ಮಿನಿ ಬಸ್, ಕಂಟೈನರ್ ನಡುವೆ ಢಿಕ್ಕಿ: 12 ಮಂದಿ ಮೃತ್ಯು, ಹಲವರಿಗೆ ಗಾಯ

Update: 2023-10-15 05:17 GMT
Sreengrab:X/@PTI_News

ಛತ್ರಪತಿ ಸಂಭಾಜಿನಗರ: ರವಿವಾರ ಬೆಳ್ಳಂಬೆಳಗ್ಗೆ ಮಿನಿ ಬಸ್ ಒಂದು ಕಂಟೈನರ್ ಲಾರಿಗೆ ಢಿಕ್ಕಿ ಹೊಡೆದಿರುವುದರಿಂದ 12 ಮಂದಿ ಮೃತಪಟ್ಟು, 23 ಮಂದಿ ಗಾಯಾಳುಗಳಾಗಿರುವ ಘಟನೆ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಮೃದ್ಧಿ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ನಲ್ಲಿ 35 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಯೊಬ್ಬರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮುಂಬೈನಿಂದ ಸುಮಾರು 350 ಕಿಮೀ ದೂರವಿರುವ ಛತ್ರಪತಿ ಸಂಭಾಜಿನಗರ ಜಿಲ್ಲೆಯ ವೈಜಾಪುರ ಪ್ರದೇಶದ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಮುಂಜಾನೆ ಸುಮಾರು 12.30ರ ವೇಳೆಗೆ ಅಪಘಾತ ಸಂಭವಿಸಿದೆ. ಬಸ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಬಸ್ ಎದುರಿಗೆ ಹೋಗುತ್ತಿದ್ದ ಕಂಟೈನರ್ ಲಾರಿಯ ಹಿಂಬದಿಗೆ ಬಸ್ ಢಿಕ್ಕಿಯಾಗಿದೆ ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದು, ಈ ಪೈಕಿ 5 ಮಂದಿ ಪುರುಷರು, 6 ಮಂದಿ ಮಹಿಳೆಯರು ಹಾಗೂ ಓರ್ವ ಅಪ್ರಾಪ್ತ ಬಾಲಕಿ ಸೇರಿದ್ದಾಳೆ. ಉಳಿದ 23 ಮಂದಿಗೆ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News