ಖಾಸಗಿಯವರ ಕೈಗೆ ಹೋಗಲಿವೆಯೇ ಸರಕಾರಿ ಶಾಲೆಗಳು?

Update: 2023-08-22 05:20 GMT

ಇಂದು ಸರಕಾರಿ ಶಾಲೆಗಳು ಮತ್ತು ಸರಕಾರಿ ಆಸ್ಪತ್ರೆಗಳೆಂದರೆ ಯಾರಿಗೂ ಬೇಡ. ಸಣ್ಣ ಜ್ವರಕ್ಕೂ ರಾಜಕಾರಣಿಗಳು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಸರಕಾರಿ ಆಸ್ಪತ್ರೆಗೇ ತಾವೂ ದಾಖಲಾಗಿ ಒಂದು ಮಾದರಿಯನ್ನು ಅವರು ಹುಟ್ಟುಹಾಕುವುದಿಲ್ಲ. ಅವುಗಳ ಬಗ್ಗೆ ಜನಸಾಮಾನ್ಯರಲ್ಲಿಯೂ ನಂಬಿಕೆ ಹುಟ್ಟುವಂತೆ ಮಾಡುವುದಿಲ್ಲ. ಅಲ್ಲಿಯೇ ಆರೋಗ್ಯ ಕಾಯುವ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕ ಕಾಳಜಿಯನ್ನು ತೋರಿಸುವುದಿಲ್ಲ.

ಸರಕಾರಿ ಶಾಲೆಗಳ ಕಥೆಯೂ ಅಷ್ಟೆ. ಅವನ್ನು ಮುಚ್ಚುವ ಬಗ್ಗೆ ತೋರುವ ಉತ್ಸಾಹವನ್ನು ಅವುಗಳ ಉಳಿವಿಗೆ ಮತ್ತು ಅಭಿವೃದ್ಧಿಗೆ ಯಾವ ಸರಕಾರವೂ ತೋರಿಸುವುದಿಲ್ಲ. ಒಂದೇ ಒಂದು ಒಳ್ಳೆಯ ಮಾತಾಡಿದರೂ, ಒಬ್ಬ ಶಿಕ್ಷಕನ ಬೆನ್ನು ತಟ್ಟಿದರೂ ಸರಕಾರಿ ಶಾಲೆಗಳು ಚೇತರಿಸಿಕೊಳ್ಳುವುದು ಸಾಧ್ಯವಿದೆ. ಆದರೆ ಹಾಗಾಗುತ್ತಿಲ್ಲ. ವಾಸ್ತವವೇನೆಂದರೆ, ಖಾಸಗಿ ಶಾಲೆಗಳನ್ನೂ ಮೀರಿಸಬಲ್ಲ ಕೆಲವು ಸರಕಾರಿ ಶಾಲೆಗಳಿವೆ ಮತ್ತು ಎಷ್ಟೋ ಕಡೆ ಅದು ಸಾಧ್ಯವಾಗಿರುವುದು ಶಿಕ್ಷಕರ ಇಚ್ಛಾ ಶಕ್ತಿಯಿಂದ, ಬದ್ಧತೆಯಿಂದ. ಆದರೆ ಅಂಥ ಕ್ರಮವನ್ನು ಕಂಡು ಪ್ರೋತ್ಸಾಹಿಸುವ, ಆರ್ಥಿಕ ಬಲವಾಗಿ ನಿಲ್ಲುವ ಇಚ್ಛಾ ಶಕ್ತಿ, ಸರಕಾರಕ್ಕೆ ಅಥವಾ ಸರಕಾರದ ಭಾಗವಾಗಿರುವ ಅಧಿಕಾರಿಗಳಿಗೆ ಇಲ್ಲ. ಯಾಕೆಂದರೆ ಸರಕಾರಿ ಶಾಲೆಗಳು ಅವರಾರಿಗೂ ಲಾಭದಾಯಕ ಉದ್ಯಮವಲ್ಲ.

ಎಲ್ಲರಿಗೂ ಖಾಸಗಿ ಶಿಕ್ಷಣ ವ್ಯವಸ್ಥೆಯನ್ನು ನೀರುಣಿಸಿ ಬೆಳೆಸುವುದರತ್ತಲೇ ಇನ್ನಿಲ್ಲದ ಕಾಳಜಿ. ಅದಕ್ಕಾಗಿ ಸರಕಾರಿ ಶಾಲೆಯನ್ನು ಬಲಿಹಾಕುವುದಕ್ಕೂ ಅಧಿಕಾರಸ್ಥರು ಹಿಂದೆಮುಂದೆ ನೋಡುವುದಿಲ್ಲ. ಈಗ ಖಾಸಗಿ ಶಾಲೆಗಳು ಒಂದೊಂದು ಸರಕಾರಿ ಶಾಲೆಯನ್ನು ದತ್ತು ಪಡೆಯಲಿರುವುದರ ಹಿಂದೆ ಕೂಡ ಇಂಥದೇ ಉದ್ದೇಶವಿದೆಯೆ?

