ದಿಲ್ಲಿಗೆ ನೀರು ಹರಿಸುವ ಬ್ಯಾರೇಜ್‌ನ ಬಾಗಿಲು ಮುಚ್ಚಿದ ಹರ್ಯಾಣ : ಆತಿಶಿ

Update: 2024-06-23 16:09 GMT

ಆತಿಶಿ |  PC: ANI  

ಹೊಸದಿಲ್ಲಿ : ದಿಲ್ಲಿಗೆ ನೀರು ಹರಿಸಲು ಬಳಸುತ್ತಿದ್ದ ಹತ್ನಿಕುಂಡು ಬ್ಯಾರೇಜ್‌ನ ಎಲ್ಲಾ ಬಾಗಿಲುಗಳನ್ನು ಹರ್ಯಾಣ ಸರಕಾರ ಮುಚ್ಚಿದೆ ಎಂದು ದಿಲ್ಲಿ ಸಚಿವೆ ಆತಿಶಿ ರವಿವಾರ ಆರೋಪಿಸಿದ್ದಾರೆ.

ಈ ಕುರಿತಂತೆ ತಾನು ಅನಿರ್ಧಿಷ್ಟಾವಧಿ ಮುಷ್ಕರವನ್ನು ಮುಂದುವರಿಸಲಿದ್ದೇನೆ ಎಂದು ಅವರು ಹೇಳಿದ್ದಾರೆ.

ತೀವ್ರ ನೀರಿನ ಕೊರತೆ ಹಾಗೂ ಸುಡುತ್ತಿರುವ ಬಿಸಿಲಿನ ಹಿಡಿತಕ್ಕೆ ಸಿಲುಕಿರುವ ದಿಲ್ಲಿಗೆ ನೀರು ಹರಿಸುವಂತೆ ಆಗ್ರಹಿಸಿ ಆತಿಶಿ ಅವರು ಇಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಮುಷ್ಕರ ಮೂರನೇ ದಿನಕ್ಕೆ ಕಾಲಿರಿಸಿದೆ.

‘ಎಕ್ಸ್’ನ ವೀಡಿಯೋದಲ್ಲಿ ಅವರು, ‘‘ದಿಲ್ಲಿಯ ನೀರಿನ ಪಾಲು ಪಡೆಯಲು ನಾನು ಉಪವಾಸ ಮುಷ್ಕರ ನಡೆಸುತ್ತಿದ್ದೇನೆ. ಹರಿಯಾಣ ಸರಕಾರ ದಿಲ್ಲಿಗೆ 613 ಎಂಜಿಡಿ ಬದಲು 513 ಎಂಜಿಡಿ ನೀರು ಹರಿಸುತ್ತಿದೆ. 100 ಎಂಜಿಡಿ ನೀರಿನ ಕೊರತೆಯಿಂದಾಗಿ ದಿಲ್ಲಿಯ 28 ಲಕ್ಷ ಜನರು ಪರದಾಡುವಂತಾಗಿದೆ’’ ಎಂದು ಹೇಳಿದ್ದಾರೆ.

ಹತಿಕುಂಡ್ ಬ್ಯಾರೇಜ್ ತುಂಬ ನೀರಿದೆ ಎಂದು ಕೆಲವು ಪತ್ರಕರ್ತರು ತಿಳಿಸಿದ್ದಾರೆ. ಆದರೆ, ಹರ್ಯಾಣ ಸರಕಾರ ದಿಲ್ಲಿಗೆ ನೀರು ತಲುಪುವುದನ್ನು ತಡೆಯಲು ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ಮುಚ್ಚಿದೆ ಎಂದು ಅವರು ತಿಳಿಸಿದ್ದಾರೆ.

ದಿಲ್ಲಿಗೆ ನೀರು ಹರಿಸುವಂತೆ ಹರ್ಯಾಣ ಸರಕಾರವನ್ನು ಅಗ್ರಹಿಸಿರುವ ಆತಿಶಿ, ‘‘ದಿಲ್ಲಿ ತನ್ನ ಸರಿಯಾದ ಪಾಲಿನ ನೀರು ಪಡೆಯುವ ವರೆಗೆ ತಾನು ಉಪವಾಸ ಮುಷ್ಕರ ಮುಂದವರಿಸಲಿದ್ದೇನೆ’’ ಎಂದಿದ್ದಾರೆ.

ದಿಲ್ಲಿ ಉತ್ತರಪ್ರದೇಶ ಹಾಗೂ ಹರ್ಯಾಣ ಸರಕಾರ ಹರಿಸುವ ಕುಡಿಯುವ ನೀರನ್ನು ಅವಲಂಬಿಸಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News