‘ಕಾರ್ಮಿಕರ ಕಲ್ಯಾಣ ಮಂಡಳಿ ಅವ್ಯವಹಾರದ ತನಿಖೆ ಗ್ಯಾರಂಟಿ ಕೊಡಿ’

Update: 2023-08-24 14:58 GMT

ಉಡುಪಿ, ಆ.24: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ನಿಜವಾದ ಕಾರ್ಮಿಕರು ಸಲ್ಲಿಸಿರುವ ಶೈಕ್ಷಣಿಕ ಧನಸಹಾಯ ಅರ್ಜಿಗಳಿಗೆ ಹಣ ಬಿಡುಗಡೆ ತಡೆಹಿಡಿದಿರುವುದನ್ನು ಖಂಡಿಸಿ ಹಾಗೂ ಕಟ್ಟಡ ಕಾರ್ಮಿಕರ ಪಿಂಚಣಿ ಸಮಸ್ಯೆಯೂ ಸೇರಿ ದಂತೆ ಹದಿನೇಳು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಮತ್ತು ದೇಶದಾದ್ಯಂತ ನೀಡಲಾದ ಹೋರಾಟದ ಕರೆಗೆ ಗುರುವಾರ ಉಡುಪಿ ಜಿಲ್ಲೆಯ ಸಾವಿರಾರು ಕಟ್ಟಡ ಕಾರ್ಮಿಕರು ಮಣಿಪಾಲದ ಟೈಗರ್ ಸರ್ಕಲ್ ನಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಧರಣಿ ನಡೆಸಿದರು.

ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ, ಕುಂದಾಪುರ ತಾಲೂಕು ಹಾಗೂ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದಿನ ಜಾಥಾ ಹಾಗೂ ಪ್ರತಿಭಟನಾ ಸಭೆ ನಡೆಯಿತು.

ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಕಟ್ಟಡ ಕಾರ್ಮಿಕರ ರಾಜ್ಯ ಫೆಡರೇಶನ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಟ್ಟಡ ಕಾರ್ಮಿಕರ 1996 ಕಾನೂನನ್ನು ಕೇಂದ್ರದಲ್ಲಿ ಮೋದಿ ಸರಕಾರ ರದ್ದು ಮಾಡಿದೆ. ಸೆಸ್ ಕಾನೂನು ದುರ್ಬಲ ಗೊಳಿಸಲು 10 ಲಕ್ಷಕ್ಕೆ ಸಂಗ್ರಹಿಸಬೇಕಿದ್ದ ಸೆಸ್ 50 ಲಕ್ಷಕ್ಕೆ ಏರಿಕೆ ಮಾಡಿದೆ. ಅಲ್ಲದೇ ಹೊಸ ಸಂಹಿತೆಗಳಲ್ಲಿ ವಿಲೀನಗೊಳಿಸಿ ಶೈಕ್ಷಣಿಕ ಧನಸಹಾಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಾರ್ಮಿಕರಿಂದ ಕಸಿದುಕೊಳ್ಳುವ ಹೊಂಚು ಹಾಕಿದೆ ಎಂದು ಆರೋಪಿಸಿದರು.

ಹಿಂದಿನ ರಾಜ್ಯ ಬಿಜೆಪಿ ಸರಕಾರ ಅವಧಿಯಲ್ಲಿ ಕಿಟ್‌ಗಳ ಖರೀದಿಯಲ್ಲಿ ಪಾರದರ್ಶಕ ಇಲ್ಲದೇ ಇರುವುದರಿಂದ ಮಂಡಳಿ ಸಂಗ್ರಹ ಮಾಡಿದ ಸೆಸ್ ಹಣ ದುರುಪಯೋಗದಿಂದ ಶೈಕ್ಷಣಿಕ ಧನಸಹಾಯಕ್ಕೆ ಇತರೆ ಸೌಲಭ್ಯಗಳಿಗೆ ಹಣ ಕೊರತೆ ಎದುರಾಗಿದೆ. ಇಂದಿನ ಕಾಂಗ್ರೆಸ್ ಸರ್ಕಾರವು ಇಂತಹ ಅನಗತ್ಯ ವೆಚ್ಚ ತಡೆಗಟ್ಟುವ ಬದಲು ಶಿಶು ವಿಹಾರ ಕೇಂದ್ರ, ಕಾರ್ಮಿಕರ ಮೊಬೈಲ್ ಕ್ಲಿನಿಕ್, ಬಸ್‌ಪಾಸ್ ಯೋಜನೆಗಳಿಗೆ ಮಂಡಳಿ ಹಣ ಬಳಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕರ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ ಕಟ್ಟಡ ಕಾರ್ಮಿಕರ ಮಂಡಳಿಗೆ ಬರಬೇಕಾದ ಹತ್ತಾರು ಕೋಟಿ ಹಣವನ್ನು ಜಿಲ್ಲೆಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಸಂಗ್ರಹ ಮಾಡದಿರು ವುದರಿಂದ ಕಟ್ಟಡ ಕಾರ್ಮಿಕರ ಹಣವನ್ನು ಸುಳ್ಳು ಲೆಕ್ಕ ತೋರಿಸಿ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು. ಕಟ್ಟಡ ಕಾರ್ಮಿಕರನ್ನು ಯಾವ ಪಕ್ಷಗಳು ಕಡೆಗಣಿಸುವವೋ ಅಂತಹ ಪಕ್ಷಕ್ಕೆ 2024ರ ಚುನಾವಣೆಯಲ್ಲಿ ಪಾಠ ಕಲಿಸಲು ಸಂಘಟನೆ ಬದ್ಧವಾಗಿದೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್, ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಹಾಗೂ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಶೇಖರ ಬಂಗೇರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ಗೊಲ್ಲ, ಸಂತೋಷ ಹೆಮ್ಮಾಡಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕವಿರಾಜ್, ವೆಂಕಟೇಶ್ ಕೋಣಿ, ರಾಜೀವ್ ಪಡುಕೋಣೆ, ಉಮೇಶ್ ಕುಂದರ್, ಗಣೇಶ್ ನಾಯ್ಕ್, ನಳಿನಿ, ಸುನೀತಾ ಶೆಟ್ಟಿ, ರಾಮ ಕಾರ್ಕಡ, ಸುಭಾಷ್ ನಾಯಕ್, ಶೀಲಾವತಿ, ಚಂದ್ರಶೇಖರ ವಿ., ವೆಂಕಟೇಶ ಕೋಣಿ, ರಾಜು ಪಡುಕೋಣೆ, ಚಿಕ್ಕ ಮೊಗವೀರ, ವಿಜಯ ಕೋಯನಗರ, ಜನವಾದಿ ಮಹಿಳಾ ಸಂಘಟನೆ ಶೀಲಾವತಿ ಪಡುಕೋಣೆ, ನಾಗರತ್ನ ನಾಡ ಉಪಸ್ಥಿತರಿದ್ದರು.

ಕೊನೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮೂಲಕ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಮಿಕರಿಗೆ 6ನೇ ಗ್ಯಾರಂಟಿ ನೀಡಿ!

ಆಡಳಿತಕ್ಕೇರಿದ ಬಳಿಕ ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಕಾರ್ಮಿಕರಿಗೆ ಆರನೇ ಗ್ಯಾರಂಟಿ ನೀಡುವಂತೆ ಬಾಲಕೃಷ್ಣ ಶೆಟ್ಟಿ ಮನವಿ ಮಾಡಿದರು.

ಮಹಿಳೆಯರು ಸೇರಿದಂತೆ ರಾಜ್ಯ ಜನತೆಗೆ ಐದು ಗ್ಯಾರಂಟಿಗಳನ್ನು ಕೊಟ್ಟ ನೀವು ರಾಜ್ಯದ ಕಾರ್ಮಿಕ ಕಲ್ಯಾಣ ಮಂಡಳಿ ಯಲ್ಲಾದ ಸಾವಿರಾರು ಕೋಟಿ ರೂ. ಅವ್ಯವಹಾರದ ತನಿಖೆಯ ಆರನೇ ಗ್ಯಾರಂಟಿಯನ್ನು ಕಾರ್ಮಿಕರಿಗೆ ನೀಡುವಂತೆ ಶೆಟ್ಟಿ ತಿಳಿಸಿದರು.

ಕಾರ್ಮಿಕರ ಸಂಘದ ಬೇಡಿಕೆಗಳು

ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ಹಣ ವರ್ಗಾವಣೆ, ಫಲಾನುಭವಿಯ ಕಾರ್ಡ್ ನವೀಕರಣಕ್ಕಿರುವ ವೇತನ ಚೀಟಿ ಮತ್ತು ಹಾಜರಾತಿ ಪಟ್ಟಿ ಕಡ್ಡಾಯಗೊಳಿಸಿದ ಆದೇಶ ವಾಪಸ್ ಪಡೆಯಿರಿ, ಬೋಗಸ್ ಕಾರ್ಡ್ ನಿಯಂತ್ರಿಸಿ, ಆರೋಗ್ಯ ಸಂಜೀ ವಿನಿ ಯೋಜನೆ ಜಾರಿ ಗೊಳಿಸಿ, ಹೊಸ ತಂತ್ರಾಂಶ ಆರಂಭಿಸಿ, ಅರ್ಜಿಗಳ ವಿಲೇವಾರಿ ವಿಳಂಬ ನಿವಾರಿಸಿ, ಕಲ್ಯಾಣ ಮಂಡಳಿಯಿಂದ ಆರಂಭಿಸಿದ ಶಿಶು ವಿಹಾರ/ಮೊಬೈಲ್ ಕ್ಲಿನಿಕ್/ಬಸ್‌ಪಾಸ್‌ಗಳನ್ನು ನಿಲ್ಲಿಸಿ, ಮನೆ ನಿರ್ಮಾಣಕ್ಕೆ 5ಲಕ್ಷ ರೂ. ಸಹಾಯಧನ ಕೊಡಿ, ನಿರ್ಮಾಣ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ ಜಾರಿಗೆ ತನ್ನಿ.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News