ಚುಗಾರಿಕೆಯನ್ನು ಊಹಿಸುವುದಕ್ಕಿಂತ ಸಾಮಾಜಿಕ ಮತ್ತು ರಾಜಕೀಯ ದೋಷಗಳನ್ನು ಗಮನಿಸುವುದು ಬುದ್ಧಿವಂತಿಕೆ ಎಂದು ನಾನು ಆ ಸಮಯದಲ್ಲಿ ವಾದಿಸಿದ್ದೆ. ಮನಮೋಹನ್ ಸಿಂಗ್ ಅವರ ಎರಡನೇ ಅವಧಿಯಲ್ಲಿ, ಜಾಗತಿಕ ಹಿರಿಮೆಗೆ ಭಾರತದ ಸನ್ನಿಹಿತ ಏರಿಕೆಯ ಚರ್ಚೆ ಗಮನಾರ್ಹವಾಗಿ ಕಡಿಮೆಯಾಯಿತು. ಆದರೂ, ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿ ಅದು ಮತ್ತೆ ಶುರುವಾಗಿತ್ತು. ಸೂಕ್ತವಾದ ಸ್ವದೇಶಿ ಲೇಬಲ್ ಅಡಿಯಲ್ಲಿ ಮರುನಾಮಕರಣ ನಡೆಯಿತು. ಭಾರತ ಶೀಘ್ರದಲ್ಲೇ ಸೂಪರ್ ಪವರ್ ಆಗಲಿದೆ ಎಂದು ಹಿಂದೊಮ್ಮೆ ಹೇಳಿದ್ದನ್ನು, ಭಾರತ ಈಗಾಗಲೇ ವಿಶ್ವಗುರುವಾಗಿದೆ ಎಂದು ಅರ್ಥಮಾಡಿಕೊಳ್ಳುವಂತೆ ಬಿಂಬಿಸಲಾಗಿದೆ.

ವಿಶ್ವ ನಾಯಕತ್ವಕ್ಕೆ ಭಾರತ ನಿಲ್ಲುತ್ತದೆಂಬುದು ಮೂರ್ಖ ಕಲ್ಪನೆಯಾಗಿದೆ. ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಾದ ಸಾಂಸ್ಥಿಕ ಹುಳುಕು, ಬೆಳೆಯುತ್ತಿರುವ ಅಸಮಾನತೆ, ಆಡಳಿತದಲ್ಲಿನ ಭ್ರಷ್ಟಾಚಾರ ಮತ್ತು ಕ್ರೌರ್ಯ ಮತ್ತು ವ್ಯಾಪಕವಾದ ಪರಿಸರ ಅವನತಿ ಇವು ಕ್ರೂರ ವಾಸ್ತವಗಳಾಗಿವೆ. ಭಾರತ ವಿಶ್ವಗುರು ಎಂಬ ಕಲ್ಪನೆ ಅಸಂಬದ್ಧವಾಗಿದ್ದರೂ, ಭಾರತ ವಿಶ್ವಮಿತ್ರ ಎಂಬ ಆದರ್ಶ ಸ್ವಲ್ಪ ಮೌಲಿಕವೆನ್ನಿಸುತ್ತದೆ. ಆದರೆ ಭಾರತ ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೆ ನಿಜವಾಗಿಯೂ ಮಿತ್ರನಾಗಲು ಬಯಸಿದರೆ, ನಮ್ಮ ತಕ್ಷಣದ ನೆರೆಹೊರೆಯ ಕಡೆಗೆ ಮತ್ತು ವಿಶೇಷವಾಗಿ ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದೊಂದಿಗಿನ ಧೋರಣೆಯನ್ನು ಮರು ರೂಪಿಸಲು ಪ್ರಾರಂಭಿಸುವುದು ಉತ್ತಮ. ಈ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಬೆಸೆಯುವಾಗ, ನಾವು ಆ ದೇಶಗಳ ನಾಯಕರಲ್ಲಿ ಮಾತ್ರವಲ್ಲ, ಆ ದೇಶಗಳ ಜನತೆಯಲ್ಲಿಯೂ ಗೌರವ ಮತ್ತು ನಂಬಿಕೆಯನ್ನು ಬೆಳೆಸಲು ಯತ್ನಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News