ವಂಚನೆ ಪ್ರಕರಣ: ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ದೂರು ದಾಖಲು
ತಿರುವನಂತಪುರ: ಕ್ರಿಕೆಟಿಗ ಎಸ್.ಶ್ರೀಶಾಂತ್, ಇತರ ಇಬ್ಬರ ವಿರುದ್ಧ ವ್ಯಕ್ತಿಯೊಬ್ಬರು ದೂರು ದಾಖಲಿಸಿದ ನಂತರ ಕೇರಳ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಉತ್ತರ ಕೇರಳ ಜಿಲ್ಲೆಯ ಚೂಂಡಾ ನಿವಾಸಿ ಸರೀಶ್ ಗೋಪಾಲನ್ ಎಂಬವರು ನೀಡಿದ ದೂರಿನ ಮೇರೆಗೆ ಶ್ರೀಶಾಂತ್, ರಾಜೀವ್ ಕುಮಾರ್ ಹಾಗೂ ವೆಂಕಟೇಶ್ ಕಿಣಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸುವುದಾಗಿ ಹೇಳಿ 2019ರ ಎಪ್ರಿಲ್ 25ರಿಂದ ವಿವಿಧ ದಿನಾಂಕಗಳಲ್ಲಿ ಸುಮಾರು 18. 70 ಲಕ್ಷ ರೂ.ವನ್ನು ರಾಜೀವ್ ಕುಮಾರ್ ಹಾಗೂ ವೆಂಕಟೇಶ್ ಕಿಣಿ ಸ್ವೀಕರಿಸಿದ್ದಾರೆ. ಅಲ್ಲಿ ಶ್ರೀಶಾಂತ್ ಪಾಲುದಾರಿಕೆ ಹೊಂದಿದ್ದಾರೆ. ನನಗೆ ಅಕಾಡೆಮಿಯಲ್ಲಿ ಪಾಲುದಾರರಾಗಲು ಅವಕಾಶ ನೀಡಿದ್ದರು. ನಂತರದ ದಿನಗಳಲ್ಲಿ ನನ್ನಿಂದ ಹಣ ಪಡೆದಿದ್ದರು ಎಂದು ಸರೀಶ್ ಗೋಪಾಲನ್ ದೂರಿನಲ್ಲಿ ತಿಳಿಸಿದ್ದಾರೆ.
ಶ್ರೀಶಾಂತ್ ಹಾಗೂ ಇತರ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 420(ವಂಚನೆ)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಶ್ರೀಶಾಂತ್ ಅವರನ್ನು ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.