ಫರಂಗಿಪೇಟೆ : ಮಾದಕ ವಸ್ತುಗಳ ಬಳಕೆಯ ವಿರುದ್ಧ ಜನಜಾಗೃತಿ; ಡ್ರಗ್ಸ್ ಮುಕ್ತ ಗ್ರಾಮ ಜನಜಾಗೃತಿ ಅಭಿಯಾನ ಕಾರ್ಯಕ್ರಮ

Update: 2023-09-09 14:58 GMT

ಬಂಟ್ವಾಳ : ಫರಂಗಿಪೇಟೆ, ಪುದು, ತುಂಬೆ ಮತ್ತು ಅಡ್ಯಾರ್ ಗ್ರಾಮದ 20 ಜಮಾಅತ್ ಗಳ ಸರ್ವ ಜಮಾಅತ್ ಒಕ್ಕೂಟ ಹಾಗೂ ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಮಾದಕ ವಸ್ತುಗಳ ಬಳಕೆಯ ವಿರುದ್ಧ ಜನಜಾಗೃತಿ ಮೂಡಿಸಲು ಫರಂಗಿಪೇಟೆಯ ಜಂಕ್ಷನ್ ನಲ್ಲಿ ಡ್ರಗ್ಸ್ ಮುಕ್ತ ಗ್ರಾಮ ಜನಜಾಗೃತಿ ಅಭಿಯಾನ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕಾರ್ಯಕ್ರಮವನ್ನು ಫರಂಗಿಪೇಟೆ ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ ಉದ್ಘಾಟಿಸಿದರು.

ಡಿ.ವೈ.ಎಫ್.ವೈ.ಪ್ರಮುಖರಾದ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ಡ್ರಗ್ಸ್ ಮುಕ್ತ ಜನಜಾಗೃತಿ ಕೇವಲ ಕಾರ್ಯಕ್ರಮ ವಾಗದೆ ಅಭಿಯಾನದ ರೂಪದಲ್ಲಿ ಮುಂದುವರಿಯಬೇಕು. ಡ್ರಗ್ಸ್ ನ ಜಾಲದಲ್ಲಿ ಸಿಲುಕಿರುವ ಯುವಕ ಯುವತಿಯರನ್ನು ಬಂಧಿಸುವ ಮೂಲಕ ಮಾಫಿಯಾವನ್ಹು ತಡೆಯಲು ಸಾಧ್ಯವಿಲ್ಲ, ಅವರ ಜೊತೆ ಮಾಫಿಯಾದ ಹಿಂದೆ ಇರುವ ಪೆಡ್ಲರ್ ಗಳನ್ನು ಹಾಗೂ ಜಾಲದ ಮೂಲವನ್ನು ಕಂಡುಹಿಡಿದು ಅವರನ್ನು ಬಂಧಿಸುವ ಕೆಲಸ ಪೋಲೀಸ್ ಇಲಾಖೆಯ ಮೂಲಕ ಆಗಬೇಕಿದೆ. ಪೊಲೀಸ್ ಅಧಿಕಾರಿಗಳ ಜೊತೆ ಗ್ರಾಮಸ್ಥರು ಸಂಘ ಸಂಸ್ಥೆಗಳು ಕೈಜೋಡಿಸಿ ಸಹಕಾರ ನೀಡಿದಾಗ ಪ್ರತಿ ಮನೆ ನೆಮ್ಮದಿಯಿಂದ ಇರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲೆಯ ಕೋಮು ಗಲಭೆಯ ಸಹಿತ ಅಶಾಂತಿಗೆ ಡ್ರಗ್ಸ್ ಮಾಫಿಯಾವೇ ಮೂಲ ಕಾರಣವಾಗಿದ್ದು, ಜಾತಿ ಮತ ಪಂಗಡ ಮರೆತು ಇದರ ವಿರುದ್ದ ಹೋರಾಟ ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ಡಾ॥ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಕೆ.ಎ ಇಕ್ಬಾಲ್ ಬಾಳಿಲ, ಶಿಹಾಬುದ್ದೀನ್ ತಲಪಾಡಿ, ಸಂದೇಶ ಭಾಷಣ ಮಾಡಿದರು. ಅಬ್ದುಲ್ ಅಝೀಝ್ (ಮೈಸೂರು ಬಾವ), ಇಸ್ಮಾಯಿಲ್ ಕೆ.ಇ.ಎಲ್ ವಳಚ್ಚಿಲ್, 20 ಜಮಾಅತ್ ಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಪದಾಧಿಕಾರಿಗಳು, ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಮತ್ತು ಸದಸ್ಯರುಗಳು, ಹಲವು ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಮತ್ತು ಊರಿನ ನಾಗರಿಕರು ಜಾಗತಿಕ ಅಭಿಯಾನದಲ್ಲಿ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಕುಂಡೇಲು ಸರ್ಕಲ್ ನಿಂದ ಫರಂಗಿಪೇಟೆ ಜಂಕ್ಷನ್ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಬಿ.ಎ ಕೈಗಾರಿಕಾ ತರಬೇತಿ ಮತ್ತು ತಾಂತ್ರಿಕ ಕೇಂದ್ರ ತುಂಬೆ ಮತ್ತು ಬಿ.ಎ ಪದವಿ ಪೂರ್ವ ಕಾಲೇಜು ತುಂಬೆ, ಮಸೂದ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಸ್ಕೂಲ್ ನರ್ಸಿಂಗ್ ಮಂಗಳೂರು, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎ ಶಾಮ ರಾವ್ ನರ್ಸಿಂಗ್ ಸ್ಕೂಲ್ ವಳಚ್ಚಿಲ್ ಮಂಗಳೂರು, ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ಕಂಕನಾಡಿ ಮಂಗಳೂರು, ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ & ಫಿಸಿಯೋಥೆರಪಿ ಬಲ್ಮಠ ಮಂಗಳೂರು, ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ ಮಂಗಳೂರು ವಿದ್ಯಾರ್ಥಿಗಳು ಕಾಲ್ನಡಿಗೆ ಜಾಥದಲ್ಲಿ ಭಾಗವಹಿಸಿದ್ದರು.

ಫರಂಗಿಪೇಟೆ ಜಂಕ್ಷನ್ ನಿಂದ ವಳಚ್ಚಿಲ್, ತುಂಬೆ, ಮಾರಿಪಳ್ಳ ಮಾರ್ಗವಾಗಿ ಕಾರ್ಯಕ್ರಮದ ವೇದಿಕೆಯ ತನಕ ವಾಹನ ಜಾಥಾ ನಡೆಯಿತು. ಇದೇ ವೇಳೆ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ಕಂಕನಾಡಿ ಮಂಗಳೂರು ವಿದ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶನಗೊಂಡಿತು. 

ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಫರಂಗಿಪೇಟೆ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾರಿಪಳ್ಳ ಪ್ರಸ್ತಾವನೆಗೈದು ಸ್ವಾಗತಿಸಿದರು. ಅಶ್ರಫ್ ಮಲ್ಲಿ ವಂದಿಸಿದರು. ನೌಫಲ್ ಕೆ.ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News