ಚಿಂತಕ, ಶಿಕ್ಷಣ ತಜ್ಞ ಬಿ.ಶ್ರೀಪಾದ ಭಟ್ ಅವರು ಇದು ನಿಜಕ್ಕೂ ಆಘಾತಕಾರಿ ಎಂದೇ ಹೇಳುತ್ತಿದ್ದಾರೆ. ಅವರ ಪ್ರಕಾರ, ಪ್ರಜಾಪ್ರಭುತ್ವದ ಆಶಯ ಜೀವಂತವಾಗಿರಬೇಕೆಂದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಬಲೀಕರಣಗೊಳ್ಳಬೇಕು. ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಬೇಕು. ಸಮಾನ ಶಿಕ್ಷಣ, ನೆರೆಹೊರೆ ಶಾಲಾ ಪದ್ಧತಿ ಜಾರಿಗೊಳ್ಳಬೇಕು. ಈ ಮೂಲ ತತ್ವಗಳು ಮತ್ತು ೬ರಿಂದ ೧೪ರ ವಯಸ್ಸಿನ ಮಕ್ಕಳ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಕಡ್ಡಾಯಗೊಳಿಸಿದ ಸಂವಿಧಾನದ ೨೧ಎ ಆಶಯವನ್ನೇ ಕಡೆಗಣಿಸಿದ ನಿರ್ಧಾರ ಇದಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ‘ಖಾಸಗಿ-ಸಾರ್ವಜನಿಕ-ಸಹಭಾಗಿತ್ವ’ದ ಅಡಿಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲು ಹೊರಟಿರುವುದು ಸ್ವಾಗತಾರ್ಹವಲ್ಲ.

ಖಾಸಗೀಕರಣದ ಅಪಾಯಗಳೇನು?

ಇಂದಿನ ಅಗತ್ಯಕ್ಕೆ ಅನುಗುಣವಾದ ಶಿಕ್ಷಣ ಪೂರೈಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಸಮರ್ಥವಾಗಿದ್ದು, ಸಂವಿಧಾನದ ಎಲ್ಲಾ ನೀತಿಸಂಹಿತೆಗಳನ್ನು ಪಾಲಿಸಿಕೊಂಡು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವಂಥ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬೆಂಬಲಿಸಬೇಕು ಎಂಬುದು ಖಾಸಗಿ ಶಾಲೆಗಳ ಸಮರ್ಥಕರ ವಾದ.

ದುರಂತವೆಂದರೆ, ಕಲಿಕೆಯ ಗುಣಮಟ್ಟ ಹೆಚ್ಚಿಸುತ್ತೇವೆ ಎಂದೇ ಪ್ರಾರಂಭಗೊಳ್ಳುವ ಖಾಸಗಿ ಸಂಸ್ಥೆಗಳು ಕ್ರಮೇಣ ಅದನ್ನು ಒಂದು ಲಾಭದಾಯಕ ಉದ್ಯಮವನ್ನಾಗಿ ರೂಪಿಸುತ್ತವೆ. ಸರಕಾರಿ ಶಾಲೆಗಳು ಈ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಗೊಳ್ಳುತ್ತವೆ. ನಂತರ ಈ ಖಾಸಗಿ ಸಂಸ್ಥೆಗಳು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ರಚಿಸುತ್ತವೆ.

ಮೊದಮೊದಲು ಶೇ.೩೦ರಿಂದ ೪೦ರಷ್ಟು ಶುಲ್ಕವನ್ನು ಮಾತ್ರ ಪೋಷಕರಿಂದ ಪಡೆಯಲಾಗುವುದೆಂದು ತೋರಿಸಿಕೊಳ್ಳುವ ಇವು ಕಡೆಗೆ ಶೇ.೮೦ರಿಂದ ೯೦ರಷ್ಟನ್ನು ಪೋಷಕರಿಂದಲೇ ವಸೂಲಿ ಮಾಡುತ್ತವೆ. ಸಂವಿಧಾನದ ಎಲ್ಲ ನೀತಿಸಂಹಿತೆಗಳನ್ನು ಧಿಕ್ಕರಿಸುತ್ತವೆ. ಅದರ ಗುಣಮಟ್ಟವನ್ನು ನಿರ್ಧರಿಸುವ, ಅವುಗಳ ಪಠ್ಯಪುಸ್ತಗಳ ಮೌಲ್ಯಮಾಪನ ಮಾಡುವ ಅಧಿಕಾರವನ್ನು ಸಹ ಶಿಕ್ಷಣ ಇಲಾಖೆ ಕಳೆದುಕೊಂಡಿರುತ್ತದೆ ಎಂಬುದು ಶ್ರೀಪಾದ ಭಟ್ ಅವರ ವಾದ.

