ರೈಲಿನಲ್ಲಿ ಯುವತಿಗೆ ಕಿರುಕುಳ ಪ್ರಕರಣ: ಆರೋಪಿಯ ಬಂಧನ

Update: 2024-08-28 16:15 GMT

ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯೋರ್ವನನ್ನು ಮಣಿಪಾಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಭಟ್ಕಳ ಮೂಲದ ಶುರೈಮ್ (22) ಬಂಧಿತ ಆರೋಪಿ. ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದ ಉಡುಪಿ ಮೂಲದ ಯುವತಿ ಬೆಂಗಳೂರಿನಿಂದ ಉಡುಪಿಗೆ 2 ದಿನಗಳ ಹಿಂದೆ ಪ್ರಯಾಣ ಬೆಳೆಸಿದ್ದಳು. ರೈಲು ಮೂಲ್ಕಿ ಸಮೀಪ ಬರುತ್ತಿದ್ದ ವೇಳೆ ರೈಲಿನಲ್ಲಿದ್ದ ಶುರೈಮ್ ಯುವತಿಯ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದು, ಆತ ಅಲ್ಲಿಯೇ ಕ್ಷಮೆಯಾಚಿಸಿದ್ದ ಎನ್ನಲಾಗಿದೆ. ಯುವತಿ ಈ ಬಗ್ಗೆ ರೈಲ್ವೇ ಆ್ಯಪ್‌ನಲ್ಲಿ ದೂರು ದಾಖಲಿಸಿದ್ದು, ಉಡುಪಿಗೆ ಬಂದಿಳಿದ ಬಳಿಕ ರೈಲ್ವೇ ಪೊಲೀಸರ ಗಮನಕ್ಕೂ ತಂದಿದ್ದರು. ಅಲ್ಲದೇ ಮಣಿಪಾಲ ಠಾಣಾ ಪೊಲೀಸರಿಗೂ ಘಟನೆಯ ಸಂಬಂಧಿಸಿ ಮಾಹಿತಿಯನ್ನು ನೀಡಲಾಗಿತ್ತು. ರೈಲಿನಲ್ಲಿ ಯುವತಿ ಆರೋಪಿಯ ಫೋಟೊ ಕೂಡಾ ತನ್ನ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡಿದ್ದಳು.

ಈ ಬಗ್ಗೆ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸರು ಎಲ್ಲಾ ಮಾಹಿತಿಯನ್ನು ಕ್ರೋಢಿಕರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News