ವಿವಾಹಕ್ಕೆ ಕೆಲವೇ ಗಂಟೆಗಳ ಮುನ್ನ ವರನ ಹತ್ಯೆ; ಆರೋಪಿ ತಂದೆಯ ಬಂಧನ

Update: 2024-03-08 07:02 GMT

ಗೌರವ್ ಸಿಂಘಾಲ್ (Photo credit: indiatoday.in)

ಹೊಸದಿಲ್ಲಿ: ವಿವಾಹಕ್ಕೂ ಮುನ್ನಾ ದಿನ, ವರನನ್ನು ಇರಿದು ಹತ್ಯೆಗೈದಿರುವ ಘಟನೆ ದಕ್ಷಿಣ ದಿಲ್ಲಿಯ ದೇವ್ಲಿ ಬಡಾವಣೆಯ ಸಿಂಘಾಲ್ ನಿವಾಸದಲ್ಲಿ ನಡೆದಿದೆ. ಈ ಸಂಬಂಧ ವರನ ತಂದೆಯನ್ನು ಪೊಲೀಸರು ಜೈಪುರದಲ್ಲಿ ಬಂಧಿಸಿದ್ದಾರೆ.

ಬುಧವಾರ ಸಂಜೆ ದಕ್ಷಿಣ ದಿಲ್ಲಿಯ ದೇವ್ಲಿ ಬಡಾವಣೆಯ ಸಿಂಘಾಲ್ ನಿವಾಸದಲ್ಲಿ ವಿವಾಹ ಸಂಭ್ರಮ ಮನೆ ಮಾಡಿತ್ತು. ಮರು ದಿನ ನಡೆಯಲಿರುವ ಗೌರವ್ ಸಿಂಘಾಲ್ ವಿವಾಹದಲ್ಲಿ ಪಾಲ್ಗೊಳ್ಳಲು ಸಂಬಂಧಿಕರು ಹಾಗೂ ಸ್ನೇಹಿತರು ಅಲ್ಲಿ ನೆರೆದಿದ್ದರು. ಆದರೆ, 29 ವರ್ಷದ ವರ ಗೌರವ್ ಸಿಂಘಾಲ್ ಎಲ್ಲೂ ಕಾಣದಾದಾಗ ವಿವಾಹೋತ್ಸವದ ಸಂಭ್ರಮ ಕಾಣೆಯಾಗಿ ಆತಂಕ ಮನೆ ಮಾಡಿತು. ಆತನನ್ನು ಪತ್ತೆ ಹಚ್ಚಲು ಹುಡುಕಾಟ ಪ್ರಾರಂಭವಾದಾಗ, ವರನ ಮತ್ತೊಂದು ನಿವಾಸದಲ್ಲಿ ಗೌರವ್ ಸಿಂಘಾಲ್ ಗೆ ಹತ್ತಾರು ಬಾರಿ ಇರಿದು ಹತ್ಯೆಗೈಯ್ಯಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ನಂತರ ಪೊಲೀಸರು ವರನ ತಂದೆ ರಂಗ್ ಲಾಲ್ ಸಿಂಘಾಲ್ ರನ್ನು ಜೈಪುರದಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಬಂಧಿತ ವರನ ತಂದೆಯನ್ನು ವಿಚಾರಣೆಗೊಳಪಡಿಸಿದಾಗ, ನನ್ನ ಪುತ್ರ ನನ್ನೊಂದಿಗೆ ಅಗೌರವಯುತವಾಗಿ ನಡೆದುಕೊಳ್ಳುತ್ತಿದ್ದ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಜಿಮ್ ಒಂದರ ಮಾಲಕನಾಗಿದ್ದ ಗೌರವ್ ಸಿಂಘಾಲ್, ತನ್ನ ಕುಟುಂಬದ ಸದಸ್ಯರೊಂದಿಗೆ ದೇವ್ಲಿ ಬಡಾವಣೆಯ ರಾಜು ಪಾರ್ಕ್ ಬಳಿ ವಾಸಿಸುತ್ತಿದ್ದ. ಗುರುವಾರ ರಾತ್ರಿ 12.30ರ ವೇಳೆಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಘಟನೆಯ ಕುರಿತು ಕರೆ ಬಂದಿತು ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅಂಕಿತ್ ಚೌಹಾಣ್ ತಿಳಿಸಿದ್ದಾರೆ.

ಗೌರವ್ ಸಿಂಘಾಲ್ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ, ಜೈಪುರದಲ್ಲಿ ರಂಗ್ ಲಾಲ್ ಸಿಂಘಾಲ್ ರನ್ನು ಸೆರೆ ಹಿಡಿದಿದ್ದಾರೆ.

ಈ ಘಟನೆಯಲ್ಲಿ ಮೂರರಿಂದ ನಾಲ್ಕು ಮಂದಿ ಭಾಗಿಯಾಗಿರುವ ಶಂಕೆಯನ್ನು ವ್ಯಕ್ತಪಡಿಸಿರುವ ಪೊಲೀಸರು, ತನಿಖೆಯನ್ನು ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News