ಇದೆಲ್ಲ ಯಾವಾಗಿನಿಂದ ಶುರುವಾಯಿತು ಎಂಬುದನ್ನು ಅವರು ವಿವರಿಸುವುದು ಹೀಗೆ:

೧೯೯೧ರಲ್ಲಿ ದೇಶ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತೆರೆದುಕೊಂಡ ನಂತರ ಸರಕಾರಿ ವಲಯಗಳು ರೋಗಗ್ರಸ್ಥ ಮತ್ತು ಅನುಪಯುಕ್ತ, ಆದರೆ ಖಾಸಗಿ ವಲಯಗಳು ಲಾಭದಾಯಕ ಮತ್ತು ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ ಎಂದು ಹೇಳುವುದು ಶುರುವಾಯಿತು. ಖಾಸಗೀಕರಣದ ಎಲ್ಲಾ ದುಷ್ಪರಿಣಾಮಗಳು ಕೃಷಿ, ಆರೋಗ್ಯ, ಸಾಂಸ್ಕೃತಿಕ ವಲಯಗಳಂತೆಯೆ ಶಿಕ್ಷಣ ವಲಯದಲ್ಲಿಯೂ ತಳಮಟ್ಟದವರೆಗೆ ವ್ಯಾಪಿಸಿಕೊಂಡಿವೆ.

ಇಂದು ಸರಕಾರವೇ ಮುಂದೆ ನಿಂತು ಮಕ್ಕಳ ಕೊರತೆಯ ಹೆಸರಿನಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಇದಕ್ಕೆ ಯಾವ ಪ್ರತಿರೋಧವೂ ವ್ಯಕ್ತವಾಗುತ್ತಿಲ್ಲ. ಮಕ್ಕಳು ಏಕೆ ಸರಕಾರಿ ಶಾಲೆಗೆ ಬರುತ್ತಿಲ್ಲ? ಯಾವ ಕಾರಣಕ್ಕೆ ಖಾಸಗಿ ಶಾಲೆಗೆ ಸೇರಿಕೊಳ್ಳಬೇಕಾಗಿದೆ ಎಂದು ಪೋಷಕರಾಗಲೀ, ಶಿಕ್ಷಣ ತಜ್ಞರಾಗಲೀ ಸರಕಾರವನ್ನು ಪ್ರಶ್ನಿಸುತ್ತಿಲ್ಲ.

ಪ್ರಸಕ್ತ ಸರಕಾರಿ ಶಾಲೆಗಳ ವಾಸ್ತವ ಏನಿದೆ?

೨೩, ಜೂನ್ ೨೦೨೩ರ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ,

ಒಟ್ಟು ಕಿರಿಯ ಪ್ರಾಥಮಿಕ ಶಾಲೆಗಳು - ೨೧,೦೪೫

ಹಿರಿಯ ಪ್ರಾಥಮಿಕ ಶಾಲೆಗಳು-೨೨,೦೮೬

ಮಾಧ್ಯಮಿಕ ಶಾಲೆಗಳು-೫,೦೫೧

ಪದವಿಪೂರ್ವ ಕಾಲೇಜುಗಳು-೧,೨೨೯

೨೦೨೨ರ ಯುಡಿಐಎಸ್‌ಇ ವರದಿ ಪ್ರಕಾರ,

ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು - ೫೪,೪೫,೯೮೯

ಶೇ.೬೫.೫೫ರಷ್ಟು ಸರಕಾರಿ ಶಾಲೆಗಳು.

ಸಮಾಜ ಕಲ್ಯಾಣ ಇಲಾಖೆ ಶಾಲೆಗಳು -೧,೨೦೩

ಅನುದಾನಿತ ಶಾಲೆಗಳು -೬,೫೫೪

ಅನುದಾನರಹಿತ ಖಾಸಗಿ ಶಾಲೆಗಳು -೧೬,೮೯೩

ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿನ ಶಿಕ್ಷಕರು -೧,೯೯,೦೫೭

೨೦೨೧-೨೨ರಲ್ಲಿ ೨.೦೮ ಲಕ್ಷ ಶಿಕ್ಷಕರಿದ್ದರು. ಅಂದರೆ ಒಂದು ವರ್ಷದಲ್ಲಿ ೯೫೧ ಶಿಕ್ಷಕರು ಕಡಿಮೆಯಾಗಿದ್ದಾರೆ.

