ದೇಶಾದ್ಯಂತ ಸರ್ವಪಕ್ಷ ಸಭೆಗಳನ್ನು ನಡೆಸಲು 4,000ಕ್ಕೂ ಅಧಿಕ ಇಆರ್ಒಗಳನ್ನು ನಿಯೋಜಿಸಿದ ಚು.ಆಯೋಗ

ಚು.ಆಯೋಗ | PTI
ಹೊಸದಿಲ್ಲಿ: ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಬಾಕಿಯುಳಿದಿರುವ ಬೂತ್ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಲು 4,000ಕ್ಕೂ ಅಧಿಕ ಚುನಾವಣಾ ನೋಂದಣಾಧಿಕಾರಿ(ಇಆರ್ಒ)ಗಳನ್ನು ನಿಯೋಜಿಸುವ ಮೂಲಕ ಚುನಾವಣಾ ಆಯೋಗವು ದೇಶಾದ್ಯಂತ ಸರ್ವಪಕ್ಷ ಸಭೆಗಳನ್ನು ನಡೆಸಲು ಆರಂಭಿಸಿದೆ.
ಹಲವು ರಾಜ್ಯಗಳಲ್ಲಿ ಚುನಾವಣೆಗಳಿಗೆ ಮುನ್ನ ಮತಗಟ್ಟೆ ಮಟ್ಟದಲ್ಲಿಯ ಸಮಸ್ಯೆಗಳ ಕುರಿತು ಬಾಕಿಯುಳಿದಿರುವ ದೂರುಗಳನ್ನು ಇತ್ಯರ್ಥಗೊಳಿಸಲು ಚುನಾವಣಾ ಆಯೋಗವು ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಬಾಕಿಯುಳಿದಿರುವ ಯಾವುದೇ ಮತಗಟ್ಟೆ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಲು 4,123 ಇಆರ್ಒಗಳು ಸರ್ವಪಕ್ಷ ಸಭೆಗಳನ್ನು ನಡೆಸಲು ಆರಂಭಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ಎಲ್ಲ ಪಕ್ಷಗಳ ಪ್ರಾತಿನಿಧ್ಯ ಮತ್ತು ಸಲಹೆಗಳೊಂದಿಗೆ ಆದ್ಯತೆಯ ಆಧಾರದಲ್ಲಿ ಬೂತ್ ಮಟ್ಟದಲ್ಲಿ ಬಾಕಿಯುಳಿದಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಮಾ.31ರವರೆಗೆ ಸರ್ವಪಕ್ಷ ಸಭೆಗಳು ಮುಂದುವರಿಯಲಿವೆ.
ಚು.ಆಯೋಗದ ಹೇಳಿಕೆಯ ಪ್ರಕಾರ ಎಲ್ಲ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ ಎಲ್ಲ 788 ಜಿಲ್ಲಾ ಚುನಾವಣಾಧಿಕಾರಿ(ಡಿಇಒ)ಗಳು ಮತ್ತು 36 ಮುಖ್ಯ ಚುನಾವಣಾಧಿಕಾರಿ(ಸಿಇಒ)ಗಳಿಗೆ ಜನ ಪ್ರಾತಿನಿಧ್ಯ ಕಾಯ್ದೆ 1950 ಮತ್ತು 1951,1960ರ ಮತದಾರರ ನೋಂದಣಿ ನಿಯಮಗಳು,1961ರ ಚುನಾವಣಾ ನಡವಳಿಕೆ ನಿಯಮಗಳು ಹಾಗೂ ಆಯೋಗವು ಕಾಲಕಾಲಕ್ಕೆ ಹೊರಡಿಸಿರುವ ಕೈಪಿಡಿಗಳು,ಮಾರ್ಗಸೂಚಿಗಳು ಮತ್ತು ಸೂಚನೆಗಳ ಕಾನೂನು ಚೌಕಟ್ಟಿನೊಳಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿನ ಯಾವುದೇ ಬಾಕಿಯಿರುವ ಸಮಸ್ಯೆಯನ್ನು ಬಗೆಹರಿಸಲು ಸರ್ವಪಕ್ಷ ಸಭೆಗಳನ್ನು ನಡೆಸುವಂತೆ ನಿರ್ದೇಶನ ನೀಡಲಾಗಿದೆ.
ಮಾ.4,2025ರಂದು ದಿಲ್ಲಿಯಲ್ಲಿ ನಡೆದ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಿಇಒಗಳು ಮತ್ತು ಪ್ರತಿರಾಜ್ಯದ ತಲಾ ಓರ್ವ ಡಿಇಒ ಮತ್ತು ಇಆರ್ಒಗಳ ಸಭೆಯಲ್ಲಿ ಆಯೋಗದ ನಿರ್ದೇಶನಗಳಿಗೆ ಅನುಗುಣವಾಗಿ ಸರ್ವಪಕ್ಷ ಸಭೆಗಳನ್ನು ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದೂ ಹೇಳಿಕೆಯು ತಿಳಿಸಿದೆ.