ಜೆಎನ್‌ಯುವಿನಲ್ಲಿ ಎಬಿವಿಪಿ ಹಾಗೂ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಸದಸ್ಯರ ನಡುವೆ ಘರ್ಷಣೆ; ಹಲವರಿಗೆ ಗಾಯ

Update: 2024-03-01 06:16 GMT

Screengrab:X/@ANI

ಹೊಸದಿಲ್ಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಸ್ಕೂಲ್‌ ಆಫ್‌ ಲ್ಯಾಂಗ್ವೇಜಸ್‌ ಚುನಾವಣೆ ಸಮಿತಿ ಆಯ್ಕೆಗೆ ಸಂಬಂಧಿಸಿದಂತೆ ಎಬಿವಿಪಿ ಹಾಗೂ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ನಡುವೆ ಹಿಂಸಾತ್ಮಕ ಘರ್ಷಣೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಹಾಗೂ ಪೊಲೀಸ್‌ ದೂರುಗಳು ದಾಖಲಾಗಿವೆ.

ಕೆಲ ಗಾಯಾಳು ವಿದ್ಯಾರ್ಥಿಗಳನ್ನು ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಎನ್‌ಯು ವಿದ್ಯಾರ್ಥಿ ಯೂನಿಯನ್‌ ಚುನಾವಣಾ ಸಮಿತಿ ಸದಸ್ಯರ ಆಯ್ಕೆಗೆ ಪ್ರತಿಯೊಂದು ಘಟಕ ಮಟ್ಟದ (ಸ್ಕೂಲ್‌ ಲೆವೆಲ್)‌ ಸಭೆಗಳನ್ನು ನಡೆಸುತ್ತಿದೆ.

ಎಕ್ಸ್‌ ನಲ್ಲಿ ವೈರಲ್‌ ಆಗಿರುವ ವೀಡಿಯೋವೊಂದರಲ್ಲಿ ಕೈಯ್ಯಲ್ಲಿ ಕೋಲನ್ನು ಹಿಡಿದುಕೊಂಡ ಒಬ್ಬ ವ್ಯಕ್ತಿ ವಿದ್ಯಾರ್ಥಿಗಳಿಗೆ ಹೊಡೆಯುತ್ತಿರುವುದು ಕಾಣಿಸುತ್ತದೆ. ಇನ್ನೊಂದು ವೀಡಿಯೋದಲ್ಲಿ ಒಬ್ಬ ವ್ಯಕ್ತಿ ವಿದ್ಯಾರ್ಥಿಗಳತ್ತ ಬೈಸಿಕಲ್‌ ಎಸೆಯುತ್ತಿರುವುದು ಕಾಣಿಸುತ್ತದೆ. ಇನ್ನು ಕೆಲವು ಜೆಎನ್‌ಯುವಿನದ್ದೆಂದು ಹೇಳಲಾದ ವೀಡಿಯೋಗಳಲ್ಲಿ ಕೆಲ ವ್ಯಕ್ತಿಗಳನ್ನು ಜನರು ಥಳಿಸುತ್ತಿರುವುದು ಹಾಗೂ ವಿವಿಯ ಭದ್ರತಾ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ.

ಎರಡೂ ಗುಂಪುಗಳು ಈ ಘಟನೆಗೆ ಪರಸ್ಪರರನ್ನು ದೂರಿ ಪೊಲೀಸ್‌ ದೂರು ದಾಖಲಿಸಿವೆ. ಪೊಲೀಸರು ದೂರುಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.

ಆಲ್‌ ಇಂಡಿಯಾ ಸ್ಟೂಡೆಂಟ್ಸ್‌ ಅಸೋಸಿಯೇಶನ್‌ ಪ್ರಕಾರ ಎಬಿವಿಪಿ ಸದಸ್ಯರು ಹಲ್ಲೆಗೆ ಯತ್ನಿಸಿದ್ದರು. ಆಯ್ಕೆ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡುವ ಯತ್ನ ವಿಫಲಗೊಂಡ ನಂತರ ಹಲ್ಲೆಗೆ ಮುಂದಾಗಿದ್ದರು ಎಂದು ದೂರಲಾಗಿದೆ.

ಆವರು ಮುಸ್ಲಿಂ ವಿದ್ಯಾರ್ಥಿಗಳ ಹೆಸರು ಪ್ರಸ್ತಾಪಿಸಿದಾಗ ವಿರೋಧಿಸುತ್ತಿದ್ದರು ಎಂದೂ ಅಸೋಸಿಯೇಶನ್‌ ದೂರಿದೆ.

ಎಬಿವಿಪಿ ಜೆಎನ್‌ಯು ಅಧ್ಯಕ್ಷ ಉಮೇಶ್‌ ಚಂದ್ರ ಆಜ್ಮೀರ ಪ್ರತಿಕ್ರಿಯಿಸಿ ಎಡ ಪಂಥೀಯ ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮವೆಸಗಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News