೧೫,೦೦೦ ಹೊಸ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿದಿದೆ. ಆದರೆ ಇನ್ನೂ ಆದೇಶ ಹೊರಡಿಸಿಲ್ಲ.

ಅನುದಾನರಹಿತ ಖಾಸಗಿ ಶಾಲೆಗಳಲ್ಲಿನ ಶಿಕ್ಷಕರು ೧,೦೨,೮೯೪

ವಿದ್ಯಾರ್ಥಿ ಶಿಕ್ಷಕರ ಅನುಪಾತ ೨೩:೧ ಇದೆ.

ಆದರೆ, ೧ರಿಂದ ೫ನೇ ತರಗತಿಗೆ ತರಗತಿಗೊಬ್ಬರು ಶಿಕ್ಷಕರಿರಬೇಕು.

೬ರಿಂದ ೧೦ನೇ ತರಗತಿಗೆ ವಿಷಯಕ್ಕೊಬ್ಬರು ಶಿಕ್ಷಕರಿರಬೇಕು.

ಕರ್ನಾಟಕ ಆರ್ಥಿಕ ಸಮೀಕ್ಷೆ ೨೦೨೩ರ ಪ್ರಕಾರ,

ಶೇ.೯೮ರಷ್ಟು ಸರಕಾರಿ ಶಾಲೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

೨.೦೨ ಲಕ್ಷ ಕ್ಲಾಸ್ ರೂಂಗಳಿವೆ.

ಇದರಲ್ಲಿ ಶೇ.೭೪.೭೯ರಷ್ಟು ಉತ್ತಮ ಸ್ಥಿತಿಯಲ್ಲಿವೆ.

೨೭,೩೫೮ ಕ್ಲಾಸ್ ರೂಂಗಳಲ್ಲಿ ಹೆಚ್ಚಿನ ದುರಸ್ತಿಯಾಗಬೇಕಾಗಿದೆ.

ಗ್ರಾಮೀಣ ಭಾಗದಲ್ಲಿರುವ ೧೩,೮೦೦ ಶಾಲೆಗಳಲ್ಲಿ ೨೫ಕ್ಕೂ ಕಡಿಮೆ ಮಕ್ಕಳಿದ್ದಾರೆ.

೨೦೨೧ರ ಮಾಹಿತಿಯ ಪ್ರಕಾರ ೨೭೬ ಕರ್ನಾಟಕ ಪಬ್ಲಿಕ್ ಶಾಲೆಗಳಿವೆ.

ಇಲ್ಲಿ ೧-೧೨ನೇ ತರಗತಿಯವರೆಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಕೊಡಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಕಟಣೆ ಹೇಳುತ್ತದೆ. ಇಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿರುವುದು ವಿಶೇಷ. ಆದರೆ ಈ ಮಾದರಿ ಶಾಲೆಗಳಿಗಾಗಿ ಹೊಸ ಕಟ್ಟಡಗಳಿಲ್ಲ. ಮೂಲಭೂತ ಸೌಕರ್ಯಗಳಿಲ್ಲ. ಹೋಬಳಿ ಮಟ್ಟದಲ್ಲಿ ಆಯ್ದ ಸರಕಾರಿ ಶಾಲೆಗಳಿಗೆ ಪಬ್ಲಿಕ್ ಶಾಲೆಗಳು ಎಂದು ಬೋರ್ಡ್ ಹಾಕಲಾಗಿದೆ. ಇಲ್ಲಿ ಶಿಕ್ಷಕರ ಕೊರತೆ ಮಾತ್ರವಲ್ಲ, ಪಠ್ಯಪುಸ್ತಕಗಳ ಕೊರತೆಯೂ ಇದೆ.

ರಾಜ್ಯದ ಸರಕಾರಿ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ, ಬೋಧನೆಯ ಗುಣಮಟ್ಟ, ಮೂಲಭೂತ ಸೌಕರ್ಯಗಳ ಗುಣಮಟ್ಟ ಹೆಚ್ಚಿಸಲಿಕ್ಕಾಗಿ ಮತ್ತು ನಿರಂತರವಾಗಿ ಗುಣಮಟ್ಟ ಕಾಪಾಡಿಕೊಳ್ಳಲಿಕ್ಕಾಗಿಯೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ,

ವಲಯ ಸಂಪನ್ಮೂಲ ಸಂಯೋಜಕರು(ಬಿಆರ್‌ಸಿ),

ಜಿಲ್ಲಾ ಮಟ್ಟದ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯೆಟ್),

ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ (ಡಿಸರ್ಟ್) ಸಂಸ್ಥೆಗಳಿವೆ.

