ದೇವಸ್ಥಾನ ನಿರ್ಮಿಸುವುದು ಸಾರ್ವಜನಿಕ ಜಮೀನು ಕಬಳಿಕೆಗೆ ಇನ್ನೊಂದು ವಿಧಾನ: ಗುಜರಾತ್‌ ಹೈಕೋರ್ಟ್‌

Update: 2024-03-01 09:33 GMT

ಗುಜರಾತ್‌ ಹೈಕೋರ್ಟ್‌ (PTI)

ಅಹ್ಮದಾಬಾದ್:‌ ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡುವ ಉದ್ದೇಶಕ್ಕಾಗಿ ದೇವಸ್ಥಾನವನ್ನು ನೆಲಸಮಗೊಳಿಸುವುದರಿಂದ ತಪ್ಪಿಸಬೇಕೆಂಬ ಸ್ಥಳೀಯ ನಾಗರಿಕರ ಕೋರಿಕೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಗುಜರಾತ್‌ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್‌ “ಪ್ರತಿಯೊಬ್ಬರನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡುವುದು ಹೀಗೆ. ಭಾರತದಲ್ಲಿ ಸಾರ್ವಜನಿಕ ಸ್ಥಳ ಕಬಳಿಕೆಗೆ ದೇವಸ್ಥಾನ ನಿರ್ಮಾಣ ಇನ್ನೊಂದು ವಿಧಾನವಾಗಿದೆ,” ಎಂದು ಹೇಳಿದ್ದಾರೆ.

ಕರಡು ನಗರ ಯೋಜನೆಯ ಅಡಿಯಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣವನ್ನು ವಿರೋಧಿಸಿ ಚಂದ್ಲೋಡಿಯಾ ಎಂಬಲ್ಲಿನ 93 ಕುಟುಂಬಗಳು ಅಪೀಲು ಸಲ್ಲಿಸಿದ್ದವು. ಅವರ ಅರ್ಜಿಯನ್ನು ಹೈಕೋರ್ಟಿನ ಏಕ ಸದಸ್ಯ ಪೀಠ ವಜಾಗೊಳಿಸಿದ ನಂತರ ಅವರು ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

ಯೋಜನೆಗಾಗಿ ಯಾವುದೇ ಮನೆಗಳನ್ನು ನೆಲಸಮಗೊಳಿಸಲಾಗುವುದಿಲ್ಲ ಎಂದು ಅಹ್ಮದಾಬಾದ್‌ ಮುನಿಸಿಪಲ್‌ ಕಾರ್ಪೊರೇಷನ್‌ ಆಶ್ವಾಸನೆ ನೀಡಿದ ಹೊರತಾಗಿಯೂ ನಿವಾಸಿಗಳು ಪ್ರಸ್ತಾವಿತ ರಸ್ತೆಯ ಜಾಗದಲ್ಲಿರುವ ದೇವಸ್ಥಾನ ರಕ್ಷಿಸಬೇಕೆಂದು ಕೋರಿದರು ಹಾಗೂ ಇಡೀ ಸಮುದಾಯ ಭಾವನಾತ್ಮಕ ನಂಟು ಹೊಂದಿದೆ ಹಾಗೂ ದೇವಳ ನಿರ್ಮಾಣಕ್ಕೆ ಕೊಡುಗೆ ನೀಡಿದೆ ಎಂದು ಹೇಳಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ “ಎಲ್ಲರನ್ನೂ ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡುವುದು ಹೀಗೆ - ಸಾರ್ವಜನಿಕ ಜಮೀನನ್ನು ಒತ್ತುವರಿ ಮಾಡುವುದು. ಇದೇ ರೀತಿ ಎಲ್ಲೆಡೆ ನಡೆಯುತ್ತಿದೆ,” ಎಂದು ಅವರು ಹೇಳಿದರು.

“ದೇವಳ ಇರುವ ಜಮೀನು ಅರ್ಜಿದಾರರಿಗೆ ಸೇರಿದ್ದಲ್ಲ, ದೇವಳ ನೆಲಸಮವಾಗುತ್ತದೆ ಎಂದು ಹೇಳಿಕೊಂಡು ಭಾವನೆಗಳೊಂದಿಗೆ ಆಟವಾಡುತ್ತಿದ್ದೀರಿ,” ಎಂದು ಅವರು ಹೇಳಿದರು.

ಮನೆಗಳನ್ನು ದೇವಸ್ಥಾನಗಳಾಗಿ ಪರಿವರ್ತಿಸಿ ಅಕ್ರಮ ನಿರ್ಮಾಣಗಳನ್ನು ರಕ್ಷಿಸುವ ವಿಧಾನದ ಕುರಿತು ಅವರು ವಿವರಿಸಿದರಲ್ಲದೆ “ಮನೆಯ ಹೊರಗೆ ಏನಾದರೂ ಚಿಹ್ನೆಗಳನ್ನು ಹಾಕಿ ಅದನ್ನು ದೇವಸ್ಥಾನವಾಗಿಸುತ್ತಾರೆ. ಭಾರತದಲ್ಲಿ ಭೂಕಬಳಿಕೆಗೆ ಇದು ಇನ್ನೊಂದು ವಿಧಾನವಾಗಿದೆ,” ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News