ಉಡುಪಿ| ಹದಗೆಟ್ಟ ರಸ್ತೆ, ಶೌಚಾಲಯ, ಕುಡಿಯುವ ನೀರಿನ ಕೊರತೆ; ಎಂಪಿಎಂಸಿ ವರ್ತಕರಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ

Update: 2024-08-13 13:58 GMT

ಉಡುಪಿ, ಆ.13: ವರ್ತಕರ ಶೆಡ್ ತೆರವು ಹಾಗೂ ಮೂಲಭೂತ ಸೌಕರ್ಯ ಗಳ ಕೊರತೆ ವಿರುದ್ಧ ಆದಿಉಡುಪಿಯಲ್ಲಿರುವ ಉಡುಪಿ ಎಪಿಎಂಸಿ ಪ್ರಾಂಗಣದಲ್ಲಿ ವರ್ತಕರು ಕಪ್ಪು ಬಾವುಟ ಪ್ರದರ್ಶಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳ ನಿರ್ಲಕ್ಷ್ಯವನ್ನು ವಿರೋಧಿಸಿ ಕಳೆದ 15 ದಿನಗಳಿಂದ ಇಲ್ಲಿನ ವರ್ತಕರು ತಮ್ಮ ಮಳಿಗೆಗಳಿಗೆ ಕಪ್ಪು ಬಾವುಟ ಕಟ್ಟಿ ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಯಾವುದೇ ಅಧಿಕಾರಿಗಳು ಸ್ಪಂದಸದ ಹಿನ್ನೆಲೆಯಲ್ಲಿ ವರ್ತಕರು ಕಪ್ಪು ಬಾವುಟ ವನ್ನು ಪ್ರದರ್ಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿದಿನ ನೂರಾರು ಗ್ರಾಹಕರು ವಾಹನಗಳಲ್ಲಿ ಬರುತ್ತಾರೆ ಮತ್ತು ರೈತರ ತರಕಾರಿ ಹೊತ್ತ ವಾಹನಗಳು ಬರುತ್ತಿರುತ್ತದೆ. ಆದರೆ ಇಲ್ಲಿ ವಾಹನಗಳು ಓಡಾಟ ನಡೆಸಲು ಯೋಗ್ಯವಾದ ರಸ್ತೆ ಇಲ್ಲ. ಇಡೀ ರಸ್ತೆ ಹೊಂಡಮಯವಾಗಿದ್ದು, ಮಳೆಗಾಲದಲ್ಲಿ ಕೆಸರಿನಿಂದ ಕೂಡಿರುತ್ತದೆ ಎಂದು ವರ್ತಕ ಫಯಾಝ್ ಅಹ್ಮದ್ ಆರೋಪಿಸಿದರು.

‘ಪ್ರತಿದಿನ ಇಲ್ಲಿ ಕಸದ ರಾಶಿಯೇ ಸಂಗ್ರಹವಾಗುತ್ತದೆ. ಆದರೆ ವಾರದಲ್ಲಿ ಎರಡು ಮೂರು ದಿನಗಳಿಗೊಮ್ಮೆ ಮಾತ್ರ ಕಸವನ್ನು ವಿಲೇವಾರಿ ಮಾಡಲಾಗು ತ್ತಿದೆ. ಇದರಿಂದ ಇಡೀ ಪ್ರಾಂಗಣ ಕಸದಿಂದ ತುಂಬಿ ಹೋಗಿ ರೋಗಗಳ ಉಗಮ ಸ್ಥಾನವಾಗಿದೆ. ಅಲ್ಲದೇ ಇಲ್ಲಿರುವ ಶೌಚಾಲಯಕ್ಕೆ ನಿರ್ವಹಣೆಗಾಗಿ ಪ್ರತಿಯೊಬ್ಬರಿಂದ 5ರೂ. ಸಂಗ್ರಹಿಸಲಾಗುತ್ತದೆ. ಆದರೆ ಈ ಶೌಚಾಲಯದಲ್ಲಿ ನೀರಿನಲ್ಲಿ ವ್ಯವಸ್ಥೆ ಮಾತ್ರವಲ್ಲ ಬಾಗಿಲೇ ಇಲ್ಲ. ಇದರಿಂದ ವರ್ತಕರು ದೂರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋಗುವಂತಾಗಿದೆ. ಅದೇ ರೀತಿ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲ’ ಎಂದು ವರ್ತಕ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ದೂರಿದರು.

