ಮುಡಿಪು ಕಾಲೇಜು ಬಳಿ ಕಾರು ಢಿಕ್ಕಿ: ಪಾದಚಾರಿ ಮೃತ್ಯು

Update: 2024-03-09 09:42 GMT

ಕೊಣಾಜೆ, ಮಾ.9: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಸರ್ಕಾರಿ ಪದವಿ ಪೂರ್ವ ಕಾಲೇಜು ಗೇಟ್ ಮುಂಭಾಗದ ಬಳಿ ಶುಕ್ರವಾರ ಸಂಜೆ ನಡೆದಿದೆ.

ಕನ್ಯಾನ ಕರೋಪಾಡಿ ಸಮೀಪದ ಮುಡಿಂಜಿಮಾರ್ ನಿವಾಸಿ ಸಿದ್ದೀಕ್ (45) ಮೃತಪಟ್ಟವರು.

ಸಿದ್ದೀಕ್ ಶುಕ್ರವಾರ ಸಂಜೆ ಮುಡಿಪುವಿನ ಸರಕಾರಿ ಕಾಲೇಜಿನ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಮುಡಿಪುವಿನಿಂದ ಬಂಟ್ವಾಳದತ್ತ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಸಿದ್ಧೀಕ್ ಅವರನ್ನು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಒಂದು ವರ್ಷದ ಹಿಂದೆಯಷ್ಟೇ ಇದೇ ಸ್ಥಳದಲ್ಲಿ ಶಾಲೆ ಬಿಟ್ಟು ಬಸ್ ಗಾಗಿ ಕಾಯುತ್ತಿದ್ದ ಎಂಟನೆಯ ತರಗತಿ ವಿದ್ಯಾರ್ಥಿ ಕಾರ್ತಿಕ್ ಎಂಬಾತನ ಮೇಲೆ ಕಾರೊಂದು ಡಿಕ್ಕಿ ಹೊಡೆದು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದ. ಇದೀಗ ಇದೇ ಸ್ಥಳದಲ್ಲಿ ಮತ್ತೊಂದು ಘಟನೆ ಸಂಭವಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಕೆಲವು ವರ್ಷಗಳ ಹಿಂದೆ ಕಾಲೇಜು ಮುಂಭಾಗದ ಇದೇ ಸ್ಥಳದಲ್ಲಿ ಹಂಪ್ಸ್ ಅಳವಡಿಸಲಾಗಿತ್ತು. ಬಳಿಕ ರಸ್ತೆ ಅಭಿವೃದ್ಧಿ ವೇಳೆ ಅದನ್ನು ತೆರವುಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News