ಪಿವಿಜಿಟಿ ಸಮುದಾಯಕ್ಕೆ ಉದ್ಯೋಗ ನೇಮಕಾತಿಯಲ್ಲಿ ಪ್ರತ್ಯೇಕ ವ್ಯವಸ್ಥೆಗೆ ಕೊರಗ ಒಕ್ಕೂಟದಿಂದ ಮುಖ್ಯಮಂತ್ರಿಗೆ ಮನವಿ: ಸುಶೀಲಾ ನಾಡ

ಉಡುಪಿ: ರಾಜ್ಯದಲ್ಲಿ ಅಂಚಿಗೆ ತಳ್ಳಲ್ಪಟ್ಟ ಬುಡಕಟ್ಟು ಸಮುದಾಯ (ಪಿವಿಜಿಟಿ) ಎಂದು ಕೇಂದ್ರ ಸರಕಾರದಿಂದ 1986ರಲ್ಲಿ ಗುರುತಿಸಲ್ಪಟ್ಟ ಕೊರಗರು ಹಾಗೂ ಜೇನು ಕುರುಬ ಸಮುದಾಯದ ವಿದ್ಯಾವಂತರು ಈಗಲೂ ಸಮಾಜದ ಮುಖ್ಯವಾಹಿನಿಯಲ್ಲಿ ಸ್ಥಾನ ಪಡೆಯಲು ವಿಫಲರಾಗುತಿದ್ದು, ಇವರಿಗಾಗಿ ಪ್ರತ್ಯೇಕ ವ್ಯವಸ್ಥೆಯ ಮೂಲಕ ಸರಕಾರಿ ಉದ್ಯೋಗಗಳಿಗೆ ನೇರ ಆಯ್ಕೆ ಸಾಧ್ಯವಾಗುವಂತೆ ಮೀಸಲಾತಿಯನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನಿಯೋಗದೊಂದಿಗೆ ತೆರಳಿ ಮನವಿ ಅರ್ಪಿಸಿದ್ದು, ಅವರು ನಮ್ಮ ಬಹುಮುಖ್ಯ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಒಟ್ಟು 75 ಪಿವಿಟಿಜಿ ಗುಂಪುಗಳಲ್ಲಿ ರಾಜ್ಯದ ಈ ಎರಡು ಸಮುದಾಯಗಳಿದ್ದು, ಈಗಲೂ ಅಸಹಾಯಕ, ದುರ್ಬಲ ಸ್ಥಿತಿಯಲ್ಲಿದೆ. ಹೀಗಾಗಿ ಪರಿಶಿಷ್ಟ ಪಂಗಡದಲ್ಲಿರುವ ಶೇ.7 ಮೀಸಲಾತಿ ಬಲಿಷ್ಠ ಸಮುದಾಯಗಳ ಪಾಲಾಗುತಿದ್ದು, ಕೊರಗ ಯುವಜನತೆ ಸರಕಾರಿ ಉದ್ಯೋಗಗಳಿಗೆ ಆಯ್ಕೆಯಾಗಲು ವಿಫಲರಾಗುತಿದ್ದಾರೆ ಎಂದವರು ಹೇಳಿದರು.
ಈ ಹಿನ್ನೆಲೆಯಲ್ಲಿ ಸರಕಾರಿ ಉದ್ಯೋಗಗಳಿಗೆ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಂಚಿಕೆಗಾಗಿ ಒತ್ತಾಯಿಸಿ ಕಳೆದ ಜುಲೈ ತಿಂಗಳಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು 10ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಸೋಮವಾರಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರ ಸಹಕಾರದಿಂದ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ನಿಯೋಗವೊಂದು ಮುಖ್ಯಮಂತ್ರಿ ಅವರನ್ನು ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ ಭೇಟಿ ಬೇಡಿಕೆಗಳ ಮನವಿಯನ್ನು ಸಲ್ಲಿಸಿದೆ ಎಂದು ನಾಡ ತಿಳಿಸಿದರು.
