ಶಿಕ್ಷಣ ವ್ಯವಸ್ಥೆಯ ಮೇಲೆ ಆರೆಸ್ಸೆಸ್ ನಿಯಂತ್ರಣ ಸಾಧಿಸಿದರೆ ದೇಶ ಸರ್ವನಾಶ: ರಾಹುಲ್ ಗಾಂಧಿ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ವು ಶಿಕ್ಷಣ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರೆ ದೇಶವು ನಾಶಗೊಳ್ಳುವುದು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಸಿದ್ಧಾಂತಗಳು ಮತ್ತು ನೀತಿಗಳ ವಿಷಯದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಾಲುದಾರ ಪಕ್ಷಗಳ ನಡುವೆ ಅಲ್ಪಸ್ವಲ್ಪ ಭಿನ್ನಾಭಿಪ್ರಾಯಗಳು ಇರಬಹುದಾದರೂ, ಅವುಗಳು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಾಹುಲ್ ಹೇಳಿದರು.
‘‘ಒಂದು ಸಂಘಟನೆಯು ದೇಶದ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡಲು ಬಯಸಿದೆ. ಆ ಸಂಘಟನೆಯ ಹೆಸರು ರಾಷ್ಟ್ರೀಯ ಸ್ವಯಂಸೇವಕ ಸಂಘ. ಶಿಕ್ಷಣ ವ್ಯವಸ್ಥೆಯು ಅದರ ಕೈಗೆ ಹೋದರೆ ಈ ದೇಶವು ನಾಶಗೊಳ್ಳುತ್ತದೆ. ಈಗ ನಿಧಾನವಾಗಿ ಶಿಕ್ಷಣ ವ್ಯವಸ್ಥೆಯು ಅದರ ನಿಯಂತ್ರಣಕ್ಕೆ ಜಾರುತ್ತಿದೆ. ಯಾರಿಗೂ ಕೆಲಸ ಸಿಗುವುದಿಲ್ಲ ಮತ್ತು ದೇಶವು ನಿರ್ನಾಮಗೊಳ್ಳುತ್ತದೆ’’ ಎಂದು ಅವರು ಅಭಿಪ್ರಾಯಪಟ್ಟರು.
ರಾಷ್ಟೀಯ ಶಿಕ್ಷಣ ನೀತಿಯ ವಿರುದ್ಧ ಇಂಡಿಯಾ ಮೈತ್ರಿಕೂಟದ ವಿದ್ಯಾರ್ಥಿ ಸಂಘಟನೆಗಳು ಹೊಸದಿಲ್ಲಿಯ ಜಂತರ್-ಮಂತರ್ ನಲ್ಲಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
‘‘ಭಾರತೀಯ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಮೇಲೆ ಆರೆಸ್ಸೆಸ್ ಪ್ರಾಬಲ್ಯ ಹೊಂದಿದೆ ಎನ್ನುವುದನ್ನು ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳಿಗೆ ಹೇಳಬೇಕು. ಮುಂದಿನ ದಿನಗಳಲ್ಲಿ, ರಾಜ್ಯಗಳ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳನ್ನೂ ಆರೆಸ್ಸೆಸ್ ನ ಶಿಫಾರಸಿನಂತೆ ನೇಮಿಸ ಬಹುದು. ನಾವಿದನ್ನು ನಿಲ್ಲಿಸಬೇಕು’’ ಎಂದು ರಾಹುಲ್ ಗಾಂಧಿ ಹೇಳಿದರು.