ಯಾದಗಿರಿ: ಪ್ರತಿ ಮಂಗಳವಾರ ಸಂತಾನ ಹರಣ ಶಸ್ತ್ರ ಚಿಕಿತ್ಸೆ; ಡಾ. ಪದ್ಮಾನಂದ.ಎ. ಗಾಯಕವಾಡ

ಸಾಂದರ್ಭಿಕ ಚಿತ್ರ (credit: Grok)
ಯಾದಗಿರಿ: ಜಿಲ್ಲೆಯ ಶಹಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದಿನಿಂದ ಪ್ರತಿ ಮಂಗಳವಾರ ಸಂತಾನ ಹರಣ ಉದರದರ್ಶಕ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಪದ್ಮಾನಂದ.ಎ. ಗಾಯಕವಾಡ ಅವರು ತಿಳಿಸಿದರು.
ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 6 ತಿಂಗಳಿಂದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗಳು ಬಂದ್ ಆದ ಕಾರಣ ಮಹಿಳೆಯರು ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ಹಣ ನೀಡಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದರು. ಪ್ರಸ್ತುತ ಶಹಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾದ ಡಾ.ಎಂ. ಎಸ್. ಪಾಟೀಲ್ ಹಾಗೂ ಅರವಳಿಕೆ ತಜ್ಞ ವೈದ್ಯರಾದ ಶರಣರೆಡ್ಡಿ ಅವರು ಈ ಶಸ್ತ್ರ ಚಿಕಿತ್ಸೆ ನೀಡುವರು.
ಇಂದು 18 ಶಸ್ತ್ರ ಚಿಕಿತ್ಸೆ ಮಾಡಿದ್ದು, ಪ್ರತಿ ಮಂಗಳವಾರ ಕನಿಷ್ಠ 30 ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಗ್ರಾಮೀಣ ಭಾಗದ ಮಹಿಳೆಯರು ಈ ಚಿಕಿತ್ಸೆಯ ಉಚಿತ ಸೌಲಭ್ಯ ಪಡೆಯಲು ಅವಕಾಶಗಳಿದ್ದು, ಇದರ ಸದುಪಯೋಗ ಪಡೆಯಿರಿ ಎಂದು ಅವರು ತಿಳಿಸಿದರು.
ಗ್ರಾಮೀಣ ಭಾಗದ ಬಡವರಿಗೆ ಸರ್ಕಾರದ ಸೌಲಭ್ಯಗಳ ಅವಕಾಶವಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ಚಿಕಿತ್ಸೆಗಳು ಉಚಿತವಾಗಿ ಸಿಗುತ್ತಿದ್ದು, ತಜ್ಞ ವೈದ್ಯರಿಂದ ಪ್ರತಿ ಮಂಗಳವಾರ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದ್ದು, ಯೋಜನೆಗಳ ಸದುಪಯೋಗ ಪಡೆಯಿರಿ.
-ಡಾ. ಪದ್ಮಾನಂದ.ಎ. ಗಾಯಕವಾಡ.
ಶಹಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ.