ಸೀತಾನದಿ ಗಣಪಯ್ಯ ಶೆಟ್ಟಿ ಸಂಸ್ಮರಣ ಪ್ರಶಸ್ತಿಗೆ ಕೆ.ಗೋವಿಂದ ಭಟ್ ಆಯ್ಕೆ
ಉಡುಪಿ, ಸೆ.20: ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದಿಂದ ಅಭಿನವ ಪಾರ್ತಿಸುಬ್ಬ ಸೀತಾನದಿ ಗಣಪಯ್ಯ ಶೆಟ್ಟಿ ಅವರ 37ನೆಯ ವರ್ಷದ ಸಂಸ್ಮರಣೆ ಸಂದರ್ಭದಲ್ಲಿ ನೀಡುವ ಪ್ರಶಸ್ತಿಗೆ ರಾಜ್ಯಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ ಸೂರಿಕುಮೇರು ಆಯ್ಕೆಯಾಗಿ ದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 7ರ ಸೋಮವಾರ ಸಂಜೆ 4:30ಕ್ಕೆ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಕೆ. ಗೋವಿಂದ ಭಟ್ ತಮ್ಮ ಉನ್ನತ ಶೈಲಿಯ ನಾಟ್ಯ, ಶ್ರುತಿಬದ್ಧ ಮಾತಿನ ಪ್ರಬುದ್ಧತೆಯಿಂದ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರಾಗಿ ಖ್ಯಾತಿ ಗಳಿಸಿದವರು. ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಪ್ರದಾನ ಕಲಾವಿದರಾಗಿ ರಂಗಸ್ಥಳದಲ್ಲಿ ಮೆರೆದ 84 ವರ್ಷ ಪ್ರಾಯದ ಈ ಹಿರಿಯ ಕಲಾವಿದರು ಸುಮಾರು 60 ವರ್ಷ ಧರ್ಮಸ್ಥಳ ಒಂದೇ ಮೇಳದಲ್ಲಿ ತಿರುಗಾಟ ನಡೆಸಿ ದಾಖಲೆ ನಿರ್ಮಿಸಿದವರು.
ಪ್ರಸಿದ್ಧ ಕಲಾವಿದರಾದ ಕುರಿಯ ವಿಠಲ ಶಾಸ್ತ್ರಿ, ಪರಮ ಶಿವನ್, ಮಾಧವ ಮೆನನ್ ಮೊದಲಾದವರು ಇವರ ಯಕ್ಷಗಾನ ಮತ್ತು ಭರತ ನಾಟ್ಯದ ಗುರುಗಳು. ರಾಜ ವೇಷ, ಪುಂಡು ವೇಷ, ಸ್ತ್ರೀವೇಷ ಅಲ್ಲದೆ ಹಾಸ್ಯ ಪಾತ್ರದಲ್ಲೂ ಪರಿಣತಿ ಹೊಂದಿದ ಇವರು ತೆಂಕುತಿಟ್ಟಿನ ದಶಾವತಾರಿ ಕಲಾವಿದರು. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಸನ್ಮಾನಗಳಿಗೆ ಇವರು ಭಾಜನರಾಗಿದ್ದಾರೆ.