ವಿಜಯನಗರದಲ್ಲಿ ಇಂದು ಜಿಲ್ಲಾ ಮಟ್ಟದ ಜನತಾ ದರ್ಶನ: ಮಾಹಿತಿ ನೀಡಿಲ್ಲ ಎಂದು ರೈತ ಮುಖಂಡರ ಆಕ್ರೋಶ

Update: 2024-08-14 04:55 GMT

ವಿಜಯನಗರ, ಆ.14: ವಿಜಯನಗರದಲ್ಲಿ ಇಂದು(ಆ.14) ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ. ಆದರೆ ಈ ಬಗ್ಗೆ ನಮಗೆ ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತ ಯಾವುದೇ ರೀತಿಯ ಮಾಹಿತಿ ನೀಡಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಇಂದು ಬೆಳಗ್ಗೆ 10:30ಕ್ಕೆ ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಇದರಲ್ಲಿ ಭಾಗಿಯಾಗಿ ಸಚಿವರಿಗೆ ನೇರವಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಈಗಾಗಲೇ ಪ್ರಕಟನೆಯಲ್ಲಿ ತಿಳಿಸಿದ್ದಾರೆ

ಆದರೆ ವಿಜಯನಗರ ಜಿಲ್ಲಾ ರೈತ ಮುಖಂಡ ಗಾಳಪ್ಪ ಪ್ರತಿಕ್ರಿಯಿಸಿ, ನೇರವಾಗಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಯಾವುದೇ ರೀತಿಯ ನಮಗೆ ಮಾಹಿತಿ ಕೊಟ್ಟಿಲ್ಲ. ಈ ಹಿಂದೆ ಜಿಲ್ಲಾ ರೈತರ ಸಂಘಟನೆಯ ಅಧ್ಯಕ್ಷರಿಗೆ ಸಂದೇಶ ಕಳಿಸುವ ಮುಖಾಂತರ ನಮಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಸರ್ಕಾರ ರೈತರ ಅನುಕೂಲಕ್ಕಾಗಿ ಮಾಡಿರುವ ಯಾವುದೇ ಕಾರ್ಯಕ್ರಮಗಳ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ವಿಚಾರವಾಗಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮತ್ತು ಅವರ ಆಪ್ತ ಸಹಾಯಕ ನಾಗರಾಜ್ ರನ್ನು 'ವಾರ್ತಾಭಾರತಿ' ಪ್ರತಿನಿಧಿ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದ್ದು, ಅವರು ಕರೆ ಸ್ವೀಕರಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News