ಆದರೆ, ಇವುಗಳನ್ನು ದುರ್ಬಲಗೊಳಿಸಲಾಗಿದೆ. ಶಿಕ್ಷಕರು, ಪ್ರಾಂಶುಪಾಲರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಈ ಸಂಸ್ಥೆಗಳ ಪ್ರಾಮುಖ್ಯತೆ ಗೌಣಗೊಳಿಸಲಾಗಿದೆ. ಕಲಿಕಾ ಗುಣಮಟ್ಟ ಕುಂಠಿತವಾಗಿದೆ. ಒಟ್ಟಾರೆಯಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಬಲೀಕರಣಗೊಳ್ಳಬೇಕಿದೆ. ಆದರೆ ಇದಕ್ಕೆ ಶಿಕ್ಷಣದ ಖಾಸಗೀಕರಣವಂತೂ ಮದ್ದಲ್ಲ ಎನ್ನುತ್ತಾರೆ ಶ್ರೀಪಾದ ಭಟ್.

ಮತ್ತೊಂದೆಡೆ, ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ಯಾವುದೇ ನೀತಿಸಂಹಿತೆಗೆ ಒಳಪಡದೆ ಕಾರ್ಯ ನಿರ್ವಹಿಸುತ್ತವೆ. ಒಂದು ಬಗೆಯ ಉಕ್ಕಿನ ಗೋಡೆಯನ್ನೇ ನಿರ್ಮಿಸಿಕೊಳ್ಳುವ ಖಾಸಗಿ ಸಂಸ್ಥೆಗಳ ಆಡಳಿತ ಪಾರದರ್ಶಕವಾಗಿರುವುದಿಲ್ಲ. ಇಲ್ಲಿನ ಶಿಕ್ಷಣ ಪದ್ಧತಿ ಸರ್ವಾಧಿಕಾರದ ಮಾದರಿಯಲ್ಲಿರುತ್ತದೆ. ಇಲ್ಲಿ ಸಂಭಾಷಣೆ, ಚರ್ಚೆ, ಸಂವಾದಕ್ಕೆ ಅವಕಾಶಗಳಿರುವುದಿಲ್ಲ. ಇಲ್ಲಿಂದ ಶಿಕ್ಷಣ ಪಡೆದ ಬಹುಪಾಲು ಮಕ್ಕಳು ಮತ್ತು ವಿದ್ಯಾರ್ಥಿಗಳು ದರ್ಪದ, ಮೇಲ್ಜಾತಿ/ಮೇಲ್ವರ್ಗಗದ ಶ್ರೇಷ್ಠತೆಯ ಹಿರಿಮೆಯನ್ನು ಮೈಗೂಡಿಸಿಕೊಂಡು ಬೂರ್ಜ್ವಾ ವ್ಯಕ್ತಿತ್ವದ ನಾಗರಿಕರಾಗಿ ರೂಪುಗೊಳ್ಳುತ್ತಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಬಲು ದೊಡ್ಡ ಬಿಕ್ಕಟ್ಟೇನೆಂದರೆ ಒಂದೇ ವಿಷಯದ ಕುರಿತಾಗಿ, ಏಕರೂಪಿ ಪಠ್ಯಗಳನ್ನು ಬೋಧಿಸುತ್ತ, ಬಾಯಿಪಾಠದ ವ್ಯಾಸಂಗ, ಸಿದ್ಧ ಮಾದರಿಯ ವ್ಯಾಸಂಗ ಕ್ರಮವನ್ನು ಅನುಸರಿಸುವುದು.

ಹೊಸ ನೀತಿಯ ರಾಜಕೀಯ, ಸಾಂಸ್ಕೃತಿಕ, ಪರಿಸರವಾದದ ತೊಂದರೆಗಳನ್ನು, ಬಿಕ್ಕಟ್ಟುಗಳನ್ನು ಅರಿತುಕೊಳ್ಳುವುದಿಲ್ಲ.

ಇಂದಿನ ಪರಿಸರದ ಬಿಕ್ಕಟ್ಟು ಮತ್ತು ಮುಂದಿನ ತಲೆಮಾರಿಗೆ ಅದರಿಂದಾಗುವ ದುಷ್ಪರಿಣಾಮಗಳ ಕುರಿತ ಪಠ್ಯಗಳನ್ನು ಅಳವಡಿಸಿಕೊಳ್ಳುವುದಿಲ್ಲ.

