ರಕ್ಷಾಬಂಧನ ಅಚರಿಸಿ ಮರಳುತ್ತಿದ್ದ ಸಹೋದರಿಯರ ಸಾಮೂಹಿಕ ಅತ್ಯಾಚಾರ; ಬಿಜೆಪಿ ಮುಖಂಡನ ಪುತ್ರ ಸೇರಿ 10 ಮಂದಿಯ ಬಂಧನ

Update: 2023-09-02 11:09 GMT

ರಾಯ್‌ಪುರ: ಛತ್ತೀಸ್‌ಗಢದ ರಾಯ್‌ಪುರದಲ್ಲಿ ರಕ್ಷಾ ಬಂಧನವನ್ನು ಆಚರಿಸಿ ಹಿಂದಿರುಗುತ್ತಿದ್ದ ಇಬ್ಬರು ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಹತ್ತು ಮಂದಿಯ ಗುಂಪೊಂದು ಸಹೋದರಿಯರನ್ನು ತಡೆದು, ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಆರೋಪಿಗಳಲ್ಲಿ ಓರ್ವ ಸ್ಥಳೀಯ‌ ಬಿಜೆಪಿ ಮುಖಂಡರೊಬ್ಬರ ಪುತ್ರ ಎಂದು ತಿಳಿದು ಬಂದಿದೆ.

ಮೂವರು ಆರೋಪಿಗಳು ಮೊದಲು ಸಹೋದರಿಯರನ್ನು ಅಡ್ಡಗಟ್ಟಿದ್ದು, ಯುವತಿಯರಲ್ಲಿದ್ದ ನಗದು ಹಾಗೂ ಮೊಬೈಲ್ ದೋಚಿದ್ದಾರೆ. ಬಳಿಕ, ಉಳಿದ ಏಳು ಆರೋಪಿಗಳು ನಾಲ್ಕು ದ್ವಿಚಕ್ರವಾಹನಗಳಲ್ಲಿ ಸ್ಥಳಕ್ಕೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಸಹೋದರಿಯರನ್ನು ಮುಖ್ಯ ರಸ್ತೆಯಿಂದ ದೂರವಿರುವ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಇಬ್ಬರು ಯುವತಿಯರ ಜೊತೆಗಿದ್ದ ವ್ಯಕ್ತಿಯ ಮೇಲೆಯೂ ದಾಳಿ ಮಾಡಿರುವ ದುಷ್ಕರ್ಮಿಗಳು ಆತನಿಗೆ ತೀವ್ರವಾಗಿ ಥಳಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಪುತ್ರ ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ.

ಆರೋಪಿಗಳಲ್ಲಿ ಕೆಲವರು ಈಗಾಗಲೇ ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದವರಿದ್ದಾರೆ ಎನ್ನಲಾಗಿದೆ. ಪ್ರಮುಖ ಆರೋಪಿಯಾಗಿರುವ ಪೂನಂ ಠಾಕೂರ್ ಸ್ಥಳೀಯ ಬಿಜೆಪಿ ನಾಯಕ ಲಕ್ಷ್ಮೀ ನಾರಾಯಣ ಸಿಂಗ್ ಅವರ ಪುತ್ರನಾಗಿದ್ದು, ಆತ ಕೆಲವು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News