ಭಟ್ಕಳ: ತ್ಯಾಜ್ಯ ವಿಲೇವಾರಿ ಘಟಕವಾಗಿ ಮಾರ್ಪಟ್ಟ ಜಾಮಿಯಾಬಾದ್ ರಸ್ತೆ

Update: 2023-07-20 15:01 GMT

ಭಟ್ಕಳ: ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಜಾಮಿಯಬಾದ್ ರಸ್ತೆ ತ್ಯಾಜ್ಯ ವಿಲೇವಾರಿ ಘಟಕವಾಗಿ ಮಾರ್ಪಟ್ಟಿದ್ದು ರಸ್ತೆಯಲ್ಲಿ ಓಡಾಡುವ ಶಾಲಾ ಮಕ್ಕಳಿಗೆ, ದಾರಿಹೋಕರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಹೆಬಳೆ ಪಂಚಯಾತ್ ವ್ಯಾಪ್ತಿಗೆ ಸೇರಿದ ಜಾಮಿಯಾಬಾದ್ ರಸ್ತೆ, ರಹ್ಮತಾಬಾದ್‌ ನ ಅಬೂಬಕರ್ ಮಸಿದಿ ಹಾಗೂ ನ್ಯೂಶಮ್ಸ್ ಶಾಲೆ ಎದುರು ಕಸ ರಾಶಿಯೇ ಬಿದ್ದುಕೊಂಡಿದ್ದು ಈ ಭಾಗದ ಜನರ ಆರೋಗ್ಯ ಕುರಿತಂತೆ ಕಳವಳ ಪಡುವಂತಾಗಿದೆ. ಈ ಪ್ರದೇಶದಲ್ಲಿ ನಾಲ್ಕು ಪ್ರತಿಷ್ಠಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಎರಡು ಸರ್ಕಾರಿ ಪ್ರೌಢಶಾಲೆ ಹಾಗೂ ನಾಲ್ಕು ಸರ್ಕಾರಿ ಪ್ರಾಥಮಿಕಗಳಿವೆ. ದಿನಾಲೂ ಸಾವಿರಾರು ವಿದ್ಯಾರ್ಥಿಗಳು ಕಸದ ರಾಶಿಯನ್ನು ದಾಟಿಕೊಂಡೆ ಶಾಲೆಯನ್ನು ತಲುಪುತ್ತಿದ್ದಾರೆ. ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಆತಂಕದ ಸ್ಥಿತಿ ಉಂಟುಮಾಡಿದ್ದು ಭವಿಷ್ಯದಲ್ಲಿ ಭಾರಿ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಆರೋಗ್ಯ ಕಾರ್ಯಕರ್ತರು ಎಚ್ಚರಿಕೆಯನ್ನು ನೀಡಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಹೆಬಳೆ ಗ್ರಾ.ಪಂ ನಲ್ಲಿ ಈ ಸಮಸ್ಯೆ ತಾಂಡವವಾಡುತ್ತಿದ್ದರೂ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಗಮನ ಹರಿಸದೆ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.

ಈ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದೆ ಇರುವುದರಿಂದಾಗಿ ಇಲ್ಲಿ ವಾಸಿಸುವ ಜನರೂ ಮತ್ತು ಅಕ್ಕಪಕ್ಕದವರು ತಮ್ಮ ಮನೆಯ ಕಸ ಮತ್ತು ತ್ಯಾಜ್ಯಗಳನ್ನು ತಂದು ರಸ್ತೆಗೆ ಎಸೆದು ಹೋಗುತ್ತಿದ್ದಾರೆ.

ಈ ಕುರಿತಂತೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ರಹ್ಮತಾಬಾದ್ ನ ಮುಖಂಡ ಯಾಹ್ಯಾ ಹಲ್ಲಾರೆ, ರಸ್ತೆಯಲ್ಲಿ ಜನರು ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯುತ್ತಿರುವುದು ಕಂಡರೆ ನಿಜಕ್ಕೂ ಆತಂಕವಾಗುತ್ತಿದೆ. ತಮ್ಮ ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯ ಕುರಿತಂತೆ ಕಿಂಚಿತ್ತೂ ಪ್ರಜ್ಞೆ ಇಲ್ಲದ ಜನರೇ ಇಂತಹ ಕಾರ್ಯ ಮಾಡಬಲ್ಲರೂ ಎಂದು ಬೇಸರ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಸ್ಥಳಿಯ ಪಂಚಾಯತ್ ಆಡಳಿತ ಈ ಕುರಿತಂತೆ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಆರೋಪಿಸುತ್ತಾರೆ. ಜೊತೆಗೆ ಪಂಚಾಯತ್ ಅಧಿಕಾರಿಗಳಿಗೆ ಈ ಕುರಿತಂತೆ ಹಲವು ಬಾರಿ ಮನವಿ ಅರ್ಪಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಜಿಲ್ಲಾಧಿಕಾರಿಗಳಿಗೆ ಕೂಡ ಇಲ್ಲಿನ ಸಮಸ್ಯೆಯನ್ನು ಗಮನಕ್ಕೆ ತಂದಿದ್ದೇವೆ. ಯಾರೂ ಕೂಡ ಇದರ ಬಗ್ಗೆ ಗಮನ ಹರಿಸಿಲ್ಲ. ತ್ಯಾಜ್ಯ ವಿಲೇವಾರಿ ಮಾಡಲು ಸ್ಥಳವೇ ಇಲ್ಲದಿರುವಾಗ ಜನರು ತಮ್ಮ ಮನೆಯ ತ್ಯಾಜ್ಯವನ್ನು ಎಲ್ಲಿ ಹಾಕುವುದು ಎಂದು ಪ್ರಶ್ನಿಸಿದ ಅವರು, ಇದಕ್ಕಾಗಿ ಪಂಚಾಯತ್ ಅಥವಾ ತಾಲೂಕಾಡಳಿತ ಸೂಕ್ತ ಸ್ಥಳವನ್ನು ಗುರುತಿಸಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಹಲವು ಸಾಮಾಜಿಕ ಹೋರಾಟಗಾರರು ಮತ್ತು ಸಂಘಸಂಸ್ಥೆಗಳ ಮುಖಂಡರು ಇಲ್ಲಿನ ಸಮಸ್ಯೆಗಳ ಕುರಿತು ಹೋರಾಟಕ್ಕಿಳಿದರೆ ಜಿಲ್ಲಾಡಳಿತ ಎಚ್ಚರಗೊಳ್ಳಬಹುದು ಎಂದ ಅವರು ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸದೆ ಇದ್ದರೆ ಸ್ಥಳೀಯರು ಪಂಚಾಯತ್ ಕಾರ್ಯಲಯ ಮುತ್ತಿಗೆ ಹಾಕಬೇಕಾಗಬಹುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News