ಭಟ್ಕಳ: ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

Update: 2024-05-11 08:41 GMT

ಭಟ್ಕಳ, ಮೇ 11: ಹಾಡುಹಗಲೇ ಮನೆಯೊಂದರ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ 23 ಸಾವಿರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಶಿರಾಲಿಯ ಬಂಡಿಕಾಶಿ ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಬಂಡಿಕಾಶಿ ನಿವಾಸಿ ಮಂಜುನಾಥ ರಾಮ ನಾಯ್ಕ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮಂಜುನಾಥ ನಾಯ್ಕ ಬೊಲೆರೋ ವಾಹನ ಹೊಂದಿದ್ದು, ಶುಕ್ರವಾರ ಬೆಳಗ್ಗೆ ಎಂದಿನಂತೆ ಮಗನನ್ನು ಕರೆದುಕೊಂಡು ವಾಹನ ಬಾಡಿಗೆಗೆ ತೆರಳಿದ್ದರು. ಇದೇ ವೇಳೆ ಮಂಜುನಾಥ್ ರ ಪತ್ನಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರೆನ್ನಲಾಗಿದೆ. ಈ ಅವಧಿಯಲ್ಲಿ ಮನೆಯ ಹಿಂಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಕೋಣೆಯಲ್ಲಿರುವ ಕಪಾಟನ್ನು ಒಡೆದು ಅಂದಾಜು 250 ಗ್ರಾಂ ತೂಕದ ಚಿನ್ನಾಭರಣ ಹಾಗೂ ಸುಮಾರು 35 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಮಂಜುನಾಥ ನಾಯ್ಕ ಮನೆಗೆ ಬಂದು ಹಿಂಬದಿ ಅಡುಗೆ ಒಲೆಗೆ ಸೌದೆ ಹಾಕಲು ಮುಂದಾದಾಗ ಹಿಂಬಾಗಿಲು ತೆರೆದಿರುವುದನ್ನು ಗಮನಿಸಿ ಒಳಗೆ ತೆರಳಿ ಪರಿಶೀಲಿಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಭಟ್ಕಳ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಕಾರವಾರದಿಂದ ಶ್ವಾನ ದಳವನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News