ಛತ್ತೀಸ್ಗಢ: ಜಂಟಿ ಕಾರ್ಯಾಚರಣೆಯಲ್ಲಿ ಮೃತಪಟ್ಟ 30 ನಕ್ಸಲರ ಪೈಕಿ 16 ಮಹಿಳೆಯರು !

PC: screengrab/x.com/truth_finder
ರಾಯಪುರ: ಛತ್ತೀಸ್ಗಢದ ಬಿಜಾಪುರ ಮತ್ತು ಕಂಕೇರ್ ಜಿಲ್ಲೆಗಳಲ್ಲಿ ಗುರುವಾರ ನಡೆದ ಅವಳಿ ಎನ್ಕೌಂಟರ್ಗಳಲ್ಲಿ ಮೃತಪಟ್ಟ 30 ಮಂದಿ ನಕ್ಸಲರ ಪೈಕಿ 16 ಮಂದಿ ಮಹಿಳೆಯರು ಎಂದು ಬಸ್ತರ್ ಐಜಿ ಪಿ.ಸುಂದರರಾಜ್ ಹೇಳಿದ್ದಾರೆ. ಮೃತಪಟ್ಟವರ ಪೈಕಿ ಇದುವರೆಗೆ 19 ಮಂದಿಯ ಗುರುತು ಪತ್ತೆ ಮಾಡಲಾಗಿದ್ದು, ಒಟ್ಟಾರೆ ಇವರ ಪತ್ತೆಗೆ ಒಂದು ಕೋಟಿ ರೂಪಾಯಿಯ ಬಹುಮಾನ ಘೋಷಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಒಂದು ಸ್ನಿಪರ್ ರೈಫಲ್, ಎಕೆ-47, ರಾಕೆಟ್ ಲಾಂಚರ್ ಗಳು, ಗ್ರೆನೇಡ್ ಲಾಂಚರ್ ಗಳು, ಇನ್ಸಾಸ್ ರೈಫಲ್ ಮತ್ತು ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಭದ್ರತಾ ಪಡೆಗಳು ಮಾವೋವಾದಿ ಸಂಘಟನೆಯ ಅಗ್ರ ಮುಖಂಡರ ಮೇಲೆ ದಾಳಿ ನಡೆಸಿವೆ ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ವಿವರಿಸಿದ್ದಾರೆ.
ಜಿಲ್ಲಾ ಮೀಸಲು ಪಡೆ, ಕೋಬ್ರಾ ಕಮಾಂಡೊಗಳು ಮತ್ತು ಸಿಆರ್ಪಿಎಫ್ ನ ಸಿಬ್ಬಂದಿ ಬಿಜಾಪುರದ ಗಂಗಲೂರಿನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 26 ಮಂದಿ ಹತರಾಗಿದ್ದಾರೆ. ಈ ಪೈಕಿ 15 ಮಂದಿ ಮಹಿಳೆಯರು. ಇದೇ ವೇಳೆ 250 ಕಿಲೋಮೀಟರ್ ದೂರದಲ್ಲಿ ಕಂಕೇರ್ ಜಿಲ್ಲೆಯ ಛೋಟೆ ಭೆಟಿಯಾದಲ್ಲಿ ಡಿಆರ್ಜಿ ಮತ್ತು ಬಿಎಸ್ಎಫ್ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಮಹಿಳೆ ಸೇರಿದಂತೆ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ.
ಬಿಜಾಪುರ ಕಾರ್ಯಾಚರಣೆಯಲ್ಲಿ ಡಿಆರ್ಜಿ ಕಾನ್ಸ್ಟೇಬಲ್ ರಾಜುರಾಮ್ ಓಯಮ್ ಹುತಾತ್ಮರಾಗಿದ್ದಾರೆ. ಗುರುವಾರದ ದಾಳಿ, ಸುಧೀರ್ಘ ಅವಧಿಯಿಂದ ಈ ಭಾಗದಲ್ಲಿ ಹಿಂಸಾಕೃತ್ಯಗಳನ್ನು ಮತ್ತು ದಾಳಿಗಳನ್ನು ನಡೆಸುತ್ತಿದ್ದ ಪಶ್ಚಿಮ ಬಸ್ತರ್ ಡಿವಿಷನ್ ಕಮಿಟಿಯ ಮಾವೋವಾದಿಗಳಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತಪಟ್ಟವರಲ್ಲಿ ಪಿಎಲ್ಜಿಎ ಕಂಪನಿ-5 ಕಮಾಂಡರ್ ಲೋಕೇಶ್, ಮತ್ತೊಬ್ಬ ಕುಖ್ಯಾತ ನಕ್ಸಲ್ ಮುಖಂಡ ಹಾಗೂ ಡಿವಿಷನಲ್ ಕಮಿಟಿ ಸದಸ್ಯ ಸಿಟೊ ಕಾಡ್ತಿ, 17 ಮಂದಿ ಕ್ಷೇತ್ರ ಸಮಿತಿ ಸದಸ್ಯರು ಸೇರಿದ್ದಾರೆ.