ಈ ಸಂದರ್ಭದಲ್ಲಿ ನಿಯೋಗ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಣದೀಪ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಕೋಶದ ನಿರ್ದೇಶಕಿ ಊರ್ಮಿಳಾ, ಬುಡಕಟ್ಟು ಕಲ್ಯಾಣ ಇಲಾಖೆಯ ನಿರ್ದೇಶಕ ಕೆ.ಯೋಗಿಶ್ ಅವರನ್ನು ಭೇಟಿ ಮಾಡಿ ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಿ ಅವರಿಗೆ ಕರಾವಳಿಯಲ್ಲಿ ಅತ್ಯಂತ ಹಿಂದುಳಿದ ಕೊರಗ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಲಾಗಿದೆ ಎಂದರು.
ಜನಸಂಖ್ಯೆ ಇಳಿಮುಖ: 2011ರ ಜನಗಣತಿಯಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಕೊರಗ ಸಮುದಾಯದ ಒಟ್ಟು ಜನಸಂಖ್ಯೆ 16,000 ಆಗಿತ್ತು. ಅದೀಗ 10ರಿಂದ 11ಸಾವಿರಕ್ಕೆ ಇಳಿದಿದೆ ಎಂದು ಅಂದಾಜಿಸಲಾಗಿದೆ. ಐಟಿಡಿಪಿ ಇಲಾಖೆಯ ಅಂದಾಜಿನಂತೆ ಉಡುಪಿ ಜಿಲ್ಲೆಯಲ್ಲಿ 7ರಿಂದ 8ಸಾವಿರ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಮಾರು ಮೂರು ಸಾವಿರ ಕೊರಗರಿದ್ದಾರೆ.
1986ರಲ್ಲಿ ಕೇಂದ್ರ ಸರಕಾರ ಅತ್ಯಂತ ಹಿಂದುಳಿದ, ಅಸಹಾಯಕ, ದುರ್ಬಲ ಬುಡಕಟ್ಟು ಪಂಗಡವಾಗಿದ್ದ ಕೊರಗ ಸಮುದಾಯವನ್ನು ಪಿವಿಟಿಜಿ ಎಂದು ಘೋಷಿಸಿದ ಬಳಿಕ ಸಮುದಾಯದಲ್ಲಿ ಸ್ವಲ್ಪ ಮಟ್ಟಿನ ಜಾಗೃತಿ ಮೂಡತೊಡಗಿದ್ದು, ಶಿಕ್ಷಣ, ಆರೋಗ್ಯ, ಭೂಮಿ, ಘನತೆಯ ಬದುಕಿನ ವಿಷಯವನ್ನು ಮುಂದಿಟ್ಟು ಹೋರಾಟಗಳನ್ನು ಸಂಘಟಿಸಲಾಗಿತ್ತು. ಅದರಲ್ಲೂ ಕಳೆದ 40 ವರ್ಷಗಳಲ್ಲಿ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಯಿತು ಎಂದು ಸುಶೀಲಾ ನಾಡ ತಿಳಿಸಿದರು.
200 ಪದವೀಧರರು: ಕೊರಗ ಸಮುದಾಯದಲ್ಲಿ ಈಗ ಸುಮಾರು 200ರಷ್ಟು ಮಂದಿ ಪದವೀಧರರಿದ್ದಾರೆ. 70 ಮಂದಿ ಸ್ನಾತಕೋತ್ತರ ಪದವೀಧರರಿದ್ದಾರೆ. ನಾಲ್ವರು ವಿವಿಧ ವಿಷಯಗಳಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ಮೂವರು ಇಂಜಿನಿಯರ್ಗಳು, ಒಬ್ಬ ಹೆಣ್ಣುಮಗಳು ಎಂಬಿಬಿಎಸ್ ಮುಗಿಸಿ ವೈದ್ಯೆ ಎನಿಸಿಕೊಂಡಿದ್ದಾರೆ. ನಾಲ್ವರು ಕಾನೂನು ಪದವೀಧರರೂ ಇದ್ದಾರೆ ಎಂದು ನಾಡ ವಿವರಿಸಿದರು.
