ಪುತ್ತೂರು: ಗೃಹಜ್ಯೋತಿ ಯೋಜನೆಗೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

Update: 2023-08-11 14:12 GMT

ಪುತ್ತೂರು: ಕರ್ನಾಟಕ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶೇ.90 ರಷ್ಟು ಮಂದಿ ನೋಂದಾವಣೆ ಮಾಡಿಕೊಂಡಿ ದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಏನೇ ಅಪಪ್ರಚಾರ ಮಾಡಿದರೂ ಜನತೆ ಗ್ಯಾರಂಟಿಗಳನ್ನು ಒಪ್ಪಿಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶುಕ್ರವಾರ ಪುತ್ತೂರು ಪುರಭವನದಲ್ಲಿ ಸರ್ಕಾರದ ಮಹೋನ್ನತ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಜಿಲ್ಲಾ ಮಟ್ಟದಲ್ಲಿ ಚಾಲನೆ ನೀಡಿ ಮಾತನಾಡಿದರು.

ಕರಾವಳಿ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು ಸಾಕಷ್ಟು ಉತ್ಸುಕರಾಗಿದ್ದು, ಜಿಲ್ಲೆಗೆ ಹೆಚ್‍ಚಿನ ಅನುದಾನ ನೀಡಲಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪರಿವರ್ತಿಸಿ ಮತ್ತಷ್ಟು ತಾಲೂಕುಗಳನ್ನು ಸೇರ್ಪಡೆಗೊಳಿಸಿ ಹೆಚ್ಚಿನ ಅನುದಾನ ನೀಡುವ ಚಿಂತನೆ ನಡೆಸಲಾಗಿದೆ. ರಾಜ್ಯದ 15 ಆಸ್ಪತ್ರೆಗಳಲ್ಲಿ ಜನಾರೋಗ್ಯ ದೃಷ್ಠಿ ಯಿಂದ ಉಚಿತವಾಗಿ ಎಂಆರ್‍ಐ ಮತ್ತು ಸಿಟಿಸ್ಕ್ಯಾನ್ ವ್ಯವಸ್ಥೆ, ಮಕ್ಕಳ ಆರೋಗ್ಯಕ್ಕಾಗಿ ಅಂಗನವಾಡಿಗಳಲ್ಲಿ ಪಾಮೋಲಿನ್ ಎಣ್ಣೆ ಬದಲು ಸನ್‍ಫ್ಲವರ್ ಬಳಸಲಾಗುವುದು. ಜತೆಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.

ಜಿಲ್ಲೆಯಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸಾಕಷ್ಟು ಅರ್ಜಿಗಳು ವಿಲೇವಾರಿಯಾಗದೆ ವರ್ಷಾನುಗಟ್ಟಲೆ ಬಾಕಿ ಉಳಿದಿದೆ. ಇದರಿಂದ ಬಡ ಜನತೆಗೆ ತೊಂದರೆ ಹಾಗೂ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತಾ ಗಿದೆ. ಇಂತಹ ಬಾಕಿ ಉಳಿದಿರುವ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಿದ ಸಚಿವರು ಜನರು ನೀಡಿದ ಯಾವುದೇ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು. ಇದು ಜಿಲ್ಲಾಡಳಿತದ ಜವಾಬ್ದಾರಿ. ಮುಂದಿನ ದಿನಗಳಲ್ಲಿ ನಾನು ಕಾಲ ಕಾಲಕ್ಕೆ ಈ ಬಗ್ಗೆ ಮೌಲ್ಯಮಾಪನ ಮಾಡಲಿದ್ದೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ರೈ ಅವರು ಮಾತನಾಡಿ, ರಾಜ್ಯದಲ್ಲಿ ಆಡಳಿತ ಪಡೆದ ಒಂದು ತಿಂಗಳಲ್ಲಿ ಭರವಸೆ ನೀಡಿದ 5 ಗ್ಯಾರಂಟಿಗಳಲ್ಲಿ 4ಕ್ಕೆ ಚಾಲನೆ ನೀಡಲಾಗಿದೆ. ಈ ಗ್ಯಾರಂಟಿಗಳ ಬಗ್ಗೆ ಪ್ರತಿಪಕ್ಷಗಳು ರಾಜ್ಯ ದಿವಾಳಿ ಆಗುತ್ತದೆ ಎಂಬ ಅಪಪ್ರಚಾರ ನಡೆಸಿದವು. ಆದರೆ `ಮನಿ ಮ್ಯಾನೇಜ್‍ಮೆಂಟ್'ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರು ನಂಬರ್ 1 ಆಗಿದ್ದಾರೆ. ಪ್ರತಿ ಪಕ್ಷಗಳಿಗೆ ಈ ಮನಿ ಮ್ಯಾನೇಜ್ ಮೆಂಟ್ ಗೊತ್ತಿಲ್ಲ. ಇಷ್ಟೆಲ್ಲಾ ಯೋಜನೆ ಗಳನ್ನು ಜಾರಿಗೊಳಿಸಿದರೂ ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಒಂದಿಷ್ಟೂ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ ಎಂದರು. ಪುತ್ತೂರಿಗೆ ಕೆಎಂಎಫ್ ಪೂರ್ತಿಯಾಗಿ ಬರುವಂತಾಗಬೇಕು. ಕೊಯಿಲ ಪಶುಸಂಗೋಪನಾ ಫಾರ್ಮ್‌ ನಲ್ಲಿ ನಿರ್ಮಿತವಾದ ಪಶುವೈದ್ಯಕೀಯ ಕಾಲೇಜಿಗೆ ರೂ.20 ಕೋಟಿ ಅನುದಾನ ಮಂಜೂರಾಗಿದೆ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಂ.ವಿ.ಸ.ಕಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಪದ್ಮಾವತಿ ಗೃಹಜ್ಯೋತಿ ಯೋಜನೆಗೆ ರಾಜ್ಯದಲ್ಲಿ ಶೇ.93 ನೋಂದಾವಣೆಯಾಗಿದೆ. ದಕ ಜಿಲ್ಲೆಯಲ್ಲಿ ಶೇ 79 ನೋಂದಾವಣೆಯಾಗಿದೆ ಎಂದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಎಎಸ್ಪಿ ಧರ್ಮಪ್ಪ, ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಉಪಸ್ಥಿತರಿದ್ದರು.

ಮಂ.ವಿ.ಸ.ಕಂ ತಾಂತ್ರಿಕ ನಿರ್ದೇಶಕ ಹೆಚ್.ಜಿ. ರಮೇಶ್ ಸ್ವಾಗತಿಸಿದರು. ಮೆಸ್ಕಾಂ ಮುಖ್ಯಇಂಜಿನಿಯರ್ ಪುಷ್ಪಾ ಎಸ್.ಎ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News