ಎಂಸಿಸಿ ಬ್ಯಾಂಕಿಗೆ 10.38 ಕೋಟಿ ರೂ. ನಿವ್ವಳ ಲಾಭ; ಶೇ. 10 ಡಿವಿಡೆಂಡ್ ಘೋಷಣೆ

Update: 2023-09-25 17:39 GMT

ಮಂಗಳೂರು: ಎಂಸಿಸಿ ಬ್ಯಾಂಕ್ ಎಂದು ಪ್ರಖ್ಯಾತವಾಗಿರುವ ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ್ದು, 2022-23ನೇ ವಿತ್ತೀಯ ವರ್ಷದಲ್ಲಿ ಬ್ಯಾಂಕ್ 10.38 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಇದು ಬ್ಯಾಂಕಿನ ಚರಿತ್ರೆಯಲ್ಲಿಯೇ ಗರಿಷ್ಠ ಲಾಭವಾಗಿದೆ ಎಂದು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಹೇಳಿದರು.

ಮಂಗಳೂರಿನ ಸಂತ ಆಲೋಶಿಯಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ(ಲೊಯೊಲಾ ಹಾಲ್) ರವಿವಾರ ನಡೆದ ಬ್ಯಾಂಕಿನ 105ನೇ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶೇ. 10ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಪ್ರಕಟಿಸಿದರು.

ಎಂಸಿಸಿ ಬ್ಯಾಂಕ್ ಒಟ್ಟು ಠೇವಣಿಯಲ್ಲಿ ಶೇ. 8.62 ಪ್ರಗತಿ ಸಾಧಿಸಿದ್ದು, ರೂ.577.95 ಕೋಟಿ ಠೇವಣಿ, ಒಟ್ಟು ಮುಂಗಡ ದಲ್ಲಿ ಶೇ. 8.14 ಪ್ರಗತಿ ಸಾಧಿಸಿದ್ದು ರೂ.355.30 ಕೋಟಿ ರೂ. ಮುಂಗಡಗಳು, ದುಡಿಯುವ ಬಂಡವಾಳ ರೂ.684.31 ಕೋಟಿ (ಪ್ರಗತಿ ಶೇಕಡಾ 11.26) ಮತ್ತು ಶೇರು ಬಂಡವಾಳ ರೂ.27.36 ಕೋಟಿ (ಪ್ರಗತಿ ಶೇಕಡಾ 48.45) ಆಗಿದೆ ಎಂದರು.

ಜೊತೆಗೆ ಬ್ಯಾಂಕಿನ ಎನ್‌ಪಿಎ ಪ್ರಮಾಣವು ಕಳೆದ ಆರ್ಥಿಕ ವರ್ಷದಲ್ಲಿದ್ದ ಶೇ 1.62 ರಿಂದ ಶೇ 1.37 ತಲುಪಿರುವುದು ಬ್ಯಾಂಕಿನ ಬೆಳವಣಿಗೆ ಉತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ. ಬ್ಯಾಂಕಿನ ಅನುತ್ಪಾದಕ ಸಾಲಕ್ಕೆ ಒದಗಿಸಿದ ಅವಕಾಶದ ಅನುಪಾತವು ಶೇ 78.87 ಆಗಿರುತ್ತದೆ ಎಂದರು.

ಬ್ಯಾಂಕಿನ ಸಿಬಿಎಸ್ ಸಾಫ್ಟ್‌ವೇರ್‌ನ ಉನ್ನತೀಕರಣ, ಡಿಜಿಟಲೀಕರಣ, ಪ್ರತ್ಯೇಕ ಭೂಕಂಪನ ವಲಯದಲ್ಲಿ ಡಿ.ಆರ್ ಕೇಂದ್ರದ ಸ್ಥಾಪನೆ,ಉತ್ಕೃಷ್ಟ ಗ್ರಾಹಕ ಸೇವೆ ನೀಡುವ ನಿಟ್ಟಿನಲ್ಲಿ ಶಾಖೆಗಳ ನವೀಕರಣ, ಗ್ರಾಹಕ ಸಂಪರ್ಕ ಸಭೆ, ಆಶೋಕನಗರ ಶಾಖೆಯ ಸ್ಥಳಾಂತರ, ಬ್ಯಾಂಕಿನ ಸೇವೆಗಳನ್ನು ಇನ್ನೂ ಐದು ಜಿಲ್ಲೆಗಳಲ್ಲಿ ವಿಸ್ತರಣೆ, ಶೇಕಡಾ 8.75 ಬಡ್ಡಿ ದರದಲ್ಲಿ ಶಿಕ್ಷಣ ಸಾಲ, ಇತ್ಯಾದಿ ಗ್ರಾಹಕರ ಸಹಕಾರದಿಂದಾಗಿ ಶೇಕಡಾ 90ರಷ್ಟು ಸಿಕೆವೈಸಿ ನೋಂದಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ 104ನೇ ವಾರ್ಷಿಕ ಸಾಮಾನ್ಯ ಸಭೆಯ ವರದಿಗಳನ್ನು ವಾಚಿಸಿದರು.

ಬ್ಯಾಂಕ್ ಅಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಅಲನ್ ಸಿ. ಪಿರೇರಾ ಮತ್ತು ಕರ್ಣಾಟಕ ಬ್ಯಾಂಕ್‌ನ ಮಾಜಿ ಹಿರಿಯ ಪ್ರಬಂಧಕ ಸೆಲೆಸ್ಟಿನ್ ಲೀನಾ ಮೊಂತೇರೊ ಹೆಚ್‌ಡಿಎಫ್‌ಸಿ ಬ್ಯಾಂಕಿನ ಮಾಜಿ ಸೀನಿಯರ್ ಎಕ್ಸಿಕ್ಯೂಟಿವ್ ಮಾರ್ಜೊರಿ ಟೆಕ್ಷೆರಾ ಇವರನ್ನು ಗೌರವಿಸಲಾಯಿತು.

ನಿರ್ದೇಶಕರಾದ ಅಂಡ್ರ್ಯೂ ಡಿಸೋಜ, ಜೋಸೆಫ್ ಎಮ್. ಅನಿಲ್ ಪತ್ರಾವೊ, ಡಾ. ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್ ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿ’ಸೋಜ, ಹೆರಾಲ್ಡ್ ಮೊಂತೇರೊ, ಜೆ. ಪಿ. ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕ ಸಿ.ಜಿ. ಪಿಂಟೊ, ಸುಸಾಂತ್ ಸಲ್ಡಾನ್ಹಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು.

ಮಹಾಪ್ರಬಂಧಕ ಸುನಿಲ್ ಮಿನೇಜಸ್ ಸ್ವಾಗತಿಸಿ, ಕಿರಿಯ ಸಹಾಯಕ ಆಲ್ಡ್ರಿನ್ ಡಿಸೋಜ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News