ಆದರೆ ದುರಾದೃಷ್ಟದ ಸಂಗತಿ ಎಂದರೆ, ಕೊರಗ ಸಮುದಾಯಕ್ಕೆ ಸರಕಾರಿ ಉದ್ಯೋಗ ಎಂಬುದು ಮರೀಚಿಕೆ ಎಂಬಂತಾಗಿದೆ. ಹೆಚ್ಚಿನವರೆಲ್ಲಾ ನಿರುದ್ಯೋಗಿಗಳಾಗಿದ್ದಾರೆ. ಹೆಚ್ಚಿನವರು ಸಿಕ್ಕ ಉದ್ಯೋಗ ಮಾಡುತಿದ್ದಾರೆ. ಒಂದಿಬ್ಬರು ಮಾತ್ರ ಸರಕಾರಿ ಉದ್ಯೋಗದಲ್ಲಿದ್ದಾರೆ. ಪೌರಕಾರ್ಮಿಕರಾಗಿ ದುಡಿಯುತಿದ್ದವರ 200-300 ಮಂದಿ ಮಕ್ಕಳು ಅನುಕಂಪದ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಪಡೆದಿದ್ದಾರೆ ಎಂದವರು ಬೇಸರದಿಂದ ಹೇಳಿದರು.
ಕೊರಗ ಸಮುದಾಯದಲ್ಲಿ ನಾಲ್ವರು ಡಾಕ್ಟರೇಟ್ ಪಡೆದಿದ್ದರೂ ಕೇವಲ ಒಬ್ಬರಿಗೆ ಮಾತ್ರ ಮಂಗಳೂರು ವಿವಿಯಲ್ಲಿ ಖಾಯಂ ಉದ್ಯೋಗ ಸಿಕ್ಕಿದೆ. ಉಳಿದವರು ಅತಿಥಿ ಉಪನ್ಯಾಸಕರಾಗಿ ದುಡಿಯುತಿದ್ದಾರೆ. ಇದೇ ಸ್ಥಿತಿ ಉಳಿದ ಪದವೀಧರರದ್ದೂ ಆಗಿದೆ. ಪ.ಪಂಗಡದಲ್ಲಿರುವ ಬಲಾಢ್ಯ ಸಮುದಾಯಗಳ ಮುಂದೆ ಕೊರಗರು ಮೀಸಲಾತಿಯನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮಗೆ ನೇರ ನೇಮಕಾತಿಗೆ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿ ಗಳಿಗೆ ಮನದಟ್ಟು ಮಾಡಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಬಹುದೆಂಬ ವಿಶ್ವಾಸ ನಮಗಿದೆ ಎಂದರು.
ತಲಾ ಒಂದು ಎಕರೆ ಭೂಮಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 800 ಕುಟುಂಬಗಳು ಭೂಮಿಗಾಗಿ ಅರ್ಜಿ ಹಾಕಿದ್ದು, ಡಾ.ಮಹಮ್ಮದ್ ಪೀರ್ ವರದಿಯಾಧಾರದಲ್ಲಿ ಇವರಿಗೆ ತಲಾ ಒಂದು ಎಕರೆ ಭೂಮಿ ನೀಡುವಂತೆಯೂ ಮನವಿ ಮಾಡಲಾಗಿದೆ. ಅಲ್ಲದೇ ಬೇರೆ ಬೇರೆ ವಿಧದಲ್ಲಿ ನಿಷೇಧಿತ ಅಜಲು ಪದ್ಧತಿ ಈಗಲೂ ಜೀವಂತವಾಗಿದ್ದು, ಅದನ್ನು ಸಂಪೂರ್ಣವಾಗಿ ತೊಡೆದುಹಾಕುವಂತೆ, ಕೊರಗರ ಜನಸಂಖ್ಯೆ ಕುಸಿಯುತ್ತಿರುವ ಬಗ್ಗೆ, ಅವರ ಆರೋಗ್ಯ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆಯೂ ಒತ್ತಾಯಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಸಂಯೋಜಕ ಕೆ.ಪುತ್ರ, ಮುಖಂಡರಾದ ಬೋಗ್ರ ಕೊಕ್ಕರ್ಣೆ, ದಿವಾಕರ, ಚಂದ್ರ ಉಪಸ್ಥಿತರಿದ್ದರು.