ಸುರತ್ಕಲ್ ಎನ್ಐಟಿಯಲ್ಲಿ ನೆಡುತೋಪು ಅಭಿಯಾನ
ಸುರತ್ಕಲ್, ಸೆ.17: ಪರಿಸರ ಸುಸ್ಥಿರತೆ ಮತ್ತು ಪರಿಸರ ಸಮತೋಲನವನ್ನು ಉತ್ತೇಜಿಸುವ ಪ್ರಧಾನ ಮಂತ್ರಿಗಳ ನೆಡುತೋಪು ಅಭಿಯಾನ "ಏಕ್ ಪೇಡ್ ಮಾ ಕೆ ನಾಮ್" ಕಾರ್ಯಕ್ರಮವನ್ನು ಸುರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಮಂಗಳವಾರ ತನ್ನ ಕ್ಯಾಂಪಸ್ ನಲ್ಲಿ ಆಯೋಜಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎನ್ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ, ಜೂನ್ 5, 2024ರ ವಿಶ್ವ ಪರಿಸರ ದಿನದಂದು ಎನ್ಐಟಿಕೆ 600ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ತನ್ನ ನೆಡುತೋಪು ಅಭಿಯಾನವನ್ನು ಪ್ರಾರಂಭಿಸಿತು. ಸಂಸ್ಥೆಯು 2024 ರ ಬಿಟೆಕ್ ಓರಿಯಂಟೇಶನ್ ಕಾರ್ಯಕ್ರಮದ ಭಾಗವಾಗಿ 'ವೃಕ್ಷವನ' ಎಂದು ಕರೆಯಲ್ಪ ಡುವ ಮಿಯಾವಾಕಿ ಅರಣ್ಯ ಬ್ಲಾಕ್ ಗಳನ್ನೂ ರಚಿಸಿದ್ದು, ವೃಕ್ಷವನ ಬ್ಲಾಕ್ ನಲ್ಲಿ ಸುಮಾರು 400 ಸಸಿಗಳನ್ನು ನೆಡಲಾಗಿದೆ ಎಂದು ನುಡಿದರು.
ಎನ್ಐಟಿಕೆ ಹಳೆಯ ವಿದ್ಯಾರ್ಥಿ ಹಾಗೂ ಏರ್ ಮಾರ್ಷಲ್ ಬಿ.ಯು. ಚೆಂಗಪ್ಪ ಮತ್ತು ಎನ್ಐಟಿಕೆ ಹಳೆಯ ವಿದ್ಯಾರ್ಥಿಗಳ ಸಂಘ ಬೆಂಗಳೂರು ವಿಭಾಗದ ಅಧ್ಯಕ್ಷ ನಿರಂಜನ ಮಹಾಬಲಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪ ನಿರ್ದೇಶಕ ಪ್ರೊ. ಸುಭಾಷ್ ಸಿ.ಯರಗಲ್, ಸಹಾಯಕ ಎನ್ಸಿಸಿ ಅಧಿಕಾರಿ ಪ್ರೊ. ಪಿ.ಸ್ಯಾಮ್ ಜಾನ್ಸನ್, ಎನ್ಎಸ್ಎಸ್ ಅಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿಗಾರ್, ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಬೋಧಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.