ರಸ್ತೆ ನಿರ್ಮಿಸುವಂತೆ, ಕಸ ವಿಲೇವಾರಿ ಮಾಡುವಂತೆ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಅದೇ ರೀತಿ ಎಪಿಎಂಸಿಯ 11 ನಿವೇಶನಗಳನ್ನು ಲೀಸ್ ಕಂ ಮಾರಾಟ ಮಾಡಲಾಗಿದೆ. ಆ ಜಾಗದಲ್ಲಿ ಈಗಾಗಲೇ ವರ್ತಕರು ಶೆಡ್ ನಿರ್ಮಿಸಿದ್ದಾರೆ. ಯಾವುದೇ ನೋಟೀಸ್ ನೀಡದೆ ತೆರವುಗೊಳಿಸಲು ಮುಂದಾಗುತ್ತಿದ್ದಾರೆ. ಈ ಕುರಿತು ಹೈಕೋರ್ಟ್ ಆದೇಶ ಬಂದಿದೆ ಎಂದು ಹೇಳುವ ಅಧಿಕಾರಿಗಳು ನಮಗೆ ಯಾವುದೇ ನೋಟೀಸ್ ನೀಡಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಎಪಿಎಂಸಿ ಹೋರಾಟ ಹಿತರಕ್ಷಣಾ ಸಮಿತಿಯ ಪ್ರಮುಖರಾದ ಚಂದ್ರಪ್ಪ ಎಸ್., ಪಂಪೇಶ್, ಲಕ್ಷ್ಮಣ್, ಅಪ್ಪೆ, ಜಗದೀಶ್ ಬಳ್ಳಾರಿ, ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.

ಎಪಿಎಂಸಿ ಕಾರ್ಯದರ್ಶಿಗೆ ವರ್ತಕರಿಂದ ತರಾಟೆ

ಜೀಪಿನಲ್ಲಿ ತನ್ನ ಕಚೇರಿಗೆ ಪ್ರತಿಭಟನಾ ಸ್ಥಳವನ್ನು ಹಾದು ಹೋಗುತ್ತಿದ್ದ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಗೋಪಾಲ ತಿಮ್ಮಪ್ಪ ಕಾಕನೂರು ಅವರನ್ನು ವರ್ತಕರು ತೀವ್ರ ತರಾಟೆಗೆ ತೆಗೆದುಕೊಂಡರು.

ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಿದ್ದ ವರ್ತಕರನ್ನು ಜೀಪಿನಲ್ಲಿ ಹೋಗುತ್ತಿದ್ದ ಕಾರ್ಯದರ್ಶಿ ಪ್ರಶ್ನಿಸಿದರು. ಯಾರು ಇದೆಲ್ಲ ಬಾವುಟ ಕಟ್ಟಿದ್ದು, ನೀವೆಲ್ಲ ಯಾರು ಎಂದು ಹೇಳಿದರು. ಇದರಿಂದ ಆಕ್ರೋಶಗೊಂಡ ವರ್ತಕರು, ನಾವು ಕಳೆದ 15 ದಿನಗಳಿಂದ ಬಾವುಟ ಕಟ್ಟಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದೇವೆ. ನಿಮಗೆ ಅದು ಕಂಡಿಲ್ಲ. ಈಗ ಬಂದು ನಮ್ಮನ್ನೇ ಪ್ರಶ್ನೆ ಮಾಡುತ್ತೀರಿ. ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಅದನ್ನು ಮೊದಲು ಸರಪಡಿಸಿ ಎಂದು ತರಾಟೆಗೆ ತೆಗೆದುಕೊಂಡರು.

‘ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಟೆಂಡರ್ ನೀಡಲಾಗಿದೆ. ಆದಷ್ಟು ಬೇಗ ರಸ್ತೆ ನಿರ್ಮಾಣ ಕಾರ್ಯ ಮಾಡಲಾಗುವುದು. ಕಸ ವಿಲೇವಾರಿ ಹಾಗೂ ಶೌಚಾಲಯದ ನಿರ್ವಹಣೆಯನ್ನು ಟೆಂಡರ್ ನೀಡ ಲಾಗಿದೆ. 11 ನಿವೇಶನವನ್ನು ಮಾರಾಟ ಮಾಡಲಾಗಿದ್ದು, ಅಲ್ಲಿಂದ ತೆರವು ಗೊಳಿಸಲಾದ ವರ್ತಕರಿಗೆ ಬೇರೆ ಕಡೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News