ಉನ್ನತ ಶಿಕ್ಷಣದಲ್ಲಿ ಸಮಾಜಶಾಸ್ತ್ರ, ಇತಿಹಾಸ, ರಾಜಕೀಯ ಶಾಸ್ತ್ರ, ಮನಶಾಸ್ತ್ರ, ಭಾಷಾ ಅಧ್ಯಯನಗಳಂತಹ ಸಮಾಜೋ-ಸಾಂಸ್ಕೃತಿಕ-ಆರ್ಥಿಕ ಜ್ಞಾನವನ್ನು ಕೊಡುವಂತಹ ಮಾನವಿಕ ವಿಭಾಗಗಳಿಗೆ ಖಾಸಗಿ ಆಡಳಿತದ ಸಂಸ್ಥೆಗಳಲ್ಲಿ ಸ್ಥಾನವಿರುವುದಿಲ್ಲ. ಬಹುಮುಖಿ ಪಠ್ಯ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದಿಲ್ಲ.

ಅಸಮಾನತೆ, ಸಾಮಾಜಿಕ ಸಂಘರ್ಷಗಳ ಕುರಿತಾಗಿ ಪಠ್ಯಗಳ ಪರಿಕಲ್ಪನೆಯನ್ನೇ ತಿರಸ್ಕರಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಕೊಡುತ್ತ ಮ್ಯಾನೇಜರ್ಗಳನ್ನು ಮಾತ್ರ ಉತ್ಪಾದಿಸುತ್ತವೆ. ನಿರ್ದಿಷ್ಟ ಬಗೆಯ ಮೆಟೀರಿಯಲಿಸ್ಟಿಕ್ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳಿಂದ ಸಾಮಾಜಿಕ ಕಳಕಳಿಯ ಬದ್ಧತೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಜಗತ್ತನ್ನೇ ಆಕ್ರಮಿಸಿಕೊಂಡಿರುವ ನವತಂತ್ರಜ್ಞಾನದ ಜ್ಞಾನವನ್ನು ಪಡೆದುಕೊಂಡ ಈ ವಿದ್ಯಾಥಿಗಳು ರಚನಾತ್ಮಕವಾಗಿ ಪ್ರಗತಿಪರವಾಗಿ ಸ್ಪಂದಿಸಲು ವಿಫಲರಾಗುತ್ತಾರೆ.

ಖಾಸಗೀಕರಣ ಒಂದೆಡೆ ಗ್ರಾಮೀಣ ಮಟ್ಟದಲ್ಲಿ, ತಳ ಸಮುದಾಯ, ವಂಚಿತ ಸಮುದಾಯಗಳಲ್ಲಿ ನಿರುದ್ಯೋಗ ಸೃಷ್ಟಿಸುವುದರ ಮೂಲಕ ವ್ಯವಸ್ಥೆಯಲ್ಲಿ ಅಸಮತೋಲನ ಉಂಟುಮಾಡುತ್ತದೆ. ಮೊದಲು ಜಾಗತಿಕ ಮಾರುಕಟ್ಟೆಯ ಅನುಕೂಲಕ್ಕೆ ಅನುಗುಣವಾಗಿ ಪಠ್ಯಕ್ರಮಗಳನ್ನು ರೂಪಿಸುವ ಈ ನವ ಉದಾರೀಕರಣ ಕ್ರಮೇಣ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದ ಶಿಕ್ಷಣವನ್ನೇ ಅನಿವಾರ್ಯಗೊಳಿಸುವುದರ ಮೂಲಕ ಮೇಲ್ಜಾತಿಗಳು ಮತ್ತು ದಲಿತರು ಹಾಗೂ ಅಲ್ಪಸಂಖ್ಯಾತರ ನಡುವೆ ಅಗಾಧವಾದ ಅಸಮಾನತೆಯನ್ನು ಸೃಷ್ಟಿಸುತ್ತದೆ.

ಪ್ರತ್ಯೇಕತೆ ಮತ್ತು ತಾರತಮ್ಯವನ್ನು ಮತ್ತಷ್ಟು ವಿಸ್ತರಿಸಲು ನೆರವಾಗುತ್ತದೆ. ಇದರ ದುಷ್ಪರಿಣಾಮಗಳು ಮೇಲ್ನೋಟಕ್ಕೆ ಆರ್ಥಿಕ ನೆಲೆಯಲ್ಲಿ ಕಂಡುಬರುತ್ತಿದ್ದರೆ, ಆಳದಲ್ಲಿ ಸಾಮಾಜಿಕ ನೆಲೆಯಲ್ಲಿಯೂ ವ್ಯಾಪಿಸಿಕೊಳ್ಳುತ್ತವೆ. ಚಾತುರ್ವರ್ಣ ಪದ್ಧತಿ ತನ್ನ ಎಲ್ಲಾ ವಿಕೃತಿಯೊಂದಿಗೆ ಮರಳಲು ಇದು ರತ್ನಗಂಬಳಿ ಹಾಸುತ್ತದೆ.

