ಸುಳ್ಯ| ಮಲಗಿದ್ದ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವೃದ್ಧ: ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತ್ಯು

Update: 2024-10-24 18:01 GMT

ಸುಳ್ಯ: ಕೊಡಿಯಾಲ ಗ್ರಾಮದ ಕಲ್ಲರ್ಪೆ ಎಂಬಲ್ಲಿ ವೃದ್ಧನೋರ್ವ ತನ್ನ ತಮ್ಮನ ಪತ್ನಿ ಮಲಗಿದಲ್ಲಿಗೆ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಜಯಭಾರತಿ (56) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಅ.12ರಂದು ರಾತ್ರಿ ಮನೆಯ ಕೋಣೆಯಲ್ಲಿ ಮಲಗಿದ್ದ ಜಯಭಾರತಿ ಅವರ ಪತಿಯ ಅಣ್ಣ ಶಂಕರ ನಾಯಕ್ ಎಂಬಾತ ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಎನ್ನಲಾಗಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಶೇ. 80 ರಷ್ಟು ಗಾಯಗೊಂಡಿದ್ದ ಮಹಿಳೆಯನ್ನು ಸುಳ್ಯ ಆಸ್ಪತ್ರೆಗೆ ತಂದು ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜಯಭಾರತಿ ಅವರ ಪತಿ ಜನಾರ್ದನ ನಾಯಕ್ ಎಂಬವರು ಒಂದೂವರೆ ವರ್ಷದ ಹಿಂದೆ ನಿಧನರಾಗಿದ್ದರು. ಜಯಭಾರತಿ ಮತ್ತು ಅವರ ಪುತ್ರ ಹಾಗೂ ಆರೋಪಿ ಶಂಕರ ನಾಯಕ್ ಮನೆಯಲ್ಲಿ ವಾಸ ಮಾಡುತ್ತಿದ್ದರು. ಜಯಭಾರತಿ ಅವರ ಪುತ್ರ ಇತ್ತೀಚೆಗಷ್ಟೇ ವಿದೇಶಕ್ಕೆ ಹೋದ ಕಾರಣ ಮನೆಯಲ್ಲಿ ಜಯಭಾರತಿ ಮತ್ತು ಶಂಕರ ನಾಯಕ್ ಮಾತ್ರ ಇದ್ದರು. ಪ್ಯಾರಲಿಸಿಸ್ ಅಟ್ಯಾಕ್ ಆಗಿ ಒಂದು ಕೈ ಮತ್ತು ಒಂದು ಕಾಲಿನ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದ ಶಂಕರ ನಾಯಕ್‌ಗೆ ಊಟ, ಮದ್ದು ಕೊಡುತ್ತಿದ್ದರೂ ಆರೋಪಿ ಶಂಕರ ನಾಯಕ್ ಜಯಭಾರತಿಯನ್ನು ಯಾವಾಗಲೂ ದ್ವೇಷಿಸುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿ ಶಂಕರ್ ನಾಯಕ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News