ಗುಜರಾತ್‌: ನಿಯಮ ಬಾಹಿರವಾಗಿ ಬಿಜೆಪಿ ಕಚೇರಿ ನಿರ್ಮಿಸಲಾಗಿದೆ ಎಂದು ಪ್ರಧಾನಿಗೆ ಪತ್ರ ಬರೆದ ಬಿಜೆಪಿ ನಾಯಕ

Update: 2024-09-18 06:07 GMT

Photo credit: gujaratsamachar.com

ಗುಜರಾತ್‌: ಜುನಾಗಢ ಜಿಲ್ಲಾ ಬಿಜೆಪಿ ಕಚೇರಿಯನ್ನು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಬಿಜೆಪಿ ನಾಯಕ, ಮಾಜಿ ಪ್ರವಾಸೋದ್ಯಮ ಸಚಿವ ಜವಾಹರ್ ಚಾವ್ಡಾ ಆರೋಪಿಸಿದ್ದು, ಈ ಕುರಿತು ಪ್ರಧಾನಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜುನಾಗಢ್‌ನ ಮನವಾದರ್ ವಿಧಾನಸಭಾ ಕ್ಷೇತ್ರದ ಐದು ಬಾರಿ ಶಾಸಕರಾಗಿರುವ ಬಿಜೆಪಿ ನಾಯಕ ಚಾವ್ಡಾ 2019 ರಿಂದ 2021ರವರೆಗೆ ಗುಜರಾತ್‌ ನಲ್ಲಿ ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಸಚಿವರಾಗಿದ್ದರು.

ಅತಿಕ್ರಮಣದಿಂದಾಗಿ ನೈಸರ್ಗಿಕ ನೀರಿನ ತೊರೆಗಳಿಗೆ ಅಡಚಣೆಯುಂಟಾಗಿ ಪ್ರವಾಹಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕಳೆದ ಜುಲೈನಲ್ಲಿ ಪ್ರವಾಹದಿಂದ ಜುನಾಗಢದಲ್ಲಿ ಹಲವು ಪ್ರದೇಶಗಳು ಜಲಾವೃತವಾಗಿದ್ದವು. ಆ ಬಳಿಕ ಕಲ್ವಾ ಮತ್ತು ಸೋನ್ರಖ್ ಹೊಳೆಗಳನ್ನು ಅತಿಕ್ರಮಣ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು.

1990, 2007, 2012 ಮತ್ತು 2017ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನಿಂದ ಗೆದ್ದುಕೊಂಡಿದ್ದ ಚಾವ್ಡಾ 2019 ರಲ್ಲಿ ಬಿಜೆಪಿಗೆ ಪಕ್ಷಾಂತರವಾಗಿದ್ದರು.

ಇದು ಜುನಾಗಢ ನಗರದ 9 ವರ್ಷಗಳ ನೋವಿನ ಕಥೆ, ನಮ್ಮ ಶಿಸ್ತಿನ ಪಕ್ಷದಲ್ಲಿ ಒಬ್ಬ ವ್ಯಕ್ತಿ, ಒಂದು ಸ್ಥಾನ, ಮೂರು ವರ್ಷಗಳ ಅವಧಿ ಈಗೆಲ್ಲಾ ನಿಯಮಗಳಿವೆ. ಸಾಮಾನ್ಯವಾಗಿ, ಈ ನಿಯಮಗಳು ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಪದಾಧಿಕಾರಿಗಳಿಗೆ ಏಕರೂಪವಾಗಿ ಅನ್ವಯಿಸುತ್ತವೆ ಆದರೆ ಜುನಾಗಢ್ ಇದಕ್ಕೆ ಅಪವಾದವಾಗಿದೆ ಎಂದು ಚಾವ್ಡಾ ಹೇಳಿದ್ದಾರೆ.

ನಾನು ಮತ್ತು ಜುನಾಗಢದ ಇತರ ಬಿಜೆಪಿ ನಾಯಕರು ಈ ವಿಷಯಗಳ ಬಗ್ಗೆ ಅನೇಕ ದೂರುಗಳನ್ನು ನೀಡಿದ್ದೇವೆ. ಅದು ನಿಮಗೆ (ಪ್ರಧಾನಿಗೆ) ತಲುಪಿಲ್ಲ. ಈ ದೂರು ನಿಮ್ಮ ಟೇಬಲ್‌ಗೆ ತಲುಪುವ ದೃಷ್ಟಿಯಿಂದ ನಾನು ಈ ಪತ್ರವನ್ನು ವೈರಲ್ ಮಾಡುತ್ತಿದ್ದೇನೆ ಎಂದು ಚಾವ್ಡಾ ಪತ್ರದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News