ಖಾಸಗಿ ಶಾಲೆಗಳು ರಾಜ್ಯದ ಕಾನೂನಿಗೆ ಬೆಲೆ ಕೊಡುತ್ತಿಲ್ಲ ಎಂಬ ಮಾತನ್ನು ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ಅವರೂ ಹೇಳುತ್ತಾರೆ. ಸರಕಾರ ಮತ್ತು ಕಾನೂನನ್ನು ತಿರಸ್ಕರಿಸುವ ಯಾವುದೇ ಖಾಸಗಿ ಸಂಸ್ಥೆಗಳಿಗೆ ಕಡಿವಾಣ ಹಾಕುವ ಕೆಲಸ ಆಗದಿದ್ದಲ್ಲಿ ಪ್ರಬಲರು ಅಮಾಯಕ ಜನರನ್ನು ನಿರಂತರ ಶೋಷಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಅಪಾಯವಿದೆ. ನೆಲದ ಕಾನೂನನ್ನೇ ಗೌರವಿಸದ ಅವರು ಮಕ್ಕಳಿಗೆ ಯಾವ ಮೌಲ್ಯಗಳನ್ನು ಕಲಿಸುತ್ತಾರೆ ಎಂದು ನಿರಂಜನಾರಾಧ್ಯ ಪ್ರಶ್ನಿಸುತ್ತಾರೆ.

ಇಂದಿನ ಶಿಕ್ಷಣದ ವಾಣಿಜ್ಯೀಕರಣ ಯಾವ ರೀತಿಯಲ್ಲಿದೆ ಎಂದರೆ, ಶಾಲೆಗಳಿಂದ ಹಿಡಿದು ವಿವಿಗಳವರೆಗೂ ಬಹುಪಾಲನ್ನು ಖಾಸಗಿಯವರೇ ಆಕ್ರಮಿಸಿಕೊಂಡಿದ್ದಾರೆ. ಶಿಕ್ಷಣದ ಎಲ್ಲ ಹಂತಗಳಲ್ಲೂ ಹೆಚ್ಚಿನ ಸಂಸ್ಥೆಗಳು ಖಾಸಗಿ ಒಡೆತನದಲ್ಲಿವೆ. ಹಿಂದೆ ಖಾಸಗಿಯವರು ಸಮಾಜ ಸೇವೆಯ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆಯುತ್ತಿದ್ದರೆ, ಇಂದು ಬಹುತೇಕ ಖಾಸಗಿ ಸಂಸ್ಥೆಗಳು ಶಿಕ್ಷಣದ ವ್ಯಾಪಾರ ಮಾಡುತ್ತಿವೆ. ಸರಕಾರಿ ಸಂಸ್ಥೆಗಳಲ್ಲಿ ಕೆಲವು ಸಾವಿರ ರೂಪಾಯಿಗಳಲ್ಲಿ ಮುಗಿಯುವ ಶಿಕ್ಷಣ ಖಾಸಗಿ ಸಂಸ್ಥೆಗಳಲ್ಲಿ ಕೆಲವು ಲಕ್ಷ ರೂಪಾಯಿಗಳಲ್ಲೂ ಮುಗಿಯುವುದಿಲ್ಲ. ಅಂದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಅನುಕೂಲಸ್ಥರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಿವೆ. ಬಡ ಮಕ್ಕಳು ಶಿಕ್ಷಣ ಪಡೆಯುವುದು ಕಷ್ಟವಾಗುತ್ತಿದೆ.

ಶಿಕ್ಷಣದ ಆಡಳಿತ ಸಂಪೂರ್ಣವಾಗಿ ಅಧಿಕಾರಶಾಹಿಯಾಗಿದೆ. ಬುಡದಿಂದ ತುದಿಯವರೆಗೂ ಅಧಿಕಾರಿಗಳದ್ದೇ ದರ್ಬಾರು ಕಾಣಿಸುತ್ತದೆಯೇ ಹೊರತು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಎಲ್ಲಿಯೂ ಕಾಣಿಸದ ಸನ್ನಿವೇಶವಿದೆ.

ಶಿಕ್ಷಣ ಸರಕಾರವೇ ಕೊಡಬೇಕಾದ ಸವಲತ್ತೆಂದು ಹೇಳುತ್ತಲೇ ಎಲ್ಲರಿಗೂ ಶಿಕ್ಷಣ ನೀಡಲು ಖಾಸಗಿಯವರ ಪಾಲುದಾರಿಕೆಯನ್ನು ಅನಿವಾರ್ಯ ಎಂದು ಒಪ್ಪಿಕೊಳ್ಳುವ ಶಿಕ್ಷಣ ನೀತಿ ಇಂದು ನಮ್ಮೆದುರು ಇದೆ. ಶಿಕ್ಷಣ ಸಂಸ್ಥೆಗಳ ಒಡೆತನದ ಬಗ್ಗೆ ಶಿಕ್ಷಣ ನೀತಿ ತಲೆ ಕೆಡಿಸಿಕೊಳ್ಳುವುದಿಲ್ಲ. ಅವನ್ನು ನಿಯಂತ್ರಿಸುವ ಮೂಲಕ ಖಾಸಗಿ ಸಂಸ್ಥೆಗಳನ್ನು ಕೂಡ ಸಾಮಾಜಿಕ ನ್ಯಾಯ ನೀಡಲು ಬಳಸಬಹುದೆನ್ನುವ ಹುಸಿ ಭರವಸೆಯನ್ನು ವ್ಯಕ್ತಪಡಿಸಲಾಗುತ್ತಿದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.

