ಯಾದಗಿರಿ: ಜೆಸ್ಕಾಂ ಇಲಾಖೆ ನೌಕರನ ಮೇಲೆ ಹಲ್ಲೆ ಖಂಡಿಸಿ ಡಿವೈಎಸ್ಪಿಗೆ ಮನವಿ

ಸುರಪುರ: ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಕರ್ತವ್ಯ ನಿರತ ಜೆಸ್ಕಾಂ ಇಲಾಖೆ ಸಿಬ್ಬಂದಿ ಮೇಲೆ ಅದೇ ಗ್ರಾಮದ ಕೆಲ ಯುವಕರ ಗುಂಪು ಹಲ್ಲೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೆಸ್ಕಾಂ ಇಲಾಖೆ ನೌಕರರು ನಗರದ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಜೆಸ್ಕಾ ಇಲಾಖೆಯ ನೌಕರನಾಗಿರುವ ಅಮರೇಶ ಗಂಟ್ಲಿ ಸೋಮವಾರ ಕವಡಿಮಟ್ಟಿ ಗ್ರಾಮಕ್ಕೆ ಕರ್ತವ್ಯದ ಮೇಲೆ ಹೋದಾಗ, ಅದೇ ಗ್ರಾಮದ ಕೆಲ ಯುವಕರ ಗುಂಪು ಅಮರೇಶ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ಇದರಿಂದ ಜೆಸ್ಕಾಂ ಇಲಾಖೆ ನೌಕರರು ಕರ್ತವ್ಯ ನಿರ್ವಹಿಸಲು ಭಯಪಡುವಂತಾಗಿದೆ. ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ಇಲಾಖೆಯ ನೌಕರರಾದ ಶಾಂತಪ್ಪ ಕುರಿ, ಮರೆಪ್ಪ ತೆಲ್ಕುರ್, ಬುರಾನುದ್ದಿನ್, ಏಕನಾಥ,ಜಯಪ್ಪ, ಶಶಿಕುಮಾರ,ಹಣಮಂತ, ನೀಲಕಂಠರಾಯಗೌಡ, ಮೌನೇಶ,ಮೇಘರಾಜ, ಸದಾಶಿವಪ್ಪ, ಸಂತೋಷ ಅಮ್ಮಾಪುರ, ಮಾಪಣ್ಣ,ಬಸವರಾಜ, ಶರಣಪ್ಪ,ರಾಜಕುಮಾರ ಬೂಸಾ, ಪ್ರಮೋದ ಕುಮಾರ, ಅಮ್ಜದ್ ಅಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.