ನನ್ನ ತಲೆ ಬಾಚಲು 10 ರೂ.ಗಳ ಬಾಚಣಿಗೆ ಸಾಕು: ಶಿರಚ್ಛೇದದ ಕರೆಗೆ ಉದಯನಿಧಿ ವ್ಯಂಗ್ಯ

Update: 2023-09-05 10:52 GMT

ಉದಯನಿಧಿ ಸ್ಟಾಲಿನ್ (PTI)

ಚೆನ್ನೈ: ಅಸಮಾನತೆಯನ್ನು ಪೋಷಿಸುವ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಿರುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆ ಕಡಿದವರಿಗೆ 10 ಕೋಟಿ ರೂ. ಗಳನ್ನು ಘೋಷಿಸಿದ್ದ ಅಯೋಧ್ಯೆ ಮೂಲದ ಧರ್ಮದರ್ಶಿ ಪರಮಹಂಸ ಆಚಾರ್ಯರ ಹೇಳಿಕೆಗೆ ಉದಯನಿಧಿ ಅವರು ಪ್ರತಿಕ್ರಿಯಿಸಿದ್ದಾರೆ.

ನನ್ನ ತಲೆ ಬಾಚಲು 10 ರೂ.ಗಳ ಬಾಚಣಿಗೆ ಸಾಕು, 10 ಕೋಟಿ ರೂ.ಗಳ ಅಗತ್ಯವಿಲ್ಲ ಎಂದು ಉದಯನಿಧಿ ಅರ್ಚಕನ ಮಾತಿಗೆ ವ್ಯಂಗ್ಯವಾಡಿದ್ದಾರೆ.

“ಇಂದು ಸ್ವಾಮಿಯೊಬ್ಬರು ನನ್ನ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಉದಯನಿಧಿಯ ತಲೆ ಕಡಿದವರಿಗೆ 10 ಕೋಟಿ ರೂ. ಕೊಡುವುದಾಗಿ ಘೊಷಿಸಿದ್ದಾರೆ. ಅವರು ನಿಜವಾದ ಸ್ವಾಮಿಜಿಯೋ ಅಥವಾ ನಕಲಿಯೋ? ನಿಮಗೇಕೆ ನನ್ನ ತಲೆ ತುಂಬಾ ಇಷ್ಟ? ನಿಮಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ? ನನ್ನ ಕೂದಲು ಬಾಚಲು 10 ಕೋಟಿ ಏಕೆ ಘೋಷಿಸುತ್ತಿದ್ದೀರಿ? 10 ರೂಪಾಯಿ ಬಾಚಣಿಗೆ ಕೊಟ್ಟರೆ ನಾನೇ ಮಾಡುತ್ತೇನೆ”ಎಂದು ಉದಯನಿಧಿ ಹೇಳಿದ್ದಾರೆ.

ಇಂತಹ ಬೆದರಿಕೆಗಳಿಗೆಲ್ಲಾ ನಾವು ಬೆದರುವುದಿಲ್ಲ. ತಮಿಳುನಾಡಿಗಾಗಿ ಪ್ರಾಣವನ್ನೇ ಒತ್ತೆಯಿಟ್ಟ ವ್ಯಕ್ತಿಯ (ಕರುಣಾನಿಧಿ) ಮೊಮ್ಮಗ ನಾನು ಎಂದು ಅವರು ಸವಾಲು ಹಾಕಿದ್ದಾರೆ.

ಉದಯನಿಧಿ ಶಿರಚ್ಛೇದ ಮಾಡಿ ತಲೆ ತಂದು ಕೊಡುವವರಿಗೆ ₹ 10 ಕೋಟಿ ಬಹುಮಾನ ನೀಡುತ್ತೇನೆ, ಯಾರೂ ಸ್ಟಾಲಿನ್‌ನನ್ನು ಕೊಲ್ಲುವ ಧೈರ್ಯ ಮಾಡದಿದ್ದರೆ ನಾನೇ ಆತನನ್ನು ಪತ್ತೆ ಮಾಡಿ ಹತ್ಯೆ ಮಾಡುತ್ತೇನೆ ಎಂದು ತಪಸ್ವಿ ಚಾವ್ನಿ ದೇವಸ್ಥಾನದ ಪ್ರಧಾನ ಅರ್ಚಕ ಪರಮಹಂಸ ಆಚಾರ್ಯ ಹೇಳಿದ್ದರು. ‌

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News