ಮಂಗಳೂರು: ಕಂಟೇನರ್ ಸರಕು ನಿಲ್ದಾಣ- ಗೋದಾಮು ವ್ಯವಸ್ಥೆ; ಎನ್ಎಂಪಿಎಯಿಂದ ಸಿಡಬ್ಲ್ಯುಸಿ ಮತ್ತು ಎಸ್ ಡಿಸಿಎಲ್ ಜತೆ ಒಪ್ಪಂದ
ಮಂಗಳೂರು, ಜೂ. 27: ನವ ಮಂಗಳೂರು ಬಂದರು ಪ್ರಾಧಿಕಾರವು ಕಂಟೇನರ್ ಸರಕು ನಿಲ್ದಾಣ ಅಥವಾ ಸರಕು ಸಂಗ್ರಹಣಾ ಗೋದಾಮು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೊರೇಶನ್ (ಸಿಡಬ್ಲುಸಿ) ಮತ್ತು ಸಾಗರಮಾಲ ಡೆವಲಪ್ಮೆಂಟ್ ಕಂಪನಿ ಲಿಮಿಟೆಡ್ (ಎಸ್ ಡಿಸಿಎಲ್) ಜತೆ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿದೆ.
ಎನ್ಎಂಪಿಎ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು, ಸಿಡಬ್ಲುಸಿ ಆಡಳಿತ ನಿರ್ದೇಶಕ ಅಮಿತ್ ಕುಮಾರ್ ಸಿಂಗ್ ಹಾಗೂ ಎಸ್ಡಿಸಿಎಲ್ನ ಆಡಳಿತ ನಿರ್ದೇಶಕ ದಿಲೀಪ್ ಕುಮಾರ್ ಗುಪ್ತಾ ಅವರು ಪಣಂಬೂರಿನ ಎನ್ಎಂಪಿಎ ಕಚೇರಿ ಸಭಾಂಗಣದಲ್ಲಿ ಜಂಟಿ ಒಪ್ಪಂದಕ್ಕೆ ಸಹಿ ಹಾಕಿದರು.
125.42 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆ ನವ ಮಂಗಳೂರು ಬಂದರಿನ 16.6 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಎನ್ಎಂಪಿಎ ಈ ಯೋಜನೆಗಾಗಿ 44.25 ಕೋಟಿ ರೂ. ವೆಚ್ಚದ ಭೂಮಿಯನ್ನು ಯೋಜನೆಗಾಗಿ ಒದಗಿಸಿದ್ದು, ಬಾಕಿ ಯೋಜನಾ ವೆಚ್ಚವನ್ನು ಸಿಡಬ್ಲುಸಿ ಮತ್ತು ಎಡಿಸಿಎಲ್ ಸಮಾನವಾಗಿ ಭರಿಸಿಕೊಳ್ಳಲಿದ್ದು, 2025ರ ಜೂನ್ಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.