ಅಪರಾಧದ ಸ್ವರೂಪವನ್ನು ಪರಿಗಣಿಸಿ ಅಪರಾಧಿಗಳನ್ನು ವಾಪಸ್‌ ಜೈಲಿಗೆ ಕಳಿಸಬೇಕು: ಸುಪ್ರೀಂ ಕೋರ್ಟಿಗೆ ತಿಳಿಸಿದ ಬಿಲ್ಕಿಸ್‌ ಬಾನು

Update: 2023-10-12 10:09 GMT

ಬಿಲ್ಕಿಸ್‌ ಬಾನು (PTI)

ಹೊಸದಿಲ್ಲಿ: ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ 11 ಮಂದಿ ಅಪರಾಧಿಗಳನ್ನು ಅವರು ನಡೆಸಿದ ಬರ್ಬರ ಅಪರಾಧಕ್ಕಾಗಿ ಮರಳಿ ಜೈಲಿಗೆ ಕಳುಹಿಸಬೇಕು ಎಂದು ಬಿಲ್ಕಿಸ್‌ ಪರ ವಕೀಲೆ ಶೋಭಾ ಗುಪ್ತಾ ಬುಧವಾರ ಸುಪ್ರೀಂ ಕೋರ್ಟಿನ ಮುಂದೆ ತಮ್ಮ ವಾದ ಮಂಡನೆ ವೇಳೆ ಆಗ್ರಹಿಸಿದರು.

ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟ ಎಲ್ಲಾ 11 ಮಂದಿ ದೋಷಿಗಳ ಶಿಕ್ಷೆ ಕಡಿತಗೊಳಿಸಿ ಬಿಡುಗಡೆಗೊಳಿಸಿದ ಗುಜರಾತ್‌ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್‌ ಭುಯನ್‌ ಅವರ ಪೀಠ ನಡೆಸುತ್ತಿದೆ. 2002ರ ಗುಜರಾತ್‌ ಗಲಭೆಗಳ ಸಂದರ್ಭ ಬಿಲ್ಕಿಸ್‌ ಬಾನು ಮೇಲೆ ಸಾಮೂಹಿಕ ಅತ್ಯಾಚಾರಗೈದು ಆಕೆಯ ಕುಟುಂಬದ 14 ಮಂದಿಯನ್ನು ಹತ್ಯೆಗೈದ ಪ್ರಕರಣ ಇದಾಗಿದೆ. ಅಪರಾಧಿಗಳನ್ನು ಕಳೆದ ವರ್ಷದ ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ದಿನದಂದು ಬಿಡುಗಡೆಗೊಳಿಸಲಾಗಿತ್ತು.

ತಮ್ಮ ಶಿಕ್ಷೆ ಕಡಿತಗೊಳಿಸಿ ತಮ್ಮನ್ನು ಕಾನೂನುಬದ್ಧವಾಗಿ ಪ್ರಸಕ್ತ ನೀತಿಗಳಂತೆ ಬಿಡುಗಡೆಗೊಳಿಸಲಾಗಿದೆ ಎಂದು ಅಪರಾಧಿಗಳ ವಾದ ಮಂಡನೆ ನಂತರ ಅರ್ಜಿದಾರರ ಪರ ಬುಧವಾರ ವಾದ ಮಂಡನೆ ನಡೆದಿದೆ.

ಅವರನ್ನು ಬಿಡುಗಡೆಗೊಳಿಸುವ ಮುನ್ನ ಅಪರಾಧದ ಸ್ವರೂಪವನ್ನು, ಅದು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಸರ್ಕಾರ ಪರಿಗಣಿಸಬೇಕಿತ್ತು ಎಂದು ಬಿಲ್ಕಿಸ್‌ ಬಾನು ಅವರ ವಕೀಲೆ ಹೇಳಿದರು.

ಶಿಕ್ಷೆ ಕಡಿತಗೊಳಿಸುವುದು ಸುಧಾರಣೆಗೆ ಅಗತ್ಯ ಎಂದು ಅಪರಾಧಿಗಳಲ್ಲೊಬ್ಬರು ವಾದಿಸಿರುವ ಬಗ್ಗೆ ಜಸ್ಟಿಸ್‌ ನಾಗರತ್ನ ಉಲ್ಲೇಖಿಸಿದಾಗ ಅವರ ಅಪರಾಧದ ಸ್ವರೂಪ ಯಾವುದೋ ಬಂದೂಕಿನಿಂದ ಗಾಯ ಉಂಟು ಮಾಡಿರುವುದು ಅಥವಾ ಸಾಮಾನ್ಯ ಕೊಲೆ ಪ್ರಕರಣವಲ್ಲ ಎಂದು ಗುಪ್ತಾ ಹೇಳಿದರು.

ಅಪರಾಧಿಗಳು ಎಂಟು ಅಪ್ರಾಪ್ತರನ್ನು ಕೊಂದಿದ್ದೇ ಅಲ್ಲದೆ ಬಿಲ್ಕಿಸ್‌ ಅವರ ಮೂರು ವರ್ಷದ ಪುತ್ರಿಯ ತಲೆಯನ್ನು ಬಂಡೆಗೆ ಅಪ್ಪಳಿಸಿ ಸಾಯಿಸಿದ್ದರು. ಆಗ ಬಿಲ್ಕಿಸ್‌ ವಯಸ್ಸು 19 ಆಗಿತ್ತು ಹಾಗೂ ಆಕೆ ಗರ್ಭಿಣಿಯಾಗಿದ್ದರು.

“ಈ ಅಪರಾಧಗಳು ಘನಘೋರ. ಒಂದು ನಿರ್ದಿಷ್ಟ ಅವಧಿಯ ತನಕ ಶಿಕ್ಷೆ ಅನುಭವಿಸಿದ ನಂತರ ಶಿಕ್ಷೆ ಕಡಿತಗೊಳಿಸಲು ಕೋರಲು ಅಪರಾಧಿಗಳಿಗೆ ಹಕ್ಕಿದೆ. ಆದರೆ ಇಲ್ಲಿ ಸರ್ಕಾರ ಕಡೆಗಣಿಸಿದ ಅಂಶಗಳು ಮುಖ್ಯವಾಗಿವೆ, ಅಪರಾಧಿಗಳು ಜೈಲಿನಲ್ಲಿರುವಾಗಲೂ ಅವರಿಗೆ ಪೆರೋಲ್‌ ಮೇಲೆ ಬಿಡುಗಡೆ ದೊರೆಯುತ್ತಿತ್ತು. ಇಲ್ಲಿ ಕ್ಷಮಾದಾನಕ್ಕೆ ಅರ್ಹವಾದ ಪ್ರಕರಣ ಇದಲ್ಲ, ಅವರನ್ನು ವಾಪಸ್‌ ಜೈಲಿಗೆ ಕಳಿಸಬೇಕು. ಅವರು ಎಲ್ಲಿಂದ ಬಂದರೋ ಅಲ್ಲಿಗೇ ವಾಪಸ್‌ ಕಳಿಸಬೇಕೆಂದು ಕೈಮುಗಿದು ನ್ಯಾಯಾಲಯವನ್ನು ಕೇಳಿಕೊಳ್ಳುತ್ತೇನೆ,” ಎಂದು ಗುಪ್ತಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News