ಚಿಂತಕ, ಲೇಖಕ ಪುರುಷೋತ್ತಮ ಬಿಳಿಮಲೆ ಅವರು ಒಂದೆಡೆ ಪ್ರತಿಪಾದಿಸಿರುವಂತೆ, ಬದಲಾಗುತ್ತಿರುವ ಜಗತ್ತಿನ ಪರಿಕಲ್ಪನೆಗೆ ಸರಿಯಾಗಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಆಲೋಚನೆ ಬರುವಂತೆ ಮಾಡಬೇಕಾದ್ದು ಬಹಳ ಅಗತ್ಯ. ಭಾಷೆಯ ಮೇಲೆ ಹಿಡಿತ ಬರುವಂತೆ ವಿದ್ಯಾರ್ಥಿಗಳನ್ನು ರೂಪಿಸಬೇಕು. ಸುದೀರ್ಘಾವಧಿಯ ದೃಷ್ಟಿಕೋನ, ತಜ್ಞರ ಜೊತೆ ಸಮಾಲೋಚನೆ, ಸಾಂಸ್ಥಿಕ ಪ್ರಯತ್ನಗಳ ಅಗತ್ಯವಿದ್ದು, ಅದನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕಿದೆ.

ಎನ್ಇಪಿಯನ್ನು ಮುಂದಿನ ವರ್ಷದಿಂದ ರದ್ದು ಮಾಡುವುದಾಗಿ ಹೇಳುವ ಮೂಲಕ ಪ್ರಗತಿಪರ ಶಿಕ್ಷಣದ ಸುಳಿವು ಕೊಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ, ಇನ್ನೊಂದೆಡೆ ಇಂಥ ಖಾಸಗೀಕರಣದ ಕ್ರಮದೆಡೆಗೆ ಹೊರಳುತ್ತಿರುವ ಬಗ್ಗೆ ಶಿಕ್ಷಣತಜ್ಞರ ತಕರಾರು ಇದೆ. ಈ ಹಿಂದಿನ ಸರಕಾರವಂತೂ ಶಿಕ್ಷಣವನ್ನು ಕೇಸರೀಮಯವಾಗಿಸುವುದರಲ್ಲಿಯೇ ತೊಡಗಿತ್ತು. ಯಾವ ಸರಕಾರಗಳೇ ಬಂದರೂ ಶಿಕ್ಷಣ ವ್ಯವಸ್ಥೆ ದಿಕ್ಕುಗೆಡುವುದು ತಪ್ಪುವುದಿಲ್ಲವೇ ಎಂಬ ಪ್ರಶ್ನೆಯೇ ಕಾಡುವಂತಾಗಿದೆ.

ಡಿ.ಕೆ. ಶಿವಕುಮಾರ್ ಹೇಳಿಕೊಂಡಂತೆ, ಅವರು ೩ ಶಾಲೆಗಳ ಮಾಲಕರು. ಅದೇ ರೀತಿ ಪಕ್ಷಾತೀತವಾಗಿ ಶಾಸಕರ ಒಡೆತನದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿ ಸ್ವಹಿತಾಸಕ್ಕಿ ಮುಖ್ಯವಾಗಿ, ಸಾರ್ವಜನಿಕ ಹಿತಾಸಕ್ತಿ ಕುಂಠಿತಗೊಂಡು ಸಾರ್ವಜನಿಕ ಶಿಕ್ಷಣ ದುರ್ಬಲಗೊಳ್ಳುತ್ತದೆ. ಇಂತಹ ಬಿಕ್ಕಟ್ಟಿನಲ್ಲಿ ಸರಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ಕೊಡುವ ನಿರ್ಧಾರ ತುಂಬಾ ಅಪಾಯಕಾರಿ. ಈ ನಿಲುವನ್ನು ರದ್ದುಗೊಳಿಸಬೇಕಾಗಿದೆ ಎಂಬುದು ಶಿಕ್ಷಣ ತಜ್ಞರ ಒತ್ತಾಯ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಆರ್.ಜೀವಿ

contributor

Similar News