ಯುವಜನತೆ ಮಾದಕ ವ್ಯಸನ ವಿರುದ್ಧದ ಕಾನೂನನ್ನು ಅರಿಯಬೇಕು: ನ್ಯಾ.ಜಾನ್ ಮೈಕೆಲ್ ಕುನ್ಹಾ

Update: 2023-07-22 14:04 GMT

ಉಡುಪಿ, ಜು.22: ಯುವಜನತೆ ಮಾದಕ ವ್ಯಸನ ವಿರುದ್ದದ ಕಾನೂನಿನ ಅರಿವು ಹೊಂದುವುದರ ಜೊತೆಗೆ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಾದಕ ವಸ್ತುಗಳಿಂದ ದೂರವಿದ್ದು, ಸದೃಢ ಆರೋಗ್ಯ ಹೊಂದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ.ಜಾನ್ ಮೈಕಲ್ ಕುನ್ಹಾ ಹೇಳಿದ್ದಾರೆ.

ಮಣಿಪಾಲ ಕೆಎಂಸಿಯ ಡಾ.ಟಿ.ಎಂ.ಎ.ಪೈ ಆಡಿಟೋರಿಯಂನಲ್ಲಿ ಶನಿವಾರ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯ ಹಾಗೂ ಮಣಿಪಾಲದ ಮಾಹೆ ಸಹಯೋಗದಲ್ಲಿ ನಡೆದ ಮಾದಕ ವಸ್ತುಗಳ ವಿರುದ್ಧ ಯುವಜನತೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಒಂದು ಕಡೆ ಹೊಸ ತಂತ್ರಜ್ಞಾನ ಯುವಜನತೆಯ ಬದುಕನ್ನ ಬದಲಾಯಿ ಸುತ್ತಿದ್ದರೆ, ಮತ್ತೊಂದು ಕಡೆ ಮಾದಕ ವ್ಯಸನದಿಂದ ಯುವಜನತೆಯ ಜೀವನ, ಅವರ ಕುಟುಂಬ, ಸಮಾಜ ಹಾಳಾಗುತ್ತಿದೆ. ಹೈಕೋರ್ಟ್‌ನ ಇತ್ತೀಚಿನ ಅಂಕಿ ಅಂಶಗಳಂತೆ, ರಾಜ್ಯದ ನ್ಯಾಯಾಲಯಗಳಲ್ಲಿ ಡಿಸೆಂಬರ್ 2021ರಲ್ಲಿ  6554 ಮಾದಕ ವ್ಯಸನ ಪ್ರಕರಣ ಬಾಕಿ ಇದ್ದು, ಮೇ 2023 ರಲ್ಲಿ ಇದರ ಸಂಖ್ಯೆ 10,167ಕ್ಕೇರಿದೆ. ಬೆಂಗಳೂರು ಅತೀ ಹೆಚ್ಚು ಮಾದಕ ವ್ಯಸನ ಪ್ರಕರಣ ಕಂಡು ಬರುವ ಜಿಲ್ಲೆಯಾಗಿದ್ದು, ಎರಡನೇ ಸ್ಥಾನದಲ್ಲಿ ಮಂಗಳೂರು. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಿವೆ ಎಂದರು.

ಉಡುಪಿ ಜಿಲ್ಲೆಯಲ್ಲಿ 300 ಪ್ರಕರಣಗಳು ದಾಖಲಾಗಿದ್ದು, ಎಫ್‌ಐಆರ್ ನಲ್ಲಿ 24 ಆರೋಪಿಗಳು ಪದವೀಧರರು, ವೈದ್ಯರು ಮತ್ತು ಮೆಡಿಕಲ್ ವಿದ್ಯಾರ್ಥಿ ಗಳಾಗಿದ್ದಾರೆ. ಇದರಿಂದ ತಿಳಿಯುವುದೇನೆಂದರೆ, ಮಾದಕ ವ್ಯಸನ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಎದ್ದು ಕಾಣಿಸುತ್ತಿದೆ. ಎನ್‌ಡಿಪಿಎಸ್ ಕಾಯ್ದೆಯಲ್ಲಿ, ಮಾದಕ ದ್ರವ್ಯ ತಯಾರಿಸುವವರು, ವ್ಯಸನಿ ಗಳು ಹಾಗೂ ಸಾಗಾಟ,ಮಾರಾಟ ಮಾಡುವವರನ್ನು ಕಾನೂನು ಒಂದೇ ರೀತಿಯಲ್ಲಿ ನೋಡುತ್ತದೆ. ಭಾರತೀಯ ದಂಡ ಸಂಹಿತೆಯಲ್ಲಿ(ಐಪಿಸಿ)ಯಲ್ಲಿ ಕೊಲೆಗಾರನಿಗೆ ಕಡಿಮೆ ಅವಧಿಯ ಶಿಕ್ಷೆ ಇದ್ದರೆ, ಎನ್‌ಡಿಪಿಎಸ್‌ನಲ್ಲಿ ಅದಕ್ಕಿಂತ ತೀವ್ರ ತರವಾದ ಶಿಕ್ಷೆ ಇದೆ ಎಂದರು.

ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ಕುಮಾರ್ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನಸಿಕ ಒತ್ತಡ, ಭಾವನೆ, ಮಾನಸಿಕ ಖಿನ್ನತೆ ಯಂತ ಕಾರಣಗಳು ವಿದ್ಯಾರ್ಥಿಗಳನ್ನು ಮಾದಕ ವ್ಯಸನಿಗಳಾಗಿಸುತ್ತವೆ. ಪೋಷಕರು ನಿರಂತರ ತಮ್ಮ ಕೆಲಸದಲ್ಲಿ ನಿರತರಾಗಿರುವುದರಿಂದ ಮಕ್ಕಳ ಕಡೆ ಗಮನ ಹರಿಸುವುದು ತುಂಬಾ ಕಡಿಮೆಯಾಗುತ್ತಿದೆ. ಡ್ರಗ್ಸ್ ವ್ಯಸನವು ವಿದ್ಯಾರ್ಥಿಯ ಜೀವನದ ಗುರಿಯ ಮೇಲೆ, ಕುಟುಂಬದ ಮೇಲೆ ಮತ್ತು ಮುಖ್ಯ ವಾಗಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಯುವಜನತೆಯು ದೇಶದ ಭವಿಷ್ಯವಾಗಿದ್ದು, ಮಾದಕ ದ್ರವ್ಯವು ಅವರನ್ನು ಹಾಳು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಮಾಹೆಯ ರಿಜಿಸ್ಟ್ರಾರ್ ಡಾ.ಪಿ.ಗಿರಿಧರ ಕಿಣಿ ಮಾದಕ ವ್ಯಸನದ ಕುರಿತು ಪ್ರತಿಜ್ಞಾವಿಧಿಯನ್ನು ಭೋದಿಸಿದರು.

ಕಾರ್ಯಕ್ರಮದಲ್ಲಿ ಉಡುಪಿಯ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಹಾಕೆ, ಬೆಂಗಳೂರಿನ ಕೆಎಸ್‌ಎಲ್‌ಎಸ್‌ಎ ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಹಿರಿಯ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್. ಶರ್ಮಿಳಾ, ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿರ್ದೇಶಕಿ ಗೀತಾ ಮಯ್ಯ ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News